ಕಥೆ-583
ಹೆಜ್ಜೆಗೊಂದು ದಾರಿ ಇದೆ. ರದ್ದಿಯಿಂದ ಗೆದ್ದವಳು..👍
ಜೋಧಪುರದ ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುತ್ತಿದ್ದ ಆಶಾ ಕಂದ್ರ ಎಂಬ ಮಹಿಳೆ ತನ್ನ ನಿತ್ಯ ಕಾಯಕವಾದ ಕಸ ಗುಡಿಸಿ, ಒಂದೆಡೆ ಗುಡ್ಡೆ ಹಾಕುತ್ತಿದ್ದಳು. ಗುಡ್ಡೆ ಹಾಕಿದ ವಾಹನ ಬರುವವರೆಗೂ ಕಸದ ರಾಶಿಯಲ್ಲಿರುವ ಹಾಳೆ, ಪುಸ್ತಕಗಳನ್ನು ಬೇರ್ಪಡಿಸುತ್ತಿದ್ದಳು. ಅದರಲ್ಲಿ ಯಾವುದಾದರೂ ಪುಸ್ತಕಗಳು ತನ್ನ ಮಕ್ಕಳಿಗೆ ಉಪಯೋಗವಾದೀತು ಎಂಬ ಆಸೆಯಿಂದ ಆ ಹೆಣ್ಣು ಮಗಳು ಅಲ್ಲಿರುವ ಪುಸ್ತಕಗಳನ್ನು ತನ್ನ ಸೀರೆಯ ಸೆರಗಿನಿಂದಲೇ ಸ್ವಚ್ಛಗೊಳಿಸಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಳು. ಮಕ್ಕಳಿಗೆ ಉಪಯೋಗವಾಗುವ ಪುಸ್ತಕಗಳನ್ನು ಅವರಿಗೆ ಕೊಟ್ಟು, ಉಳಿದ ಪುಸ್ತಕಗಳನ್ನು ತಾನು ಓದುತ್ತಿದ್ದಳು. ಆಗ ಅವಳ ಕೈಗೆ ಸಿಕ್ಕಿದ್ದು ಕೆಲವು ಸ್ಪರ್ಧಾತ್ಮಕ ಪುಸ್ತಕಗಳು! ಗಂಡನಿಂದ ವಿಚ್ಛೇದನ, ಸಮಾಜದಲ್ಲಿ ನಿತ್ಯ ಆಗುತ್ತಿದ್ದ ಅವಮಾನಗಳಿಗೆ ರೋಸಿ ಹೋಗಿದ್ದ ಆಶಾ, ತಾನೂ ಉನ್ನತ
ಹುದ್ದೆ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಸಂಕಲ್ಪ ಮಾಡುತ್ತಾಳೆ. ಛಲಬಿಡದೇ ಸಂಕಲ್ಪದ ಬೆನ್ನು ಹತ್ತಿದ ಆಶಾ ಕಂದ್ರ ಅವರು ಎಸ್ಎಸ್ಎಲ್ಸಿಗೇ ಮೊಟಕುಗೊಂಡಿದ್ದ ಶಿಕ್ಷಣವನ್ನು ಮುಂದುವರಿಸಬೇಕು ಎಂದು ನಿರ್ಧರಿಸುತ್ತಾಳೆ. ದೂರ ಶಿಕ್ಷಣ ಕೇಂದ್ರದಲ್ಲಿ ಪಿಯುಸಿ ಪಾಸಾಗಿ 2016ರಲ್ಲಿ ಪದವಿಯನ್ನೂ ಪಡೆಯುತ್ತಾಳೆ. ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂದು ನಿಶ್ಚಯಿಸುತ್ತಾಳೆ. ಪದವಿ ನಂತರ ಕಸ ಗುಡಿಸುತ್ತಲೇ ಎರಡು ವರ್ಷ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದ ಆಶಾ, 2018ರಲ್ಲಿ ರಾಜಸ್ಥಾನ ಪಬ್ಲಿಕ್ ಸರ್ವಿಸ್ ಕಮಿಷನ್ನಿಂದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗೆ ಅರ್ಜಿ ಸಲ್ಲಿಸುತ್ತಾಳೆ. ತಮ್ಮ ಮೊದಲ ಪ್ರಯತ್ನದಲ್ಲೇ ಪ್ರಿಲಿಮ್ಸ್ ಪರೀಕ್ಷೆ ಪಾಸುಮಾಡಿ 2019ರಲ್ಲಿ ನಡೆದ ಮೇನ್ಸ್ ಪರೀಕ್ಷೆಯನ್ನೂ ಪಾಸು ಮಾಡಿ ಸಂದರ್ಶನದ ಹಂತಕ್ಕೆ ಹೋಗುತ್ತಾಳೆ. ಸಂದರ್ಶನದಲ್ಲಿದ್ದ ಆಯ್ಕೆ ಸಮಿತಿ ಸದಸ್ಯರು ಆಶಾ ಅವರ ಹಿನ್ನೆಲೆ ಕೇಳಿ ಬೆರಗಾಗುತ್ತಾರೆ.
2021ರ ಜುಲೈ 13ರಂದು ಫಲಿತಾಂಶ ಪ್ರಕಟವಾದಾದ ಆಶಾ 728ನೇ Rank ಪಡೆದು ರಾಜಸ್ಥಾನ ಆಡಳಿತಾತ್ಮಕ ಸೇವೆ (ಆರ್ ಎ ಎಸ್) ಅಧಿಕಾರಿಯಾಗಿ ಆಯ್ಕೆಯಾಗಿರುತ್ತಾರೆ. ಕಸ ಗುಡಿಸುವ ಮಹಿಳೆಯೊಬ್ಬಳು ಈಗ ಜಿಲ್ಲಾಧಿಕಾರಿಯಾಗಿದ್ದಾರೆ. ಅದಕ್ಕೇ ಹೇಳುವುದು ಬಾಳಿನಲ್ಲಿ ಹೆಜ್ಜೆಗೊಂದು ದಾರಿ ಇದೆ...
-ಚಂದ್ರಶೇಖರ ಚೌಗಲಾ
