ಶಿಕ್ಷೆಯೆಂದರೆ ಜೀವನ ಪರಿವರ್ತನೆ.
ಈ ಪ್ರಪಂಚದಲ್ಲಿ ಅನೇಕ ಜನರು ತಪ್ಪು ಮಾಡಿದಾಗ ಶಿಕ್ಷೆಗೆ ಒಳಗಾಗುವುದುಂಟು. ಶಿಕ್ಷೆಯ ಉದ್ದೇಶ-ಶಿಕ್ಷಣವೇ ಆಗಿದೆ. ಒಮ್ಮೆ ತಪ್ಪು ಮಾಡಿದವನು ಮುಂದಕ್ಕೆಂದೂ ಅಂತಹ ತಪ್ಪು ಮಾಡದಿರಲೆಂದು...
ನಮ್ಮ ಆಡಳಿತ ವ್ಯವಸ್ಥೆಯಲ್ಲಿ
ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಗಳಿವೆ. ಇದರಿಂದ ನಮ್ಮ ಸಮಾಜವನ್ನು, ಜನಜೀವನವನ್ನು ಸರಿ ಮಾರ್ಗದಲ್ಲಿ ಮುನ್ನಡೆಸುವಂತಹ ಕೆಲಸ ಸಾಧ್ಯ. ಈ ಬಗೆಯ ನ್ಯಾಯಾಂಗ ಮಹತ್ವವನ್ನು ನಿರೂಪಿಸುವ ಒಂದು ಪ್ರಸಂಗ ಇಲ್ಲಿದೆ.
ಚೀನಾ ದೇಶದಲ್ಲಿ ಒಬ್ಬ ಚಿಂತಕರ ಪ್ರಸಿದ್ಧಿಯನ್ನು ಕೇಳಿ ಅಲ್ಲಿಯ ಅರಸನು ಅವರನ್ನು ತನ್ನ ರಾಜ್ಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡಿದನು. ಈ ನ್ಯಾಯಾಧೀಶರು ಸೂಕ್ತ ನ್ಯಾಯ ತೀರ್ಪುಗಳಿಂದಾಗಿ ಬಹು ವಿಖ್ಯಾತರಾದರು. ಅಲ್ಲಿಯ ರಾಜಧಾನಿಯಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯ ಬಳಿ ಸಾಕಷ್ಟು ಸಂಪತ್ತು ಇತ್ತು. ಇದೆಲ್ಲವೂ ಬಡ ಜನರ ಶೋಷಣೆಯಿಂದ ಸಂಗ್ರಹಿಸಿದ್ದು, ಅದರ ರಕ್ಷ ಣೆಗಾಗಿ ಬಲಿಷ್ಠ ರಕ್ಷಕರನ್ನೂ ನೇಮಿಸಿಕೊಂಡಿದ್ದ. ಹಾಗಿದ್ದರೂ ಒಮ್ಮೆ ಕಳ್ಳತನ ನಡೆದೇ ಬಿಟ್ಟಿತು ಹಾಗೂ ಕಳ್ಳನನ್ನು ಬಂಧಿಸಲಾಯಿತು.
ಈ ಕಳ್ಳನನ್ನು ಸುಪ್ರಸಿದ್ಧ ನ್ಯಾಯಾಧೀಶರೆದುರು ಹಾಜರುಪಡಿಸಿದಾಗ ಆತನು ತನ್ನ ಕಳ್ಳತನದ ಅಪರಾಧವನ್ನು ಒಪ್ಪಿಕೊಂಡದ್ದಲ್ಲದೆ, ಈ ಹಿಂದೆ ಮಾಡಿದ್ದ ಕಳ್ಳತನಗಳನ್ನೂ ಒಪ್ಪಿಕೊಂಡನು. ಆ ಕಳ್ಳನಿಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿದ ನ್ಯಾಯಾಧೀಶರು ಶ್ರೀಮಂತ ವ್ಯಾಪಾರಿಯನ್ನು ಕರೆಸಿ, ಆತನು ಧನ ಸಂಗ್ರಹ ಮಾಡಿದ ವಿಧಾನದ ಬಗ್ಗೆ ಪ್ರಶ್ನಿಸತೊಡಗಿದರು. ಆದರೆ ತನ್ನ ಗುಟ್ಟು ಬಿಡಲೊಪ್ಪದ ಆ ವ್ಯಾಪಾರಿ 'ಎಲ್ಲವೂ ನನ್ನ ವ್ಯಾಪಾರದ ಫಲವಾಗಿದೆ' ಎಂದು ವಾದಿಸಿದನು. ಬಡವರ ಶೋಷಣೆಯ ತಪ್ಪನ್ನು ಒಪ್ಪಿಕೊಳ್ಳಲೇ ಇಲ್ಲ.
ನ್ಯಾಯಾಧೀಶರು ವ್ಯಾಪಾರಿಗೆ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿದರು. ಸಿಟ್ಟುಗೊಂಡ ವ್ಯಾಪಾರಿ ಪ್ರಶ್ನಿಸಿದ- 'ನೀವು ಕಳ್ಳನಿಗೆ ಒಂದು ವರ್ಷ ಶಿಕ್ಷೆ ವಿಧಿಸಿದರೆ, ನನಗೇಕೆ ಎರಡು ವರ್ಷ ವಿಧಿಸುತ್ತೀರಿ?'. ನ್ಯಾಯಾಧೀಶರು ಸಮಾಧಾನದಿಂದ ಉತ್ತರಿಸಿದರು- 'ಆ ಕಳ್ಳನು ತಪ್ಪನ್ನು ಒಪ್ಪಿಕೊಂಡನು. ಆದ್ದರಿಂದ ಅವನಲ್ಲಿ ಹೃದಯ ಪರಿವರ್ತನೆ ಸಾಧ್ಯತೆ ಇದೆ. ಆದರೆ ನೀವು ಒಪ್ಪಿಕೊಳ್ಳಲೇ ಇಲ್ಲ. ಆದ್ದರಿಂದ ಈ ಶಿಕ್ಷೆಯಿಂದ ನಿಮಗಾವ ಶಿಕ್ಷಣವೂ ಸಿಗಲಾರದು' ಎಂದಾಗ ವ್ಯಾಪಾರಿ ತಲೆ ತಗ್ಗಿಸಿದ.
ಈ ಪ್ರಪಂಚದಲ್ಲಿ ಮಾನವನು ಶಾಲಾ-ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಪಡೆಯುವ ಶಿಕ್ಷಣಕ್ಕಿಂತ ಬದುಕೆಂಬ ವಿದ್ಯಾಲಯದಲ್ಲಿ ಪಡೆಯುವ ಶಿಕ್ಷಣವು ಹೆಚ್ಚು ಮೌಲ್ಯಯುತವಾದುದೇ ಆಗಿದೆ. ಕಾನೂನು ಕಟ್ಟಳೆ, ರೀತಿ-ರಿವಾಜು, ನೀತಿ- ನಿಯಮಗಳನ್ನು ಮೀರಿದವರಿಗೆ ಸರಕಾರ ಇಲ್ಲವೇ ಸಮಾಜವು ನೀಡುವ ಶಿಕ್ಷೆಯೆಂದರೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು, ಭವಿಷ್ಯದಲ್ಲೆಂದೂ ಅಂತಹ ತಪ್ಪು ಮಾಡದೆ ಸಭ್ಯ ನಾಗರಿಕರಾಗಿ ಬದುಕೆಂಬ ಪ್ರೇರಣೆ ನೀಡುವ ಹಾಗೂ ಪರಿವರ್ತನೆ ಮಾಡುವ ಉಜ್ವಲ ಶಿಕ್ಷಣವೇ ಆಗಿದೆ. ಇಂತಹ ವ್ಯಕ್ತಿತ್ವ ಪರಿವರ್ತನೆಯ ಬಗ್ಗೆ ಅಭಿಮಾನ ಪಡಬೇಕಾಗಿದೆ.
ಕೃಪೆ:ಡಾ. ಡಿ. ವೀರೇಂದ್ರ ಹೆಗ್ಗಡೆ