ಕಥೆ-836
ದೇವರನ್ನು ಬೆಳೆಸುವ ರೈತರಿಗೆ ನಮನಗಳು
ವಿದೇಶದಲ್ಲಿ ಮೈದಾಸನೆಂಬ ಮಹಾರಾಜನಿದ್ದ.ಅವನಿಗೆ ಬಂಗಾರದ ಮೇಲೆ ತುಂಬಾ ಮೋಹ. ಒಂದು ದಿನ ಮಹಾರಾಜನ
ಕನಸಿನಲ್ಲಿ ದೇವನು ಪ್ರತ್ಯಕ್ಷನಾಗಿ “ಏನು ವರ ಬೇಕು ಬೇಡು” ಎಂದು ಕೇಳಿದ. ಆಗ ಮಹಾರಾಜನು ಹಿಂದು ಮುಂದು ನೋಡದೆ ನಾನು ಮುಟ್ಟಿದ್ದೆಲ್ಲ ಬಂಗಾರವಾಗಲಿ ಎಂದು ಕೇಳಿಕೊಂಡ. ಆಗಲಿ ಎಂದು ದೇವ ಹೇಳಿದ. ತಕ್ಷಣ ರಾಜನು ತಾನು ಮಲಗಿದ್ದ ಮಂಚ ಮುಟ್ಟಿದ ಅದು ಬಂಗಾರವಾಯಿತು. ಕುರ್ಚಿ ಮುಟ್ಟಿದ ಅದೂ ಬಂಗಾರವಾಯಿತು.
ಹೀಗೆ ಬೆಳಗಿನಿಂದ ಮಧ್ಯಾಹ್ನದವರೆಗೆ ಏನೆಲ್ಲಾ ಮುಟ್ಟಿ ಬಂಗಾರ ಮಾಡಿದ. ಈಗ ಅವನ ಸಂತಸಕ್ಕೆ ಪಾರವೇ ಇರಲಿಲ್ಲ. ನಂತರ
ಅವನಿಗೆ ಬಾಯಾರಿಕೆಯಾಗಿ ನೀರು ಮುಟ್ಟಿದ ಅದೂ ಬಂಗಾರವಾಯಿತು. ಹಸಿವೆಯಾದಾಗ ಅನ್ನ ಮುಟ್ಟಿದ ಅದೂ ಬಂಗಾರವಾಯಿತು. ಮುದ್ದಿನ ಮಗಳಿಗೆ ಕೈ ತಗುಲಿದಾಗ ಅವಳು
ನಿರ್ಜೀವ ಬಂಗಾರವಾದಳು. ನನ್ನ ಬದುಕೇ ಹಾಳಾಯಿತೆಂದು ಮಹಾರಾಜನು ದೇವರಲ್ಲಿ ಕ್ಷಮೆ ಕೇಳಿ ವರವನ್ನು ಹಿಂತಿರುಗಿಸಿ ನಿಶ್ಚಿಂತನಾದ.
ಮನುಷ್ಯನ ಹಸಿವೆ ಹಿಂಗಿಸುವುದು ಅನ್ನವೇ ವಿನಾ ಬಂಗಾರವಲ್ಲ. ಬಂಗಾರದ ಭಯದಿಂದ ಅದನ್ನು ಪೆಟ್ಟಿಗೆಯಲ್ಲಿಡುತ್ತಾರೆ. ಅನ್ನದಲ್ಲಿ ಭಯವಿಲ್ಲ, ಆನಂದವಿದೆ. ಅದನ್ನು ಪೆಟ್ಟಿಗೆಯಲ್ಲಿಡುವುದಿಲ್ಲ. ನಮ್ಮ ಜೀವನ ನಿಂತಿದ್ದು ಅನ್ನದ ಮೇಲೆ ವಿನಾ ಚಿನ್ನದ ಮೇಲಲ್ಲ. ಅಂತೇ ಅನ್ನ ದೇವರು ಮುಂದೆ ಇನ್ನು ದೇವರು ಉಂಟೆ.. ಈ ದೇವರನ್ನು ಬೆಳೆಸುವ ರೈತರಿಗೆ ನಮನಗಳು
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*