ಧೈರ್ಯದಿಂದ ಮುನ್ನುಗ್ಗಿದ್ದರೆ ಯಶಸ್ವಿಯಾಗಲು ಸಾಧ್ಯ
ಮಾನವನ ಬದುಕಿನಲ್ಲಿ ಕೆಲವೊಂದು ಅನಿರೀಕ್ಷಿತ ಘಟನೆಗಳು ಜರಗುತ್ತವೆ. ಕೆಲವೊಂದು ಕುಂದು ಕೊರತೆಗಳು, ಲಾಭ-ನಷ್ಟಗಳು, ಸೋಲು-ಗೆಲುವುಗಳು, ಕಾಯಿಲೆ, ಅಪಘಾತಗಳು ಸಂಭವಿಸಿ, ದುಃಖ-ಸಂತಾಪಕ್ಕೆ ಕಾರಣವಾಗುವುದುಂಟು. ಆಗ ಕೆಲವರು ಇದು ವಿಧಿ-ಲಿಖಿತವೆಂದು ಸುಮ್ಮನಾದರೆ, ಕೆಲವರು ನಿರುಪಾಯರಾಗಿ ಗೋಳಾಡುತ್ತಾರೆ. ದುಃಖವನ್ನು ಸಹಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರೂ ಇದ್ದಾರೆ. ಆದರೆ, ಬುದ್ಧಿವಂತರೂ, ದೂರದರ್ಶಿಗಳೂ, ಜಾಣರೂ ಆದ ವ್ಯಕ್ತಿಗಳು ಬದುಕಿನ ಸಮಸ್ಯೆಗಳನ್ನು ಎದುರಿಸಿ, ಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆದು, ಎಲ್ಲರ ಗಮನವನ್ನು ಸೆಳೆಯಲು ಸಮರ್ಥರಾಗುತ್ತಾರೆಂಬುದಕ್ಕೊಂದು ಉಜ್ವಲ ನಿದರ್ಶನ ಇಲ್ಲಿದೆ.
ಅದೊಂದು ಒಂದು ಸುಸಜ್ಜಿತ ನರ್ಸಿಂಗ್ ಹೋಮ್ನಲ್ಲಿ ತಾಯಿಯೊಬ್ಬಳು ಒಂದು ಹೆಣ್ಣು ಮಗುವನ್ನು ಹೆತ್ತಳು. ಅಲ್ಲಿನ ವೈದ್ಯರಿಗೆ ಈ ಮಗು ದುರ್ಬಲವಿದೆಯನ್ನಿಸಿತು. ಆ ಮಗುವಿನ ತಾಯಿಗೆ ಸಹಾನುಭೂತಿಯೊಂದಿಗೆ ವೈದ್ಯರು ಮಾಹಿತಿ ನೀಡುತ್ತಾ ಹೇಳಿದರು 'ನಿಮ್ಮ ಮಗು ತುಂಬಾ ದುರ್ಬಲವಿದೆ'. ಆದರೆ ಈ ಮಗುವಿನ ತಾಯಿ ಕಂಬನಿ ತುಂಬಿ, ಕಂಪಿಸುವ ಧ್ವನಿಯಲ್ಲಿ ಪ್ರಶ್ನಿಸಿದಳು. ''ಡಾಕ್ಟ್ರೆ, ಅಂದರೆ ನನ್ನ ಮಗುವಿಗೆ ಗುಣವಾಗದೇ? ಅಂದರೆ ಎಷ್ಟು ದಿನ?,'' ವಾಕ್ಯ ಪೂರ್ತಿಗೊಳಿಸಲಾಗಲಿಲ್ಲ.
ಆಕೆಯ ಮಾತು ಪೂರ್ಣವಾಗುವ ಮೊದಲೇ ವೈದ್ಯರು ಸಮಾಧಾನ ಹೇಳಿದರು- ''ಅಮ್ಮ, ಗಾಬರಿಯಾಗಬೇಡಿ. ನಿಮ್ಮ ಮಗು ಬದುಕುತ್ತಾಳೆ. ಆದರೆ ಸಾಮಾನ್ಯ ಮಕ್ಕಳಂತಲ್ಲ. ಬದುಕಿನಲ್ಲಿ ಆಕೆ ಎಂದೂ ನೋಡಲಾರಳು ಕೇಳಲಾರಳು!,'' ಈ ಮಾತು ಕೇಳಿದೊಡನೆಯೇ ಮಾತೆ ಗಾಬರಿಯಾಗಿ ಕೇಳಿದಳು. 'ಅಂದರೆ ನನ್ನ ಮಗಳು ಕುರುಡಿ ಮತ್ತು ಕಿವುಡಿಯೇ? ನನ್ನ ಮಗಳಿಗಾರು ಗತಿ? ನಮಗೆಂಥ ಶಿಕ್ಷೆ !
ಡಾಕ್ಟರರು ಹೇಳಿದರು-''ಗಾಬರಿಯಾಗಬೇಡಿ.ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಆಶಾವಾದಿಗಳಾಗಿ ಮುನ್ನಡೆಯಿರಿ,''
ವೈದ್ಯರು ನೀಡಿದ ಸಲಹೆ ಕಾರ್ಯಗತವಾಯಿತು. ಆ ಮಗುವೇ ಬೆಳೆದು ಹೆಲೆನ್ ಕೆಲರ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿ, ತನ್ನ ಪ್ರಸನ್ನಚಿತ್ತ ಮತ್ತು ಜನಕಲ್ಯಾಣ ಕಾರ್ಯಗಳಿಂದ ವಿಖ್ಯಾತರಾದರು. ಹೆಲೆನ್ಳ ಸಂಕಲ್ಪ, ಕಠಿಣ ಪರಿಶ್ರಮ,ಮಾತನಾಡಲು ಕಲಿಯುವುದು ಮತ್ತು ಅವಳ ಜೀವನದ ಬಗ್ಗೆ ಪುಸ್ತಕವನ್ನು ಬರೆಯುವುದು ಸೇರಿದಂತೆ ಅವಳು ತಾನೇ ಹೊಂದಿಸಿಕೊಂಡ ಗಮನಾರ್ಹ ಗುರಿಗಳನ್ನು ಸಾಧಿಸಲು ಅವಕಾಶ ಮಾಡಿಕೊಟ್ಟಿತು.ಬ್ಯಾಚುಲರ್ ಆಫ್ ಆರ್ಟ್ಸ್ (ಬಿ.ಎ.) ಶಿಕ್ಷಣ ಮುಗಿಸಿದ ಜಗತ್ತಿನ ಪ್ರಥಮ ಅಂಧ-ಮಹಿಳೆಯೆಂದು ಖ್ಯಾತಿ ಪಡೆದರು. ದುರ್ಬಲ ಮತ್ತು ಅಸಹಾಯ ವರ್ಗದವರಿಗೆ ಪ್ರೇರಣಾದಾಯಕಿ ಎಂದು ಹೆಸರು ಪಡೆದರು. ದೇಶ-ವಿದೇಶಗಳಲ್ಲಿ ಉಪನ್ಯಾಸ ನೀಡಲೆಂದು ಆಹ್ವಾನಿಸಲಾಯಿತು.
ಜನ್ಮಜಾತವಾದ ಕುಂದು-ಕೊರತೆ, ಸಮಸ್ಯೆಗಳಿದ್ದರೂ ಅಂಜದೆ ಧೈರ್ಯದಿಂದ ಮುನ್ನುಗ್ಗಿದರೆ ಬದುಕಿನಲ್ಲಿ ಯಶಸ್ಸು ಸಾಫಲ್ಯಗಳು ಅಪ್ರಾಪ್ಯವೇನಲ್ಲ ಎಂದು ಈ ಪಾಶ್ಚಾತ್ಯ ಮಹಿಳೆ ತನ್ನ ಆದರ್ಶಗಳಿಂದ ತೋರಿಸಿಕೊಟ್ಟರೆ, ಆಕೆ ಜನರಿಗೆ ಪ್ರೇರಣಾದಾಯಕವಾದ ಪುಸ್ತಕಗಳನ್ನು ಬರೆದರು ಹಾಗೂ ಆಕೆಯ ಸಾಧನೆಗಳ ಬಗೆಗೂ ಕೆಲ ಪುಸ್ತಕಗಳೂ ಪ್ರಕಟವಾದವು.
ಗೆಳೆಯರೆ, ಬದುಕಿನಲ್ಲಿ ಏನೇ ಕುಂದು-ಕೊರತೆ, ಸಮಸ್ಯೆಗಳೇ ಬರಲಿ, ನಿರಾಶೆಯಿಂದ ಕುಗ್ಗದೆ, ಧೈರ್ಯದಿಂದ ಮುನ್ನುಗ್ಗಿದ್ದರೆ ಯಶಸ್ವಿಯಾಗಲು ಸಾಧ್ಯ ಎಂಬುದರಲ್ಲಿ ಸಂದೇಹವಿಲ್ಲ. ಏನಂತೀರಾ?
- ಡಿ. ವೀರೇಂದ್ರ ಹೆಗ್ಗಡೆಯವರು
