ಕಥೆ-992
ಹೊಸ ವರ್ಷದ ಆಚರಣೆಗೆ ಪಟಾಕಿಯ ಶಬ್ದಕ್ಕಿಂತ ಸಂಕಲ್ಪದ ಶಬ್ದ ಹೆಚ್ಚಾದಾಗ ಅದು ಅರ್ಥಪೂರ್ಣ...
2026 ಹೊಸ ವರ್ಷದ ಬಾಗಿಲಲ್ಲಿ ನಿಂತಾಗ, ನಿಕಟಪೂರ್ವ ವರ್ಷ 2025 ನಮ್ಮ ಮನಸ್ಸಿನಲ್ಲಿ ಅನೇಕ ನೆನಪುಗಳನ್ನು ಎಬ್ಬಿಸುತ್ತೆ. ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಗತಿಸಿದ, 2025ರಲ್ಲಿ ನಾನೇನು ಮಾಡಿದೆ? ನನ್ನ ಬದುಕಿನ ಗುರಿಗಳು ಈಡೇರುವ ಪಥದಲ್ಲಿವೆಯೇ? ಒಂದು ವರ್ಷದ ಸಾಧನೆಗಳೇನು? ವೇದನೆಗಳೇನು? ಖುಷಿ ಕೊಟ್ಟ ಕ್ಷಣಗಳು ಯಾವುವು? ನೋವು ನೀಡಿದ ಕ್ಷಣಗಳು ಯಾವುವು? ಎಂದು ಅವಲೋಕನ ಮಾಡಿದಾಗ, ನೋವಿಗಿಂತ ಖುಷಿ ನೀಡಿದ ಕ್ಷಣಗಳೇ ಹೆಚ್ಚು ಎಂದು ಹೇಳಬಹುದು.. ಸಣ್ಣ ಪುಟ್ಟ ಕಾರ್ಯಗಳಿಂದ ಹೆಮ್ಮೆ ಅನಿಸುತ್ತದೆ.. ಕೆಲವೊಂದು ಸೋಲುಗಳು ಪಾಠಗಳಾಗಿವೆ. ನಾವು ಎಲ್ಲಿ ತಪ್ಪು ಮಾಡಿದೆವು? ಎಲ್ಲಿ ಗೆದ್ದೆವು? ಯಾರು ನಮ್ಮ ಜೊತೆ ನಿಂತರು? ಯಾರು ನಮಗೆ ಪಾಠ ಕಲಿಸಿದರು?.. ಕೆಲಸ ಮಾಡಲು ಸ್ಪೂರ್ತಿ ನೀಡಿದವರು ಮತ್ತು ಅವಮಾನಿಸಿದವರು ಜೀವನದ ಬದಲಾವಣೆಗೆ ಕಾರಣರಾಗಿದ್ದಾರೆ.. ಅವಮಾನ ಮಾಡಿದವರು ಸನ್ಮಾನ ಮಾಡುವಂತೆ ಬೆಳೆಯುವುದು ಸಾಧನೆ ಅಲ್ಲವೇ?
ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಬಲಿಷ್ಠರನ್ನಾಗಿಸಲು ಬರುತ್ತವೆ. ಸಣ್ಣ ಪುಟ್ಟ ಮಾಡಿದ ಕೆಲಸಗಳು ಆತ್ಮವಿಶ್ವಾಸಕ್ಕೆ ಬೀಜಗಳಿದ್ದಂತೆ.
ಹಳೇ ತಪ್ಪು ಅನುಭವದ ಸಂಪತ್ತು. ಹೊತ್ತುಕೊಂಡು ಮುಂದಕ್ಕೆ ಸಾಗಿದಾಗಲೇ ಹೊಸ ವರ್ಷ ಸಾರ್ಥಕವಾಗುತ್ತದೆ.
ಹೊಸ ವರ್ಷ ಎಂದರೆ ಕೇವಲ ಸಂಭ್ರಮವಲ್ಲ. ಹೊಸ ಗುರಿ, ಹೊಸ ಸಂಕಲ್ಪ ಮಾಡುವ ಸಮಯ...
ಇದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಿರಂತರತೆ ಇದ್ದಾಗ ಗುರಿಗಳು ಮತ್ತು ಸಂಕಲ್ಪಗಳು ವರ್ಷಪೂರ್ತಿ ನಮ್ಮನ್ನು ಮುನ್ನಡೆಸುತ್ತವೆ.
ಹೊಸ ವರ್ಷದ ಆಚರಣೆ ಎಂದರೆ ಬರೀ ಮೋಜು ಮಸ್ತಿಯಿಂದ ಕೂಡಿರುವುದಲ್ಲ. ಆಸಕ್ತಿರಂಗದಲ್ಲಿ ಒಂದಷ್ಟು ವಿಭಿನ್ನ ಗುರಿ ಮತ್ತು ಕನಸುಗಳೊಂದಿಗೆ ಹೆಜ್ಜೆ ಇಡುವುದು ಎಂದರ್ಥ.
ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿ ಕಾಯುವುದಿಲ್ಲ. ಒಂದೊಂದು ಹೊಸ ವರ್ಷ ನಮ್ಮ ಆಯುಷ್ಯವನ್ನು ಕಡಿಮೆ ಮಾಡಿದಂತೆ. ನಾವು ಪ್ರತಿ ವರ್ಷ ಹೊಸ ವರ್ಷವನ್ನು ಹೊಸ ಚೈತನ್ಯ ಮತ್ತು ಉತ್ಸಾಹದಿಂದ ಸ್ವಾಗತಿಸೋಣ. ಆ ಸಮಯವನ್ನು ಸದ್ಬಳಕೆ ಮಾಡಿಕೊಂಡವನೇ ಸಾಧಕನಾಗುತ್ತಾನೆ.
ಈ ಹೊಸ ವರ್ಷಕ್ಕೆ ಸ್ಪಷ್ಟ ಗುರಿ, ಸಣ್ಣ ಹೆಜ್ಜೆಗಳ ಮುಖಾಂತರ ದೊಡ್ಡ ಸಾಧನೆ ನಿಮ್ಮದಾಗಲಿ.
ಪಟಾಕಿಯ ಶಬ್ದಕ್ಕಿಂತ ಸಂಕಲ್ಪದ ಶಬ್ದ
ಹೊಸ ವರ್ಷದ ಆಚರಣೆಯಾಗಬೇಕು...
ಹೊಸ ವರ್ಷದ ಶುಭಾಶಯಗಳು
-ಶಂಕರಗೌಡ ಬಸಾಪೂರ