ಕಥೆ-462
ಹುಲ್ಲು ಕಡ್ಡಿಯ ಆಸರೆ...
ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆಯಾಗುವುದಂತೆ, ಅದು ಹೇಗೆ ಸಾಧಾರಣ ಹುಲ್ಲು ಮುಳುಗುತ್ತಿರುವವನ ಕಾಪಾಡುವುದು ಎಂದು ಹಲವು ಬಾರಿ ರಾಮ ಯೋಚಿಸಿದ್ದಿದೆ. ಅಜ್ಜಿ ಕತೆ ಹೇಳುವಾಗಲೆಲ್ಲ ಈ ಒಂದು ವಾಕ್ಯವನ್ನು ನಿಯಮಿತವಾಗಿ ಹೇಳುತ್ತಲೇ ಇದ್ದರು.
ಈ ಮಾತೇ ವಿಚಿತ್ರವಾಗಿತೋರುತ್ತಿತ್ತು, ಒಂದು ದಿನ ಅಜ್ಜಿಯನ್ನು ನೇರವಾಗಿ ಕೇಳಿದ ಹುಲ್ಲು ಹೇಗೆ ಪ್ರವಾಹದಲ್ಲಿ ಕೊಚ್ಚಿ ಹೋಗುವಾಗ ಆಸರೆ ಕೊಡಲು ಸಾಧ್ಯ ? ಮನುಷ್ಯ ಸುಲಭವಾಗಿ ಹುಲ್ಲನ್ನು ಕೀಳಬಲ್ಲವನು. ಅಂತಹವನಿಗೆ ಹುಲ್ಲು ಅದೂ ಪ್ರವಾಹದಲ್ಲಿ ಆಸರೆಯಾಗುವುದೆ ?
ಅಜ್ಜಿ ನಕ್ಕು,
" ನಿನಗೆ ಇದು ನಿಜವಾಗಿಯೂ ಅನುಭವಕ್ಕೆ ಬಂದಾಗ ಇದರ ಒಳಾರ್ಥ ತಿಳಿಯುವುದು " ಎಂದು ಮಾರ್ಮಿಕವಾಗಿ ನುಡಿದಿದ್ದರು.
ಬೆಳೆಯುತ್ತ ಹೋದಂತೆ ರಾಮನಿಗೆ ಈ ವಾಕ್ಯ ಬಹಳ ಯೊಚನೆಗೀಡು ಮಾಡಿತ್ತು. ಕಾಲೇಜು ಡಿಗ್ರಿ ಎಂದು ಎಲ್ಲ ಮುಗಿಸುವ ಹೊತ್ತಿಗೆ ಅದನ್ನು ಮರೆತಿದ್ದ, ಕತೆ ಹೇಳುತ್ತಿದ್ದ ಅಜ್ಜಿ ಈಗ ಇಲ್ಲ. ಆದರೂ ಅವರು ಹೇಳಿದ ಎಲ್ಲ ವಾಕ್ಯಗಳು ರಾಮನಿಗೆ ಇನ್ನೂ ನೆನಪಿನಲ್ಲಿ ಉಳಿದಿವೆ.
ದೊಡ್ಡ ಹೋಟೆಲೊಂದರ ಮಾಲೀಕನಾಗುವ ಕನಸು ಕಂಡಿದ್ದರಿಂದ ಅದನ್ನು ಆರಂಭಿಸಿದ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು, ಹೋಟೆಲ್ ಮ್ಯಾನೇಜ್ ಮೆಂಟ್ ಕಲಿತಿದ್ದರಿಂದ ಮತ್ತು ಕುಕ್ಕಿಂಗ್ ನ ಕೆಲ ಕೋರ್ಸುಗಳು ಸಹಾಯಕವಾಗಿದ್ದವು.
ಕೈಯಡುಗೆ ಎಲ್ಲರಿಗೂ ಮೆಚ್ಚುಗೆಯಾಗಿ ಬಹಳಷ್ಟು ಗ್ರಾಹಕರು ಬರುತ್ತಿದ್ದರಲ್ಲದೆ ಬಂಧುಗಳು ಸ್ನೇಹಿತರಿಗೂ ಹೋಟೆಲ್ ಬಗ್ಗೆ ತಿಳಿಸಿ ಅವರನ್ನು ಕರೆ ತರುತ್ತಿದ್ದರು.
ಒಂದು ವರ್ಷದಲ್ಲಿ ಸಣ್ಣ ಹೋಟೆಲ್ ದೊಡ್ಡದಾಗಿ ತಲೆ ಎತ್ತಿ ನಿಂತಿತು. ಹೋಟೆಲ್ ನಲ್ಲಿ ಸಿಗುವ ಖಾದ್ಯಗಳನ್ನು ಇನ್ನಷ್ಟು ವೈವಿಧ್ಯ ಮಯವಾಗಿಸಿದನಲ್ಲದೆ ಹೊಸ ಹೊಸ ರುಚಿಗಳನ್ನು ತಯಾರಿಸಿ ಹೊಸ ಹೆಸರಿನಲ್ಲಿ ಉಣ ಬಡಿಸುತ್ತಿದ್ದ.
ಕೈ ಕೆಳಗೆ ಹಲವಾರು ಕೆಲಸಗಾರರು ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಗ್ರಾಹಕರ ಮೆಚ್ಚಿನ ಹೋಟೆಲ್ ಮಾಲೀಕನಾದ, ಇನ್ನೊಂದು ಬ್ರಾಂಚ್ ಕೂಡ ಬೆರೊಂದು ಜಾಗದಲ್ಲಿ ಆರಂಭಿಸಿದ. ಹೀಗೆ ಎರಡೆರಡು ಕಡೆ ಕೆಲಸವನ್ನು ವಿಸ್ತರಿಸಿ ಚೆನ್ನಾಗಿ ನಡೆಯುವಂತೆ ನೋಡಿಕೊಂಡ.
ನಾಲ್ಕು ವರ್ಷಗಳು ಉರುಳಿದವು, ಹೋಟೆಲ್ ತೆರೆಯಲು ಪಡೆದಿದ್ದ ಲೋನ್ ಅನ್ನು ಸಮರ್ಪಕವಾಗಿ ತೀರಿಸಿದ್ದ. ಎಲ್ಲ ಸಾಲ ತೀರಿಸಿದವನ ಕೈಗೆ ಉತ್ತಮ ಲಾಭದ ಮೊತ್ತವೇ ಸೇರಿತ್ತು.
ದಿನಗಳು ಹೀಗೆ ಸಾಗುತ್ತಿದ್ದರೆ ಎಷ್ಟು ಚೆನ್ನ ಎಂದು ಎನಿಸುತ್ತಿತ್ತು, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ರಾಮನ ಜೀವನದಲ್ಲೂ ನಡೆಯಿತು. ವ್ಯವಹಾರ ಎಂದರೆ ಲಾಭ ನಷ್ಟ ಎರಡೂ ಇರುವುದೆ, ಹಾಗೆಯೇ ಈ ಹೋಟೆಲ್ ವ್ಯವಹಾರದಲ್ಲೂ ಇಲ್ಲಿಯ ವರೆಗೆ ಲಾಭವನ್ನೆ ಕಂಡಿದ್ದ. ಈಗ ನಷ್ಟವನ್ನು ಕಾಣುವ ಸಮಯ ಎನಿಸುತ್ತದೆ, ಇದ್ದಕ್ಕಿದ್ದ ಹಾಗೆ ಒಂದು ಬ್ರಾಂಚ್ ನಲ್ಲಿ ಬೆಂಕಿಯ ಅವಗಢ ಸಂಭವಿಸಿ ಪೀಠೋಪಕರಣಗಳು ಮತ್ತು ಅಡುಗೆ ಮನೆ ಬೆಂಕಿಗೆ ಆಹುತಿಯಾದವು. ಪುಣ್ಯಕ್ಕೆ ಯಾವ ಪ್ರಾಣ ಹಾನಿಯೂ ಆಗದೆ ಇದ್ದುದೆ ದೊಡ್ಡದು.
ತಾತ್ಕಾಲಿಕವಾಗಿ ಹೋಟೆಲ್ ಅನ್ನು ಮುಚ್ಚಿ ದುರಸ್ತಿ ಕಾರ್ಯ ಆರಂಭಿಸಿದ. ಕಾರ್ಮಿಕರಿಗೆ ಎರಡು ತಿಂಗಳ ಸಂಬಳ ಕೊಟ್ಟು ನಂತರ ಬರಲು ಹೇಳಿ ಕಳುಹಿಸಿದ. ದುರಸ್ತಿ ಕೆಲಸದಲ್ಲಿ ಬಹಳ ಹಣ ಸಮಯ ಹೋಗುತ್ತಿದ್ದರಿಂದ ಬೇರೊಂದು ಬ್ರಾಂಚಿನಲ್ಲಿ ಏನಾಗುತ್ತಿದೆ ಏನಿಲ್ಲ ಎಂದು ನೋಡಲು ಆಗದೆ ಅಲ್ಲಿಯೂ ನಷ್ಟವಾಗುತ್ತ ಹೋಯಿತು. ಮತ್ತೊಮ್ಮೆ ಸಾಲ ಮಾಡಬೇಕಾಯಿತು, ಮನೆಯ ಮೇಲೂ ಸಾಲ ಹೋಟೆಲ್ ಮೇಲೆ ಸಾಲ ಹೀಗೆ ಸಾಲ ಬೆಳೆಯಿತೆ ಹೊರತು ಆದಾಯ ಕಡಿಮೆಯಾಯಿತು. ದುರಸ್ತಿ ಮುಗಿಯುವ ಹೊತ್ತಿಗೆ ಇನ್ನೊಂದು ಬ್ರಾಂಚ್ ಮುಚ್ಚುವ ಹಂತಕ್ಕೆ ಬಂದಾಗ ಅನಿವಾರ್ಯವಾಗಿ ಇನ್ನೊಬ್ಬರಿಗೆ ಮಾರಾಟ ಮಾಡಿ ಸ್ವಲ್ಪ ಸಾಲ ತೀರಿಸಿದ.
ಇನ್ನು ಸಾಲ ಇತ್ತು ಆದರೆ ಆದಾಯ ಗಳಿಸಲು ಬಂಡವಾಳಕ್ಕೆ ಹಣ ಸಾಕಾಗಲಿಲ್ಲ. ಈಗಾಗಲೇ ಇರುವ ಸಾಲದಿಂದಾಗಿ ಹೆಚ್ಚಿನ ಸಾಲ ಸಿಗದೆ ಕಂಗಾಲಾದ. ದುರಸ್ತಿ ಗೊಳಿಸಿದ ಹೋಟೆಲ್ ನಲ್ಲಿ ಏನುಂತ ಆದಾಯ ಗಳಿಸುವುದು ತಿಳಿಯದೆ ಹೋಯಿತು.
ಬಡ್ಡಿ ಸಾಲಗಳ ನಡುವೆ ಸಿಕ್ಕು ಜೀವನ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಅನುಭವವಾಗಿ ಸೋತಂತಹ ಸ್ಥಿತಿ ತಲುಪಿದ್ದ. ಸೋತ ಹೆಜ್ಜೆಗಳನ್ನು ಇಡುತ್ತ ಡ್ಯಾಮ್ ಬಳಿಗೆ ಬಂದಿದ್ದ.
ನನ್ನ ಕಷ್ಟಕ್ಕೆ ಯಾರೊಬ್ಬರ ಸಹಾಯ ಸಿಗದೆ ಇರುವಾಗ ಜೀವನಕ್ಕೆ ಆಧಾರವಿಲ್ಲ ಎಂದು ಯೋಚಿಸಿದ. ನಿಧಾನವಾಗಿ ಡ್ಯಾಮ್ ಹತ್ತಿರವಾಗುತ್ತ ಹೋದ...
ಆಗ ಜೀವನದ ಪ್ರತಿಯೊಂದು ಹಂತವೂ ನೆನಪಾಯಿತು. ಈಗ ತನ್ನ ಜೀವನ ಸಾಲಬಡ್ಡಿಗಳೆಂಬ ಪ್ರವಾಹಕ್ಕೆ ಸಿಲುಕಿ ಅಲ್ಲೋಲ ಕಲ್ಲೋಲ ವಾಗಿದೆ. ತನಗೆ ಯಾರೊಬ್ಬರ ಆಸರೆಯೂ ಇಲ್ಲ ಎಂದು ನೆನೆದವನಿಗೆ ಕಣ್ಣಲ್ಲಿ ನೀರು ಜಿನುಗಿತು.
ಯಾರೊ ಭುಜ ಹಿಡಿದು ತಡೆದರು. ಯಾರೆಂದು ನೋಡಿದಾಗ ಹಳೆಯ ಗ್ರಾಹಕರೊಬ್ಬರಿದ್ದರು, ಅವರಿಗೆ ರಾಮನ ಬಗ್ಗೆ ತಿಳಿದಿದ್ದರಿಂದ ಸಹಾಯ ಮಾಡಲು ಮುಂದಾದರು.
ನನ್ನ ಬಳಿ ನಿಮಗೆ ಸಹಾಯ ಮಾಡಲು ಹೆಚ್ಚು ಅಲ್ಲದೆ ಹೋದರೂ ಎರಡು ಸಾವಿರದಷ್ಟು ಹಣವಿದೆ ತೊಗೊಳಿ ಯಾವುದಾದರೂ ಸಣ್ಣದರಿಂದ ಆರಂಭಿಸಿ ಹತಾಶರಾಗ ಬೇಡಿ " ಎಂದು ಧೈರ್ಯ ತುಂಬಿದರು.
ಸಂತಸದಿಂದ ಆ ಎರಡು ಸಾವಿರದಿಂದ ಕಡಲೆ ಹಿಟ್ಟು, ಎಣ್ಣೆ, ಮತ್ತಿತರ ಮಸಾಲೆ ಪದಾರ್ಥಗಳನ್ನು ಕೊಂಡು ತಂದು ದುರಸ್ತಿ ಮಾಡಿದ್ದ ಹೋಟೆಲ್ ನಲ್ಲಿ ಬಜ್ಜಿ ಬೋಂಡಾ ಮಾಡಿ ಮಾರತೊಡಗಿದ. ರಾಮನ ಆದಾಯ ನಿಧಾನವಾಗಿ ಹೆಚ್ಚುತ್ತ ಹೋಗಿ ಎಲ್ಲ ಸಾಲವನ್ನು ತೀರಿಸುವಂತಾದ.
ಮನೆಯ ಮೇಲಿನ ಸಾಲವನ್ನು ಸಹ ತೀರಿಸಿದ, ಮದುವೆಯಾದ ಮಕ್ಕಳಾದವು... ಈಗ ಅಜ್ಜಿಯ ಆ ಮಾತು ಅಕ್ಷರಶಃ ನಿಜ ಎಂದೆನಿಸಿತು.. ಎಲ್ಲ ಮುಗಿಯಿತು ಸಾವು ಒಂದೇ ಎದುರಿಗಿರುವ ಪರಿಹಾರ ಎಂದು ಹೊರಟವನಿಗೆ ಬರಿ ಎರಡು ಸಾವಿರ ಸಾಲದ ಮೊತ್ತದ ಎದುರು ಒಂದು ತೃಣಕ್ಕೆ ಸಮಾನವಾದರೂ ಅದೇ ಎರಡು ಸಾವಿರದಿಂದ ಬಜ್ಜಿ ಬೋಂಡ ಮಾಡುತ್ತ ಮತ್ತೆ ಎರಡು ಮೂರು ಹೋಟೆಲ್ ಗಳ ಮಾಲಿಕನಾದ.
ಇದೆ ಅಲ್ಲವೇ ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯ ಆಸರೆ ಎಂದರೆ...!
ಲೇಖಕರು: ಬನಶಂಕರಿ ಕುಲಕರ್ಣಿ