ಕಥೆ-918
ಬೆಳಕಿನ ದೀಪಾವಳಿ ವೇಳೆ ಕತ್ತಲಾಗದಿರಲಿ ಬದುಕು
https://basapurs.blogspot.com/
ಪಟಾಕಿ ಸಿಡಿಸಿದರೆ ಅದು ದೀಪಾವಳಿ ಹಬ್ಬ ಎನ್ನುವಷ್ಟರ ಮಟ್ಟಿಗೆ ಇಂದು ಜನರ ಮನಃಸ್ಥಿತಿ ಇದೆ. ಈ ಖುಷಿಯ ಹೊರತಾಗಿ ಆರೋಗ್ಯ ಸಮಸ್ಯೆಯತ್ತ ಯೋಚಿಸಿದರೆ ಪಟಾಕಿಯಿಂದ ಆರೋಗ್ಯದ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎಂಬುದು ಅರಿವಾಗುತ್ತದೆ.
ಪ್ರತಿ ವರ್ಷ ಭಾರತದಲ್ಲಿ ಸುಮಾರು ಒಂದು ಲಕ್ಷ ಜನ ಪಟಾಕಿ ಹೊಡೆಯೋದ್ರಿಂದ injury(ಗಾಯಗೊಳ್ಳುತ್ತಾರೆ) ಇದರಲ್ಲಿ ಸುಮಾರು 15 ಸಾವಿರ ಜನ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.. ಇದರಲ್ಲಿ ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುವವರ ನಿದರ್ಶನಗಳು ಸಾಕಷ್ಟಿವೆ...
ದೀಪಾವಳಿ ಸಮಯದಲ್ಲಿ ವಾಯುಮಾಲಿನ್ಯದ ಮಟ್ಟ ಶೇ.10- 15ರಷ್ಟು ಹಾಗೂ ಶಬ್ದಮಾಲಿನ್ಯದ ಮಟ್ಟ ಶೇ.60ರಷ್ಟು ಹೆಚ್ಚಾಗುತ್ತದೆ ಪಟಾಕಿಯ ದೊಡ್ಡ ಶಬ್ದವು ಕಿವಿ ನೋವು, ತಾತ್ಕಾಲಿಕ ಶ್ರವಣ ದೋಷ ಮತ್ತು ಶಾಶ್ವತ ಕಿವುಡುತನದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಪಟಾಕಿ ಸಿಡಿಸುವುದರಿಂದ ಹಣ ವ್ಯಯ, ಪರಿಸರ ಮಾಲಿನ್ಯ ಜತೆಗೆ ಎಚ್ಚರ ತಪ್ಪಿದರೆ ದೇಹಕ್ಕೆ, ಜೀವಕ್ಕೆ ಕುತ್ತು ಬರುವುದಂತು ಖಚಿತ.. ಆರೋಗ್ಯ ತಜ್ಞರ ಪ್ರಕಾರ, 85 ಡೆಸಿಬಲ್ಗಿಂತ ಹೆಚ್ಚಿನ ಶಬ್ದವು ಚಿಕ್ಕ ಮಕ್ಕಳ ಕಿವಿಗೆ ಹಾನಿಕಾರಕವಾಗಿದೆ. ಆದರೆ ಪಟಾಕಿಗಳಿಂದ ಹೊರಸೂಸುವ ಶಬ್ದದ ಮಟ್ಟವು 125 ರಿಂದ 140 ಡೆಸಿಬಲ್ಗಳ ನಡುವೆ ಇರುತ್ತದೆ. ಹಾಗಾಗಿ ಶಬ್ಧ ರಹಿತ ಪಟಾಕಿ ಸಿಡಿಸುವುದು ಉತ್ತಮ. ಈ ರೀತಿಯ ಪಟಾಕಿ ಗಾಯಗಳಿಗೆ ಒಳಗಾದವರಲ್ಲಿ ಹೆಚ್ಚಿನವರು ಖುದ್ದು ಪಟಾಕಿ ಹೊಡೆಯುವವರಲ್ಲ. ಬದಲಾಗಿ, ಪಟಾಕಿ ಹಚ್ಚುವುದನ್ನು ನೋಡಲು ನಿಂತವರು, ಹಾದಿಯಲ್ಲಿ ಹೋಗುವವರು, ವಾಹನ ಚಾಲನೆ ಮಾಡುವವರು.
ಪಟಾಕಿ ಸಿಡಿಸುವ ಹೊಗೆಯಲ್ಲಿ ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮತ್ತು ನೈಟ್ರಸ್ ಆಕ್ಸೈಡ್ ನಂತಹ ಹಾನಿಕಾರಕ ರಾಸಾಯನಿಕಗಳಿವೆ.
ದೀಪಾವಳಿಯ ಮೋಜಿನ ಭಾಗವೆಂದರೆ ಪಟಾಕಿಗಳು. ಅನೇಕರು ತಮ್ಮ ಬಳಿ ಹಣದ ಶಕ್ತಿ ಇದೆ ಎಂದು ಪ್ರದರ್ಶಿಸಲು ದೊಡ್ಡ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸುತ್ತಾರೆ. ಕೆಲವರು ತೋರಿಕೆಗೆ ಸಿಡಿಸಿದರೆ ಮತ್ತೆ ಕೆಲವರು ನಾವೇನು ಕಡಿಮೆ ಎನ್ನುವಂತೆ ಸ್ಪರ್ಧೆಗಿಳಿದಂತೆ ಮಾಡುತ್ತಾರೆ.. ಹಬ್ಬದಲ್ಲಿ ಸಿಡಿಸುವ ಪಟಾಕಿಗಳು ಕ್ಷಣ ಮಾತ್ರ ಖುಷಿ ಕೊಡುತ್ತದೆ. ಆದರೆ, ಏನಾದರೂ ಹೆಚ್ಚು ಕಡಿಮೆ ಆದರೆ, ಬದುಕೇ ಕತ್ತಲಾಗುವ ಸಂಭವ ಹೆಚ್ಚಿದೆ. ಸರ್ಕಾರ ಮತ್ತು ನ್ಯಾಯಾಲಯ ಈ ಪಟಾಕಿಗಳನ್ನು ಬಳಕೆ ಮಾಡಬೇಡಿ ಎಂದು ಹೇಳಿದರೂ ಪಟಾಕಿ ಹೊಡೆದು ಸಂಭ್ರಮಿಸುವುದು ಮಾತ್ರ ಕಡಿಮೆಯಾಗಿಲ್ಲ. ಸರ್ಕಾರ ಪಟಾಕಿ ತಯಾರಿಕೆ ನಿಷೇಧಿಸುವಂತಾಗಬೇಕು..
ಜವಾಬ್ದಾರಿಯುತ ನಾಗರಿಕರಾಗಿ, ನಾವು ನಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕಿದೆ, ದೀಪಾವಳಿಯಲ್ಲಿ ಪಟಾಕಿ ಹೊಡೆಯಬೇಕೆಂಬ ಸಂಸ್ಕೃತಿಯಿಂದ ಹೊರಬರಬೇಕಿದೆ.. ಅದಕ್ಕೆ ಪರ್ಯಾಯ ಮಾರ್ಗ ಅನುಸರಿಸುವ ಪ್ರಯತ್ನ ಆಗಬೇಕಿದೆ...
ದೀಪಾವಳಿಯ ಒಂದು ಕ್ಷಣದ ಖುಷಿಗೆ ಕತ್ತಲಾಗದಿರಲಿ ಬದುಕು..ಪಟಾಕಿಗೆ ಕಿಡಿ ಹೊತ್ತಿಸುವ ಮುನ್ನ ತುಸು ಯೋಚಿಸಿ....
-ಶಂಕರಗೌಡ ಬಸಾಪೂರ
