ಅವಮಾನವೆಂಬ ಆಯುಧ ಬಳಸಿ!*
ಒಂದು ರಾಜ್ಯದ ರಾಜಕುಮಾರಿ ಅತ್ಯಂತ ಪ್ರತಿಭಾನ್ವಿತಳಾಗಿದ್ದಳು. ಅವಳು, ‘ಯಾರು ನನ್ನನ್ನು ಶಾಸ್ತ್ರಚರ್ಚೆಯಲ್ಲಿ ಸೋಲಿಸುವರೋ ಅವರನ್ನು ನಾನು ಮದುವೆಯಾಗುವೆ ಮತ್ತು ಯಾರು ವಾದದಲ್ಲಿ ಸೋಲುವರೋ ಅವರ ಮುಖಕ್ಕೆ ಕಪ್ಪು ಬಳಿದು ದೇಶದಿಂದ ಹೊರಹಾಕಲಾಗುವುದು’ ಎಂದು ಘೊಷಿಸಿದಳು. ಈ ಮೊದಲು ರಾಜಕುಮಾರಿಯೊಂದಿಗೆ ವಾದದಲ್ಲಿ ಸೋತಂಥ ಕೆಲವು ಪಂಡಿತರು, ಮತ್ಸರದಿಂದ ಮತ್ತು ಮೋಸದಿಂದ ಅವಳನ್ನು ಅನಕ್ಷರಸ್ಥ ಮತ್ತು ದಡ್ಡನಾದ ವ್ಯಕ್ತಿಗೆ ಮದುವೆ ಮಾಡಿಸಿದರು. ತಾನು ಮದುವೆಯಾದ ವ್ಯಕ್ತಿ ಅಶಿಕ್ಷಿತ ಮತ್ತು ದೊಡ್ಡ ಮೂರ್ಖ ಎಂಬ ಸತ್ಯ ತಿಳಿದಾಗ ರಾಜಕುಮಾರಿಗೆ ಬಹಳ ನಿರಾಸೆಯಾಯಿತು. ಅವಳು ತನ್ನ ಪತಿಯನ್ನು ಕಟುವಾಗಿ ಖಂಡಿಸಿದಳು. ಅಪಮಾನಗಳಿಂದ ಆತ್ಮಸಮ್ಮಾನಕ್ಕೆ ಧಕ್ಕೆಯಾದ್ದರಿಂದ ಅವನಿಗೆ ತುಂಬ ನೋವಾಯಿತು. ಘಾಸಿಗೊಂಡ ಆತ್ಮಸಮ್ಮಾನ ಅವನ ಆತ್ಮವಿಶ್ವಾಸ ಬಡಿದೆಬ್ಬಿಸಿತು. ಮನೆಬಿಟ್ಟು ಹೋದ ಆತ ಮರಳಿದ್ದು ಮಹಾಜ್ಞಾನಿಯಾದ ಮೇಲೆಯೇ. ಆ ಮಹಾಜ್ಞಾನಿಯ ಹೆಸರು ನಮಗೆಲ್ಲ ಪರಿಚಿತ. ‘ವಿಕ್ರಮೋರ್ವಶೀಯ’, ‘ಮಾಲವಿಕಾ ಅಗ್ನಿಮಿತ್ರ’(ನಾಟಕಗಳು) ರಘುವಂಶ, ‘ಕುಮಾರ ಸಂಭವ’( ಗ್ರಂಥಗಳು) ‘ಮೇಘದೂತ’, ‘ರಘು ಸಂಹಾರ’ದಂಥ ಸುಪ್ರಸಿದ್ಧ ಖಂಡಕಾವ್ಯಗಳನ್ನು ಬರೆದ ಕಾಳಿದಾಸ. ಅಚ್ಚರಿಯೆನಿಸುತ್ತದೆಯಲ್ಲವೇ? ಅನಕ್ಷರಸ್ಥ ಮತ್ತು ದಡ್ಡನಾಗಿದ್ದವನು ಖ್ಯಾತ ಕವಿಯಾಗಿ ಬದಲಾಗಿದ್ದು. ನಿಜ, ಮನುಷ್ಯನ ಆತ್ಮಾಭಿಮಾನಕ್ಕೆ ಘಾಸಿಯಾದಾಗ ಆತ್ಮವಿಶ್ವಾಸ ಬೆಳಗುವುದು. ನಾವೆಲ್ಲ ಅಭಿಮಾನಕ್ಕೆ ಕುಂದು ತರುವಂಥ ಘಟನೆಗಳು ನಡೆದರೆ, ಮನಸ್ಸನ್ನು ಕುಗ್ಗಿಸಿಕೊಂಡು ಜೀವಚ್ಛವದಂತೆ ಅಡ್ಡಾಡುತ್ತೇವೆ. ಅವಮಾನ, ಕಟುಟೀಕೆ, ಹೀಯಾಳಿಕೆ, ಮೂದಲಿಕೆಯೆಂಬಂಥ ಕಲ್ಲುಗಳನ್ನು ಎಸೆದರೆ ಅವುಗಳ ಅಡಿಯಲ್ಲಿ ನಲುಗಿ ನರಳುತ್ತೇವೆ. ಆದರೆ ಆತ್ಮವಿಶ್ವಾಸ ಇರುವ ವ್ಯಕ್ತಿ ಎಸೆದ ಕಲ್ಲುಗಳ ಸಹಾಯದಿಂದಲೇ ಗೆಲುವಿನ ಶಿಖರದ ಮೇಲೆ ನಿಲ್ಲಬಲ್ಲ. ಇತರರಿಗೆ ಆದರ್ಶಪ್ರಾಯನಾಗಬಲ್ಲ. ಒಂದು ಸಣ್ಣ ಕಿಡಿಯಿಂದ ದೊಡ್ಡ ಜ್ವಾಲೆ ಏಳಬಲ್ಲುದು. ಜೀವನ ಯಾರಿಗೂ ಮೃಷ್ಟಾನ್ನ ಭೋಜನ ತಯಾರಿಸಿಟ್ಟಿಲ್ಲ. ಶ್ರದ್ಧೆ, ನಿಷ್ಠೆ, ಛಲ, ನಂಬುಗೆಯೆಂಬ ಸಾಮಗ್ರಿಗಳನ್ನು ಬಳಸಿ ಮೇಲೇರಿ ಬಂದವರ ಕಂಡು ಜಗವೇ ತಲೆದೂಗುತ್ತದೆ. ವಿಜ್ಞಾನದ ಹೊಸ ಜಗತ್ತನ್ನು ಸೃಷ್ಟಿಸಿದ ಥಾಮಸ್ ಅಲ್ವಾ ಎಡಿಸನ್ನಂಥ ವಿಜ್ಞಾನಿಯನ್ನು ಬೆಳೆಸಿದ್ದು ಎಡಿಸನ್ ತಾಯಿ ತನಗಾದ ಅವಮಾನದ ಬಲದಿಂದಲೇ ಅಲ್ಲವೇ? ಅಕ್ಕ ಮಹಾದೇವಿ ಹೇಳಿದಂತೆ ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ, ನಿಂದೆಗಳು ಸಾಮಾನ್ಯ. ಕಬೀರದಾಸರು ಹೇಳಿದಂತೆ- ‘ನಿಂದಕರಿಗೆ ನಮ್ಮ ಅಂಗಳದಲ್ಲಿಯೇ ಜಾಗ ಕೊಡಬೇಕು. ಅವಮಾನವೆಂಬ ಆಯುಧವನ್ನು ಬಳಸಿ ಉಚ್ಛಾ›ಯ ಸ್ಥಿತಿಗೆ ತಲುಪಬೇಕು’. ಅವಮಾನವನ್ನು ಏಣಿಯನ್ನಾಗಿಸಿ ಶ್ರೇಷ್ಠ ಬದುಕಿಗೆ ದಾರಿ ಮಾಡಿಕೊಳ್ಳೋಣ.
ಕೃಪೆ :ಜಯಶ್ರೀ ಅಬ್ಬಿಗೇರಿ