ಕಥೆ-949
ಸದಾ ಸಜ್ಜನರ ಸಂಗದೊಂದಿಗೆ ಹರಿಯಬೇಕು.
https://basapurs.blogspot.com/
ಅದೊಂದು ತೆರೆದ ಗಟಾರ. ಅದರಲ್ಲಿ ಕಸ-ಕಡ್ಡಿ, ಹರಿದ ಬಟ್ಟೆ-ಬರೆ, ಕಾಗದ ಚೂರು, ಕೊಳೆತ ಎಲೆ-ಕಾಯಿ, ಸತ್ತ ಪ್ರಾಣಿಗಳ ದೇಹ ಒಂದೇ ಎರಡೇ ಬೇಕಾದ ಬೇಡಾದ ಅಸಂಖ್ಯ ವಸ್ತುಗಳು ಅದರಲ್ಲಿ ಮುಳುಗೇಳುತ್ತಿವೆ.
ದುರ್ಗಂಧ ಸುತ್ತಮುತ್ತ ಪಸರಿಸಿದೆ. ನೋಡಬಾರದ ದುರವಸ್ಥೆ.
ಒಬ್ಬ ದಾರಿಕಾರ ಕುತೂಹಲಕ್ಕೆಂದು ಆ ತೆರೆದ ಗಟಾರವನ್ನು ದಿಟ್ಟಿಸಿ ನೋಡಿದ. ನೋಡಿ ಸುಮ್ಮನಿರದೆ! 'ಏನೀ ಅಸಹ್ಯ ಗಟಾರ!' ಎಂದ
ತಕ್ಷಣವೇ ಗಟಾರ-“ಏಕಯ್ಯಾ ಹಾಗೆನ್ನುವಿ?” ಎಂದಿತು. ದಾರಿಕಾರ-
“ಇನ್ನೇನು ನಿನ್ನ ನೋಡಿ ಎಂಥ ಸುಂದರವೀ ಗಟಾರ ಎನ್ನಲೇ?” ಗಟಾರ-“ನೀನು ಏನಾದರೂ ಎನ್ನು. ಆದರೆ ನನ್ನೊಡನೆ ಒಂದಷ್ಟು ಮುನ್ನಡೆದು ಬಾ ಸಾಕು!” “ಹೀಗೋ' ಎಂದವನೆ ದಾರಿಕಾರ ನಾಲೈದು ಹೆಜ್ಜೆ ಅದರೊಂದಿಗೆ, ಅದರ ಬದಿಗೆ ಮುನ್ನಡೆದ, ಗಟಾರ ನಿಧಾನವಾಗಿ
ಹರಿಯತೊಡಗಿತು. ಸ್ವಲ್ಪ ದೂರ ಸಾಗುವುದೇ ತಡ ಮಿತ್ರ ಗಟಾರಗಳೆಲ್ಲ ಅದರೊಂದಿಗೆ, ಸೇರಿಕೊಂಡವು. ಇದೀಗ ಅದರ ಗತಿ ಹೆಚ್ಚಿತು. ಊರ-ಕೇರಿಯ ಹೊರಬರುವುದೇ ತಡ ಪರಸ್ಥಳದಿಂದ ಆಗಮಿಸಿದ ಇನ್ನಷ್ಟು ಮಿತ್ರರು ಒಂದಾದರು. ನೋಡು ನೋಡುವುದರಲ್ಲಿ ಅದು ಹಳ್ಳ-ಕೊಳ್ಳವಾಗಿ
ಹರಿದು ಮೈಲೆರಡು ಮೈಲು ದಾಟುವುದರಲ್ಲಿ ಅದೇ ಗಟಾರ ತಿಳಿನೀರಿನ ಹೊಳೆಯಂತಾಗಿತ್ತು!! ಹೇಗೋ ಏನೋ ಅಲ್ಲಿಯವರೆಗೆ ಸಾಗಿ ಬಂದಿದ್ದ ದಾರಿಕಾರನಿಗೆ ಅದೇ ಗಟಾರ ಕೇಳಿತು 'ಈಗೇನೆನ್ನುವೀ?' ದಾರಿಕಾರ ಹೇಳಿದ “ಈಗ ನೀನು ಅಸಹ್ಯವಲ್ಲ; ಸ್ವಚ್ಛ-ಸುಂದರ!!” “ಮಿತ್ರಾ ಇದೆಲ್ಲಾ ಹರಿಯುವಿಕೆಯ ಮಹಿಮೆ” ಎಂದು ಅದು ಮತ್ತೆ ಹರಿಯತೊಡಗಿತು!
ತೆರೆದ ಗಟಾರದ ಪರಿಸ್ಥಿತಿಯೇ ಹೀಗಾದರೆ ಮುಚ್ಚಿದ ಗಟಾರದ ಪರಿಸ್ಥಿತಿ ಇನ್ನೇನು? ನಮ್ಮ ಭಾವ ಒಂದು ಮುಚ್ಚಿದ ಗಟಾರ, ಅಲ್ಲಿರುವ ಕಲ್ಮಶಗಳು ಒಂದೇ ಎರಡೇ! ಅರಿಷಡ್ವರ್ಗ, ಅಷ್ಟಮದ, ಪಂಚಕ್ಲೇಶ,
ಇತ್ಯಾದಿ. ಒಂದೂ ಕಣ್ಣಿಗೆ ಕಾಣವು, ಕೈಗೆಟಕವು. ಅವೆಲ್ಲವೂ
ಕಳೆದುಹೋಗಿ ಭಾವವು ತಿಳಿನೀರಿನ ಹೊಳೆಯಾಗಬೇಕು. ಅದಕ್ಕೆ ಒಂದೇ
ಉಪಾಯ. ಭಾವ ಜಲವು ಸದಾ ಸಜ್ಜನರ ಸಂಗದೊಂದಿಗೆ ಹರಿಯಬೇಕು. ಹರಿದು ಹಸನಾಗಬೇಕು. ಅದು ಸುವಿಕಸಿತ ಭಾವ-ಸದ್ಭಾವ !!
ಶ್ರೀ ಸಿದ್ಧೇಶ್ವರ ಸ್ವಾಮೀಜಿ