ಕಥೆ-692
ಸುಖದ ಗುಟ್ಟು
ಒಬ್ಬ ಅಜ್ಜ ಒಂದು ಸಂಜೆ ಮನೆಯ ಹೊರಗೆ ದೀಪದ ಕೆಳಗೆ ಏನೋ ಹುಡುಕುತ್ತಿದ್ದನಂತೆ. ಒಬ್ಬೊಬ್ಬರಾಗಿ ಬೇರೆಯವರು ನೆರೆದರು. ಅವರೆಲ್ಲಾ ಕೇಳಿದರು. ಏನು ಹುಡುಕುತ್ತಿದ್ದೀ ? ಅವನೆಂದ ನನ್ನ ಸೂಜಿ ಕಳೆದುಹೋಗಿದೆ ಎಂದ. ಎಲ್ಲರೂ ಕೂಡಿ ಹುಡುಕತೊಡಗಿದರು. ಬಹಳ ಹೊತ್ತು ಹುಡುಕಿದ ಮೇಲೆ ಅವರಲ್ಲೊಬ್ಬ ಕೇಳಿದ. ರಸ್ತೆ ವಿಶಾಲವಾಗಿದೆ ಸೂಜಿ ಕಳೆದಿದ್ದಾದರೂ ಎಲ್ಲಿ ? ಏಕೆಂದರೆ ಸೂಜಿ ಬಹಳ ಸಣ್ಣ ವಸ್ತು. ಅಜ್ಜ ಹೇಳಿದ ಅದೊಂದು ಮಾತು ಕೇಳಬೇಡಿ. ಎಲ್ಲರೂ ಅಚ್ಚರಿಗೊಂಡರು. ಹಾಗೆಂದರೇನು ಎಂದು ಅವರೆಲ್ಲರೂ ಕೇಳಿದರು. ಸೂಜಿ ಕಳೆದಿರುವುದು ಮನೆಯೊಳಗಿನ ಕತ್ತಲೆಯ ಕೋಣೆಯಲ್ಲಿ. ಅಲ್ಲಿ ಬೆಳಕಿಲ್ಲದಿರುವುದರಿಂದ ಅಲ್ಲಿಗೆ ಹೋಗಲು ಭಯವಾಗುತ್ತಿದೆ. ಅದಕ್ಕೆ ಹೊರಗೆ ಹುಡುಕುತ್ತಿದ್ದೇನೆ. ಜನ ಹೇಳಿದರು ನೀನೇನು ಹುಚ್ಚನೋ? ಒಳಗೆ ಕಳೆದುಹೋಗಿರುವ ವಸ್ತುವನ್ನು ಹೊರಗೆ ಹುಡುಕಿದರೆ ಅದು ಸಿಕ್ಕೀತೇ ? ಅಜ್ಜ ನಕ್ಕು ಹೇಳಿದ ಎಲ್ಲರೂ ಇದನ್ನೇ ಮಾಡುತ್ತಾರೆ, ಒಳಗೆ ಕಳೆದುಹೋದದ್ದನ್ನು ಹೊರಗೆ ಹುಡುಕಾಡುವವರು. ಆದರೆ ಅವರು ಯಾರೂ ಹುಚ್ಚರಲ್ಲ. ನಾನೊಬ್ಬನೇ ಹುಚ್ಚನೇ. ಮನುಷ್ಯ ಸುಖದ ರತ್ನವನ್ನು ತನ್ನ ಹೃದಯಗರ್ಭದಲ್ಲಿ ಇರಿಸಿಕೊಂಡು ಜಗತ್ತೆಲ್ಲಾ ಅಲೆಯುತ್ತಿದ್ದಾನೆ.
ನಾವು ಸುಖವನ್ನು ಸದಾ ಹೊರಗಡೆ ಹುಡುಕುತ್ತಿದ್ದೇವೆ. ಬೇರೆಯವರಿಂದ ನಿರೀಕ್ಷೆ ಇಟ್ಟುಕೊಳ್ಳುತ್ತೇವೆ ನಿರೀಕ್ಷಿ ಸುಳ್ಳಾದಾಗ ನಿರಾಶೆಗೆ ಒಳಗಾಗುತ್ತೇವೆ.. ಏಕೆಂದರೆ ಸುಖವು ಹೊರಗಡೆ ವಸ್ತುವಿನಿಂದ ದೊರೆಯುವ ಸಂಗತಿಯಲ್ಲ. ಬದಲಿಗೆ ಅದು ತನ್ನೊಳಗೆ ಕಂಡುಕೊಳ್ಳಬೇಕಾದ ಸಂಗತಿ.
ನಿರಾಶರಾದಾಗ ಬೇರೆಯವರಲ್ಲಿ ದೋಷವನ್ನು ಹೊರಿಸುತ್ತಾನೆ. ತನ್ನ ದುಃಖಕ್ಕೆ ಕಾರಣವನ್ನು ಬೇರೆಯವರಲ್ಲಿ ಹುಡುಕುವುದು ಅವನ ಸ್ವಭಾವವಾಗುತ್ತದೆ. ಸುಖವು ಒಳಗೆ ಅಡಗಿದೆ, ನೋಡುವ ಪ್ರಯತ್ನ ನಮ್ಮದಾಗಬೇಕು. ವಿದ್ಯಾರ್ಥಿಗಳು ಬಾಹ್ಯ ಆಕರ್ಷಣೆಗೆ ಒಳಗಾಗಿ ಓದುವ ವಿಷಯದ ಆಳವನ್ನು ಹುಡುಕದೆ, ಬೇರೆ ಯಾವುದೋ ಸಂಬಂಧಪಡದ ವಿಷಯ ಹುಡುಕುತ್ತಿರುತ್ತಾರೆ, ಓದುವ ಸಂದರ್ಭದಲ್ಲಿ ಓದದೇ ಬೇರೆಯವರ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ.. ನಿರೀಕ್ಷೆ ಸುಳ್ಳಾದಾಗ ನಿರಾಶರಾಗುತ್ತಾರೆ.. ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಾರೆ... ಹಾಗಾಗದಿರಲಿ
ಇನ್ನೂ ಕಾಲ ಮಿಂಚಿಲ್ಲ ಆಂತರಿಕ ಖುಷಿಗಾಗಿ ಓದು, ನೀನು ಏನೆಂದು, ನಿನ್ನ ಸಾಮರ್ಥ್ಯವೇನೆಂದು ತೋರಿಸಲು ನೀನು ಓದು...
ಕೃಪೆ : ನೆಟ್