ನೀವು ‘ಟೈಟಾನಿಕ್’ ಚಲನಚಿತ್ರವನ್ನು ನಿಜಜೀವನದ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ತಯಾರಾದ ಚಲನಚಿತ್ರ. ಆ ಚಲನಚಿತ್ರದಲ್ಲಿ ಕಂಡುಬರುವ ಹಡಗು ಅಂದಿನ ಕಾಲದ ಅತ್ಯಂತ ವೈಭವೋಪೇತ ಮತ್ತು ಅತೀ ದೊಡ್ಡ ಹಡಗು! ಅದು ತನ್ನ ಮೊದಲನೆಯ ಪ್ರಯಾಣದಲ್ಲೇ (1912ರ ಏಪ್ರಿಲ್ ನಲ್ಲಿ) ಅಪಘಾತಕ್ಕೆ ಈಡಾಯಿತು.
ಅದರಲ್ಲಿದ್ದ ಎರಡೂವರೆ ಸಾವಿರ ಪ್ರಯಾಣಿಕರಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಜಲಸಮಾಧಿಯಾಗಿ ಸಾವನ್ನಪ್ಪಿದರು. ಆ ದುರಂತದಿಂದ ಸ್ವಲ್ಪದರಲ್ಲೇ ಪಾರಾದ ಕುಟುಂಬದ ಒಂದು
ಪ್ರಕರಣ ಇಲ್ಲಿದೆ:
ಸ್ಕಾಟ್ಲೆಂಡ್ ದೇಶದಲ್ಲಿ ಕ್ಲಾರ್ಕ್ಸ್ ಎಂಬ ಕುಟುಂಬವಿತ್ತು. ಮತ್ತು ಒಂಬತ್ತು ಮಕ್ಕಳ ಕುಟುಂಬ. ಆರ್ಥಿಕವಾಗಿ ಅನುಕೂಲಸ್ಥರಲ್ಲ. ಆದರೆ ಅವರಿಗೆ ತಮ್ಮ ಮಕ್ಕಳನ್ನು ಅಮೇರಿಕಾ ಪ್ರವಾಸಕ್ಕೆ ಕರೆದೊಯ್ಯಬೇಕೆಂಬ ಹಂಬಲವಿತ್ತು. ಗಂಡ-ಹೆಂಡತಿ ಇಬ್ಬರೂ ವರ್ಷಾನುಗಟ್ಟಲೆ ದುಡಿದರು.
ಅಮೆರಿಕ ಪ್ರವಾಸಕ್ಕೆ ಬೇಕಾಗುವಷ್ಟು ಹಣ ಉಳಿತಾಯ ಮಾಡಿದರು. ಮನೆಯವರಿಗೆಲ್ಲ ಪಾಸ್ಪೋರ್ಟ್ ಮಾಡಿಸಿಕೊಂಡರು. ಅವರಿಗೆ ಟೈಟಾನಿಕ್ ಹಡಗು ಅಮೆರಿಕಾಕ್ಕೇ ಹೊರಡಲಿರುವ ವಿಷಯ ಗೊತ್ತಾಯಿತು. ಅದರಲ್ಲಿ ತಮ್ಮ ಇಡೀ ಕುಟುಂಬಕ್ಕೆ ಟಿಕೇಟುಗಳನ್ನು ಕೊಂಡುಕೊಂಡರು.
ಇಡೀ ಕುಟುಂಬ ಪ್ರವಾಸದ ದಿನಾಂಕವನ್ನು ಎದುರು ನೋಡುತ್ತಿದ್ದರು. ಎಲ್ಲರಿಗೂ ಉತ್ಸಾಹವೋ ಉತ್ಸಾಹ! ಅದರ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು. ಪರಿಚಯದವರಿಗೆಲ್ಲ ಪ್ರವಾಸದ ವಿಷಯವನ್ನು ಹೇಳಿದ್ದೇ ಹೇಳಿದ್ದು.
ಇನ್ನೇನು ಪ್ರವಾಸಕ್ಕೆ ಎರಡು ದಿನವಿದ್ದಾಗ ಅವರ ಕನಸುಗಳೆಲ್ಲಾ ಭಗ್ನವಾಗುವಂತಹ ಘಟನೆ ನಡೆದುಹೋಯಿತು. ಕಿರಿಯ ಮಗನನ್ನು ಬೀದಿನಾಯಿಯೊಂದು ಕಚ್ಚಿಬಿಟ್ಟಿತು. ಆಗಿನ ಕಾಲದಲ್ಲಿ ನಾಯಿ ಕಚ್ಚಿದರೆ ಹದಿನಾಲ್ಕು ದಿನಗಳ ಕಾಲ ಸೂಜಿಮದ್ದು ಹಾಕಿಸಿಕೊಳ್ಳಬೇಕಿತ್ತು. ಮತ್ತು ಹದಿನಾಲ್ಕು ದಿನ ಎಲ್ಲೂ ಹೊರಗಡೆ ಹೋಗುವಂತಿರಲಿಲ್ಲ. ಅಮೆರಿಕಾದ ಪ್ರವಾಸ ಅಸಾಧ್ಯವಾಯಿತು. ಕ್ಲಾರ್ಕ್ ಅವರಿಗಂತೂ ಎಷ್ಟೊಂದು ನಿರಾಶೆಯಾಯಿತೆಂದರೆ ಎಲ್ಲರ ಮೇಲೂ ರೇಗಾಡಿಬಿಟ್ಟರು. ಆದರೆ ಯಾರೂ ಮಾಡುವಂತಿರಲಿಲ್ಲ.
ಟೈಟಾನಿಕ್ ಹಡಗು ತನ್ನ ಯಾನಕ್ಕೆ ಹೊರಡುವ ದಿನವೂ ಬಂತು. ನಾಯಿ ಕಚ್ಚಿದ್ದ ಮಗನನ್ನು ಮನೆಯಲ್ಲೇ ಬಿಟ್ಟು ಮನೆಯವರೆಲ್ಲ ಸಮುದ್ರ ತೀರಕ್ಕೆ ಹೋಗಿ ನಿಂತರು. ತೀರದಿಂದ ಹೊರಟ ಟೈಟಾನಿಕ್ ಹಡಗು ಕಣ್ಮರೆಯಾಗುವವರೆಗೂ ಅದನ್ನು ನಿರಾಶೆ ತುಂಬಿದ ಕಣ್ಣುಗಳಿಂದ ನೋಡುತ್ತಾ ನಿಂತರು. ಎಲ್ಲರ ಕಣ್ಣಲ್ಲೂ ನೀರು. ಎಲ್ಲರೂ ಸಾಮೂಹಿಕವಾಗಿ ನಾಯಿಯಿಂದ ಕಚ್ಚಿಸಿಕೊಳ್ಳಲ್ಪಟ್ಟ ಮಗನನ್ನೂ, ಬೀದಿನಾಯಿಗಳ ವಂಶವನ್ನೂ, ಬೀದಿನಾಯಿಗಳನ್ನು ಹತೋಟಿಯಲ್ಲಿಡದ ಮುನ್ಸಿಪಾಲ್ಟಿಯವರನ್ನೂ, ಕೊನೆಗೆ ನಿಷ್ಕರುಣಿ ದೇವರನ್ನೂ ದೂಷಿಸಿದರು. ಎಲ್ಲರೂ ಜೋಲುಮುಖದೊಡನೆ ಮನೆಗೆ
ಆದರೆ ಮೂರೇ ದಿನಗಳಲ್ಲಿ ಇಡೀ ಕುಟುಂಬ ಸಂತೋಷದಿಂದ ಕುಣಿದಾಡುವಂತಾಯಿತು. ಅವರು ಬೀದಿನಾಯಿ ವಂಶವನ್ನು ಹೊಗಳುತ್ತಿದ್ದರು. ದೇವರ ದಯೆಯನ್ನು ಕೊಂಡಾಡುತ್ತಿದ್ದರು. ನಾಯಿಯಿಂದ ಕಚ್ಚಿಸಿಕೊಂಡಿದ್ದ ಮಗನನ್ನು ನಮ್ಮ ವಂಶವನ್ನು ಉದ್ಧಾರ ಮಾಡಿದವನೆಂದು ಮುದ್ದಾಡುತ್ತಿದ್ದರು. ಏಕೆ ಗೊತ್ತೆ? ಅವರು ಪ್ರಯಾಣ ಮಾಡಬೇಕಾಗಿದ್ದ ಟೈಟಾನಿಕ್ ಹಡಗು ಸಮುದ್ರದಲ್ಲಿ ಅಪಘಾತಕ್ಕೆ ಈಡಾಗಿ ಮುಳುಗಿತ್ತು. ಸಾವಿರಾರು ಜನರು ಜಲಸಮಾಧಿಯಾದ ಸುದ್ದಿ ಎಲ್ಲೆಡೆ ಹಬ್ಬಿತು. ನಾಯಿ ಮಗನನ್ನು ಕಚ್ಚದಿದ್ದರೆ ಅವರೆಲ್ಲ ಹಡಗಿನಲ್ಲಿರುತ್ತಿದ್ದರು. ಪ್ರಾಯಶಃ ಪ್ರಾಣ ಕಳೆದುಕೊಳ್ಳುತ್ತಿದ್ದರು!
ನಮಗೂ ಬದುಕಿನಲ್ಲಿ ಹೀಗೆಯೇ ಆಗುತ್ತದೆ. ನಮ್ಮ ನಿರೀಕ್ಷೆಗಳೆಲ್ಲ ತಲೆಕೆಳಗಾಗುತ್ತವೆ. ನಾವು ಅಂದುಕೊಂಡಿದ್ದು ಅಂದುಕೊಂಡಂತೆಯೇ ಆಗುವುದಿಲ್ಲ. ಆಗ ನಾವೂ ಕೋಪಿಸಿಕೊಳ್ಳುತ್ತೇವೆ. ನಿರಾಶರಾಗುತ್ತೇವೆ. ದೇವರ ಸಮೇತ ಎಲ್ಲರನ್ನೂ ದೂಷಿಸುತ್ತೇವೆ. ಆದರೆ ಯಾರಿಗೆ ಗೊತ್ತು? ಆಗುವುದೆಲ್ಲ ಒಳ್ಳೆಯದಕ್ಕೇ ಆಗಿರಬಹುದು. ಆದರೆ ಆಗ ನಮಗೆ ಅದು ಕಾಣದೇ ಹೋಗಬಹುದು. ಅಂತಹ ಸಂದರ್ಭಗಳಲ್ಲಿ ನಾವು ದೇವರನ್ನು ನಿಷ್ಕರುಣಿ ಎಂದು ದೂಷಿಸುತ್ತೇವೆ ಏಕೆಂದರೆ ಆ ನಿಷ್ಕರುಣೆಯ ಹಿಂದೆ ಅಡಗಿರುವ ಕರುಣೆ ನಮಗೆ ಆ ಕ್ಷಣಕ್ಕೆ ಕಾಣದೇ ಹೋಗಿರುತ್ತದೆ! ಕಣ್ಣಿಗೆ ಕಾಣದ ಪರಮಾತ್ಮನು ಕರುಣಾಳು ಎಂಬುದು ಸುಳ್ಳಲ್ಲ ಅಲ್ಲವೇ?
ಕೃಪೆ: ವಿಶ್ವವಾಣಿ.
No comments:
Post a Comment