ಕಥೆ-612
ರಾಮುವಿನ ಕನಸು
ಗೆಜ್ಜೆನಳ್ಳಿ ಎಂಬ ಊರಿನಲ್ಲಿ ರಾಮು ಎಂಬ ಹುಡುಗನಿದ್ದ ಅವನ ಧ್ವನಿ ಸ್ವಾಭಾವಿಕವಾಗಿ ಮಧುರವಾಗಿತ್ತು. ಅವನು ಗೆಳೆಯರ ಜೊತೆ ಆಟವಾಡುವಾಗ, ಮನೆಯ ಕೆಲಸಗಳಲ್ಲಿ ತೊಡಗಿದಾಗ, ಶಾಲೆಗೆ ಹೋಗುವ ದಾರಿಯಲ್ಲೂ ಹಾಡನ್ನು ಸೊಗಸಾಗಿ ಹಾಡುತ್ತಿದ್ದ. ಅವನ ಹಾಡುಗಳಲ್ಲಿ ಅವನ ಆತ್ಮಸ್ಫೂರ್ತಿ, ಕನಸುಗಳು ಮತ್ತು ಆಕಾಂಕ್ಷೆಗಳ ಪ್ರತಿಬಿಂಬವಿತ್ತು.
ಆದರೆ ರಾಮುವಿನ ಜೀವನ ಸುಲಭವಿರಲಿಲ್ಲ. ಅವನ ಕುಟುಂಬ ಕಿತ್ತು ತಿನ್ನುವ ಬಡತನದಲ್ಲಿತ್ತು. ಅವನ ಹಾಡುಗಳಿಗೆ ಬೆಂಬಲ ನೀಡುವವರು ಯಾರೂ ಇರಲಿಲ್ಲ. ತಂದೆಯು, “ಹಾಡುಗಳಿಂದ ಹಸಿವನ್ನು ತೀರಿಸಲು ಆಗುವುದಿಲ್ಲ. ಕೆಲಸಮಾಡು” ಎಂದು
ಕಿಡಿ ಕಾರುತ್ತಿದ್ದರು. ಶಾಲೆಯ ಶಿಕ್ಷಕರು ಸಹ ಅವನ ಹಾಡುಗಳಿಗೆ ಪ್ರೋತ್ಸಾಹ ನೀಡುತ್ತಿರಲಿಲ್ಲ
ರಾಮು ಎಷ್ಟೋ ಬಾರಿ ನಿರಾಶನಾಗುತ್ತಿದ್ದರೂ ಹಾಡುವುದನ್ನು ಬಿಡಲಿಲ್ಲ. ಊರಿನ ಜಾತ್ರೆಗಳಲ್ಲಿ, ದೇವಸ್ಥಾನದ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ತೋರುವ ಅವಕಾಶ ಹುಡುಕುತ್ತಿದ್ದ. ಜನರು ಮೆಚ್ಚಿದಾಗ ಅವನಿಗೆ ಹೊಸ ಹುರುಪು ಸಿಗುತ್ತಿತ್ತು. ಆದರೆ, ದೊಡ್ಡ ವೇದಿಕೆಗಳು ದೂರದ ಕನಸುಗಳಂತೆಯೇ ಕಾಣುತ್ತಿದ್ದವು.
ಒಂದು ದಿನ, ಊರಿನ ಜಾತ್ರೆಯಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕನೊಬ್ಬ ರಾಮುವಿನ ಹಾಡು ಕೇಳಿದ. ಅವನ ಧ್ವನಿಯು ಸಹಜವಾಗಿ ಮನಸ್ಸಿಗೆ ತಾಕುವಂಥದ್ದಾಗಿತ್ತು. “ನೀನು ಶಿಷ್ಟಪದ್ಧತಿಯಿಂದ ತರಬೇತಿ ಪಡೆದರೆ, ನಿನ್ನಲ್ಲಿ ದೊಡ್ಡ ಗಾಯಕನಾಗುವ ಸಾಮರ್ಥ್ಯವಿದೆ” ಎಂದು ಆ ನಿರ್ದೇಶಕನು ರಾಮುವಿಗೆ ಪ್ರೋತ್ಸಾಹ ಕೊಟ್ಟನು. ಈ ಮಾತು ರಾಮುವಿಗೆ ಹೊಸ ಜೀವನ ನೀಡಿತು.
ರಾಮು ತಾನು ಮಾಡಿದ ಪುಟ್ಟ ಪುಟ್ಟ ಉಳಿತಾಯವನ್ನು ಬಳಸಿಕೊಂಡು ನಗರಕ್ಕೆ ಹೋಗಿ ಸಂಗೀತ ಶಿಕ್ಷಣ ಆರಂಭಿಸಿದ. ದಿನದವರೆಗೂ ದುಡಿದು ರಾತ್ರಿ ಹಾಡಿನ ಅಭ್ಯಾಸ ಮಾಡುತ್ತಿದ್ದ. ಸ್ವಲ್ಪ ಬಡತನ, ಕೆಲವು ದಿನಗಳ ನಿರಾಶೆ ಅವನನ್ನು ಹಿಂಬಾಲಿಸಿದರೂ ಅವನು ನಿರಂತರ ಪ್ರಯತ್ನಿಸುತ್ತಲೇ ಇದ್ದ.
ಕೊನೆಗೊಂದು ದಿನ, ರಾಮು ತನ್ನ ಮೊದಲ ಹಾಡು ಬರೆದು, ಹಾಡಿ, ಜನರ ಮುಂದೆ ಪ್ರಸ್ತುತಪಡಿಸಿದ. ಆ ಹಾಡು ಜನಮನ ಗೆದ್ದಿತು. ಅವನಿಗೆ ಪ್ರೋತ್ಸಾಹ, ಪ್ರಶಂಸೆ, ಆರ್ಥಿಕ ಬೆಂಬಲ ಎಲ್ಲವೂ ಸಿಕ್ಕಿತು. ಹೀಗಾಗಿ, ಕನಸುಗಳ ಕಡೆಗೆ ಹೆಜ್ಜೆ ಇಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ರೆ, ಬದುಕು ಸಹಾಯ ಮಾಡುತ್ತದೆ ಎಂಬುದನ್ನು ರಾಮು ಜನರಿಗೆ ತೋರಿಸಿದ.
ಕೊನೆಯದಾಗಿ
ರಾಮುವಿನ ಕಥೆ ನಮಗೆಲ್ಲರಿಗೂ ಒಂದು ಶ್ರೇಷ್ಠ ಪಾಠವನ್ನು ಕಲಿಸುತ್ತದೆ. ಬೆಂಬಲವಿಲ್ಲದಿದ್ದರೂ, ಸಾಂತ್ವನವಿಲ್ಲದಿದ್ದರೂ, ನಂಬಿಕೆ ಮತ್ತು ತೀವ್ರ ಪ್ರಾಮಾಣಿಕ ಪ್ರಯತ್ನ ನಮ್ಮ ಕನಸುಗಳನ್ನು ಸಾಕಾರ ಮಾಡುತ್ತದೆ. ಕೆಲವೊಮ್ಮೆ ಜೀವನವು ಕಠಿಣವಾಗಬಹುದು, ಆದರೆ ನಮ್ಮ ಮನಸ್ಸಿನ ಶ್ರದ್ಧೆ ನಮ್ಮನ್ನು ಗೆಲುವಿನ ಹಾದಿಯತ್ತ ಕರೆದೊಯ್ಯುತ್ತದೆ.
ಶ್ವೇತಾಶ್ರೀ ಕೆ.ಎಂ
ಶಿವಮೊಗ್ಗ