ಕಥೆ-1053
ವಿಜ್ಞಾನ ಹಿಡಿ,
ಮೂಢನಂಬಿಕೆ ಬಿಡಿ...
ಇವತ್ತಿನ ಚಂದ್ರಗ್ರಹಣವನ್ನು ಭಯದಿಂದ ನೋಡುವ ಬದಲು ಅಚ್ಚರಿಯಿಂದ ಮತ್ತು ಕುತೂಹಲದಿಂದ ನೋಡಬೇಕಿದೆ... ಚಂದ್ರಗ್ರಹಣದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವುದು ನಿಜಕ್ಕೂ ಆಘಾತಕಾರಿ..
ಇವತ್ತಿನ ಚಂದ್ರಗ್ರಹಣವನ್ನು ಅರ್ಥಮಾಡಿಕೊಳ್ಳುವುದು ನಮ್ಮಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಉತ್ತಮ ಅವಕಾಶ ಅಂತ ಭಾವಿಸಿಕೊಳ್ಳಬೇಕು..
ಚಂದ್ರಗ್ರಹಣ ಎಂದರೇನು?
ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ಸರಳ ರೇಖೆಯಲ್ಲಿ ಬಂದಾಗ, ಭೂಮಿ ಸೂರ್ಯನ ಬೆಳಕನ್ನು ಚಂದ್ರನಿಗೆ ತಲುಪದಂತೆ ತಡೆದಾಗ ಚಂದ್ರಗ್ರಹಣ ಉಂಟಾಗುತ್ತದೆ.
ಇದು ಒಂದು ಸ್ವಾಭಾವಿಕ ಘಟನೆ. ಇದರಲ್ಲಿ ಯಾವುದೇ ಅಶುಭ ಅಥವಾ ಅಪಶಕುನವಿಲ್ಲ.
ಚಂದ್ರಗ್ರಹಣ ಸಂದರ್ಭದಲ್ಲಿ ಮೂಢನಂಬಿಕೆಗಳು ನಮ್ಮನ್ನು ತಳಕು ಹಾಕಿಕೊಳ್ಳುತ್ತವೆ.. ಅವುಗಳಿಂದ ನಾವು ಹೊರ ಬರಬೇಕಿದೆ..
ಗ್ರಹಣದ ಸಮಯದಲ್ಲಿ ತಿನ್ನಬಹುದು, ನಿತ್ಯ ಕೆಲಸದಲ್ಲಿ ತೊಡಗಬಹುದು ಅದರಿಂದ ತೊಂದರೆ ಇಲ್ಲ.. ವಿಶೇಷವಾಗಿ ಗರ್ಭಿಣಿಯರನ್ನು ಭಯಭೀತರನ್ನಾಗಿಸುವ ವಾತಾವರಣ ಸೃಷ್ಟಿಯಾಗುತ್ತಿದೆ.. ಈ ಗ್ರಹಣಗಳಿಂದ ಗರ್ಭಿಣಿಯರಿಗೆ ತೊಂದರೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ..
ಚಂದ್ರಗ್ರಹಣದಿಂದ ಕಲಿಯಬಹುದಾದ ವೈಜ್ಞಾನಿಕ ಪಾಠಗಳು
ಸೌರಮಂಡಲದ ಚಲನೆ ಬಗ್ಗೆ ತಿಳಿಯಬಹುದು
ಭೂಮಿ ನೆರಳು ಚಂದ್ರನ ಮೇಲೆ ಹೇಗೆ ಬೀಳುತ್ತದೆ ಎಂಬುದನ್ನು ಗಮನಿಸಬಹುದು
“ರಕ್ತ ಚಂದ್ರ” (Red Moon) ಏಕೆ ಕಾಣುತ್ತದೆ ಎಂಬುದನ್ನು ಅರಿತುಕೊಳ್ಳಬಹುದು
(ಇದು ವಾಯುಮಂಡಲದಲ್ಲಿ ಬೆಳಕಿನ ಚದುರುವಿಕೆ ಕಾರಣದಿಂದ ಉಂಟಾಗುತ್ತದೆ)
ಕರ್ನಾಟಕದ ಬಹುತೇಕ ಭಾಗಗಳಲ್ಲಿ, ಗ್ರಹಣವು ಮಧ್ಯಾಹ್ನ 3:20 ಕ್ಕೆ ಆರಂಭವಾದರೂ, ಅದು ಹೆಚ್ಚಾಗಿ 6:20 – 6:47 PM ನಡುವೆ ಮಾತ್ರ ಭಾಗಶಃ ಗ್ರಹಣದ ಕ್ಷಣಗಳನ್ನು ನೋಡಲು ಸಾಧ್ಯವಾಗುತ್ತದೆ.
ಚಂದ್ರಗ್ರಹಣವನ್ನು ಭಯದಿಂದ ನೋಡುವ ಬದಲು ಅಚ್ಚರಿಯಿಂದ ಮತ್ತು ಕುತೂಹಲದಿಂದ ನೋಡೋಣ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಿ ಆನಂದಿಸಬಹುದು.
ಪ್ರಶ್ನೆ ಕೇಳುವ ಮನಸ್ಸೇ ನಿಜವಾದ ವಿಜ್ಞಾನ ಮನಸ್ಸು.
“ಮೂಢನಂಬಿಕೆಗಳನ್ನು ಬಿಡಿ, ವಿಜ್ಞಾನವನ್ನು ಹಿಡಿ” ಇದೇ ನಿಜವಾದ ಪ್ರಗತಿ.
-ಶ್ರೀ ಶಂಕರಗೌಡ ಬಸಾಪೂರ
