ಕಥೆ-669
ಹಳ್ಳಿ ಹೈದ - PSI ಆದ....
(ಹೆತ್ತವರ ಕನಸು - ಆಯ್ತು ನನಸು)
ಬಡತನದಲ್ಲಿ ಅರಳಿದ ಪ್ರತಿಭೆ ಇಬ್ರಾಹಿಂ ರೇವಡಿಗಾರ
ಬಡತನ ಸಾಧನೆಗೆ ಅಡ್ಡಿಯಾಗದು ಎಂಬುದಕ್ಕೆ ನರಗುಂದ ತಾಲೂಕಿನ ಹದಲಿಯ ಇಬ್ರಾಹಿಂ ರೇವಡಿಗಾರ ಸಾಕ್ಷಿಯಾಗಿದ್ದಾರೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರೂ ಛಲದಿಂದ ಓದಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಹೊಲವಿಲ್ಲದ ಕುಟುಂಬ, ಚಿಕ್ಕ ಮನೆಯಲ್ಲಿ ವಾಸ. ಇಂಥ ಕಡುಬಡತದಲ್ಲಿಯೇ ಇಬ್ರಾಹಿಂ ಎಂಬ ಪ್ರತಿಭೆ ಅರಳಿದೆ. ಇಬ್ರಾಹಿಂ ಅವರ ತಾಯಿ ಶೈನಾಜ್ಬಿ ರೇವಡಿಗಾರ ಅಡುಗೆ ಸಹಾಯಕಿ, ತಂದೆ ನದಾಫ್ಸಾಬ್ ಕೂಲಿ ಕೆಲಸ ಮಾಡುತ್ತಾರೆ.
ಮೂರು ವರ್ಷದ ಹಿಂದೆ ಇಬ್ರಾಹಿಂ ರೇವಡಿಗಾರ ಪಿಎಸ್ಐ ಪರೀಕ್ಷೆ ಬರೆದಾಗ 37ನೇ Rank ಪಡೆದಿದ್ದರು. ಆದರೆ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂದು ನೇಮಕಾತಿ ರದ್ದಾಗಿತ್ತು. ಮುಂದೆ ಮತ್ತೊಂದು ಪರೀಕ್ಷೆಯನ್ನು ಸರ್ಕಾರ ನಡೆಸಿತು. ಆಗಲೂ ಇಬ್ರಾಹಿಂ ಉತ್ತೀರ್ಣಗೊಂಡು ಪಿಎಸ್ಐ ಆಗಿದ್ದಾರೆ.
1ರಿಂದ 10ನೇ ತರಗತಿ ಹದಲಿಯಲ್ಲಿ ಮತ್ತು ಪಿಯುಸಿ ನರಗುಂದ ಕಾಲೇಜಿನಲ್ಲಿ, ಬಿಎಸ್ಸಿ ಅಗ್ರಿ ಧಾರವಾಡ ವಿವಿಯಲ್ಲಿ ಪೂರೈಸಿದ್ದಾರೆ. ಇಬ್ರಾಹಿಂ ಅವರ ತಾಯಿಗೆ ಅಂಗನವಾಡಿ ಕೆಲಸದಿಂದ ಬರುವ ಸಂಬಳ ಅಷ್ಟಕಷ್ಟೇ. ಹೀಗಾಗಿ 30 ವರ್ಷದಿಂದ ನಡೆಸಿಕೊಂಡು ಬಂದಿರುವ ಅಡುಗೆ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಮಾರಾಟವೇ ಜೀವನ ನಿರ್ವಹಣೆಗೆ ದೊಡ್ಡ ಆಸರೆಯಾಗಿದೆ. ಅಂಗನವಾಡಿ ಕೆಲಸ ಪೂರ್ಣಗೊಂಡ ನಂತರ ಹದಲಿ ಗ್ರಾಮದಲ್ಲಿ ಸಂಜೆ ಮನೆಮನೆಗೆ ತೆರಳಿ ಎಣ್ಣೆ ಮಾರಾಟ ಮಾಡುತ್ತಾರೆ. ಇಬ್ರಾಹಿಂ ಸಹ ಈ ಕಾರ್ಯಕ್ಕೆ ನೆರವಾಗುತ್ತಿದ್ದರು.
ಕಳೆದ ಜ.7ರಂದು ನೇಮಕಾತಿ ಅದೇಶ ಬಂದಿತು. ಮಂಗಳೂರಿನಲ್ಲಿ ಪಿಎಸ್ಐ ಆಗಿ 22 ದಿನ ಮೊದಲು ಸೇವೆ ಸಲ್ಲಿಸಿದರು ಸದ್ಯ ಮೈಸೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮನೆಯಲ್ಲಿ ಬಡತನವಿದ್ದರೂ ಮಕ್ಕಳ ಓದಿಗೆ ತೊಂದರೆ ಮಾಡಿಲ್ಲ.
ನಿತ್ಯ ಅಂಗನವಾಡಿ ಕಾರ್ಯ ಮುಗಿದ ನಂತರ ಮನೆಮನೆಗೆ ಎಣ್ಣೆ ಡಬ್ಬಿಗಳನ್ನು ಹೊತ್ತು ಮಾರಾಟಮಾಡುವ ಕಾರ್ಯ ಮಾಡುತ್ತಿದ್ದೇನೆ. ಪತಿ ಕೂಲಿ ಕೆಲಸಕ್ಕೆ ತೆರಳುತ್ತಾರೆ. ಬಂದ ಸ್ವಲ್ಪ ಆದಾಯದಲ್ಲಿ ಜೀವನ ಮುಂದುವರಿಸಿದ್ದೇವೆ. ಮಗನ ಸಾಧನೆಗೆ ನಮಗೆ ಹೆಮ್ಮೆ ಮೂಡಿಸಿದೆ ಎನ್ನುತ್ತಾರೆ ಶೈನಾಜ್ಬಿ ರೇವಡಿಗಾರ.