ಕಥೆ-332
ಬೇಡದ ನಕಾರಾತ್ಮಕ ಭಾವನೆ ಬಿಡೋಣ..💐💐
ಇದು ವೇಯ್ಸ್ ವಾಲ್ಟರ್ ಡೈಯರ್ (ಅಮೆರಿಕದ ತತ್ತ್ವಜ್ಞಾನಿ, ಲೇಖಕ) ಮತ್ತು ಆತನ ಶಿಷ್ಯನ ನಡುವೆ ನಡೆದ ಸಂಭಾಷಣೆ.
ವಾಲ್ಟರ್ ಕೈಯಲ್ಲಿ ಕಿತ್ತಳೆ ಹಣ್ಣು ಹಿಡಿದು ಶಿಷ್ಯನನ್ನು ಕೇಳಿದರು.
‘ನಾನು ಈ ಕಿತ್ತಳೆಯನ್ನು ಸಾಧ್ಯವಾದಷ್ಟು ಗಟ್ಟಿಯಾಗಿ ಹಿಸುಕಿದರೆ ಏನು ಸಿಗುತ್ತದೆ?’
ಇನ್ನೇನು ಸಿಗಲು ಸಾಧ್ಯ? ಹಣ್ಣಿನ ರಸ ಸಿಗುತ್ತದೆ!’ ಶಿಷ್ಯ ಉತ್ತರಿಸಿದ.
‘ಇದರಿಂದ ಸೇಬು ಹಣ್ಣಿನ ರಸ ಸಿಗುತ್ತದೆಯೇ?’
‘ಇಲ್ಲ, ಸಾಧ್ಯವಿಲ್ಲ’
‘ಹಾಗಾದರೆ ದ್ರಾಕ್ಷಾರಸ ಸಿಗುತ್ತದೆಯೇ?’
‘ಇಲ್ಲ!’
‘ಹಾಗಾದರೆ ಮತ್ಯಾವ ರಸ ಸಿಗುತ್ತದೆ?’ ‘ಸರ್ ಕಿತ್ತಳೆ ಹಣ್ಣನ್ನು ಹಿಸುಕಿದರೆ ಕಿತ್ತಳೆ ರಸ ತಾನೆ ಸಿಗುತ್ತದೆ’
‘ಯಾಕೆ? ನೀನು ಈ ಹಣ್ಣನ್ನು ಕಿವುಚಿದರೂ ಕಿತ್ತಳೆ ರಸವೇ ಸಿಗುತ್ತದೋ ಅಥವಾ ಬೇರೆ ಯಾವುದಾದರೂ ರಸ ಸಿಗುತ್ತದೋ?’
‘ನಾನು, ನೀವು ಅಥವಾ ಇನ್ಯಾರೋ ಕಿತ್ತಳೆಯನ್ನು ಕಿವುಚಿದರೆ ಸೇಬಿನ ರಸವಾಗಲಿ, ದ್ರಾಕ್ಷಿ ರಸವಾಗಲಿ ಸಿಗುವುದಿಲ್ಲ.
ಕಿತ್ತಳೆ ಹಣ್ಣಿನೊಳಗಿರುವುದು ಕಿತ್ತಳೆ ರಸವೇ ತಾನೆ?’ ಶಿಷ್ಯ ಸ್ವಲ್ಪ ಸಿಡುಕುತ್ತಲೇ ಉತ್ತರಿಸಿದ. ‘ಸರಿ ಹಾಗಾದರೆ ಈಗ ಇದು ಕಿತ್ತಳೆ ಹಣ್ಣಲ್ಲ, ಬದಲಿಗೆ ನೀನು ಎಂದು ಊಹಿಸಿಕೊಳ್ಳೋಣ. ಯಾರೋ ಒಬ್ಬರು ನಿನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ, ನಿನ್ನ ಮೇಲೆ ಒತ್ತಡ ಹೇರುತ್ತಾರೆ, ನಿನ್ನದಲ್ಲದ ತಪ್ಪಿಗೆ ನಿನ್ನ ಮೇಲೆ ಕೂಗಾಡುತ್ತಾರೆ, ನಿನ್ನನ್ನು ಸುಮ್ಮನೆ ನೋಯಿಸುತ್ತಾರೆ. ಆಗ ನಿನ್ನ ಮನಸ್ಸಿನಲ್ಲಿ ಯಾವ ಭಾವನೆ ಮೂಡುತ್ತದೆ? ಮನಸ್ಸಿನಲ್ಲಿ ಕೋಪ, ಹತಾಶೆ, ಆತಂಕ, ದ್ವೇಷ ಹುಟ್ಟುತ್ತದಲ್ಲವೆ? ಯಾಕೆ ಹಾಗಾಗುತ್ತದೆ?’ ‘ಯಾಕೆಂದರೆ ನನ್ನೊಳಗಿರುವುದು ಅದೇ ಆಗಿರುತ್ತದೆ’ ಶಿಷ್ಯ ನಿಧಾನವಾಗಿ ಉತ್ತರಿಸಿದ.
ಇದು ಬದುಕಿನ ಬಹುದೊಡ್ಡ ಪಾಠ. ಬದುಕು ನಿಮ್ಮನ್ನು ಹಿಂಡಿದಾಗ, ನಿಮಗೆ ನೋವುಂಟಾದಾಗ, ಯಾರೋ ನಿಮ್ಮನ್ನು ನೋಯಿಸಿದಾಗ ಏನಾಗುತ್ತದೆ? ನಿಮ್ಮಲ್ಲಿ ಕೋಪ, ಭಯ, ಹತಾಶೆ, ದ್ವೇಷ ಮೂಡಿದರೆ, ಅದೇ ನಿಮ್ಮೊಳಗೆ ತುಂಬಿರುವುದೆಂದು ಅರಿತುಕೊಳ್ಳಿ. ಇಲ್ಲಿ ಯಾರು ನಿಮ್ಮನ್ನು ನೋಯಿಸುತ್ತಾರೆ ಎಂಬುದು ಮುಖ್ಯವಾಗುವುದಿಲ್ಲ. ಅದು ನಿಮ್ಮ ಅಪ್ಪ, ಅಮ್ಮ, ಅಣ್ಣ, ತಮ್ಮ, ಪ್ರಾಣ ಸ್ನೇಹಿತ, ಸಂಗಾತಿ ಅಥವಾ ಯಾರೇ ಆಗಿರಬಹುದು. ಯಾವ ಭಾವ ನಿಮ್ಮಲ್ಲಿ ಮೂಡುತ್ತದೋ ಅದು ಮುಖ್ಯ. ಇಷ್ಟು ದಿನ ನಿಮ್ಮೊಳಗೆ ನೀವೇನನ್ನು ತುಂಬಿಸಿಕೊಂಡಿರುತ್ತೀರೋ ಅದೇ ತಾನೆ ಹೊರಗೆ ಬರಲು ಸಾಧ್ಯ. ಬದುಕೆಂಬ ಪಾತ್ರೆಯಲ್ಲಿ ಪ್ರೀತಿಯೊಂದನ್ನು ಬಿಟ್ಟು ಬೇರೇನನ್ನು ತುಂಬಿಸಿದರೂ ಅದು ನಮಗೇ ಮಾರಕ. ಬೇಡದ ನಕಾರಾತ್ಮಕ ಭಾವನೆಗಳಿಂದ ತುಂಬಿರುವ ಪಾತ್ರೆಯನ್ನು ಬರಿದಾಗಿಸಿ ಅದರಲ್ಲಿ ಪ್ರೀತಿ ತುಂಬಿಸೋಣ, ಪ್ರೀತಿಯನ್ನೇ ಇತರರಿಗೂ ಹಂಚೋಣ.