ತರಗತಿ - ೩; ಪಾಠ - ೯
1989-90 ಶೈಕ್ಷಣಿಕ ಸಾಲಿನಲ್ಲಿ ನಾನು ಮೂರನೇ ತರಗತಿ ಓದುತ್ತಿದ್ದಾಗ ಕನ್ನಡ ಪಾಠದಲ್ಲಿನ ಒಂದು ಕಥೆ ಈಗಲೂ ನನಗೆ ನೆನಪು ತರುತ್ತದೆ. ಕನ್ನಡ ಭಾರತಿ
(ತರಗತಿ - ೩; ಪಾಠ - ೯)
ಈ ಪಾಠ ಸೋಮನಗೌಡರ ನಾಯಿ
ಸೋಮನಗೌಡರು ಊರಿಗೆಲ್ಲ ದೊಡ್ಡ ಶ್ರೀಮಂತರು. ಅವರು ಒಂದು ನಾಯಿಯನ್ನು ಸಾಕಿದ್ದರು. ಅದರ ಹೆಸರು ಮೋತಿ, ಮೋತಿ ಬಲು ನಂಬಿಗೆಯ ಪ್ರಾಣಿ. ಜಾಣತನಕ್ಕೆ ಅದು ಊರಿಗೆಲ್ಲ ಹೆಸರಾಗಿತ್ತು. ಗೌಡರ ಮನೆ ಊರ ಹೊರಗೆ ಇತ್ತು. ಪ್ರತಿ ರಾತ್ರಿಯೆಲ್ಲ ಎಚ್ಚರವಾಗಿದ್ದು ಮನೆ ಕಾಯುತ್ತಿತ್ತು.
ಒಂದು ದಿನ ಆಪ್ತರ ಮದುವೆಗೆ ಗೌಡರ ಮನೆಯವರೆಲ್ಲ ನೆರೆಯೂರಿಗೆ ಹೋದರು. ಮೋತಿಯನ್ನು ಮನೆ ಕಾಯಲು ಬಿಟ್ಟು ಹೋದರು. ಗೌಡರ ಮನೆಯಲ್ಲಿ ಬಹಳ ಬಂಗಾರವಿತ್ತು, ಕಳ್ಳರು ಸಮಯ ಸಾಧಿಸುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಈ ಸಮಯ ನೋಡಿ ಗೌಡರ ಮನೆಗೆ ಹಿಂಬದಿಯಿಂದ ಕನ್ನ ಹಾಕಿದರು. ಕಳ್ಳರ ಗುಂಪಿನಲ್ಲಿ ಮೂರು ನಾಲ್ಕು ಜನರಿದ್ದರು. ಮೋತಿ ಅವರನ್ನು ನೋಡಿತು. ಆದರೆ ಬೊಗಳಲಿಲ್ಲ. ಎಲ್ಲವನ್ನು ನೋಡುತ್ತ ಮರೆಯಲ್ಲಿ ನಿಂತಿತು.
ಗೌಡರ ಬಂಗಾರ ಮತ್ತು ಹಣ ತುಂಬಿದ ಪೆಟ್ಟಿಗೆ ಭಾರವಾಗಿತ್ತು. ಕಳ್ಳರಿಗೆ ಅವಸರದಲ್ಲಿ ದೂರ ಒಯ್ಯಲು ಸಾಧ್ಯವಾಗಲಿಲ್ಲ. ಅವರಿಗೆ ಏನು ಮಾಡಬೇಕೆಂದು ತಿಳಿಯದಾಯಿತು. ಅಷ್ಟರಲ್ಲಿ ಬೆಳಗಾಗುತ್ತ ಬಂತು. ಬಹಳ ಯೋಚನೆ ಮಾಡಿದರು. ಕೊನೆಗೆ ಊರ ಹೊರಗಿನ ಗುಡ್ಡದ ಸಮೀಪ ಅದನ್ನು ಒಯ್ದರು. ಅಲ್ಲಿ ಅದನ್ನು ಹೂಳಿಟ್ಟರು. ಮೋತಿ ಗೊತ್ತಾಗದಂತೆ ಅವರನ್ನು ಹಿಂಬಾಲಿಸಿತು. ಹೂಳಿಟ್ಟ ಸ್ಥಳವನ್ನು ನೋಡಿತು. ಮರುದಿನ ಪೆಟ್ಟಿಗೆಯನ್ನು ಒಡೆದು ಕಳ್ಳರು ಅದನ್ನು ಹಂಚಿಕೊಳ್ಳುವವರಿದ್ದರು.
ಮದುವೆ ಮುಗಿಸಿ ಗೌಡರು ಮನೆಗೆ ಬಂದರು. ಮೋತಿ ಎಂದಿನಂತೆ ಒಡೆಯನನ್ನು ಸ್ವಾಗತಿಸಲಿಲ್ಲ. ಮೋತಿಯ ಜೋಲುಮೋರೆ ನೋಡಿ ಗೌಡರಿಗೆ ಗಾಬರಿಯಾಯಿತು, ಬಾಗಿಲು ತೆಗೆದು ಒಳಗೆ ಬಂದರು. ಹಿಂಬದಿಯ ಗೋಡೆ ಒಡೆದಿತ್ತು. ಪೆಟ್ಟಿಗೆ ಮಾಯವಾಗಿತ್ತು.
ಮೋತಿ ದೀನ ಸ್ವರದಿಂದ ಕೂಗಿತು. ಗೌಡರು ಹೊರಗೆ ಬಂದರು. ಮೋತಿ ಗೌಡರ ಧೋತರವನ್ನು ಹಿಡಿದೆಳೆಯಿತು. ಗೌಡರು ಮೋತಿಯ ಹಿಂದೆ ಹೋದರು. ಮೋತಿ ಪೆಟ್ಟಿಗೆ ಹುಗಿದ ಸ್ಥಳವನ್ನು ಕಾಲಿನಿಂದ ಕೆದರಿತು. ಗೌಡರಿಗೆ ಅನುಮಾನ ಬಂದಿತು. ತಮ್ಮ ಆಳುಗಳನ್ನು
ಕರೆಯಿಸಿದರು. ಆ ಸ್ಥಳದಲ್ಲಿ ಅಗೆಯಿಸಿದರು. ಅಲ್ಲಿ ಅವರಿಗೆ ತಮ್ಮ ಪೆಟ್ಟಿಗೆಯು ಕಾಣಿಸಿತು. ಆಳುಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಗೌಡರ ಮನೆಗೆ ತಂದರು. ಗೌಡರು ಮೋತಿಯ ಜಾಣತನಕ್ಕೆ ಮೆಚ್ಚಿದರು. ಪ್ರೀತಿಯಿಂದ ಮೈಮೇಲೆ ಕೈಯಾಡಿಸಿದರು. ಮೋತಿಗೆ ಸಂತೋಷವಾಯಿತು.
ನಾಯಿಗಳು ತಮ್ಮ ಮಾಲೀಕರಿಗೆ ಬೇಷರತ್ತಾದ ಪ್ರೀತಿಗೆ ಹೆಸರುವಾಸಿಯಾಗಿದೆ. ಅಂದರೆ ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ.
ನಾವೆಲ್ಲರೂ ಪ್ರಯೋಜನ ಪಡೆಯಬಹುದಾದ ಒಂದು ಪಾಠವಾಗಿದೆ. ಪ್ರಾಣಿ ಮತ್ತು ಮನುಷ್ಯರ ನಡುವಿನ ಬಾಂಧವ್ಯ ನಿಜವಾಗಿಯೂ ವಿಶೇಷವಾಗಿರಬಹುದು. ಆದರೆ ನಾಯಿ ತನ್ನ ಜೀವಿತಾವಧಿಯಲ್ಲಿ ಅದಕ್ಕಿಂತ ಹೆಚ್ಚಿನದನ್ನು ಮಾಡುತ್ತದೆ. ನಾಯಿ ತನ್ನ ಜೀವಿತಾವಧಿಯಲ್ಲಿ ನಮಗೆ ಕಲಿಸುವ ಕೆಲವು ವಿಷಯಗಳು ಇಲ್ಲಿವೆ.
*ಪ್ರೀತಿ ಮತ್ತು ನಿಷ್ಠೆಯ ಪಾಠ
*ಮಕ್ಕಳಿಗೆ ಜವಾಬ್ದಾರಿಯುತವಾಗಿರಲು ಕಲಿಸುವುದು.
*ಇತರರನ್ನು ಹೇಗೆ ಗೌರವಿಸುವುದು.
*ನೀನು ನೀನಾಗಿರು.
*ಕುಟುಂಬದ ಪ್ರಾಮುಖ್ಯತೆ.
*ಸಂವಹನ. ತಾಳ್ಮೆ ಮತ್ತು ಸಹಾನುಭೂತಿ.
ಪ್ರಾಣಿಗಳಲ್ಲಿಯೇ ಒಳ್ಳೆಯ ಗುಣಗಳು ಇರುವಾಗ... ಮನುಷ್ಯರಾದ ನಾವೇಕೆ ಕೆಟ್ಟ ಗುಣಗಳನ್ನು ಇಟ್ಟುಕೊಳ್ಳಬೇಕು..
ಈ ಒಳ್ಳೆಯ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೂಂಡರೆ ನಮ್ಮ ಜೀವನ ಸಾರ್ಥಕ.
By Shankargouda Basapur