Wednesday, February 18, 2026

 ಕಥೆ-1040

ಕಾಳಿದಾಸ ಮತ್ತು ಬ್ರಾಹ್ಮಣ


ಬಹಳ ಹಿಂದೆ ಭೋಜರಾಜನು ಧಾರಾಪುರವನ್ನು ಆಳುತ್ತಿದ್ದನು. ಇವನು ಬಹಳ ಪ್ರಖ್ಯಾತಿ ಪಡೆದಿದ್ದನು. ರಾಜಸ್ಥಾನದ ದರ್ಬಾರಿನಲ್ಲಿ ಅನೇಕ ಸಂಗೀತಗಾರರು, ಸಾಹಿತಿಗಳು, ಕವಿಗಳು, ಪಂಡಿತರು, ವಿದ್ವಾಂಸರುಗಳು, ವಿದೂಷಕರು, ಹೀಗೆ ಅನೇಕಾನೇಕ ಪಂಡಿತೋತ್ತಮರಿಂದ ತುಂಬಿದ ಸಭೆಯಾಗಿತ್ತು. ಇದೆ ಆಸ್ಥಾನದಲ್ಲಿ ಕಾಳಿದಾಸನು ಪ್ರಸಿದ್ಧಿ ಹೊಂದಿದ್ದು, ಭೋಜರಾಜನಿಗೆ ಆಪ್ತಮಿತ್ರನು ಆಗಿದ್ದನು. ಇವನ ಬುದ್ಧಿವಂತಿಕೆ, ನಾಲ್ಕು ದಿಕ್ಕಿಗೂ ಹರಡಿತ್ತು ಭೋಜರಾಜ ಯಾವುದೇ ಸಮಸ್ಯೆಗೆ ತೀರ್ಮಾನ ಮಾಡಲು ಗೊಂದಲವಾದಾಗ ಕಾಳಿದಾಸನ ಸಲಹೆ ಪಡೆಯುತ್ತಿದ್ದನು.ಕಾಳಿದಾಸ ಶ್ರೀಸಾಮಾನ್ಯನಿಂದ ಹಿಡಿದು ದೊಡ್ಡ ದೊಡ್ಡ ವಿದ್ವಾಂಸರನ್ನು ಗೌರವಿಸುತ್ತಿದ್ದನು.


ಆ ಕಾಲದಲ್ಲಿ ನಡೆದ ಒಂದು ಸಂಗತಿ. ವೇದ, ಪುರಾಣ ಅಭ್ಯಾಸ ಮಾಡಿದ ಒಬ್ಬ ಸದ್ಬ್ರಾಹ್ಮಣ ಭೋಜರಾಜನ ಹತ್ತಿರ ಸಹಾಯ ಯಾಚಿಸುವ ಸಲುವಾಗಿ, ಧಾರಾನಗರದಲ್ಲಿದ್ದ ಕಾಳಿದಾಸನ ಬಳಿ ಬಂದು, ಕವಿವರ್ಯರೆ ಭೋಜರಾಜರಿಂದ ಏನಾದರೂ ಸಹಾಯ ಸಿಗಬಹುದೆಂದು ಬಂದಿದ್ದೇನೆ. ಮಹಾರಾಜರು ಯಾವಾಗ ಎಲ್ಲಿ ಸಿಗುತ್ತಾರೆ ಎಂದು ಕೇಳಿದನು.   


ಕಾಳಿದಾಸ ಅವನ ಪೂರ್ವಾಪರ ವಿಚಾರಿಸಿ ತಿಳಿದುಕೊಂಡು, ಆಗಬಹುದು, ಆದರೆ ರಾಜಸಭೆಗೆ ರಾಜರನ್ನು ಭೇಟಿಯಾಗಲು ಹೋಗುವಾಗ ಬರಿಗೈಯಲ್ಲಿ ಹೋಗುವುದಿಲ್ಲ, ಏನಾದರೂ ಉಡುಗೊರೆ ತಂದಿದ್ದೀರಾ ಎಂದು ಕೇಳಿದನು. ಆಗ ಬ್ರಾಹ್ಮಣ, ಕವಿರಾಜರೇ, ನಾನಂತು ಕಡುಬಡವ, ಮಹಾರಾಜರಿಗೆ ಕೊಡುವಂತ ಉಡುಗೊರೆ ನನ್ನ ಬಳಿ ಏನೂ ಇಲ್ಲ. ಆದರೆ ನಾನು ಬರುವಾಗ ಒಬ್ಬ ರೈತನಿಂದ ಸ್ವಲ್ಪ ಕಬ್ಬನ್ನು ತಂದಿದ್ದೇನೆ ಅದನ್ನೇ ರಾಜರಿಗೆ ಕೊಡುತ್ತೇನೆ ಎಂದು ಹೇಳಿ ತಾನು ತಂದಿದ್ದ ಕಬ್ಬನ್ನು ತೋರಿಸಿದನು. ಕಾಳಿದಾಸನು ಸರಿ ನಾಳೆ ಕಬ್ಬನ್ನು ತೆಗೆದುಕೊಂಡು ದರ್ಬಾರಿಗೆ ತನ್ನಿ ಎಂದು ಹೇಳಿದನು.


ಮರುದಿನ ದರ್ಬಾರಿಗೆ ಬರುವ ಮುನ್ನ ಆ ಬ್ರಾಹ್ಮಣ ಮುಂಜಾನೆಯ ಪ್ರಾತರ್ವಿಧಿ ಗಳನ್ನು ಮುಗಿಸಿ ಬರುವ ಸಲುವಾಗಿ, ಆ ರಾತ್ರಿ ಮಲಗಲು ಒಂದು ಧರ್ಮಶಾಲೆಗೆ ಬಂದು ಸ್ವಲ್ಪ ಜಾಗ ಮಾಡಿಕೊಂಡು ಮಲಗಿದನು.


“ಕೇರಿ ಅಂದಮೇಲೆ ಹಂದಿಗಳು” ಇರುವಂತೆ, ಧರ್ಮಶಾಲೆಯಲ್ಲಿ ಕೆಲವು ಕೆಟ್ಟ ಜನರು ಇದ್ದರು. ಈ ಬ್ರಾಹ್ಮಣ ಮಲಗುತ್ತಿದ್ದಂತೆ, ಧರ್ಮಶಾಲೆಗೆ ಬಂದವರಲ್ಲಿ, ಕೆಲಕಸುಬಿಗಳು, ಬ್ರಾಹ್ಮಣನ ಹತ್ತಿರ ಇರುವ ಹತ್ತಿರವಿದ್ದ ಗಂಟಿನಲ್ಲಿ ಏನಿದೆಯೆಂದು ಕದ್ದು ನೋಡಿದರು. ರಾಜನಿಗೆ ಕಾಣಿಕೆ ಕೊಡಲು ತಂದ ಕಬ್ಬಿನ ತುಂಡುಗಳು ಅದರಲ್ಲಿದ್ದವು. ಆ ಕೇಡಿಗಳು ತಮಗೆ ತಿನ್ನಲು ಕಬ್ಬಿನ ತುಂಡುಗಳನ್ನು ತೆಗೆದು ಕೊಂಡು, ಆ ಜಾಗದಲ್ಲಿ ಅರ್ಧಂಬರ್ಧ ಸುಟ್ಟ ಕಟ್ಟಿಗೆ ತುಂಡು ಹಾಕಿ ಮೊದಲಿನಂತೆ ಗಂಟು ಕಟ್ಟಿಟ್ಟರು. ಬ್ರಾಹ್ಮಣ ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಗಂಟನ್ನು ಬಿಚ್ಚಿ‌ ನೋಡಲೂ ಇಲ್ಲ, ಹಾಗೆ ತೆಗೆದು ಕೊಂಡು ‌ರಾಜಸಭೆಗೆ ಬಂದನು, 


ಭೋಜರಾಜ ಬಂದು ರಾಜ ಸಿಂಹಾಸನದ ಅಲಂಕರಿಸಿದನು. ಕಾಳಿದಾಸ ರಾಜನಿಗೆ ಹತ್ತಿರದ ಆಸನದಲ್ಲಿ ಉಪಸ್ಥಿತನಾಗಿದ್ದನು. ಹಾಗೆ ಉಳಿದ ಪಂಡಿತೋತ್ತಮರು ಅವರವರ ಜಾಗದಲ್ಲಿ ಆಸೀನರಾದರು.


ಬ್ರಾಹ್ಮಣ ಸ್ವಲ್ಪ ಭಯದಿಂದಲೇ ರಾಜನ ಮುಂದೆ ಬಂದು ರಾಜನಿಗೆ ಪ್ರಣಾಮ ಮಾಡಿ, ಮಹಾರಾಜ, ನಾನು ನಿಮ್ಮಲ್ಲಿ ಸಹಾಯ ಯಾಚಿಸಲು ಬಂದಿದ್ದೇನೆ. ರಾಜ, ದೇವರು, ಗುರುಗಳು, ಹಿರಿಯರು, ಹಸು ಗೂಸುಗಳನ್ನು ನೋಡಲು ಬರಿಗೈಯಲ್ಲಿ ಬರಬಾರದೆಂಬ ವಾಡಿಕೆಯಿದೆ. ನನ್ನ ಹತ್ತಿರ ತಮಗೆ ಕೊಡುವಂತ ಕಾಣಿಕೆ ಇರಲಿಲ್ಲ. ಬರಿಗೈಯ್ಯಲ್ಲಿ ಬರಬಾರದೆಂದು ರೈತನೊಬ್ಬನಿಂದ ಕಬ್ಬಿನ ತುಂಡುಗಳನ್ನು ತಂದಿದ್ದೇನೆ ತೆಗೆದುಕೊಳ್ಳಿ ಎಂದು ರಾಜನಿಗೆ ಕೊಡಲು,‌ ಗಂಟನ್ನು ಬಿಚ್ಚಿದ, ಒಂದೇ ಸಲಕ್ಕೆ ಬ್ರಾಹ್ಮಣನ ಮುಖ ಕಪ್ಪಿಟ್ಟಿತು.ಅದರಲ್ಲಿ ಕಬ್ಬಿನ ತುಂಡುಗಳ ಬದಲಾಗಿ ಅರ್ಧ ಸುಟ್ಟ ಕಟ್ಟಿಗೆ ತುಂಡುಗಳಿದ್ದವು. ಬ್ರಾಹ್ಮಣ ಗಾಬರಿಯಾದನು. ಅವನ ಬಾಯಿಯಿಂದ ಶಬ್ದಗಳು ಹೊರಡಲಿಲ್ಲ ಕಬ್ಬಿನ ತುಂಡು ಗಳನ್ನು ತೆಗೆದು ಕಟ್ಟಿಗೆಗಳನ್ನು ಯಾರು ಇಟ್ಟಿದ್ದಾರೆ, ಎನ್ನುವ ಕಲ್ಪನೆಯೂ ಬ್ರಾಹ್ಮಣನಿಗೆ ಬರಲಿಲ್ಲ.ಆದರೆ ರಾಜನಿಗಂತೂ ತುಂಬಿದ ಸಭೆಯಲ್ಲಿ ಅವಮಾನವಾಯಿತು. ಸಭೆಯಲ್ಲಿದ್ದವರೆಲ್ಲ ಈ ಬ್ರಾಹ್ಮಣನಿಗೆ ಕಠಿಣ ಶಿಕ್ಷೆ ಕೊಡಿ ಎಂದು ಕೂಗಿದರು.


ಇದುವರೆಗೂ ಸುಮ್ಮನೆ ಕುಳಿತಿದ್ದ ಕಾಳಿದಾಸ ಆಸನದಿಂದ ಮೇಲೆದ್ದು ಬ್ರಾಹ್ಮಣನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಭಿಕರನ್ನು ಸುಮ್ಮನಿರುವಂತೆ ಹೇಳಿ, ರಾಜ ಹಾಗೂ ಸಭೆಯನ್ನು ಉದ್ದೇಶಿಸಿ, ಮಹಾಪ್ರಭು. ಬ್ರಾಹ್ಮಣ ಇಂಥಾ ತಪ್ಪು ಮಾಡಲ್ಲ. ಧರ್ಮ ಕರ್ಮವನ್ನು ಅರಿತವನಾಗಿದ್ದಾನೆ. ಹಾಗೂ ವಿದ್ವಾಂಸನು ಆಗಿದ್ದಾನೆ. ಆದರೆ ಬಡವ ಬಾಯಿಬಿಟ್ಟು ಹೇಳಲು ಹೆದರುತ್ತಿದ್ದಾನೆ. ಈ ಕಟ್ಟಿಗೆಗಳು ಅರ್ಧ ಸುಟ್ಟಿವೆ ಅಂದರೆ ಈ ಬ್ರಾಹ್ಮಣನನ್ನು ಬಡತನದ ಭೂತ ಸಾಯಲೂ ಬಿಡುತ್ತಿಲ್ಲ ಬದುಕಲೂ ಬಿಡುತ್ತಿಲ್ಲ. ಇವನ ಅವಸ್ಥೆ ಕರುಣಾಜನಕವಾಗಿದೆ. ಈ ಅರ್ಧ ಸುಟ್ಟಿರುವ ಕಟ್ಟಿಗೆಯಿಂದ ಅವನ ದೈನ್ಯಾವಸ್ಥೆ ತಿಳಿಯಬಹುದು. ಆದ್ದರಿಂದ ರಾಜರು ಕೃಪೆಮಾಡಿ ಅವನಿಗೆ ಧನಸಹಾಯವನ್ನು ಮಾಡಿ ಅವನನ್ನು ದಾರಿದ್ರ್ಯ ಚಿಂತೆಯಿಂದ ಮುಕ್ತಗೊಳಿಸಬೇಕಾಗಿದೆ ಎಂದು ಅರ್ಥವಾಗುವಂತೆ ವಿನಯದಿಂದ ಹೇಳಿದನು.


ಕಾಳಿದಾಸನ ಈ ಮಾತುಗಳನ್ನು ಕೇಳಿ ರಾಜ ಹಾಗೂ ದರ್ಬಾರಿನಲ್ಲಿರುವ

ಪಂಡಿತೋತ್ತಮರು ಆಶ್ಚರ್ಯಗೊಂಡರು. ಈ ಮಾತನ್ನು ಯಾರೂ ಅಲ್ಲಗಳೆಯಲಿಲ್ಲ. ಸ್ವತಃ ಭೋಜರಾಜನು ಕಾಳಿದಾಸನ ವಿವೇಕತದ ಮಾತನ್ನು ಕೇಳಿ ತಲೆದೂಗಿದನು.ಆಮೇಲೆ ಸ್ವರ್ಣ ಮುದ್ರೆಗಳು ತುಂಬಿದ ಥೈಲಿಯನ್ನು ಬ್ರಾಹ್ಮಣನಿಗೆ ಕೊಟ್ಟು ಗೌರವಿಸಿದರು. ರಾಜನ ಸಹಾಯ ಯಾಚಿಸಿ ಬಂದ ಬ್ರಾಹ್ಮಣನು ವಂಚನೆಗೊಳಗಾಗಿ ರಾಜನ ಮುಂದೆ ಬಾಯಿ ಕಟ್ಟಿ ನಿಂತಾಗ, ಕಾಳಿದಾಸನ ವಿವೇಕ, ಪ್ರಜ್ಞೆ, ಪ್ರತಿಭೆ, ಒಳ್ಳೆಯತನ, ದೂರದೃಷ್ಟಿ ಸಮ ಯೋಚಿತವಾದ ಮಾತುಗಾರಿಕೆಯಿಂದ ಕಬ್ಬಿನ ತುಂಡುಗಳನ್ನು ತಂದ ತನ್ನ ಜೋಳಿಗೆಯೊಳಗೆ ಸುವರ್ಣ ನಾಣ್ಯಗಳನ್ನು ತುಂಬಿಸಿಕೊಟ್ಟ ಕಾಳಿದಾಸನಿಗೆ ಕಳಕಳಿಯ ಕೃತಜ್ಞತೆಯನ್ನು ಅರ್ಪಿಸಿ ಬ್ರಾಹ್ಮಣನು ತನ್ನ ಊರಿಗೆ ಹೊರಟನು. 


ಉದಯೇ ಸವಿತಾ ರಕ್ತೋ, 

ರಕ್ತಶ್ಚಾಸ್ತಮಯೇ ತಥಾ!

ಸಂಪತ್ತೌ ಚ ವಿಪತ್ತೌ ಚ ಮಹತಾಮೇಕರುಪತಾ !


ಸೂರ್ಯನು ಉದಯಿಸುವಾಗಲೂ, ಅಸ್ತಮದಲ್ಲೂ  

ಒಂದೇ ರೀತಿಯಾಗಿ ಕಾಣುವನು. ಹಾಗೆಯೇ ಸಜ್ಜನರು ಸಂಪತ್ತಿನ ಕಾಲದಲ್ಲೂ, ವಿಪತ್ತಿನ ಕಾಲದಲ್ಲೂ ಒಂದೇ ರೀತಿಯಲ್ಲಿ ನಡೆದುಕೊಳ್ಳುವರು.

ಬರಹ:- ಆಶಾ ನಾಗಭೂಷಣ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು