ಕಥೆ-539
ಸೋಲಿನ ಮುಂದಿದೆ, ಗೆಲುವಿನ ಹೆಜ್ಜೆ, ಗೆದ್ದು ತೋರಿಸು.... ( ಒಂದೊಂದು ಅಂಕ-ಆತಂಕ )
ಆಟದಲ್ಲಿ ಒಂದೊಂದು ಅಂಕ ಎಷ್ಟು ಪ್ರಮುಖ ಎಂಬುದು ನಿನ್ನೆ ನಡೆದ ಕೊಪ್ಪಳ ಜಿಲ್ಲಾ ಮಟ್ಟದ ಬಾಲಕರ ಕಬಡ್ಡಿ ಫೈನಲ್ ಪಂದ್ಯಾವಳಿಯಲ್ಲಿ ಎದ್ದು ತೋರುತಾ ಇತ್ತು..
ಸೆಮಿಫೈನಲ್ ನಲ್ಲಿ ಟಫ್ ಆಗಿದ್ದ ಆಟವನ್ನು ಎದುರಾಳಿ ತಂಡ ಮಾಡಿದ ತಪ್ಪಿನಿಂದ ನಮ್ಮ ಹಿರೇಮ್ಯಾಗೇರಿ ತಂಡ ಗೆಲ್ಲಲು ಸಾಧ್ಯವಾಗಿತ್ತು... ಆದರೆ ಫೈನಲ್ ಪಂದ್ಯದಲ್ಲಿ ಕ್ಲೈಮಾಕ್ಸ್ ಸಮಯದಲ್ಲಿ ಸ್ವಯಂಕೃತ ತಪ್ಪುಗಳಿಂದ ಒಂದು ಅಂಕದಿಂದ ಪ್ರಥಮ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು.. ಎದುರಾಳಿ ತಂಡದ ಅಂಕಗಳು ಬಹಳಷ್ಟು ಹೆಚ್ಚಾಗಿದ್ದು, ನಾವು ಸೋತಾಗ ಮನಸ್ಸಿಗೆ ಅಷ್ಟು ಬೇಜಾರು ಆಗೋದಿಲ್ಲ, ಆದರೆ ಒಂದೇ ಒಂದು ಅಂಕದಿಂದ ಸೋತಾಗ ಮರೆಯಲಾಗದಂತಹ ನೋವನ್ನು ಅನುಭವಿಸಬೇಕಾಗುತ್ತದೆ. ಫೈನಲ್ ಪಂದ್ಯದಲ್ಲಿ ವಿಜಯಲಕ್ಷ್ಮಿ ಎದುರಾಳಿ ತಂಡದ ಕಡೆ ವಾಲುತ್ತಿತ್ತು ಅದನ್ನು ನಮ್ಮ ತಂಡ ತನ್ನ ಕಡೆ ವಾಲಿಸಿಕೊಂಡಿತ್ತು... ಮೂರು ಅಂಕಗಳ ಲೀಡ್ ಪಡೆದುಕೊಂಡಿತ್ತು.. ಇನ್ನೇನು ಹಿರೇಮ್ಯಾಗೇರಿ ಗೆದ್ದೇ ಬಿಟ್ಟಿತು, ಎನ್ನುವಷ್ಟರಲ್ಲಿ ಕೊನೆಯ ಒಂದು ನಿಮಿಷದ ಕ್ಲೈಮಾಕ್ಸ್ ಫಲಿತಾಂಶವನ್ನು ಬದಲಾಯಿಸಿತು..
ಅನುಭವಸ್ಥರು ನೀಡಿದ, ಕೊನೆ ಹಂತದ ಸಲಹೆಗಳಾದ ಟೈಂಪಾಸ್ ಆಟ, ಜೊತೆಗೆ empty ರೈಡ್ ಗಳನ್ನು ಎದುರಾಳಿಯ ತಂಡಕ್ಕೆ ನೀಡಬೇಕಾಗಿದ್ದ ಸಂದರ್ಭದಲ್ಲಿ,
ನಮ್ಮ ತಂಡ ರೈಡ್ ಗೆ ಹೋದ ಸಂದರ್ಭದಲ್ಲಿ ಬೋನಸ್ ಪಡೆಯಲು ಹೋಗಿ ಕಾಲು ಜಾರಿ ಒಂದು ಅಂಕವನ್ನು ಬಿಟ್ಟುಕೊಟ್ಟಿತು. ಎದುರಾಳಿ ತಂಡ ರೈಡ್ ಗೆ ಬಂದಾಗ empty ರೈಡ್ ಆಗಿಸಬೇಕಾಗಿದ್ದನ್ನು, ಅನವಶ್ಯಕ ಕ್ಯಾಚ್ ಮಾಡಲು ಹೋಗಿ 2 ಅಂಕಗಳನ್ನು ಮತ್ತೆ ಬಿಟ್ಟು ಕೊಟ್ಟಿದ್ದು ನಮ್ಮ ತಂಡಕ್ಕೆ ದೊಡ್ಡ ಹೊಡೆತ. ಅದು ಎರಡೂ ತಂಡದ ಅಂಕಗಳು ಸಮವಾಗುವಂತೆ ಮಾಡಿತು. ಮತ್ತೆ ರೈಡಗೆ ಹೋದ ನಮ್ಮ ತಂಡ, ಅಂಕ ತರಲೇಬೇಕಾಗಿದ್ದ ಸಂದರ್ಭದಲ್ಲಿ ಕೇವಲ ಸೇಫ್ ರೈಡ್ ಮಾಡಿದ್ದು, ನಮಗೆ ಸಿಕ್ಕ ಅವಕಾಶವನ್ನು ಕೈ ಚೆಲ್ಲಿಯಾಗಿತ್ತು.. (ಈ ಕೊನೆಯ ಸಂದರ್ಭದಲ್ಲಿ ನಮಗೆ ಸಮಯ ಮತ್ತು ಅವಕಾಶಗಳ ಅರಿವು ಇರಬೇಕು.) ಆಟದ ಕೊನೆಯ ರೈಡ್ ಸಿಕ್ಕಿದ್ದು ಎದುರಾಳಿ ತಂಡಕ್ಕೆ, ಅದು ಸುಲಭವಾಗಿ ಒಂದು ಅಂಕ ಪಡೆಯುವಲ್ಲಿ ಯಶಸ್ವಿಯಾಗಿ ಗೆಲುವಿನ ನಗೆ ಬೀರಿತು. ನಾವು ಪರಾಜಿತರಾದರು ನಮ್ಮ 5 ವಿದ್ಯಾರ್ಥಿಗಳು ಕಲಬುರ್ಗಿ ವಿಭಾಗ ಮಟ್ಟಕ್ಕೆ ಆಯ್ಕೆ ಆಗಿರುವುದು ಖುಷಿಯ ಸಂಗತಿ..
ಇನ್ನೊಂದು ವಿಶೇಷವೆಂದರೆ ಕ್ರೀಡಾಂಗಣದಲ್ಲಿ ಎಲ್ಲಿ ನೋಡಿದರೂ ನಮ್ಮ ಹಿರೇಮ್ಯಾಗೇರಿ ಜನ ಕಾಣುತ್ತಾರೆ.. ಜಿಲ್ಲಾ ಕ್ರೀಡಾಂಗಣದಲ್ಲಿ ಆಡುತ್ತಿದ್ದರು, ನಮ್ಮ ತಂಡಕ್ಕೆ ಹಿರೇಮ್ಯಾಗೇರಿಯಲ್ಲಿ ಆಟ ಆಡಿದ ಅನುಭವವಾಗಿತ್ತು.. ಏಕೆಂದರೆ ಹಿರೇಮ್ಯಾಗೇರಿಯಿಂದ ನೂರಾರು ಕ್ರೀಡಾ ಅಭಿಮಾನಿಗಳು ನಮ್ಮ ತಂಡವನ್ನು ಪ್ರೋತ್ಸಾಹಿಸಲು ಆಗಮಿಸಿದ್ದರು.. ಇದೊಂದು ದಾಖಲೆ ...
ಜಿಲ್ಲಾ ಕ್ರೀಡಾಂಗಣದಲ್ಲಿ, ಕನಿಷ್ಠ ನಮ್ಮ ಮಕ್ಕಳಿಗಾದರೂ ಊಟದ ವ್ಯವಸ್ಥೆಯನ್ನು ಮಾಡಬೇಕಾಗಿತ್ತು.. ಹಿರೇಮ್ಯಾಗೇರಿಯ ತಾಲೂಕಾ ಕ್ರೀಡಾಕೂಟದ ವ್ಯವಸ್ಥೆಗೂ ಜಿಲ್ಲಾಮಟ್ಟದ ಕ್ರೀಡಾಂಗಣದಲ್ಲಿನ ವ್ಯವಸ್ಥೆಗೂ, ಅಜಗಜಾಂತರ ವ್ಯತ್ಯಾಸ ಇತ್ತು..
ಆಟವೆಂದ ಸೋಲು ಗೆಲುವು ಸಹಜ.. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಸೋಲನ್ನು ಸ್ವೀಕರಿಸುವ ಸ್ಥಿತಿ ಕೆಲವೊಮ್ಮೆ ಅನಿವಾರ್ಯ.. ಇದು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಾಯ ಮಾಡುತ್ತದೆ.. ಮುಂದಿನ ಗೆಲುವಿಗೆ ಸಹಾಯಕವಾಗುತ್ತದೆ...
ಸೋತಾಗ ತಾಳ್ಮೆ ಮುಖ್ಯ..
ಗೆದ್ದಾಗ ಅಹಂಕಾರ ಬದಲಾಗಿ ವಿನಯ ಮುಖ್ಯವಾಗುತ್ತದೆ..
ಆಟ/ಪಾಠದಲ್ಲಿನ ತಪ್ಪುಗಳನ್ನು ಹವ್ಯಾಸದ ರೀತಿಯಲ್ಲಿ ತಿದ್ದಿಕೊಳ್ಳದಿದ್ದರೆ , ಭವಿಷ್ಯದ ಆಟಗಳಲ್ಲಿ ಅದೇ ತಪ್ಪುಗಳ ಪುನರಾವರ್ತನೆಯಿಂದ ಸೋಲು ನಮ್ಮನ್ನ ಅಪ್ಪಿಕೊಳ್ಳುತ್ತದೆ..
ಕೆಳಕ್ಕೆ ಬೀಳುವುದು, ನಮಗೆ ಪಾಠ, ಮತ್ತೆ ಮೇಲೇಳುವುದು ನಮ್ಮ ಆಟವಾಗಬೇಕು..
ಪ್ರತಿಯೊಬ್ಬರು ತಮ್ಮ ಜೀವನದುದ್ದಕ್ಕೂ ಸೋಲನ್ನು ಎದುರಿಸುತ್ತಾರೆ, ಇದು ಜೀವನದ ಒಂದು ಭಾಗವಾಗಿದೆ.. ಸಾಧಿಸಿದ ಸಾಧಕರು, ಸೋಲುಗಳಿಂದ ಪಾಠ ಕಲಿತು ಗೆದ್ದವರೆ.
ನಾವು ಎಂದಿಗೂ ಸೋಲನ್ನು ಅನುಭವಿಸದಿದ್ದರೆ, ಗೆಲುವು ಅಷ್ಟು ಸಿಹಿಯಾಗಿರುವುದಿಲ್ಲ. ಸೋಲುಗಳು ಕಹಿಯಾದಷ್ಟೂ ಗೆಲುವಿನ ರುಚಿಯೂ ಮಧುರವಾಗಿರುತ್ತದೆ.
ಕಲಬುರ್ಗಿ ವಿಭಾಗ ಮಟ್ಟದ ಬಾಲಕರ ಕಬಡ್ಡಿ ತಂಡಕ್ಕೆ ಆಯ್ಕೆಯಾದ ನಮ್ಮ 5 ವಿದ್ಯಾರ್ಥಿಗಳು ಯಶಸ್ಸು ಗಳಿಸಲಿ ಎಂದು ಶುಭ ಹಾರೈಸೋಣ..
Shankargouda Basapur
GHS Hiremyageri
👍💐💐