ಕಥೆ-1043
ಹರ ಮುನಿದರೆ ಗುರು ಕಾಯುವನು..
ಗುರುಗಳಾದ ಸಮರ್ಥ ರಾಮದಾಸರಿಗೆ ಅನೇಕ ಶಿಷ್ಯರಿದ್ದರು. ಪ್ರತಿದಿನ ಒಬ್ಬ ಶಿಷ್ಯ ಮನೆ ಮನೆಗೆ ಹೋಗಿ ಭಿಕ್ಷೆ ಪಡೆದು ತರುತ್ತಿದ್ದ. ಒಂದು ದಿನ ಭಿಕ್ಷೆಗೆ ಹೋದಾಗ ಒಂದು ಮನೆಯ ಮುಂದೆ “ಸಮರ್ಥ ಗುರೂಜಿ ಕೀ ಜೈ, ಭವತಿ ಭಿಕ್ಷಾಂದೇಹಿ” ಎಂದು ಕೂಗಿದ. ಸ್ವಲ್ಪ ಹೊತ್ತಿಗೆ ದಡ್ಡ್ ಅಂತ ಬಾಗಿಲು ತೆಗೆದು ಒಬ್ಬ ವಿಚಿತ್ರ ಹಾಗೂ ಭಯಂಕರವಾದ ಮಾಂತ್ರಿಕ ವ್ಯಕ್ತಿ ಹೊರಗೆ ಬಂದ. ಏಯ್ ನನ್ನ ಮನೆ ಮುಂದೆ ನಿಂತು, ಬೇರೆಯವರ ಗುಣಗಾನ ಮಾಡುವೆಯಾ? ನಿನಗೆಷ್ಟು ಧೈರ್ಯ ಯಾರು ಆ ನಿನ್ನ ‘ಸಮರ್ಥ’ ಬೊಗಳೊ ಎಂದ. ಶಿಷ್ಯ ಹೇಳಿದ ನನ್ನ ಗುರು “ಸಮರ್ಥ ರಾಮದಾಸರು” ಅವರೇ ಸರ್ವ ಸಮರ್ಥರು ಎಂದು ಜೋರಾಗಿ ಧೈರ್ಯದಿಂದ ಹೇಳಿದ. ಇದನ್ನು ಕೇಳಿದ ಮಾಂತ್ರಿಕ ಸಿಟ್ಟಿನಿಂದ ನನ್ನ ಮನೆ ಬಾಗಿಲಿಗೆ ಬಂದು ಅನ್ಯರ ಗುಣಗಾನ ಮಾಡುವೆಯಾ? ನೋಡೀಗ ನಿನಗೆ ತಕ್ಕ ಶಾಸ್ತಿ ಮಾಡುವೆ. ನಿನ್ನ ಗುರುವಿಗೆ ಎಷ್ಟು ಸಾಮರ್ಥ್ಯವಿದೆಯೋ ನೋಡೇ ಬಿಡುವೆ. ನಾನು ಈಗ ನಿನಗೆ ಮರಣದ ಶಾಪ ಕೊಡುವೆ ನೀನು ನಾಳಿನ ಸೂರ್ಯೋದಯ ನೋಡುವುದಿಲ್ಲ ಎಂದು ಹೇಳಿ ಒಳಹೋಗಿ ದಡಾರ್ ಅಂತ ಬಾಗಿಲು ಹಾಕಿಕೊಂಡ.
ಶಿಷ್ಯನಿಗೆ ಕೈ ಕಾಲೇ ನಿಂತು ಹೋದಂತಾಯಿತು. ಅಕ್ಕಪಕ್ಕದವರು ರಸ್ತೆಯಲ್ಲಿ ಓಡಾಡುವರು ಈತನನ್ನು ನೋಡಿ, ಅಯ್ಯೋ ಪಾಪ ಚಿಕ್ಕ ವಯಸ್ಸು ,ಬಡಪಾಯಿ ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುತ್ತಾನೆ ಎಂದು ಮರುಗಿದರು. ಶಿಷ್ಯ ಬಹಳ ದುಃಖದಿಂದ ಕಣ್ಣಲ್ಲಿ ನೀರು ಹಾಕುತ್ತಾ ಇಂದೇ ನನ್ನ ಕೊನೆಯ ದಿನ, ನಾಳಿನ ಸೂರ್ಯೋದಯ ನಾನು ನೋಡುವುದಿಲ್ಲ ಎಂದು ಇದೇ ಚಿಂತೆಯಲ್ಲಿ ಆಶ್ರಮದ ಕಡೆ ನಡೆದನು. ಆಶ್ರಮದಲ್ಲಿ ಗುರು ರಾಮದಾಸರು ಶಾಂತ ಚಿತ್ತರಾಗಿ ಕುಳಿತಿದ್ದರು. ಭಿಕ್ಷೆಯನ್ನು ತೆಗೆದುಕೊಂಡು ಬಂದೆಯಾ ಬಾ ಎಂದು ಪ್ರೀತಿಯಿಂದ ಕರೆದರು. ಶಿಷ್ಯ ಹೇಳಿದ ಹೌದು ಗುರುಗಳೇ, ಭಿಕ್ಷೆಯ ರೂಪದಲ್ಲಿ ನನ್ನ ಸಾವನ್ನೇ ತೆಗೆದುಕೊಂಡು ಬಂದಿರುವೆ. ಎಂದು ಹೇಳಿ ನಡೆದ ಸಂಗತಿಯನ್ನು ಗುರುಗಳ ಬಳಿ ಹೇಳಿ ಒಂದು ಬದಿಯಲ್ಲಿ ಬೇಸರದಿಂದ ಕುಳಿತು ಬಿಟ್ಟನು. ಗುರುಗಳು ಹೇಳಿದರು ಬಾ ಊಟ ಮಾಡು ಎಂದರು ಶಿಷ್ಯ ಹೇಳಿದ ಗುರುಗಳೆ ನನಗೆ ಮನಸ್ಸಿಲ್ಲ ನನ್ನ ಗಂಟಲಲ್ಲಿ ಒಂದು ಹನಿ ನೀರು ಇಳಿಯುವುದಿಲ್ಲ. ನನ್ನ ಚಿಂತೆ ನನಗಾಗಿದೆ ನೀವು ನೋಡಿದರೆ ಊಟ ಮಾಡಿ ಅಂತೀರಿ ಎಂದ.
ಗುರುಗಳು ಹೇಳಿದರು ಇನ್ನೂ ಒಂದು ರಾತ್ರಿ ಇದೆಯಲ್ಲ ಈಗಲೇ ಏಕೆ ಯೋಚನೆ ಮಾಡುವೆ ಎಂದು ಅವನಿಗೆ ಊಟ ಮಾಡಲು ಒತ್ತಾಯ ಮಾಡದೆ ಅವರು ಭೋಜನ ಸ್ವೀಕರಿಸಲು ಹೋದರು. ರಾತ್ರಿ ಮಲಗುವ ಸಮಯ ಸಮರ್ಥರು ಶಿಷ್ಯನಿಗೆ ಹೇಳಿದರು ನನ್ನ ಕಾಲನ್ನು ಒತ್ತು , ಶಿಷ್ಯನ ಮನಸ್ಸು ಕದಡಿತ್ತು ಆದರೂ ಹೇಳಿದ ಆಗಲಿ ಗುರುಗಳೇ ಇನ್ನೇನು ನನ್ನ ಕೊನೆ ಸಮಯ ಬಂದಿದೆ ಕಡೆಗಾಲದಲ್ಲಿ ನಿಮ್ಮ ಸೇವೆಯನ್ನು ಮಾಡಿ ಸಾಯುವೆ ಗುರು ಸೇವೆಗಿಂತ ಮಿಗಿಲಾದರು ಯಾವುದು ಇಲ್ಲ ಎಂದು ಗುರುಗಳ ಚರಣ ಕಮಲವನ್ನು ಒತ್ತುತ್ತಾ ಕುಳಿತನು. ಗುರುಗಳು ಹೇಳಿದರು ನೀನು ಬೆಳಗಿನ ತನಕ ನನ್ನ ಚರಣವನ್ನು ಬಿಟ್ಟು ಕದಲಬಾರದು ಎಂದರು. ಆಯ್ತು ಗುರುಗಳೇ, ನಾನು ನಿಮ್ಮ ಚರಣ ಸೇವೆ ಬಿಟ್ಟು ಮೇಲೆ ಏಳುವುದಿಲ್ಲ ಎಂದ. ಮತ್ತೆ ಗುರುಗಳು, ಏನೇ ಆದರೂ ನನ್ನ ಚರಣವನ್ನು ಬಿಟ್ಟು ಏಳುವುದಿಲ್ಲ ಎಂದು ಮೂರು ಸಲ ಹೇಳು ಎಂದು ಅವನ ಬಾಯಲ್ಲಿ ಮೂರು ಸಲ ಹೇಳಿಸಿ ನಂತರ ಅವರು ಮಲಗಿ ನಿದ್ರೆ ಹೋದರು.
ಶಿಷ್ಯ, ಪೂರ್ಣ ಮನಸ್ಸಿಟ್ಟು ಗುರುಗಳ ಚರಣ ಸೇವೆ ಮಾಡುತ್ತಿದ್ದನು. ಮಧ್ಯರಾತ್ರಿ ಕಳೆಯಿತು. ಇತ್ತ ಮಾಂತ್ರಿಕನು ತನ್ನ ಶಾಪವನ್ನು ಕಾರ್ಯಕತಗೊಳಿಸಲು ಧನ- ಕನಕ- ವಜ್ರ- ವೈಡೂರ್ಯದ ಸಂಪತ್ತು ತುಂಬಿದ ಕೊಡದೊಂದಿಗೆ ತನ್ನ ಆರಾಧ್ಯ ದೇವಿಯನ್ನು ಕಳಿಸಿದ. ಆಶ್ರಮದಲ್ಲಿ ಶಿಷ್ಯ ಗುರು ಚರಣ ಸೇವೆ ಮಾಡುತ್ತಿದ್ದ. ಆಶ್ರಮದ ಬಾಗಿಲಿಗೆ ಸಂಪತ್ತು ಹಿಡಿದ ದೇವಿ ಬಂದು, ಮಗು ಬಾ ಈ ಸಂಪತ್ತು ನಿನ್ನದೆ ತೆಗೆದುಕೋ ಎಂದಳು. ಶಿಷ್ಯ ಹೇಳಿದ ಕ್ಷಮಿಸು ಮಾತೆ, ನಾನು ಗುರು ಚರಣ ಬಿಟ್ಟು ಎದ್ದು ಬರಲಾರೆ ಕೊಡಬೇಕೆಂದಿದ್ದರೆ ನೀವೇ ಬಂದು ಇಲ್ಲಿ ಕೊಡಿ ಎಂದನು. ಹಾಗೆ ಆಗಲ್ಲ ಈ ಸಂಪತ್ತು ನಿನಗೆ ಬೇಕಿದ್ದರೆ ನೀನೇ ಬರಬೇಕು ಎಂದಳು ದೇವಿ. ಶಿಷ್ಯ ನಿಮಗೆ ಕೊಡಬೇಕೆಂದಿದ್ದರೆ ಇಲ್ಲಿಗೆ ಬನ್ನಿ ನಾನು ಬರಲಾರೆ ಎಂದಾಗ. ದೇವಿ ಅದು ಸಾಧ್ಯವಿಲ್ಲ ಎಂದು ಹೊರಟು ಹೋದಳು. ಇತ್ತ ಮಾಂತ್ರಿಕನಿಗೆ ತಿಳಿಯಿತು ತನ್ನ ಮೊದಲ ಪ್ರಯತ್ನ ಸೋಲಾಯಿತು ಎಂದುಕೊಂಡ.
ಎರಡನೆಯ ಪ್ರಯತ್ನಕ್ಕೆ ಮಾಂತ್ರಿಕ ಹೊರಟ ಮಧ್ಯರಾತ್ರಿ ಕಳೆದಿದೆ ಎರಡನೇ ಸಾರಿ
ಶಿಷ್ಯನ ತಾಯಿಯ ರೂಪದಲ್ಲಿ ದೇವಿಯನ್ನು ಕಳಿಸಿದ. ಶಿಷ್ಯ ಗುರು ಚರಣ ಸೇವೆ ಮಾಡುತ್ತಿದ್ದ. ಬಾಗಿಲ ಬಳಿ ಬಂದ ಅವಳು, ಕಂದಾ ಹೇಗಿದ್ದೀಯ ನಿನ್ನನ್ನು ನೋಡದೆ ಯಾವುದೋ ಕಾಲವಾಯಿತು ಬಾಕಂದ ನನ್ನನ್ನು ಅಪ್ಪಿಕೋ ಎಂದಳು. ಶಿಷ್ಯ ಹೇಳಿದ ಅಮ್ಮ ನನ್ನ ಕೊನೆಗಾಲದಲ್ಲಿ ನಿನ್ನ ದರ್ಶನ ಮಾಡಿದ್ದು ಒಳ್ಳೆಯ ದಾಯಿತು. ನಾನು ಗುರುಚರಣ ಬಿಟ್ಟು ಬರಲಾರೆ ನೀವೇ ಇಲ್ಲಿಗೆ ಬನ್ನಿ ಎಂದ. ಆಕೆ ತನ್ನ ಪ್ರಯತ್ನ ವಿಫಲವಾದದ್ದು ಕಂಡು ಆ ಶಿಷ್ಯನ ತಾಯಿ ರೂಪದಲ್ಲಿ ಬಂದ ಆಕೆ ಹೊರಟು ಹೋದಳು. ರಾತ್ರಿ ಮೂರನೇ ಜಾವ ಯಮದೂತ ರಾಕ್ಷಸನಂತೆ ಕಾಣುವ
ಮನುಷ್ಯನನ್ನು ಶಿಷ್ಯನಲ್ಲಿ ಕಳಿಸಿದ. ಆಶ್ರಮದ ಬಾಗಿಲ ಬಳಿ ಬಂದು, ಈ ಬಾಲಕ ಬಾ ನಿನ್ನನ್ನು ಕರೆದುಕೊಂಡು ಹೋಗಲು ಬಂದಿರುವೆ. ನಿನ್ನ ಅಂತ್ಯ ಸಮೀಪಿಸಿದೆ ಎಂದ. ಕೋಪದಿಂದ ಹೇಳಿದ ಕಾಲನೇ ಬರಲಿ ಮಹಾ ಕಾಲನೇ ಬರಲಿ ಮೃತ್ಯುವೇ ಎದುರಾಗಲಿ ನನ್ನ ಗುರು ಚರಣವನ್ನು ಬಿಟ್ಟು ನೀನಿದ್ದಲ್ಲಿಗೆ ಬರುವುದಿಲ್ಲ ನೀನೇ ಬೇಕಾದರೆ ಬಾ ಎಂದನು. ಸೋತ ಯಮಕಿಂಕರ ಮಾಯವಾದ.
ಆಗ ಬೆಳಗಾಗುವ ಸಮಯ ಬಂದಿತು ಚಿಲಿಪಿಲಿ ಗುಟ್ಟುವ ಹಕ್ಕಿಯ ಸ್ವರ ಕೇಳಿತು.
ಮೂಡಣದಲ್ಲಿ ಸೂರ್ಯ ಉದಯಿಸಿದ. ರಾಮದಾಸರು ನಿದ್ರೆಯಿಂದ ಎದ್ದರು.
ಶಿಷ್ಯನನ್ನು ಕಂಡು ಮಗು ಬೆಳಗಾಯಿತಾ ಎಂದಾಗ, ಹೌದು ಗುರುದೇವ ಬೆಳಗಾಗಿದೆ ಎಂದ. ಗುರುಗಳು ಹೇಳಿದರು ಮಾಂತ್ರಿಕ ನಿನಗೆ ಹೇಳಿದಂತೆ ಬೆಳಗಾಗುವುದರೊಳಗೆ ನಿನ್ನ ಮೃತ್ಯು ಆಗಬೇಕಿತ್ತು ಆದರೆ ನೀನಿನ್ನು ಬದುಕಿರುವೆಯಲ್ಲ ಎಂದರು. ಹೌದು ಗುರುಗಳೇ ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಶಿಷ್ಯ ಹೇಳಿ ರಾತ್ರಿ ನಡೆದ ಘಟನೆಯನ್ನು ನೆನಪು ಮಾಡಿಕೊಂಡು ಹೇಳಿದ. ರಾತ್ರಿ ಗುರುಗಳು ಹೇಳಿದ ನುಡಿ “ಏನೇ ಆದರೂ ನನ್ನ ಚರಣ ಬಿಟ್ಟು ಏಳಬೇಡ’ ಎಂದು ಹೇಳಿದ ಗುರುಗಳ ಮಾತಿನ ಅರ್ಥ ಈಗ ಅವನಿಗೆ ಆಯಿತು. ತಕ್ಷಣ ಸಮರ್ಥರಾಮ ದಾಸರ ಪಾದ ಹಿಡಿದು ಜೋರಾಗಿ ಅಳುತ್ತಾ ಹೇಳಿದ. ಗುರುಗಳೇ ಯಾವ ಶಿಷ್ಯನ ಮೇಲೆ ನಿಮ್ಮಂಥ ಗುರುಕಟಾಕ್ಷದ ಕೃಪೆ ಇರುತ್ತದೋ ಆ ಶಿಷ್ಯನನ್ನು ಯಾರು ಏನೂ ಮಾಡಲಾಗುವುದಿಲ್ಲ ಎಂದ.
ಗುರು ವಾಕ್ಯದಂತೆ ನಡೆಯುವ ಶಿಷ್ಯರ ಹತ್ತಿರ ಮೃತ್ಯುವು ಬರಲು ಹೆದರುತ್ತದೆ ಎಂದಿಗೂ ಬರಲು ಸಾಧ್ಯವಿಲ್ಲ.
ಯಾವ ಬಂಧನದ ನಿಯಮ ಸದ್ಗುರುವಿಗೆ ಇರುವುದಿಲ್ಲ. ಗುರು ಯಾವಾಗಲೂ ಸರ್ವತಂತ್ರ ಸ್ವತಂತ್ರರು.
ಕೆಲವೊಮ್ಮೆ ನಾವು ಮಾಡುವ ಕಾಯಕದಲ್ಲಿ ಅನೇಕ ಆಕರ್ಷಣೆಗಳು, ಅಡೆತಡೆಗಳು ಕಾಯಕ ಬಿಡುವಂತೆ ಮಾಡುತ್ತವೆ. ಅವುಗಳನ್ನು ಮೀರಿ ಮುನ್ನುಗ್ಗಿದಾಗಲೇ ಜಯ ನಮ್ಮದಾಗಿರುತ್ತದೆ..
ಹರ ಮುನಿದರೆ ಗುರು ಕಾಯುವನು..
-ಆಶಾ ನಾಗಭೂಷಣ.