ಕಥೆ-526
ಮೂವರು ಸ್ನೇಹಿತರು
ಒಂದು ದಿನ ಸ್ವಾಮೀಜಿಗಳು ಗುರುಕುಲದಲ್ಲಿ ತಮ್ಮ ಸ್ನೇಹಿತರು ಮತ್ತು ಶಿಷ್ಯರೊಡನೆ ಮಾತನಾಡುತ್ತ ಕುಳಿತಿದ್ದರು. ಆಗ ತಕ್ಷಣ ಅವರು, 'ಎಲ್ಲರೂ ಗಮನವಿಟ್ಟು ಕೇಳಿ. ನಿಮಗೊಂದು ಸಮಸ್ಯೆಯನ್ನು ಹೇಳುತ್ತಿದ್ದೇನೆ. ಅದರ ನಿಜವಾದ ಅರ್ಥವನ್ನು ಯಾರಾದರೂ ಹೇಳಬಲ್ಲಿರಾ` ಎಂದು ಕೇಳಿದರು. ಎಲ್ಲರೂ ಶಾಂತರಾಗಿ ಸ್ವಾಮೀಜಿಯ ಮಾತನ್ನು ಕೇಳತೊಡಗಿದರು. ಸ್ವಾಮಿಗಳು ಒಂದು ಕಥೆಯನ್ನು ಹೇಳಿದರು.
ಒಬ್ಬ ಮನುಷ್ಯ ಭೂಮಿಯ ಮೇಲೆ ಬದುಕಿ ಉಳಿಯುವ ದಿನಗಳು ಹೆಚ್ಚಿಲ್ಲ ಎಂದು ಗೊತ್ತಾಯಿತು. ಅವನಿಗೆ ಭಯ, ದುಃಖ ಎರಡೂ ಆದವು. ಅದಲ್ಲದೇ ತನ್ನನ್ನು ನೆಲದಲ್ಲಿ ಹೂಳಿದಾಗ ಗೋರಿಯಲ್ಲಿ ತಾನೊಬ್ಬನೇ ಇರಬೇಕಲ್ಲ ಎಂಬ ಭಯ ಕಾಡತೊಡಗಿತು. ತನಗೆ ಯಾರಾದರೂ ಜೊತೆಯಾಗಿರಲು ಒಪ್ಪಿಯಾರು ಎಂದುಕೊಂಡು ತನಗೆ ಅತ್ಯಂತ ಆಪ್ತರಾದ ಮೂವರು ಸ್ನೇಹಿತರನ್ನು ನೆನಪಿಸಿಕೊಂಡು ಮೊದಲನೆ ಸ್ನೇಹಿತನ ಹತ್ತಿರ ಹೋದ. `ಗೆಳೆಯಾ, ನನಗೆ ತುಂಬ ಭಯವಾಗುತ್ತಿದೆ. ಯಾವಾಗಲೂ ನನ್ನ ಜೊತೆಗೇ ಇರುತ್ತೀಯಾ` ಎಂದು ಕೇಳಿದ. `ಗೆಳೆಯ, ನೀನೇಕೆ ಚಿಂತೆ ಮಾಡುತ್ತೀ? ನಾನು ಸದಾ ನಿನ್ನೊಡನೆಯೇ ಇರುತ್ತೇನೆ` ಎಂದು ಭರವಸೆ ಕೊಟ್ಟ. ಆಗ ಈತ, 'ಹಾಗಲ್ಲ, ನಾನು ಕೆಲವೇ ದಿನಗಳಲ್ಲಿ ಸಾಯುವವನಿದ್ದೇನೆ. ನನಗೆ ಗೋರಿಯಲ್ಲಿ ಒಬ್ಬನೇ ಇರಲು ಭಯ` ಎಂದ. ಸ್ನೇಹಿತ ಬಿಳಿಚಿಕೊಂಡು, `ನಾನು ನಿನ್ನ ಸ್ನೇಹಿತನೇನೋ ಸರಿ. ಆದರೆ ಸಾವು ನಮ್ಮನ್ನು ಬೇರ್ಪಡಿಸುತ್ತದಲ್ಲ? ನಾನು ಬೇಕಾದರೆ ಸ್ಮಶಾನದಲ್ಲಿ ಸಮಾಧಿಗೆ ನಿನಗೊಂದು ಪುಟ್ಟ ಜಾಗ ಕೊಂಡುಕೊಡಬಲ್ಲೆ, ನಿನ್ನ ಸಮಾಧಿಯ ಮೇಲೆ ಸುಂದರವಾದ ಬಟ್ಟೆಯನ್ನು ಹೊದಿಸಬಲ್ಲೆ, ಆದರೆ ನಿನ್ನೊಡನೆ ಗೋರಿಯ ಒಳಗೆ ಬರಲಾರೆ` ಎಂದ. ಈತ ದುಃಖದಿಂದ ಮರಳಿದ.
ಮತ್ತೊಬ್ಬ ಸ್ನೇಹಿತನ ಮನೆಗೆ ಹೋಗಿ ಇದೇ ಸಮಸ್ಯೆಯನ್ನು ಅವನ ಮುಂದಿಟ್ಟು ತನ್ನೊಂದಿಗೆ ಇರಲು ಕೇಳಿಕೊಂಡ. ಆತ ಹೇಳಿದ, 'ಗೆಳೆಯಾ, ನಾನು ಯಾವಾಗಲೂ ನಿನ್ನೊಂದಿಗೇ ಇದ್ದೇನೆ, ನಿನ್ನ ಕೊನೆಯ ಕ್ಷಣದವರೆಗೂ ನಿನ್ನೊಡನೆ ಇರುತ್ತೇನೆ. ಆದರೆ ಸಾವು ನಿನ್ನನ್ನು ಬೇರ್ಪಡಿಸಿದಾಗ ಬಹಳ ಹೆಚ್ಚೆಂದರೆ ನಾನು ನಿನ್ನನ್ನು ಹೆಗಲಮೇಲೆ ಹೊತ್ತುಕೊಂಡು ಸ್ಮಶಾನದವರೆಗೆ ಬಂದು ನಿನ್ನ ದೇಹವನ್ನು ಗೋರಿಯಲ್ಲಿರಿಸಿ ಬರಬಹುದು. ಅನಂತರ ನಾನು ಏನೂ ಮಾಡಲಾರೆ, ಕ್ಷಮಿಸು.' ಇವನ ದುಃಖ ಮತ್ತಷ್ಟು ಹೆಚ್ಚಾಯಿತು.
ನಿರಾಶನಾಗಿ ಮೂರನೆಯ ಗೆಳೆಯನ ಮನೆಗೆ ಹೋಗಿ ಇದನ್ನೇ ವಿಸ್ತರಿಸಿ ತನ್ನ ಇನ್ನಿಬ್ಬರು ಹೇಳಿದ ಮಾತುಗಳನ್ನು ಒಪ್ಪಿಸಿದ. ಅವನಿಗೆ ಇವನಿಂದಲೂ ಅವರು ನುಡಿದಂಥ ಮಾತುಗಳೇ ಬರುತ್ತವೆಂಬುದು ಖಚಿತವಾಗಿತ್ತು. ಆದರೆ ಆ ಮೂರನೇ ಗೆಳೆಯ ಹೇಳಿದ, 'ಚಿಂತೆ ಬಿಡು ಮಿತ್ರ, ನಾನು ನಿನ್ನೊಡನೆ ಸ್ಮಶಾನಕ್ಕೆ ಮಾತ್ರವಲ್ಲ, ಗೋರಿಗೂ ಬರುತ್ತೇನೆ. ದೇವತೆಗಳು ಬಂದು ನಿನ್ನ ಪ್ರಶ್ನಿಸುವಾಗಲೂ ನಿನಗೆ ಸಹಾಯ ಮಾಡುತ್ತೇನೆ. ಸೇತುವೆಯನ್ನು ದಾಟಿ ಸ್ವರ್ಗಕ್ಕೆ ಹೋಗುವಾಗಲೂ ನಾನು ಮುಂದೆ ನಿಂತು ನಡೆಸುತ್ತೇನೆ.' ಈ ಮಾತುಗಳನ್ನು ಕೇಳಿ ವ್ಯಕ್ತಿಗೆ ತುಂಬ ಸಮಾಧಾನವಾಯಿತು.
ಈ ಕಥೆಯನ್ನು ಹೇಳಿ ಸ್ವಾಮೀಗಳು ಕೇಳಿದರು, 'ಆ ಮೂವರು ಸ್ನೇಹಿತರು ಯಾರು ಗೊತ್ತೇ?' ಉತ್ತರ ಬರದಿದ್ದಾಗ ತಾವೇ ನುಡಿದರು, ಮೊದಲನೆಯ ಸ್ನೇಹಿತ ಹಣ, ಅದು ನಿಮಗಾಗಿ ಸ್ಮಶಾನದಲ್ಲಿ ಸ್ಥಳ ಕೊಳ್ಳುವುದಕ್ಕೆ, ಬಟ್ಟೆ ಕೊಳ್ಳಲಿಕ್ಕೆ ಮಾತ್ರ ಪ್ರಯೋಜನಕಾರಿ.
ಎರಡನೆಯ ಸ್ನೇಹಿತ, ಹೆಂಡತಿ, ಮಕ್ಕಳು ಮತ್ತು ಪರಿವಾರ. ಅವರು ನಿಮ್ಮನ್ನು ಹೊತ್ತುಕೊಂಡು ಸ್ಮಶಾನದವರೆಗೆ ಮಾತ್ರ ಬರಬಲ್ಲರು.
ಮೂರನೆಯ ಸ್ನೇಹಿತ, ನೀವು ಮಾಡಿದ ಧರ್ಮಕಾರ್ಯಗಳು. ಅವು ನಿಮ್ಮನ್ನು ಸ್ವರ್ಗದವರೆಗೂ ಹಿಂಬಾಲಿಸಿ ಬರುತ್ತವೆ..
ಎಂಥ ಅದ್ಭುತ ಮಾತು! ಎಷ್ಟು ಸುಲಭವಾಗಿ, ಸುಂದರವಾಗಿ ಹೇಳಿದ್ದು! ಇದು ನಮ್ಮ ನೆನಪಿನಲ್ಲಿ ಸದಾ ಇದ್ದರೆ ಎಷ್ಟು ಒಳ್ಳೆಯದಲ್ಲವೇ? ಮೂರನೇ ಸ್ನೇಹಿತನ ಸ್ನೇಹ ಮಾಡಿದ್ದೆ ಆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ..💐💐💐