ಕಥೆ-1044
ನೀನ್ ಓದಮ್ಮ.. ನಾವ್ ಚಪ್ಪಲಿ ಹೊಲಿತೀವಿ..
ಫೋಟೋದಲ್ಲಿರುವ ಹೆಣ್ಣು ಮಗಳ ಬಗ್ಗೆ ಅದಾಗಲೇ ಒಂದಷ್ಟು ಜನರಿಗೆ ಗೊತ್ತಿರುತ್ತದೆ.. ಆದರೆ ಇವರ ಬದುಕಿನ ಕತೆ ಮೈ ಜುಮ್ಮೆನ್ನುತ್ತದೆ..
ಇವರ ಹೆಸರು ಪದ್ಮಾವತಿ.. ದಾಂಡೇಲಿಯ ಬಾಂಬೂಗೇಟ್ ನಲ್ಲಿ ಇವರ ವಾಸ.. ಇವರ ತಂದೆ ನಾಗಣ್ಣ.. ಚಪ್ಪಲಿ ಹೊಲಿಯುವುದು ಇವರ ಕಾಯಕ.. ನಾಗಣ್ಣ ಹಾಗೂ ಪತ್ನಿಗೆ ಮೂರು ಹೆಣ್ಣು ಮಕ್ಕಳು ಹಾಗೂ ಐದು ಜನ ಗಂಡು ಮಕ್ಕಳು.. ನಾಗಣ್ಣ ಹಾಗೂ ಪತ್ನಿ ಇಬ್ಬರೂ ಸಹ ಚಪ್ಪಲಿ ಹೊಲಿದೇ ಎಂಟು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದರು.. ಪದ್ಮಾವತಿ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಓದಲು ಆಸಕ್ತಿ.. ಅದೇ ರೀತಿ ತಂದೆ ನಾಗಣ್ಣ ಕಷ್ಟವಾದರೂ ಮಗಳನ್ನು ಚೆನ್ನಾಗಿಯೇ ಓದಿಸುತ್ತಿದ್ದರು.. ಆದರೆ ಕೆಲ ವರ್ಷಗಳ ಹಿಂದೆ ನಾಗಣ್ಣ ಅನಾರೋಗ್ಯದಿಂದ ತೀರಿಕೊಂಡರು..
ಮಗಳ ಓದುವ ಕನಸು ಅಷ್ಟಕ್ಕೆ ನಿಲ್ಲುವಂತಾಯ್ತು.. ಆದರೆ ಆ ಸಮಯದಲ್ಲಿ ಪದ್ಮಾವತಿಯ ಬೆನ್ನಿಗೆ ನಿಂತವರು ಅವರ ಇಬ್ಬರು ಅಣ್ಣಂದಿರು.. ನಾವು ಮನೆ ನೋಡಿಕೊಳ್ತೇವೆ.. ಜೊತೆಗೆ ನಿನ್ನನ್ನೂ ಓದಿಸ್ತೇವೆ.. ನೀನು ಏನು ಬೇಕಿದ್ರೂ ಓದು ಎನ್ನುವ ಭರವಸೆ ನೀಡಿದರು.. ಅಣ್ಣಂದಿರು ಇಬ್ಬರೂ ಸಹ ಅಪ್ಪನ ಕುಲ ಕಸುಬು ಚಪ್ಪಲಿ ಹೊಲಿಯುವುದನ್ನೇ ಮುಂದುವರೆಸಿ ಮನೆ ಸಂಸಾರ ನಿಭಾಯಿಸುವುದರ ಜೊತೆಗೆ ತಂಗಿಗೆ ಆರ್ಥಿಕ ನೆರವು ಕೊಟ್ಟು ಓದನ್ನು ಮುಂದುವರೆಸುವಂತೆ ನೋಡಿಕೊಂಡರು..
ಇತ್ತ ಬಡತನ ಅರಿತಿದ್ದ ಪದ್ಮಾವತಿ ಅವರು ಓದಿದ್ದು ದಾಂಡೇಲಿಯ ಬಂಗೂರು ನಗರದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ.. ಕನ್ನಡ ಮೀಡಿಯಂ ನಲ್ಲಿಯೇ ಶಾಲಾ ಶಿಕ್ಷಣ ಮುಗಿಸಿ.. ನಂತರ ಪದವಿಯನ್ನೂ ಮುಗಿಸಿ.. ಬೈಲಹೊಂಗಲ್ ನಲ್ಲಿ ಕಾನೂನು ಪದವಿ ಮಾಡಿದರು..
ಬಡತನದಿಂದ ಬೆಂದಿದ್ದ ಕುಟುಂಬಕ್ಕೆ ಚೂರು ಆಸರೆಯಾಗಬೇಕೆಂದು ಹಳಿಯಾಲದ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ತಮ್ಮ ಕೆಲಸ ಆರಂಭಿಸಿದರು..
ಇಷ್ಟಕ್ಕೆ ಸುಮ್ಮನಾಗದ ಪದ್ಮಾವತಿ ಅವರು ನ್ಯಾಯಾಧೀಶೆಯಾಗಬೇಕೆಂಬ ಪಣ ತೊಟ್ಟರು.. ಅಖಿಲ ಭಾರತ ವಕೀಲರ ಒಕ್ಕೂಟ ನೀಡುವ ಉಚಿತ ಆನ್ ಲೈನ್ ತರಬೇತಿಯನ್ನೇ ಶ್ರದ್ಧೆಯಿಂದ ಪಡೆದುಕೊಂಡ ಪದ್ಮಾವತಿ ಅವರು 2025 ರ ಸಾಲಿನ ಪರೀಕ್ಷೆ ಬರೆದು ಇಂದು ಕರ್ನಾಟಕದ ಸಿವಿಲ್ ನ್ಯಾಯಾಧೀಶೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ..
ನನ್ನ ಈ ಸಾಧನೆಗೆ ನನ್ನ ಸಹೋದರರೇ ಕಾರಣ.. ಅಂದು ಅವರು ನಾವು ಚಪ್ಪಲಿ ಹೊಲೆಯುತ್ತೇವೆ ನೀನು ಓದಮ್ಮಾ ಎಂದಿದ್ದಕ್ಕೆ ನಾನಿಂದು ಈ ಸಾಧನೆ ಮಾಡಲು ಸಾಧ್ಯವಾಯಿತು.. ಶಿಕ್ಷಣ ಎನ್ನುವುದು ಬದುಕನ್ನು ಸುಭದ್ರ ಪಡಿಸುತ್ತದೆ.. ನಾನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ..
ಪ್ರತಿಯೊಬ್ಬ ಗಂಡಿನ ಯಶಸ್ಸಿನ ಹಿಂದೆ ಒಬ್ಬಳು ಹೆಣ್ಣು ಇರುತ್ತಾಳೆ ಎನ್ನುವ ಮಾತು ಎಷ್ಟು ಸತ್ಯವೋ.. ಅದೇ ರೀತಿ ಪ್ರತಿಯೊಬ್ಬ ಹೆಣ್ಣಿನ ಯಶಸ್ಸಿನ ಹಿಂದೆಯೂ ಈ ರೀತಿ ಸಹೋದರನೋ ತಂದೆಯೋ ಅಥವಾ ಗಂಡನೋ ಇದ್ದೇ ಇರುತ್ತಾರೆ.. ಜೊತೆಗೆ ಬಡತನ ಕಂಡ ಆ ದಿನಗಳು ಸಹ ಸಾಧನೆಗೆ ಕಾರಣವಾಗಿರುತ್ತವೆ..
ಗೌರವಯುತ ನ್ಯಾಯಾಧೀಶರಾದ ಪದ್ಮಾವತಿ ಅವರಿಗೆ ಅಭಿನಂದನೆಗಳು..
-ರಮ್ಯ ಜಗತ್ ಮೈಸೂರು..