ಕಥೆ-518
ಆಸೆಗಳನ್ನು ಜಯಿಸಿರುವವನೇ ಅರಸ
ಒಬ್ಬ ಬಡ ರೈತನು ಒಂದು ಹಣ್ಣಿನ ತೋಟವನ್ನು ಮಾಡಿದ್ದ. ಒಂದು ದಿನ ಮಹಾರಾಜನು ಅವನ ತೋಟಕ್ಕೆ ಬಂದ. ಬಡವರ ಮನೆಗೆ ಭಾಗ್ಯಲಕ್ಷ್ಮಿಯೇ ಬಂದಂತಾಯಿತೆಂದು ಸಂತಸದಿಂದ ರೈತನು ರಾಜನನ್ನು ಸ್ವಾಗತಿಸಿದ. ಇಂದು ಮಹಾರಾಜರೇ ನನ್ನ ಅತಿಥಿಯಾಗಿರುವುದರಿಂದ ನನ್ನಷ್ಟು ಭಾಗ್ಯವಂತರು ಸಿರಿವಂತರು ಯಾರೂ ಇಲ್ಲವೆಂದು ರೈತನು ಭಾವಿಸಿದ. ಹಣ್ಣು-ಹಂಪಲವಿತ್ತು ಮಹಾರಾಜನಿಗೆ ಸತ್ಕರಿಸಿದ. ಸಂತುಷ್ಟನಾದ ಮಹಾರಾಜನು ತನ್ನ ಕೊರಳಿನಲ್ಲಿದ್ದ ಬೆಲೆಬಾಳುವ ಮುತ್ತಿನ ಹಾರವನ್ನು ರೈತನಿಗೆ ಕೊಡಲು ಹೋದ. ರೈತ ಹೇಳಿದ ''ಮಹಾರಾಜರೇ ಇದೇನು ಹೂವಲ್ಲ, ಹಣ್ಣಲ್ಲ. ಒಂದುವೇಳೆ ಹೂವು ಹಣ್ಣಿನ ತೋಟ ಮಾಡದೇ ಬರೀ ಮುತ್ತು ರತ್ನ ಸಂಗ್ರಹಿಸಿದ್ದರೆ ನೀವೇಕೆ ಇಲ್ಲಿಗೆ ಬರುತ್ತಿದ್ದಿರಿ? ನನಗೆ ಈ ಮುತ್ತಿನ ಹಾರ ಬೇಡ, ಮುತ್ತಿನಂಥ ನಿಮ್ಮ ಎರಡು ಸಂತಸದ ನುಡಿಗಳೇ ಸಾಕು!,'' ಮಹಾರಾಜ ಹೇಳಿದ-''ನೀನು ಗುಡಿಸಲಿನಲ್ಲಿದ್ದರೂ ಅರಸನಂತಿರುವೆ, ನಾನು ಅರಮನೆಯಲ್ಲಿದ್ದರೂ ಗುಡಿಸಲಿನಲ್ಲಿದ್ದಂತೆಯೇ. ರಾಜ್ಯಗಳನ್ನು ಜಯಿಸುವ ಆಸೆ ನನ್ನಲ್ಲಿ ಇನ್ನೂ ತುಂಬಿತುಳುಕುತ್ತಿದೆ. ಆಸೆಯನಳಿದಿರುವ ನೀನೇ ನಿಜವಾದ ಅರಸ!,'' ಕೆಲವರು ಎಂಟು ಹತ್ತು ರೂಪಾಯ ಟೊಪ್ಪಿಗೆಯನ್ನೇ ಧರಿಸಿರುತ್ತಾರೆ. ಆದರೆ ಮಂತ್ರಿ ಮಹೋದಯರಿಗೂ ಇಲ್ಲದ ಸಂತಸ ಪಡುತ್ತಿರುತ್ತಾರೆ. ಇನ್ನು ಕೆಲವರು ನೂರಾರು ರೂಪಾಯಿ ಪಟಕಾ ಅಥವಾ ರುಮಾಲ ಧರಿಸಿರುತ್ತಾರೆ. ಆದರೆ ಕಿರೀಟ ಧರಿಸಿದ ರಾಜ ಮಹಾರಾಜರಿಗೂ ಇಲ್ಲದ ಸಂತಸ ಅವರು ಅನುಭವಿಸುತ್ತಿರುತ್ತಾರೆ. ಚಿನ್ನದ ಕಿರೀಟ ಧರಿಸಿದ ರಾಜನಿಗೆ ರಸ್ತೆಗಿಳಿಯುವ ಧೈರ್ಯವಿಲ್ಲ. ಆದರೆ ಟೋಪಿ, ರುಮಾಲು ಧರಿಸಿದವರು ಧೈರ್ಯದಿಂದ ದೇಶವನ್ನೆಲ್ಲ ಸುತ್ತಿ ಬರುತ್ತಾರೆ. ಬದುಕುವ ಕಲೆ ಗೊತ್ತಿದ್ದವರು ಇದ್ದುದರಲ್ಲಿಯೇ ಮಹಾರಾಜರಂತೆ ಸಂತೃಪ್ತಿಯಿಂದಿರುತ್ತಾರೆ. ಇದರರ್ಥ ನಾವು ಸಿರಿ-ಸಂಪದ ಗಳಿಸಬಾರದೆಂದಲ್ಲ, ಆದರೆ ಸಂತೃಪ್ತಿಯಿಂದಿರುವುದನ್ನು ಮರೆಯಬಾರದಷ್ಟೇ! ನಮ್ಮ ತಟ್ಟೆಯಲ್ಲಿ ರೊಟ್ಟಿ ಇರುವಾಗ ಅನ್ಯರ ತಟ್ಟೆಯಲ್ಲಿರುವ ಹೋಳಿಗೆ ನೋಡಿ ರೊಟ್ಟಿಯನ್ನು ತಿನ್ನದೆ ಮರುಗಬಾರದಷ್ಟೆ !
ತುಂಬಿದ ಕೊಡವು ಹಳ್ಳದಲ್ಲಿದ್ದರೇನು, ನದಿಯಲ್ಲಿದ್ದರೇನು, ಸಮುದ್ರದಲ್ಲಿದ್ದರೇನು? ಏನೂ ವ್ಯತ್ಯಾಸವಾಗುವುದಿಲ್ಲ. ಹಾಗೆಯೇ ಘನಕ್ಕೆ ಘನವಾದ ಮಹಾತ್ಮನು ಅಡವಿಯಲ್ಲಿದ್ದರೇನು, ಅರಮನೆಯಲ್ಲಿದ್ದರೇನು? ಅವನು ಸದಾ ಸಂತೃಪ್ತನು. ಪರಿಪೂರ್ಣನಾದವನಿಗೆ, ಪರಿತೃಪ್ತನಾದವನಿಗೆ ಯಾವುದರ ಹಂಗೂ ಇಲ್ಲ. ಸುತ್ತಮುತ್ತ ಸಿರಿ-ಸಂಪತ್ತು ಸುರಿಯುತ್ತಿದ್ದರೂ ಅವನು ಅದನ್ನು ಕಣ್ಣೆತ್ತಿ ನೋಡುವುದಿಲ್ಲ. ನಮ್ಮ ಹತ್ತಿರ ಕೋಟಿ ಹಣವಿದ್ದರೂ ನಾವು ಬೇಡುತ್ತಿದ್ದರೆ, ಬಡವರೇ! ನಮ್ಮಲ್ಲಿ ನಾಲ್ಕೇ ದುಡ್ಡಿದ್ದರು ಚಿಂತೆಯಿಲ್ಲ, ನಾವು ಮತ್ತೊಬ್ಬರ ಹಣಕ್ಕೆ ಆಸೆ ಮಾಡದೇ ಇದ್ದರೆ ಅದೇ ನಿಜವಾದ ಸಿರಿವಂತಿಕೆ!
ಆಧಾರ : ಶ್ರೀ ಸಿದ್ದೇಶ್ವರ ಸ್ವಾಮಿಜಿ