Saturday, November 4, 2023

ಕಥೆ-203: ಕೃತಜ್ಞತೆ ವಿಶೇಷ ಗುಣ

ಗುಂಡಣ್ಣ, ಕಪಿಲಾ ಮದುವೆಯಾಗಿ ಐವತ್ತು ವರ್ಷಗಳು ಕಳೆದವು. ಅವರ ಮಕ್ಕಳು ದೊಡ್ಡವರಾಗಿ ಮನೆಯ, ವ್ಯವಹಾರದ ಯಜಮಾನಿಕೆ ವಹಿಸಿ­ಕೊಂಡಿದ್ದಾರೆ.

ಒಂದು ದಿನ ಗುಂಡಣ್ಣ, ಕಪಿಲಾ ಇಬ್ಬರೇ ಆಸ್ಪತ್ರೆಯಲ್ಲಿದ್ದಾಗ ಗುಂಡಣ್ಣನ ತಲೆಯಲ್ಲಿ ಯಾವುದೋ ವಿಚಾರ ಬಂದು ಕಪಿಲಾಳನ್ನು ಹತ್ತಿರಕ್ಕೆ ಕರೆದ. ಕಪಿಲಾ ಬಂದು ಕುಳಿತಳು. ಗುಂಡಣ್ಣ ಮಾತು ತೆಗೆದ. ‘ಕಪಿಲಾ, ನಿನಗೆ ನೆನಪು ಬಹಳ ಅಲ್ಲವೇ? ನಿನಗೆ ನೆನಪಿರಬೇಕು, ನಾವು ಮದುವೆಯಾದ ಎರಡು ವರ್ಷದ ನಂತರ ಹೊಲದಲ್ಲಿ ಬೆಳೆ ಎದೆಮಟ್ಟಕ್ಕೆ ಬೆಳೆದು ಕಟಾವಿಗೆ ಬಂದಿದ್ದಾಗ ಭಾರಿ ಆಲಿಕಲ್ಲು ಮಳೆ ಸುರಿಯಿತು. ಬೆಳೆ ಸರ್ವನಾಶವಾಯಿತು. ಒಂದು ಕಾಳೂ ಮನೆಗೆ ಬರಲಿಲ್ಲ. ನಿನಗೆ ನೆನಪಿರಬೇಕಲ್ಲ, ಅಂಥ ಕೆಟ್ಟ ಕಾಲದಲ್ಲೂ ನೀನು ನನ್ನ ಜೊತೆಗೇ ಇದ್ದೆ’. ‘ಹೌದು, ನಾನು ನಿಮ್ಮ ಜೊತೆಗೇ ಇದ್ದೆನಲ್ಲ, ಅದೆಷ್ಟು ಸಂಕಟ ಆವಾಗ’ ಎಂದಳು ಕಪಿಲಾ.

‘ಆಮೇಲೆ ಮತ್ತೆ ಐದು ವರ್ಷಗಳ ನಂತರ ನಾನು ವ್ಯವಹಾರ ಮಾಡುತ್ತಿದ್ದಾಗ ಮಾರಾಟ ಮಾಡುವ ವಸ್ತುಗಳನ್ನು ಸಂಗ್ರಹಿಸಲು ಬಂದು ದೊಡ್ಡ ಗೋಡೌನ್ ಕಟ್ಟಿಸಿದ್ದೆ, ಅದರ ತುಂಬ ವಸ್ತುಗಳನ್ನು ಶೇಖರಿಸಿದ್ದೆ. ನಿನಗೆ ನೆನಪಿರಬೇಕು, ಒಂದು ಸಿಡಿಲು ಹೊಡೆದು ಗೋಡೌನಿಗೆ ಬೆಂಕಿ ಬಿದ್ದು ಎಲ್ಲ ವಸ್ತುಗಳು ಭಸ್ಮವಾಗಿ ಹೋದವು. ನಾನು ಕಂಗಾಲಾಗಿ ಹೋಗಿದ್ದೆ. ಅಂದೂ ನೀನು ನನ್ನ ಜೊತೆಗೇ ಇದ್ದೆ ಅಲ್ಲವೇ ಕಪಿಲಾ?’ ‘ಹೌದಲ್ಲವೇ? ನಾನು ನಿಮ್ಮೊಂದಿಗೇ ಇದ್ದೆ. ನಿಮ್ಮನ್ನು ಬಿಟ್ಟು ಎಲ್ಲಿ ಹೋಗಲಿ? ಇಬ್ಬರೂ ಸೇರಿಯೇ ಆ ಪರಿಸ್ಥಿತಿ ನಿಭಾಯಿಸಿದೆವಲ್ಲವೇ?’ ಪ್ರೀತಿ­ಯಿಂದ ಹೇಳಿದಳು ಕಪಿಲಾ.

‘ನಂತರ ನಾನು ಮಾರಾಟದ ಕೆಲಸವೇ ಬೇಡ­ವೆಂದು ಹೈನುಗಾರಿಕೆ ಪ್ರಾರಂಭಿಸಿದೆ. ನೂರು ಹಸುಗಳನ್ನು ಕೊಂಡು ಹಾಲು ಹಾಗೂ ಹಾಲಿನ ಪದಾರ್ಥಗಳನ್ನು ಮಾರತೊಡಗಿದೆ. ಸಾಕಷ್ಟು ಹಣ ಬಂದು ಮೇಲಕ್ಕೆ ಬಂದೆ. ಆದರೆ ಹತ್ತು ವರ್ಷದ ನಂತರ ಅದಾವುದೋ ಪರದೇಶಿ ವೈರಸ್ ಬಂದು ಜಾನುವಾರು­ಗಳಿಗೆ ತಗುಲಿ ಎರಡು ವಾರದಲ್ಲಿ ಎಲ್ಲ ಹಸುಗಳು ಸತ್ತುಹೋದುವಲ್ಲ? ಆಗ ನನ್ನ ಪರಿಸ್ಥಿತಿ ಎಷ್ಟು ದಯನೀಯವಾಗಿತ್ತು? ನೀನು ಆಗಲೂ ನನ್ನೊಂದಿಗೇ ಇದ್ದೆಯಲ್ಲ ಕಪಿಲಾ?’ ಕೇಳಿದ ಗುಂಡಣ್ಣ. ಅದೇ ಪ್ರೀತಿಯಿಂದ ಗಂಡನ ಕೈ ಹಿಡಿದು ಹೇಳಿದಳು ಕಪಿಲಾ, ‘ಹೌದು, ಹೌದು, ನನಗೆ ಚೆನ್ನಾಗಿ ನೆನಪಿದೆ. ಅದೊಂದು ಕಷ್ಟದ ಕಾಲವಾಗಿತ್ತು’. ‘ಈಗ ನೋಡು ನನಗೆ ಎಪ್ಪತ್ತೈದು ವರ್ಷ. ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ­ಕೊಂಡು ಆಸ್ಪತ್ರೆಯಲ್ಲಿದ್ದೇನೆ. ಈಗಲೂ ನೀನು ನನ್ನ ಬದಿಯಲ್ಲೇ ಇದ್ದೀಯಲ್ಲ?’ ಎಂದ ಗುಂಡಣ್ಣ.

ಹೆಂಡತಿ ಕಪಿಲಾಳಿಗೆ ಭಾವನೆಯ ಪೂರ ಉಕ್ಕಿ ಬಂತು. ತನ್ನ ಗಂಡ ಪ್ರತಿ ಬಾರಿ ತೊಂದರೆಯಲ್ಲಿದ್ದಾಗ ತಾನು ಪಕ್ಕದಲ್ಲೇ ಸಹಕಾರಿಯಾ­ಗಿದ್ದುದನ್ನು ಕೃತಜ್ಞತೆ­ಯಿಂದ ಸ್ಮರಿಸಿಕೊ­ಳ್ಳುತ್ತಿದ್ದಾನೆ ಎಂದು­ಕೊಂಡು ಪ್ರೀತಿ­ಯಿಂದ ಅವನತ್ತ ನೋಡಿ ಕೈ ಹಿಡಿದಳು.

ಆದರೆ ಗುಂಡಣ್ಣ ಕೈಬಿಡಿಸಿಕೊಂಡು ಗುಡುಗಿದ, ‘ಹಾಗಾ­ದರೆ ನಿನ್ನದು ಅದೆಷ್ಟು ಕೆಟ್ಟ ಕಾಲ­ಗುಣವೇ? ಮದುವೆ­ಯಾಗಿ ಬಂದಂದಿ­ನಿಂದ ಇದು­ವರೆಗೂ ನೀನು ಜೊತೆ­ಯಾಗಿ ಇದ್ದಾಗಲೆಲ್ಲ ಆಪತ್ತು ಕಾಡಿದೆ ಎಂದ.. ಕಪಿಲಾ ಕುಸಿದು ಹೋದಳು.  

ಗುಂಡಣ್ಣನಿಗೆ ತೊಂದರೆ ಬಂದಾಗಲೆಲ್ಲ ತಪ್ಪಿಸಿಕೊಂಡು ಹೋಗದೇ ತಾನೂ ಜೊತೆಯಾಗಿ ನಿಂತು ಕಷ್ಟದಲ್ಲಿ ಭಾಗಿ­ಯಾಗಿ, ಸಹಕಾರಿಯಾದ ಹೆಂಡ­ತಿಗೆ ಕೃತಜ್ಞತೆ ಸೂಸಿಸದೇ ನಿನ್ನಿಂದಲೇ ಕಷ್ಟ ಬಂದದ್ದು ಎನ್ನುವ ಗುಂಡಣ್ಣನ ಮನೋಭಾವ ಈಗ ಸಾರ್ವತ್ರಿಕವಾಗುತ್ತಿರುವುದು ದುಃಖದ ವಿಷಯ. ಈಗಲೂ ಹೆಣ್ಣನ್ನು ಈ ರೀತಿ ಶೋಷಿಸುವುದು ನಡೆದಿದೆ.. ಕೆಟ್ಟದ್ದಕ್ಕೂ ಒಳ್ಳೆದಕ್ಕು ಕೆಲವೊಮ್ಮೆ ಪ್ರಾಕೃತಿಕ ಘಟನೆಗಳು ಕಾರಣ ಆಗಬಹುದು.. ನಾವು ತೆಗೆದುಕೊಳ್ಳುವ ನಿರ್ಧಾರಗಳು ಕಾರಣವಾಗಬಹುದು.. ಅದಕ್ಕೆ ಇನ್ನೊಬ್ಬರನ್ನು ದೂಷಿಸುವುದು ಯಾವ ನ್ಯಾಯ...

ಬೆಕ್ಕು ನೋಡಿದ್ರೆ ಕೆಟ್ಟದ್ದು,ನರಿ ನೋಡಿದ್ರೆ ಒಳ್ಳೆಯದು ಅಂತಾರೆ ಆದರೆ ಮನೆಯಲ್ಲಿ ನರಿ ಸಾಕಲ್ಲ ಬೇಕನ್ನೇ ಸಾಕೋದು.. ಪ್ರಾಣಿ ನೋಡಿದರೆ ಕೆಟ್ಟದ್ದು ಒಳ್ಳೇದು ಅದು ಮೂಢನಂಬಿಕೆ..

ತಮಗೆ ಬದುಕು ಕೊಟ್ಟು, ಕೆಲಸದಲ್ಲಿ ಹಲವಾರು ವರ್ಷ ಜೊತೆಗಿದ್ದು ಸಹಕಾರ ನೀಡಿದ, ತಮ್ಮೊಡನೆ ಜೀವನ ಹಂಚಿಕೊಂಡ ಪರಿವಾರ ನೋಡಿಕೊಂಡ ಮಾತೆಗೆ ಕೃತಜ್ಞತೆ ಕಾಣದಿದ್ದಾಗ ಮರುಕ ಹುಟ್ಟುತ್ತದೆ.

ಕೃತಜ್ಞತೆ ಒಂದು ವಿಶೇಷವಾದ, ಅಪರೂಪದ ಗುಣ. ಅದು ಮನು­ಷ್ಯರಲ್ಲಿ ಮಾತ್ರ ಅಪರೂಪದ್ದು ಎಂದು ತೋರುತ್ತದೆ. ಸಾಕಿದ ಪ್ರಾಣಿಗಳಿಗೆ ಅದೇನೂ ಅಪರೂಪವಲ್ಲ. ಸಾಕಿದ ಹಸುಗಳು ಇಡೀ ದಿನ ಹೊರಗಡೆ ತಿರುಗಾಡಿ ಅಲ್ಲಲ್ಲಿ ತಿಂದು, ರಸ್ತೆ ಪಕ್ಕದ ಹುಲ್ಲನ್ನು ಮೇದು, ಯಜಮಾನನ ಮನೆಗೆ ಸಂಜೆಗೆ ಬಂದು ಹಾಲು ನೀಡಿ ಹೋಗುತ್ತವೆ. ಒಂದು ಚೂರು ರೊಟ್ಟಿ ನೀಡಿದವನ ಮನೆಯ ಮುಂದೆ ನಾಯಿ ಇಡೀ ದಿನ ಕುಳಿತು ಕಾಯುತ್ತದೆ. ಈ ಕೃತಜ್ಞತೆ ಸಾಕಿದ ಬೆಕ್ಕು, ಕುರಿ, ಕೋಳಿಗಳಿಗೆ ಅತ್ಯಂತ ನೈಸರ್ಗಿಕವಾಗಿ ಬರುವ ಗುಣ. ಆದರೆ, ಇದು ಮನು­ಷ್ಯರಲ್ಲಿ ಮಾತ್ರ ಈಗ ಅತ್ಯಂತ ವಿರಳ­ವಾಗಿ ಕಾಣುವ ಗುಣವಾಗಿ­ರುವುದು ತೋರುತ್ತದೆ..

ಕೃತಂಸ್ಮರ, ಕೃತೋಸ್ಮರ ಎನ್ನುತ್ತದೆ ಒಂದು ಶುಭನುಡಿ. ಮಾಡಿ­ದ್ದನ್ನು ಸ್ಮರಿಸು, ಮಾಡಿದವರನ್ನು ಸ್ಮರಿಸು ಎನ್ನುವ ಈ ಮಾತು ಎಲ್ಲರ ಬದುಕಿನಲ್ಲಿ ಬಂದರೆ ನಾವು ಎಲ್ಲ ಪ್ರಾಣಿಗಳಿಗಿಂತ ಶ್ರೇಷ್ಠವಾದ ಮನುಷ್ಯ ಜನ್ಮಕ್ಕೆ ಬಂದದ್ದು ಸಾರ್ಥಕ.💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು