ಕಥೆ-1052
ನೀರು ಕುಡಿಯಲೊಲ್ಲದ ಕುದುರೆ...
ಕುದುರೆಗೆ ದಣಿವಾಗಿದೆ. ಆದರೆ ಅದು ನೀರು ಕುಡಿಯಲು ಮನಸ್ಸು ಮಾಡುತ್ತಿಲ್ಲ. ಸೋಮಾರಿತವೋ, ದಾರಿಯ ದೂರ ತಿಳಿದಿಲ್ಲವೋ, ಹಾಗೆಯೇ ನಾವು ಕೂಡಾ….
ಇವತ್ತಿನ ದಿನವನ್ನು ಆದಷ್ಟು ಎಚ್ಚರಿಕೆಯಿಂದ ಕಳೆಯಬೇಕು, ಕೆಲಸಗಳನ್ನು ಮಾಡಬೇಕು ಎಂದೆಲ್ಲ ನಿರ್ಧರಿಸಿ ಆಗಿದೆ.
ಕುದುರೆ ಸಾಕಷ್ಟು ದೂರ ಪ್ರಯಾಣಿಸಿದೆ; ಇನ್ನೂ ಬಹಳ ದೂರದವರೆಗೆ ಪ್ರಯಾಣ ಮಾಡಬೇಕಿದೆ. ಆದ್ದರಿಂದಲೇ ದಾರಿಯಲ್ಲಿ ನೀರಡಿಕೆಯಾಗದಿರಲೆಂದು ಮುನ್ನೆಚ್ಚರಿಕೆಯಿಂದ ಕೊಳದ ಬಳಿ ಬಂದು ಸ್ವಲ್ಪ ನೀರು ಕುಡಿದು ದಾಹ ತಣಿಸಿಕೊಂಡರೆ ಮುಂದಿನ ಪ್ರಯಾಣ ಸಲೀಸು. ಕುದುರೆಗೆ ದಣಿವಾಗಿದೆ. ಆದರೆ ಅದು ನೀರು ಕುಡಿಯಲು ಮನಸ್ಸು ಮಾಡುತ್ತಿಲ್ಲ. ಸೋಮಾರಿತನವೋ, ದಾರಿಯ ದೂರ ತಿಳಿದಿಲ್ಲವೋ, ದಾಹ ತಣಿಸಿಕೊಳ್ಳುವ ಅಗತ್ಯ ಮನಗಾಣಲಿಲ್ಲವೋ…. ಒಟ್ಟಾರೆ ನೀರು ಕುಡಿಯುತ್ತಿಲ್ಲ.
ನಾವು ಕೂಡಾ. ನಮ್ಮ ಕುಟುಂಬ, ಪರಿಸರ, ವಿದ್ಯೆ ಇತ್ಯಾದಿಗಳೆಲ್ಲ ನಮ್ಮನ್ನು ಒಂದು ಹಂತದವರೆಗೆ ಬೆಳೆಸಿ ಮುಂದಿನ ಬದುಕಿಗೆ ಸಜ್ಜುಗೊಳಿಸುತ್ತವೆ. ನಮ್ಮನ್ನು ತಂದು ನಿಲ್ಲಿಸಲಾಗಿರುವ ಕಾರ್ಯಕ್ಷೇತ್ರದೊಳಕ್ಕೆ ಧುಮುಕುವ, ಜವಾಬ್ದಾರಿ ಹೊರುವ ಅಗತ್ಯ ನಮಗೂ ಇದೆ. ಆದರೆ ನಾವು ಮನಸ್ಸು ಮಾಡುತ್ತಿಲ್ಲ. ಉಳಿದ ಸಂಗತಿಗಳೆಲ್ಲ ನಮ್ಮನ್ನು ಕೊಳದವರೆಗೆ ತಂದು ನಿಲ್ಲಿಸಬಲ್ಲವು. ಸವಾರ ಹೆಚ್ಚೆಂದರೆ ನಮ್ಮ ಮನವೊಲಿಸಬಲ್ಲ, ಛಡಿಯೇಟು ಕೊಟ್ಟು ಒತ್ತಾಯವನ್ನೂ ಮಾಡಬಲ್ಲ. ಆದರೆ, ನೀರು ಕುಡಿಯಬೇಕಿರೋದು ಕುದುರೆಯೇ. ಕೆಲಸ ಮಾಡಬೇಕಿರೋದು ನಾವೇ!
ಕುದುರೆಯ ದಾಹ ತಣಿಯಬೇಕೆಂದರೆ, ಕುದುರೆಯೇ ನೀರು ಕುಡಿಯಬೇಕು. ನಮ್ಮ ಬದುಕು ಸಾಗಬೇಕೆಂದರೆ, ನಾವೇ ದುಡಿಯಬೇಕು. ಎದುರಿಗೆ ಕೊಳವಿದ್ದೂ, ಗಂಟಲು ಒಣಗಿದ್ದೂ, ಸುಮ್ಮನೆ ನಿಲ್ಲುವ ಮೂರ್ಖತನ ಮಾಡಬಾರದು.
ದಿನದ ಕೆಲಸ ನಮ್ಮ ಮುಂದೆ ಹರವಿಕೊಂಡಿದೆ. ಅದನ್ನು ನಾವೇ ಮಾಡಿ ಮುಗಿಸಬೇಕು. ಅವನ್ನು ಸುಸೂತ್ರವಾಗಿ ಮಾಡಿ ಮುಗಿಸಿದರಷ್ಟೆ ಜೀವನಯಾನದ ಯಶಸ್ವಿಯಾಗಿ ಕಳೆದು ಮುಂದಿನ ದಾರಿ ಸುಗಮವಾಗುವುದು. ನಮ್ಮ ಕೆಲಸಗಳಿಗೆ ನಾವೇ ಜವಾಬ್ದಾರರು. ಬಾಕಿಯಂತೆ ಎಷ್ಟೇ ಬೆಂಬಲ ಮತ್ತು ಸಹಾಯ ಪಡೆದರೂ ಮುನ್ನಡಿಗೆಯ ಪ್ರಶ್ನೆ ಬಂದಾಗ, ಹೆಜ್ಜೆ ಎತ್ತಿಡಬೇಕಾದವರು ನಾವೇ … ನೀರು ಕುಡಿಯಬೇಕಾದ ಆ ಕುದುರೆಯೂ ನಾವೇ!..
-ಚೇತನಾ ತೀರ್ಥಹಳ್ಳಿ