ಕಥೆ-912
ಅನ್ನದಾತೆಯ ಬದುಕಿನ 'ಕವಿತೆ
https://basapurs.blogspot.com/
ಜೀವನದ ಮೂಲಭೂತ ಅವಶ್ಯಕತೆಗಳು ಆಹಾರ, ಶಿಕ್ಷಣ & ರಕ್ಷಣೆ.. ಆಹಾರ ನೀಡುವ ರೈತ, ಶಿಕ್ಷಣ ಕೊಡುವ ಗುರು, ದೇಶ ಕಾಯುವ ಸೈನಿಕರು ಯಾವಾಗಲೂ ಪೂಜ್ಯರು... ಇವತ್ತಿನ ಪೀಳಿಗೆ ನೌಕರಿಗಾಗಿ ಪ್ರಯತ್ನ ಪಡುತ್ತಿರುವುದು ತಪ್ಪಲ್ಲ, ಒಂದು ವೇಳೆ ನೌಕರಿ ಸಿಗದಿದ್ದರೂ ಮತ್ತೊಂದು ಉದ್ಯೋಗದಲ್ಲಿ, ಕಾಯಕದಲ್ಲಿ, ಯಶಸ್ವಿ ಆಗುತ್ತೇನೆ ಎಂಬ ಆತ್ಮವಿಶ್ವಾಸ ಹೊಂದಿರಬೇಕು.. ಇಲ್ಲದಿದ್ದರೆ ಕುಟುಂಬಕ್ಕೆ ಮತ್ತು ಸಮಾಜಕ್ಕೆ ದಂಡಪಿಂಡ ಆಗಬೇಕಾಗುತ್ತದೆ.. ಅಂತ ಒಬ್ಬ ಯಶಸ್ವಿ ಮಹಿಳೆಯ ಕಥೆ ಇಲ್ಲಿದೆ...
ಶೇ.96 ಅಂಕ ಗಳಿಸಿದಾಕೆಯ ಪ್ರತಿಭೆ ಕಂಡು ಬಹುರಾಷ್ಟ್ರೀಯ ಕಂಪನಿಯಿಂದ ಕೆಲಸದ ಆಫರ್ ಬಂದಾಗ ಈಕೆಯ ಖುಷಿಗೆ ಪಾರವೇ ಇರಲಿಲ್ಲ, ಆಗ ಆಕಾಶಕ್ಕೆ ಮೂರೇ ಗೇಣು. ಆದರೆ ಈ ಖುಷಿ ಹೆಚ್ಚು ಹೊತ್ತು ಉಳಿಯದೇ ಮೂರೇ ಕ್ಷಣದಲ್ಲಿ ಮಾಯವಾಗಿರುತ್ತದೆ. ಸೊಸೆಯಾದವಳು ಗಂಡನ ಮನೆಯಲ್ಲಿ ಕೆಲಸ ಮಾಡಿಕೊಂಡು ಬಿದ್ದಿರಬೇಕಷ್ಟೆ ಎಂಬ ಮನೋಭಾವದ ಅತ್ತೆ ಮನೆಯಲ್ಲಿ ಈಕೆಯ ಆಫರ್ ಲೆಟರ್ಅನ್ನೇ ಹರಿದು ಹಾಕಿದಾಗ ಕವಿತಾಳ ಕನಸಿಗೆ ಕತ್ತಲೆ ಕವಿದಿತ್ತು.
ಕಂಪ್ಯೂಟರ್ನಲ್ಲಿ ಸ್ತಾತಕೋತ್ತರ ಪದವಿ ಪಡೆದಿದ್ದರೂ ಕುರಿ-ಮೇಕೆ ಮೇಯಿಸಿಕೊಂಡು ಎಮ್ಮೆ-ಹಸುಗಳ ಹಾಲು ಕರೆಯುವುದಕ್ಕೆ ನಿಲ್ಲಬೇಕಾಯಿತು. ಒಳ್ಳೆಯ ಕಂಪನಿಯೊಂದರಲ್ಲಿ ಸಿಕ್ಕ ಕೈತುಂಬ ಸಂಪಾದಿಸುವ ಕೆಲಸವನ್ನು ಬಿಟ್ಟು ಗಂಡನ ಮನೆಯಲ್ಲಿ ಸೆಗಣಿ ಬಳೆದು ಗಂಜಲು ಎತ್ತುವಂತಾಯಿತು. ಮಲೆನಾಡಿನ ಸೆರಗಿನಲ್ಲಿ ಅಪ್ಪ-ಅಮ್ಮನ ಮುದ್ದಿನ ಮಗಳಾಗಿ ಬೆಳೆದವಳಿಗೆ ಬಿರುಬಿಸಿಗೆ ಮೈಯೊಡ್ಡಿ ಕಳೆ ಕೀಳುವುದೇ ಖಾಯಂ ಆಯಿತು. ಕಲ್ಲು-ಮುಳ್ಳಿನ ಹಾದಿ ತುಳಿದು ಸೂರ್ಯ ಉದಯಸುವ ಮುನ್ನ ಹುಲ್ಲು ತಂದು ಹಾಕುವುದೇ ಈಕೆಗೆ ನಿತ್ಯ ಕಾಯಕವಾಯಿತು.
ಅಂದುಕೊಂಡಿದ್ದೇ ಒಂದು ಆದರೆ, ಆಗಿದ್ದೇ ಮತ್ತೊಂದು. ಕ್ರೂರ ಪರಿಸ್ಥಿತಿಗೆ ಎದೆಗೊಟ್ಟು ಜೀವನದಲ್ಲಿ ಎದುರಾದ ಸವಾಲುಗಳನ್ನೇ ತನ್ನ ಸಾಧನೆಯ ಒಂದೊಂದು ಮೆಟ್ಟಿಲುಗಳನ್ನಾಗಿಸಿಕೊಂಡು ಮುಂದೆ ಮುಗಿಲೆತ್ತರಕ್ಕೆ ಬೆಳೆದು ನಿಂತ ಗಟ್ಟಿಗಿತ್ತಿ ಮಹಿಳೆಯೇ ಈ ಕವಿತಾ ಮಿಶ್ರಾ.
ಅನಿರೀಕ್ಷಿತವೋ, ಆಕಸ್ಮಿಕವೋ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ 'ಕವಿತಾಳ' ಎಂಬ ಒಂದು ಸಣ್ಣಹಳ್ಳಿಗೆ ಬಂದು ಈಕೆ ಮಣ್ಣನ್ನೇ ನಂಬಿ ಅದೇ ಮಣ್ಣನ್ನು ಕಣ್ಣಿಗೊತ್ತಿಕೊಂಡಾಕೆ. ಮನಸ್ಸು ಮಾಡಿದರೆ ಕೃಷಿ ಕ್ಷೇತ್ರದಲ್ಲೂ ರೈತರು ಕೋಟಿ ಕೋಟಿ ಸಂಪಾದಿಸಬಹುದು ಎಂಬುದನ್ನು ಸ್ವತ: ತೋರಿಸಿಕೊಟ್ಟಾಕೆ. ತನ್ನ ಬದುಕಿನಲ್ಲಿ ಉಂಟಾದ ಹಠಾತ್ ತಿರುವಿನಿಂದ ಸಾವರಿಸಿಕೊಂಡು ಸಾಧಿಸಿ ತೋರಿಸಿದ ಸಾಹಸಿಯೂ ಹೌದು.
ಬೇಸಾಯವೇ ಗೊತ್ತಿಲ್ಲದವಳನ್ನು ಕರೆದುಕೊಂಡು ಹೋಗಿ ಕಲ್ಲು ಭೂಮಿಯೊಳಗೆ ಬಿಟ್ಟಾಗ ಕುಸಿದುಹೋಗುತ್ತಾಳೆ. ಪಾಲಿಗೆ ಬಂದದ್ದು ಪಂಚಾಮೃತವೆಂದುಕೊಂಡು ಬೇರೆ ದಾರಿಯಿಲ್ಲದೆ ಗಂಡನ ಮನೆಯ ಆ ಕಲ್ಲು ಭೂಮಿಯನ್ನೇ ಕೈಯಾರೆ ಹದಗೊಳಿಸಿ ಕೃಷಿಗೆ ತೊಡಗುತ್ತಾಳೆ. ಆದರೆ, ಮೊದಲ ಚುಂಬನ ದಂತಭಗ್ನವೆಂಬಂತೆ ಜಮೀನು ನೀರಾವರಿ ಮಾಡಲೆಂದು ತೋಡಿಸಿದ 6 ಕೊಳವೆಬಾವಿಗಳು ವಿಫಲವಾಗುತ್ತವೆ. ಸಾಲಸೋಲ ಮಾಡಿ ಮತ್ತೆ ಆರು ಬೋರ್ವೆಲ್ಗಳನ್ನು ತೋಡಿಸಲಾಗುತ್ತದೆ. ಊಹುಂ, ಮುನಿಸಿಕೊಂಡಂತಿದ್ದ ಗಂಗೆಯ ಕೃಪೆಯಾಗದೇ ಕೈಯಲಿದ್ದ ಹಣವನ್ನು ಕಳೆದುಕೊಂಡು ಕುಟುಂಬವೇ ಕಂಗಾಲು. ಅತ್ತ ಅತ್ತೆ-ಮಾವಂದಿರ ಬೈಗುಳ. ಸಾಲದ್ದಕ್ಕೆ ಅವರಿವರಿಂದಲೂ ಮೂದಲಿಕೆ. ಇನ್ನೇನು ಮಾಡಬೇಕೆಂದು ತೋಚದಾಗಿ ಹಣೆ ಮೇಲೆ ಕೈಹೊತ್ತು ಕುಳಿತಿರಬೇಕಾದರೆ, ಧೈರ್ಯ ಮಾಡಿದ ಕವಿತಾ ತನ್ನ ಕೈಯಲ್ಲಿದ್ದ ಹಾಗೂ ತವರು ಮನೆಯವರು ಕೊಟ್ಟ ಬಂಗಾರದ ಬಳೆಗಳನ್ನೇ ಮಾರಿ ಬಂದ ಹಣದಿಂದ ಮರಳಿ ಯತ್ನವ ಮಾಡು ಎಂಬಂತೆ ಮತ್ತೊಂದು ಕೊಳವೆಬಾವಿಯನ್ನು ಕೊರೆಯಿಸುತ್ತಾರೆ. ಈ ಬಾರಿ ನೆಲದಿಂದ ನೀರು ಚಿಮ್ಮುತ್ತದೆ. ಹೊಲವೆಲ್ಲ ಹಸಿರಾಗುತ್ತದೆ. ಆದರೆ, ಕವಿತಾಳ ಕಷ್ಟ ಇಲ್ಲಿಗೇ ಮುಗಿಯುವದಿಲ್ಲ. ಇತ್ತ ತೋಟಗಾರಿಕೆ ಮಾಡಿ ಫಸಲು ಬೆಳೆದರೂ ಅತ್ತ ಸೂಕ್ತ ಬೆಲೆ ಬಾರದೆ ಲಕ್ಷ ಲಕ್ಷ ಹಣ ಕಳೆದುಕೊಳ್ಳಬೇಕಾಯಿತು. ಹೀಗೆ ಆರಂಭದ ದಿನಗಳಲ್ಲಿ ಇದು ಪುನರಾವರ್ತನೆಯಾದಾಗ ಆತ್ಮವಿಶ್ವಾಸವೇ ಕುಗ್ಗಿ ಖಿನ್ನತೆಗೊಳಗಾದ ಕವಿತಾ ಆತ್ಮಹತ್ಯೆಗೂ ಯತ್ನಿಸುತ್ತಾರೆ. ಈ ವೇಳೆ ಇವರನ್ನು ಕಾಪಾಡಿದವರೇ ಕೈಹಿಡಿದ ಪತಿ. ತದನಂತರ ನಡೆದದ್ದೆಲ್ಲ ಪವಾಡವೆಂಬಂತೆ. ಏಕ ಬೆಳೆ ಪದ್ಧತಿಯನ್ನು ಕೈಬಿಟ್ಟು ಇರುವ 8 ಎಕರೆ 10 ಗುಂಟೆ ಜಮೀನಿನಲ್ಲಿ ತೋಟಗಾರಿಕೆ ಬೆಳೆಯಲ್ಲಿ ಅರಣ್ಯ ಕೃಷಿ ಅಳವಡಿಸಿಕೊಂಡು ವಿವಿಧ ಬೆಳೆಗಳಿಗೆ ಮೊರೆ ಹೋದ ಪರಿಣಾಮ ನಿರೀಕ್ಷೆಗೂ ಮೀರಿದ ಫಲಿತಾಂಶ. ಇದರಿಂದ ಪ್ರತಿಯೊಂದು ಋತುವಿನಲ್ಲೂ ಕವಿತಾ ಅವರಿಗೆ ಆದಾಯ ಬರಲಾರಂಭಿಸುತ್ತದೆ. ಬಂದ ಫಸಲು ದೇಶದ ನಾನಾ ರಾಜ್ಯಗಳು ಸೇರಿದಂತೆ ವಿದೇಶಕ್ಕೂ ರಫ್ತಾಗುವಂತಾಗುತ್ತದೆ. ಈ ಮೂಲಕ ಕವಿತಾ ಮಿಶ್ರಾ ಹಲವರಿಗೆ ಅನ್ನದ ದಾರಿ ಮಾಡಿಕೊಟ್ಟ ಅನ್ನದಾತೆ.
ಒಂದು ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೇವಲ ನೌಕರರಾಗಬೇಕಾಗಿದ್ದ ಇವರು ಎಂದು ಅನೇಕರಿಗೆ ನೌಕರಿ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ... ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ನೌಕರಿ ಕಷ್ಟ... ಮಾಡುವ ಕೆಲಸವನ್ನು ಕಾಯಕವೇ ಕೈಲಾಸ ವೆಂದು ಅಪ್ಪಿಕೊಂಡು ಮಾಡಿದಾಗ ಸಾಧನೆ ಸಾಧ್ಯವಾಗುತ್ತದೆ..
ಸಂಗ್ರಹ:ಶಂಕರಗೌಡ ಬಸಾಪೂರ
.jpeg)