ಕಥೆ-920
ವೀರಮಾತೆಯರ ಮುಕುಟ ಮಣಿ ಕಿತ್ತೂರು ರಾಣಿ ಚನ್ನಮ್ಮ.
(ನಿಮಗೇಕೆ ಕೊಡಬೇಕು ಕಪ್ಪ?)
ರಾಣಿ ಚೆನ್ನಮ್ಮ ಎಂದಾಕ್ಷಣ ಥಟ್ ಅಂತಾ ನಮ್ಮೆಲ್ಲರ ಕಣ್ಮುಂದೆ ಬರುವುದೇ ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ಸಿನಿಮಾದಲ್ಲಿ ಹಿರಿಯ ನಟಿ ಬಿ ಸರೋಜಾ ದೇವಿ ಅವರು ಬ್ರಿಟೀಷರ ಅಧಿಕಾರಿ ಥ್ಯಾಕರೆ ಅವರು ಕಪ್ಪ ಕೇಳಲು ಬಂದಾಗ, ನೀವೇನು ಈ ನೆಲವನ್ನು ಉತ್ತಿರೇ? ಬಿತ್ತಿರೇ? ಬೆಳೆದರೇ? ನಿಮಗೇಕೆ ಕೊಡಬೇಕು ಕಪ್ಪಾ? ನಿಮಗೇಕೆ ಕೊಡಬೇಕು ಕಪ್ಪಾ? ಎಂದು ಅಬ್ಬಿರಿದು ಬಿಬ್ಬಿರಿದ ಸಂಭಾಷಣೆಯೇ ನಮ್ಮ ಕಿವಿಗೆ ಅಪ್ಪಳಿಸುವುದಲ್ಲದೇ, ಅಂತಿಮವಾಗಿ ಆ ಯುದ್ಧದಲ್ಲಿ ಬ್ರಿಟಿಷ್ ಅಧಿಕಾರಿ ಥ್ಯಾಕರೆವನ್ನು ಸೋಲಿಸಿದ್ದನ್ನು ನೋಡಿ ಹೆಮ್ಮೆ ಪಟ್ಟಿದ್ದೇವೆ. ಅಂತಹ ಸಾಹಸಿ ಮತ್ತು ಪ್ರಾತಃಸ್ಮರಣಿಯ ವೀರನಾರಿಯ ಜಯಂತಿಯಂದು ಆಕೆಯ ಯಶೋಗಾಥೆಯನ್ನು ಮೆಲುಕು ಹಾಕುವ ಮೂಲಕ ಆಕೆಗೆ ನಮನಗಳನ್ನು ಸಲ್ಲಿಸೋಣ.
ಬ್ರಿಟಿಷ್ ಏಜೆಂಟ್ ಆಗಿದ್ದ ಥ್ಯಾಕರೆ ಕಿತ್ತೂರಿನ ರಾಣಿ ವಿಷಯವಾಗಿ ಬ್ರಿಟಿಷರ ತಲೆಯನ್ನೂ ಕೆಡಿಸುತ್ತಾನೆ. ಬ್ರಿಟಿಷರು ಕಿತ್ತೂರನ್ನು ಕಬಳಿಸಲು ಮುಂದಾಗುತ್ತಾರೆ. ಕಿತ್ತೂರಿನ ಅರಮನೆಯ ಭಂಡಾರಕ್ಕೆ ಬ್ರಿಟಿಷರು ಮುದ್ರೆ ಹಾಕುತ್ತಾರೆ. ರಾಜಭಂಡಾರ ಕಾಯಲಿಕ್ಕೆ ಬ್ರಿಟಿಷ್ ನೌಕಕರು ನೇಮಕಗೊಳ್ಳುತ್ತಾರೆ. ಇದು ರಾಣಿ ಚೆನ್ನಮ್ಮನವರನ್ನು ಕೆರಳಿಸುತ್ತದೆ. ಆ ಸಮಯದಲ್ಲಿ ಇಡೀ ಕಿತ್ತೂರು ಸಾಮ್ರಾಜ್ಯದ ಜನತೆ ರಾಣಿ ಚೆನ್ನಮ್ಮನವರ ಪರ ನಿಲ್ಲುತ್ತದೆ. ಒಗ್ಗಟ್ಟು ಪ್ರದರ್ಶಿಸುತ್ತದೆ. ಆ ಒಗ್ಗಟ್ಟನ್ನು ಮುರಿಯಲು ಥ್ಯಾಕರೆ ಇನ್ನಿಲ್ಲದ ಕುತಂತ್ರ ಹೂಡುತ್ತಾನೆ. ಆದ್ರೆ ಸಂಘಟನಾ ಚತುರೆಯಾಗಿದ್ದ ಚೆನ್ನಮ್ಮ ಥ್ಯಾಕರೆಯ ಎಲ್ಲಾ ಕುತಂತ್ರಗಳನ್ನೂ ಬುಡಮೇಲು ಮಾಡುತ್ತಾರೆ. ಥ್ಯಾಕರೆ ವಿರುದ್ಧ ಸೈನ್ಯವನ್ನು ಸಂಘಟಿಸುತ್ತಾರೆ. ಕೋಟೆಕೊತ್ತಲುಗಳನ್ನು ಭದ್ರಗೊಳಿಸುತ್ತಾರೆ. ಇದರ ನಡುವೆಯೇ ಯುದ್ಧ ಬೇಡ ಅನ್ನುವ ಸಂಧಾನ ಸೂತ್ರವನ್ನೂ ಜಾರಿಯಲ್ಲಿಡುತ್ತಾರೆ. ಆದ್ರೆ ಅದು ಫಲಿಸಲ್ಲ.
ಕೊನೆಗೆ ಚೆನ್ನಮ್ಮ ಬೇರೆ ದಾರಿಯಿಲ್ಲದೆ ಬ್ರಿಟಿಷರು ಮತ್ತು ಥ್ಯಾಕರೆಯ ಹುಟ್ಟಡಗಿಸಲು ಸಿದ್ಧಳಾಗುತ್ತಾರೆ. ಅದು 1824 ನೇ ಇಸವಿ, ಅಕ್ಟೋಬರ್ 22. ಮಹಾನವಮಿ ದಿನ. ಬ್ರಿಟಿಷ್ ಸೈನ್ಯ ಕಿತ್ತೂರಿನ ಮೇಲೆ ದಾಳಿ ಮಾಡುತ್ತದೆ. ಸ್ವತಃ ಚೆನ್ನಮ್ಮ ಕುದುರೆ ಏರಿ ಖಡ್ಗ ಹಿಡಿದು ವೀರಾವೇಶದಿಂದ ರಣರಂಗಕ್ಕೆ ಧುಮುಕುತ್ತಾರೆ. ಚೆನ್ನಮ್ಮನವರ ಧರ್ಮದ ಕತ್ತಿ, ಬ್ರೀಟಿಷ್ ಸೈನಿಕರ ಎದೆಸೀಳುತ್ತದೆ. ಈ ತಿರುಗೇಟಿಗೆ ವೈರಿ ಪಡೆ ಪತರುಗುಟ್ಟುತ್ತದೆ. ಥ್ಯಾಕರೆ ಇಪ್ಪತ್ತು ನಿಮಿಷ ಕೊಡುತ್ತೇನೆ. ಕೋಟೆ ಬಾಗಿಲು ತೆರೆಯದಿದ್ದರೆ ನಾವೇ ಬಾಗಿಲು ಒಡೆದು ಒಳ ನುಗ್ಗುತ್ತೇವೆ ಅಂತ ಹೂಂಕರಿಸುತ್ತಾನೆ.
ಥ್ಯಾಕರೆಯ ಹೂಂಕಾರ ಕಿತ್ತೂರಿನ ಸ್ವಾಭಿಮಾನವನ್ನು ಕೆರಳಿಸುತ್ತದೆ. ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಮಹಾಮುಖಂಡ ಗುರುಸಿದ್ದಪ್ಪ ಎಲ್ಲರೂ ಸೇರಿ ಹರಹರ ಮಹಾದೇವ್ ಎಂದು ಮುಗಿಲು ಮುಟ್ಟುವಂತೆ ಕೂಗುತ್ತಾ ಬ್ರಿಟಿಷ್ ಸೈನ್ಯದ ಮೇಲೆ ನುಗ್ಗುತ್ತಾರೆ. ಅದೊಂದು ಮಿಂಚಿನ ದಾಳಿ. ವೀರರಾಣಿ ಚೆನ್ನಮ್ಮನ ಯುದ್ಧಾಕ್ರೋಷ ನೋಡಿದ ಥ್ಯಾಕರೆ ಗಾಬರಿ ಬೀಳುತ್ತಾನೆ. ಚೆನ್ನಮ್ಮನ ಹೊಡೆತಕ್ಕೆ ಬ್ರಿಟಿಷರು ಕಂಗಾಲಾಗುತ್ತಾರೆ. ಚೆನ್ನಮ್ಮನಿಗೆ ಥ್ಯಾಕರೆಯನ್ನು ಸೆರೆ ಹಿಡಿದು ಶಿಕ್ಷಿಸಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಅಮಟೂರ ಬಾಳಪ್ಪ ಹಾರಿಸಿದ ಗುಂಡಿಗೆ ಥ್ಯಾಕರೆ ಹತನಾಗುತ್ತಾನೆ. ಬ್ರಿಟಿಷ್ ಸೈನ್ಯ ಮಣ್ಣು ಮುಕ್ಕುತ್ತದೆ.
ಒಳಗಿನವರ ಸಂಚು ಛಿದ್ರಮಾಡಿತು. ಚೆನ್ನಮ್ಮನವರು ಸೆರೆಯಾದರು. ಐದು ವರ್ಷಗಳ ಸೆರೆವಾಸದಲ್ಲಿದ್ದಾಗಲೇ ಫೆಬ್ರುವರಿ 21,1829 ರಲ್ಲಿ ಬೈಲಹೊಂಗಲದಲ್ಲಿ ಲಿಂಗೈಕ್ಯರಾದರು,
ಚೆನ್ನಮ್ಮನವರ ಹೋರಾಟ ಎಲ್ಲರಿಗೂ ಶಾಶ್ವತ ಪ್ರೇರಣೆ..
ಅವರು ಮಾಡಿದ ಹೋರಾಟ ಜಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ಹಲವು ಸಿಂಹಿಣಿಯರಿಗೆ ಮಾದರಿಯಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬಿತು..
-ಚನ್ನಮ್ಮ ಜಯಂತಿ ಶುಭಾಶಯಗಳು