ಕಥೆ-939
ಭರವಸೆಯೇ ಬದುಕು
https://basapurs.blogspot.com/
ಬದುಕು ಎಲ್ಲವನ್ನೂ ಸಲೀಸಾಗಿ ಕಲಿಸಿ ಬಿಡುತ್ತದೆ. ಬಲು ಕಷ್ಟ ಎನಿಸುವುದನ್ನು ಕೂಡ. ಅದು ನೀಡುವ ಯಾವ ಟಾಸ್ಕನಿಂದ ನಾವು ಬಚಾವಾಗಲು ಸಾಧ್ಯವೇ ಇಲ್ಲ ಎನ್ನುವಂತೆ, ಹೌದು ಬದುಕು ನೀಡುವ ಟಾಸ್ಕಗಳಿಂದ ಬಚಾವಾಗುವ ಮಾತೇ ಇಲ್ಲ. ಬಂದಂತೆ ಸ್ವೀಕರಿಸಬೇಕಷ್ಟೇ. ಒಳಿತು ಕೆಡಕುಗಳ ನಂತರವೂ ತಾಳ್ಮೆ ಹಾಗೂ ಪ್ರಬುದ್ದತೆಯಿಂದ ಎಚ್ಚರದ ಹೆಜ್ಜೆ ಇಟ್ಟವರು ಮಾತ್ರ ಇಲ್ಲಿ ಉಳಿಯುತ್ತಾರೆ, ಇಲ್ಲದಿದ್ದರೆ ಅಳಿಯುತ್ತಾರೆ. ಅದಕ್ಕೆ ಸಾವಿರ ನೆಪಗಳನ್ನು ನೀಡಿ, ಈ ಬದುಕಿನ ಓಟವನ್ನು ಅದು ಬಂದಂತೆ ಎದುರಿಸಲಾಗದೇ ಪಲಾಯನಗೈಯುತ್ತಾರೆ.
ಹುಟ್ಟಿರುವುದು ಸುಮ್ಮನೆ ಬಿಟ್ಟು ಹೋಗಲಲ್ಲ ಎನ್ನುವುದು ನಮ್ಮನ್ನು ಕಾಡಬೇಕು, ಅದು ಕಾಡಿದಷ್ಟು ಸಮಸ್ಯೆಗಳು ಹಾಗೂ ಸವಾಲುಗಳ ನಡುವೆಯೇ ಈ ಬದುಕಿನ ಮೆರಗು ಹೆಚ್ಚಿಸಿ ಸಾರ್ಥಕ ಭಾವ ಮೂಡಿಸುವ ಪ್ರಯತ್ನಗಳನ್ನು ಬಿಡದೇ ಅರಂಭಿಸಲೇಬೇಕು. ಎದುರಿಸುವವನ ಬತ್ತದ ಆಶಾವಾದದ ರಭಸಕ್ಕೆ ಮಾತ್ರ ಈ ಬದುಕು ನೀಡುವ ಸವಾಲುಗಳನ್ನು ಹಿಮ್ಮೆಟ್ಟಿಸುವ ತಾಕತ್ತಿರುವುದು. ಸಂದಿಗ್ಧತೆಗಳು ಎದುರಾದಾಗ ನಮ್ಮೊಳಗಿನ ಗಟ್ಟಿತನ ಇನ್ನಷ್ಟು ಬಲವಾಗಬೇಕು, ಅದರ ಬಲದಿಂದಲೇ ಮತ್ತೇ ಮೊದಲಿನಂತೆ ಎದ್ದು ನಿಲ್ಲಬೇಕು. ನಮ್ಮ ಬದುಕಿನ ನೆಮ್ಮದಿಯನ್ನು ಇತರರು ನಿರ್ಧರಿಸಲಾಗದು, ಅದನ್ನು ನಾವೇ ನಮ್ಮ ಇತಿಮಿತಿಯೊಳಗೆ ನಿರ್ಧರಿಸಿಕೊಂಡರೆ ಅದರ ಆಯುಷ್ಯ ಜಾಸ್ತಿ. ನಮ್ಮೊಳಗಿನ ನಂಬಿಕೆ, ಆತ್ಮವಿಶ್ವಾಸ ಅಲುಗಾಡದಿದ್ದರೆ ಸಾಕು, ಸಾವಿರ ಸವಾಲುಗಳನ್ನು ಎದುರಿಸಿಯೂ ಮೊದಲಿನಂತೆಯೇ ಗಟ್ಟಿಯಾಗಿ ನಿಲ್ಲಬಹದು.
ನಂಬಿಕೆಯೇ ಉಸಿರು ಭರವಸೆಯೇ ಬದುಕು
ಕೃಪೆ :ನೆಟ್