ಕಥೆ-942
ಆದರ್ಶವಾಗಿ, ಸ್ಪೂರ್ತಿಯಾಗಿ ನಿಲ್ಲಬೇಕೇ ವಿನಃ ದುಡ್ಡು ಕೊಟ್ಟವರು ಹೇಳಿದಂತೆ ನರ್ತಿಸುವ ನಟನಟಿಯರಂತಲ್ಲ,
ವಿಧಿಯಾಟ ಯಾರು ಬಲ್ಲರು? ಅದು ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ಆಟ ಅಲ್ಲವೇ...
ಈಕೆಯನ್ನೇ ತಗೆದುಕೊಳ್ಳಿ, ಹೆಸರು ಪ್ರತೀಕ್ಷಾ. ಪುಣೆಯ ಬಡ ಕುಟುಂಬವೊಂದರಲ್ಲಿ ಜನಿಸಿದ ಈಕೆಗೆ ಮನೆಯ ಆರ್ಥಿಕ ಕಷ್ಟಗಳಿಂದ ಹತ್ತನೇ ತರಗತಿಯನ್ನೂ ಪೋರೈಸಲಾಗಿರಲಿಲ್ಲ. ಮನೆಯವರು ಆಕೆಯ 17 ನೇ ವಯಸ್ಸಿಗೆ ಮುಂಬೈನ ಎಸ್ ಬಿ ಐ ಬ್ಯಾಂಕಿನಲ್ಲಿ ಬುಕ್ ಬೈಂಡರ್ ಆಗಿ ಕೆಲಸ ಮಾಡುತ್ತಿದ್ದ ಸದಾಶಿವ ಕಾಡು ಎಂಬ ಹುಡುಗನೊಂದಿಗೆ ಮದುವೆ ಮಾಡಿದರು. ಗಂಡನೊಂದಿಗೆ ಮುಂಬೈಗೆ ತೆರಳಿ ಸಂಸಾರ ಹೂಡಿದಳು.
ಒಂದೂವರೆ ವರ್ಷದಲ್ಲಿ ವಿನಾಯಕ ಎಂಬ ಗಂಡು ಮಗುವೂ ಆಯಿತು. ಅನುಕೂಲ ನೋಡಿಕೊಂಡು ಊರ ದೇವರಿಗೆ ಮಗುವಿನ ಮುಡಿ ಕೊಟ್ಟು ಹರಕೆ ಸಲ್ಲಿಸಲು ಮುಂಬೈಯಿಂದ ತಮ್ಮೂರಿಗೆ ಪ್ರಯಾಣ ಹೊರಟರು. ಆದರೆ ಮಾರ್ಗಮಧ್ಯದಲ್ಲಿ ಅಪಘಾತ ನಡೆದು ಸದಾಶಿವ ಕಾಡು ಮರಣಹೊಂದಿದ. ಹೆಚ್ಚು ಓದದ, ಲೌಕಿಕ ಜ್ಞಾನವಿಲ್ಲದ ಪ್ರತೀಕ್ಷಾ ಎಂಬ ಹುಡುಗಿಯನ್ನ, ಆ ವಿಧಿ ಆಕೆಯ 20 ನೇ ವಯಸ್ಸಿಗೆ ವಿಧವೆಯನ್ನಾಗಿಸಿ ರಸ್ತೆ ಮಧ್ಯೆ ನಿಲ್ಲಿಸಿಬಿಟ್ಟಿತು.
ತಾನೊಬ್ಬಳೇ ಆಗಿದ್ದರೆ ಬದುಕು ಹೇಗೆ ಕಳೆಯುತ್ತಿತ್ತೇನೋ? ಮಡಿಲಲ್ಲೊಂದು ಮಗುವಿದೆ, ತನ್ನ ಕೈಯಲ್ಲಿ ಅದರ ಭವಿಷ್ಯವಿದೆ. ಗಂಡನೊಂದಿಗೆ ಕುಟುಂಬಕ್ಕೆ ಬರುವ ವರಮಾನವೂ ಹೋಯಿತು. ಮುಂದೆ ಹೇಗೆ?
ಯಾರದೋ ಸಲಹೆಯ ಮೇರೆಗೆ ಗಂಡನ ಉಳಿದ ಬಾಕಿ ಹಣವನ್ನು ಪಡೆಯಲು ಬ್ಯಾಂಕಿಗೆ ಬಂದವಳು ತನಗೆ ಯಾವುದಾದರೂ ಕೆಲಸ ನೀಡಲು ಸಾಧ್ಯವೇ ಎಂದು ವಿಚಾರಿಸುತ್ತಾಳೆ. ಬ್ಯಾಂಕಿನ ಕೆಲಸಕ್ಕೆ ಬೇಕಾದ ವಿದ್ಯರ್ಹತೆ ಆಕೆಗಿಲ್ಲದ ಕಾರಣ ಕಸಗುಡಿಸುವ ಕೆಲಸ ಕೊಡುತ್ತಾರೆ. ಅದೂ ಅರೆಕಾಲಿಕ. ಕಸಗುಡಿಸುವ, ಶೌಚಾಲಯ ತೊಳೆಯುವ, ಪಿಠೋಪಕರಣಗಳನ್ನು ಒರೆಸುವ 2 ತಾಸು ಕೆಲಸಕ್ಕೆ 1984-85 ರ ವೇಳೆಗೆ ಆಕೆಗೆ ದೊರೆಯುತ್ತಿದ್ದ ಸಂಬಳ ತಿಂಂಳಿಗೆ 60-65 ರೂಪಾಯಿ. ಅಷ್ಟು ಹಣ ಮನೆ ಖರ್ಚಿಗೆ ಸಾಲದ್ದರಿಂದ ಮತ್ತೊಂದೆರಡು ಮನೆ ಕಸ-ಮುಸುರೆಯಂತಹ ಕೆಲಸ ನೋಡಿಕೊಂಡಳು.
ಜೀವನೊಪಾಯದ ಚಿಂತೆ ಕಳೆದು ತನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಹೊರಟವಳು ಪ್ರತಿದಿನ ಬ್ಯಾಂಕಿನಲ್ಲಿ ನಡೆಯುವ ಕೆಲಸ, ಅಲ್ಲಿಯ ನೌಕರರನ್ನು ನೋಡುವಾಗ ಆ ಕೆಲಸ ತನ್ನಿಂದಾಗದ್ದೇನಲ್ಲ, ತಾನೂ ಏಕೆ ಪ್ರಯತ್ನಿಸಬಾರದು ಎಂಬ ಆಸೆ ಹುಟ್ಟತೊಡಗಿತು, ಅದು ಹಠವಾಯಿತು. ಅದಕ್ಕೇನು ಮಾಡಬೇಕೆಂದು ತಿಳಿದವರನ್ನು ಕೇಳತೊಡಗಿದಳು. ಅದಕ್ಕಾಗಿ ಇಂತಿಷ್ಟು ವಿದ್ಯಾರ್ಹತೆ ಬೇಕೆಂಬುದನ್ನು ತಿಳಿದುಕೊಂಡಳು..
ಬ್ಯಾಂಕಿನ ಸಿಬ್ಬಂದಿ ಮತ್ತು ಕೆಲ ಹಿತೈಷಿಗಳ ಸಲಹೆಯಂತೆ ಹತ್ತನೇ ತರಗತಿ ಪರೀಕ್ಷೆಗೆ ಸಿದ್ಧವಾದಳು. ಬಿಡುವು ಮಾಡಿಕೊಂಡು ಕಷ್ಟಪಟ್ಟು ಓದಿ ಹತ್ತನೇ ತರಗತಿ 60% ಅಂಕಗಳೊಂದಿಗೆ ಪಾಸುಮಾಡಿದಳು. ತಾನು ಮಾಡುತ್ತಿರುವ ಕೆಲಸ ಖಾಯಂ ಆಗಬೇಕಾದರೆ 12 ನೇ ತರಗತಿಯಾದರೂ ಪೋರೈಸಿರಬೇಕು ಹೀಗಾಗಿ ಸಮೀಪದ SNDT ಕಾಲೇಜಿನಲ್ಲಿ ಸಂಜೆ ತರಗತಿಗೆ ಸೇರಿ ಉತ್ತಮ ಅಂಕಗಳೊಂದಿಗೆ ಅದನ್ನೂ ಮುಗಿಸಿದವಳಿಗೆ ಇದ್ದ ಅರೆಕಾಲಿಕ ಕೆಲಸ ಖಾಯಂ ಆದಾಗ ವರ್ಣಿಸಲಾಗದಷ್ಟು ಖುಷಿಯಾಯಿತು. ತನ್ನ ಜೀವನದಲ್ಲಿ ಸ್ವಯಂ ಸಾಧಿಸಿದ ಮೊದಲ ವಿಜಯ ಅದಾಗಿತ್ತು.
ಮಗನ ಆರೈಕೆ, ಓದು, ಬ್ಯಾಂಕಿನ ಕೆಲಸದ ನಡುವೆ ಬಿಡುವು ಮಾಡಿಕೊಂಡು ಅದೇ ಸಂಜೆ ಕಾಲೇಜಿಗೆ ಸೇರಿ 1995 ರ ವೇಳೆಗೆ ಮನಶ್ಯಾಸ್ತ್ರ ವಿಭಾಗದಲ್ಲಿ ಪದವಿ ಪೋರೈಸಿದಳು. ಬ್ಯಾಂಕ್ ಆಕೆಗೆ ಕ್ಲರ್ಕ್ ಹುದ್ದೆ ನೀಡಿತು.
ಅಲ್ಲಿಂದಾಚೆಗೆ ಆಕೆ ಹಿಂತುರುಗಿ ನೋಡಿದ್ದೆ ಇಲ್ಲ. 2004 ರಲ್ಲಿ ಟ್ರೈನಿ ಆಫೀಸರ್ ಆಗಿ ನೇಮಕವಾದಳು, ಆ ನಂತರ ಸಿಜಿಎಂ ಆಗಿ, ಕೊನೆಗೆ ಎಜಿಎಂ ಹುದ್ದೆಗೆ ಬಡ್ತಿ ದೊರೆಯಿತು. ಯಾವ ಬ್ಯಾಂಕಿನಲ್ಲಿ ಕಸಗುಡಿಸುವ ಕೆಲಸಕ್ಕೆ ಅಂಗಲಾಚಿ ನಿಂತಿದ್ದಳೋ ಅದೇ ಬ್ಯಾಂಕಿನ ಎಜಿಎಂ ಆಗಿ ಆಡಳಿತವಹಿಸಿಕೊಂಡಳು.
ನಿಜವಾಗಿಶಯೂ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿ, ಸ್ಪೂರ್ತಿಯಾಗಿ ನಿಲ್ಲಬೇಕಾದದ್ದು ದುಡ್ಡು ಕೊಟ್ಟವರು ಹೇಳಿದಂತೆ ನರ್ತಿಸುವ ನಟನಟಿಯರಲ್ಲ, ವಿಧಿಗೆ ಸೆಡ್ಡು ಹೊಡೆದು ನಿಂತು ಬದುಕು ಕಟ್ಟಿಕೊಂಡ ಪ್ರತೀಕ್ಷಾ ತೊಂಡ್ವಾಲ್ಕರ್ ಅಂತವರು..
-- ಅಮರೇಶ ದೇಸಾಯಿ
.jpg)