ಕಥೆ-675
*ಒಳಗಿನ ಶತ್ರುಗಳು*
ಕಾಡಲ್ಲಿ ಒಂದು ಕತ್ತೆ ಮತ್ತು ನಾಯಿ ಗೆಳೆಯರಾಗಿದ್ದವು. ಅವುಗಳಲ್ಲೆ
ಒಂದು ಸ್ಪರ್ಧೆ ಇಟ್ಟುಕೊಂಡು ಅದರಲ್ಲಿ ಯಾರು ಗೆಲ್ಲುತ್ತಾರೋ ಅವರಿಗೆ ಈ ಕಾಡಿನ “ರಾಜ್ಯದ ಸಿಂಹಾಸನ”. ಪಂಥ ಕಟ್ಟಿ ಯಾರು ಗೆಲ್ಲುತ್ತಾರೆ ನೋಡೇ ಬಿಡೋಣ ಎಂದು ಉತ್ಸಾಹದಿಂದ ಗೆಳೆಯರಾದ ಕತ್ತೆ ಹಾಗೂ ನಾಯಿ ಸ್ಪರ್ಧೆಗೆ ಇಳಿದವು. ಸ್ಪರ್ಧೆ ದಿನ ಬಂದಿತು ಎರಡು ತಯಾರಾಗಿ ಬಂದವು. ನಾಯಿಗೆ ಒಳಗೊಳಗೆ ಸಂತೋಷ ನನ್ನ ಸಮಕ್ಕೆ ಈ ಕತ್ತೆ ಎಲ್ಲಿ ಓಡುತ್ತದೆ ಗೆಲ್ಲುವುದು ನಾನೇ ಎಂದುಕೊಂಡಿತು. ಸ್ಪರ್ಧೆ ಸ್ಟಾರ್ಟ್ ಆಯಿತು ಓಡಲು ಶುರು ಮಾಡಿದವು. ಕತ್ತೆ ನಿಧಾನಕ್ಕೆ ಓಡುತ್ತಾ ಮುಂದೆ ಹೋಗುತ್ತಿತ್ತು. ಆದರೆ ನಾಯಿ ನಾಲ್ಕು ಹೆಜ್ಜೆ ಓಡುತ್ತಿದ್ದಂತೆ ಅದಕ್ಕೆ ಎದುರಾಗುವ ಅಡ್ಡರಸ್ತೆಗಳ ಒಳಗಿರುವ ನಾಯಿಗಳು ಓಡಿಬಂದವು. ಸ್ಪರ್ಧೆಗಾಗಿ ಓಡುವ ನಾಯಿಗೆ ಅಡ್ಡಗಟ್ಟಿ, ಬೌ ಬೌ ಎಂದು ಆ ನಾಯಿಯನ್ನು ಸುತ್ತು ಗಟ್ಟಿ ಕೂಗುತ್ತಾ, ಅದು ಮುಂದೆ ಹೋಗದಂತೆ ಅದರ ಸುತ್ತ ತಿರುಗುತ್ತಾ ಎಲ್ಲಾ ಕಡೆಯಿಂದಲೂ ಅಡ್ಡ ಕಟ್ಟುತ್ತಿದ್ದವು. ಸ್ಪರ್ಧೆಯ ನಾಯಿ ಎಷ್ಟೇ ಸ್ಪೀಡ್ ಆಗಿ ಓಡಿದರು, ಅದು ಗುರಿ ಮುಟ್ಟಲು ಆಗಲಿಲ್ಲ. ಕತ್ತೆ ನಿಧಾನವಾಗಿ ಓಡಿದರೂ ಗುರಿ ತಲುಪಿ ರಾಜ್ಯದ ಸಿಂಹಾಸನದ ಮೇಲೆ ಕುಳಿತುಕೊಂಡಿತು.
ನಾಯಿ ಯೋಚಿಸಿತು ನಾನು ಓಟದಲ್ಲಿ ಮುಂದಿದ್ದೆ. ಆದರೆ ಓಡಲು ನನ್ನವರೇ ನನಗೆ ಬಿಡಲಿಲ್ಲ. ಸಿಂಹಾಸನ ನನಗೆ ಸಿಕ್ಕಿದ್ದರೆ ನನ್ನ ರಾಜ್ಯಕ್ಕೆ, ನನ್ನವರಿಗೆ ನಾನು ಸಹಾಯ ಮಾಡುತ್ತಿದ್ದೆ ಏನು ಮಾಡುವುದು, ಹೊರಗಿನ ಶತ್ರುಗಳಾಗಿದ್ದರೆ ಎಲ್ಲರೂ ಒಂದಾಗಿ ಹೋರಾಡಿ ಓಡಿಸಬಹುದಿತ್ತು. ಆದರೆ ಒಳಗಿನ ಶತ್ರುಗಳು ಬಿಸಿ ತುಪ್ಪದಂತೆ ಉಗಳಲು ಆಗುವುದಿಲ್ಲ, ನುಂಗಲು ಆಗುವುದಿಲ್ಲ. ಇವರನ್ನು ಗೆಲ್ಲುವುದು ಸುಲಭವಲ್ಲ ಎಂದು ಬೇಜಾರು ಮಾಡಿಕೊಂಡಿತು.
ಇದು ಕಥೆಯಾಗಿರಬಹುದು ಆದರೆ, ಒಳ್ಳೆಯ ಕೆಲಸಕ್ಕೆ ಹೊರಟಾಗ ಗೂಬೆ, ಬೆಕ್ಕು,
ಕಾಗೆ, ಅಡ್ಡ ಬರುವುದು, ಹಲ್ಲಿ ಲೊಚಗುಟ್ಟುವುದು, ಎಂದು ಬೇಜಾರು ಮಾಡಿಕೊಳ್ಳತ್ತೇವೆ.. ನಿಜವಾದ ಶತ್ರುಗಳು ಅವರಲ್ಲ ಅವುಗಳಿಗಿಂತ ನಮ್ಮವರೇ ಅಡ್ಡ ಬಂದು ತೊಡರುಗಾಲಾಗಿ ನಿಲ್ಲುತ್ತಾರೆ ಎನ್ನುವುದಕ್ಕೆ ಉದಾಹರಣೆ. ಇದು ನಮ್ಮ ಜೀವನದಲ್ಲಿ ಸಹ ಉಂಟಾಗುತ್ತದೆ, ನಮಗೆ ನಮ್ಮ ಗುರಿ ತಲುಪಲು ಅಡ್ಡಿಪಡಿಸುತ್ತಾರೆ... ಹಾಗಂತ ನಾವು ಅಂದುಕೊಂಡ ಗುರಿ ತಲುಪುವುದನ್ನು ಬಿಡಬಾರದು...ಅಲ್ಲದೇ ನಮ್ಮೊಳಗಿನ ಶತ್ರುಗಳಾದ ದರಿದ್ರತನ, ಕೆಲಸ ಮುಂದೂಡುವ ಪ್ರವೃತ್ತಿ, ನೆಪಗಳನ್ನು ಹುಡುಕುವುದು ಇವುಗಳನ್ನು ನಮ್ಮಿಂದ ದೂರ ಮಾಡಿಕೊಳ್ಳಬೇಕು. ಆಗ ನಮ್ಮ ಗುರಿಯ ಹಾದಿ ಸರಳವಾಗುತ್ತದೆ.
ಕೃಪೆ- ಆಶಾ ನಾಗಭೂಷಣ.