ಭರವಸೆಯೇ ಬೆಳಕು*
ಒಂದು ಮನೆಯಲ್ಲಿ 5 ಹಣತೆಗಳು ನಂದಾದೀಪದಂತೆ ಉರಿಯುತ್ತಿದ್ದವು. ಅನುದಿನವೂ ಬೆಳಗುತ್ತಿದ್ದರೂ ಮನೆಯಲ್ಲಿನ ಜನ ತನ್ನನ್ನು ಗೌರವಿಸುತ್ತಿಲ್ಲ ಎಂದು ಬೇಸರಪಟ್ಟುಕೊಂಡ ಮೊದಲ ಹಣತೆ, ತನ್ನ ಅಸ್ತಿತ್ವದಿಂದ ಪ್ರಯೋಜನವೇನೂ ಇಲ್ಲ ಎಂದು ಭಾವಿಸಿ ಆರಿಹೋಯಿತು. ಆ ಹಣತೆಯ ಹೆಸರು ‘ಉತ್ಸಾಹ’. ಇನ್ನು, ‘ಶಾಂತಿ’ಯ ಪ್ರತೀಕದಂತಿದ್ದ ಎರಡನೇ ಹಣತೆಯು ‘ಉತ್ಸಾಹ’ದ ಅವಸಾನವನ್ನು ಕಂಡು, ‘ನಾನು ನಿರಂತರ ಶಾಂತಿಮಂತ್ರದ ಬೆಳಕನ್ನು ಪಸರಿಸುತ್ತಿದ್ದರೂ ಜನರು ಅಶಾಂತಿಯ ಹರಡಿಕೆಯನ್ನು ನಿಲ್ಲಿಸಿಲ್ಲ; ಹೀಗಿರುವಾಗ ನಾನಿದ್ದು ಉಪಯೋಗವೇನು ಬಂತು..’ ಎಂದುಕೊಂಡು ತಾನೂ ನಂದಿಹೋಯಿತು. ‘ಉತ್ಸಾಹ’ ಮತ್ತು ‘ಶಾಂತಿ’ ತನ್ನೆದುರೇ ಇಲ್ಲವಾಗಿದ್ದನ್ನು ಕಂಡ ‘ಧೈರ್ಯ’ದ ಪ್ರತೀಕವಾದ ಮೂರನೇ ಹಣತೆಯೂ ಸ್ವತಃ ಅಧೈರ್ಯಗೊಂಡು ಅಸ್ತಿತ್ವವನ್ನು ಕಳೆದುಕೊಂಡಿತು. ಇದನ್ನು ಕಂಡು ‘ಸಮೃದ್ಧಿ’ಯ ಸಂಕೇತವಾಗಿದ್ದ ನಾಲ್ಕನೇ ಹಣತೆಯೂ ಬೆಳಗುವಿಕೆಗೆ ಪೂರ್ಣವಿರಾಮ ಹಾಕಿಕೊಂಡಿತು.
ಇಷ್ಟಾಗಿಯೂ 5ನೇ ಹಣತೆ ಮಾತ್ರ ಉರಿಯುತ್ತಿತ್ತು. ಅಷ್ಟರಲ್ಲಿ, ಕೆಲಸದ ಮೇಲೆ ತೆರಳಿದ್ದ ಮನೆಯ ಯಜಮಾನ ಹಿಂದಿರುಗಿದ. ಮುಂಜಾನೆ ಹೊರಡುವಾಗ ಹಚ್ಚಿಟ್ಟಿದ್ದ 5 ಹಣತೆಗಳಲ್ಲಿ ನಾಲ್ಕು ನಂದಿಹೋಗಿರುವುದು ಕಂಡು ಅವನಿಗೆ ಆರಂಭದಲ್ಲಿ ಅತೀವ ದುಃಖವಾದರೂ, ‘ಸದ್ಯ, ಒಂದಾದರೂ ಹಣತೆ ಉರಿಯುತ್ತಿದೆಯಲ್ಲ…’ ಎಂದು ಸಮಾಧಾನಗೊಂಡ. ಹೀಗೆ, ನಾಲ್ಕು ಹಣತೆಗಳ ಅಸ್ತಿತ್ವ ಅಳಿದರೂ ನಿರಂತರವಾಗಿ ಉರಿಯುತ್ತಲೇ ಇದ್ದ ಹಣತೆ ‘ಭರವಸೆ’ಯದಾಗಿತ್ತು!
ನಿಜ, ಬಾಳ ಪಯಣದಲ್ಲಿ ಅದೆಂಥ ಸಂಕಟ-ಸಂಕಷ್ಟಗಳೇ ಬಂದರೂ, ಸವಾಲಿನ ಬಿರುಗಾಳಿಯೇ ಬೀಸಿದರೂ, ಮನದಲ್ಲಿ ‘ಭರವಸೆ’ ಎಂಬ ಬೆಳಕು ಸದಾ ಬೆಳಗುತ್ತಿರಬೇಕು. ಕೌಟುಂಬಿಕ ಜೀವನವೇ ಇರಲಿ ಅಥವಾ ಆಯ್ದುಕೊಂಡ ಕಾರ್ಯಕ್ಷೇತ್ರವೇ ಇರಲಿ, ಸಮಸ್ಯೆಯ ಮಹಾಪೂರವೇ ಅಪ್ಪಳಿಸಿದಾಗ ಎಲ್ಲ ಆಯ್ಕೆಗಳು/ಸಾಧ್ಯತೆಗಳ ಬಾಗಿಲೂ ಮುಚ್ಚಿಹೋಯಿತು ಎಂದು ಹತಾಶರಾಗದೆ ಭರವಸೆಯ ಹಣತೆಗೆ ತೈಲವನ್ನು ಪೂರೈಸುತ್ತಿದ್ದರೆ, ಪರ್ಯಾಯ ಅವಕಾಶದ ಆಶಾಕಿರಣ ಗೋಚರಿಸುವುದು ನಿಶ್ಚಿತ. ವ್ಯಕ್ತಿಯೋರ್ವನಲ್ಲಿ ಅಂತರ್ಗತವಾಗಿರುವ ಆದರೆ ಹೊರಪ್ರಪಂಚಕ್ಕೆ ಅಗೋಚರವಾಗಿರುವ ‘ಸಾಮರ್ಥ್ಯ’ ಹೊರಬೀಳುವಂತಾಗಲಿ ಎಂಬ ಕಾರಣಕ್ಕೇ, ಇಂಥ ಸವಾಲುಗಳ ಬೆಟ್ಟ ಧುತ್ತೆಂದು ನಿಲ್ಲುವುದಿದೆ. ಹಾಗಂತ ಹತಾಶರಾಗದೆ ಭರವಸೆ ಕಳೆದುಕೊಳ್ಳದೆ ವಿವೇಚನೆಯಿಂದ ಮುಂದಡಿಯಿಟ್ಟರೆ ಸಾಧನಾಪಥದಲ್ಲಿ ವಿಶಿಷ್ಟ ಛಾಪುಮೂಡಿಸುವ ಸಾಧಕರು ನಾವಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಉಜ್ವಲ ಭವಿಷ್ಯಕ್ಕಾಗಿ, ಕನಸುಗಳ ಸಾಕಾರಕ್ಕಾಗಿ ಭರವಸೆ ಎಂಬ ಬೆಳಕಿನ ಜ್ಯೋತಿಯನ್ನು ಸದಾ ಬೆಳಗಿಸೋಣ.
ಕೃಪೆ: ರಾಗಿಣಿ