ಕಥೆ-262
ಬಿತ್ತಿದಂತೆ ಬೆಳೆ
ಒಂದು ಹಳ್ಳಿಯಲ್ಲ್ಲಿ ಒಬ್ಬ ಹಾಲು ಮಾರುವ ಕಸುಬನ್ನು ಮಾಡುತ್ತಿದ್ದ. ಹಾಲು, ಮೊಸರು ಮತ್ತು ತುಪ್ಪ ಮಾರಾಟ ಮಾಡಿ ತನ್ನ ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದ. ಸ್ವಲ್ಪ ಹಾಲನ್ನು ಊರಿನಲ್ಲಿಯೇ ಮಾರಿ ಇನ್ನೂ ಸ್ವಲ್ಪ ಹಾಲಿನಿಂದ ತುಪ್ಪ ಮಾಡಿ ವಾರಕ್ಕೆ ಒಮ್ಮೆ ಮಾರ್ಕೆಟ್ ಗೆ ಹೋಗಿ ಮಾರುತ್ತಿದ.
ಹೆಂಡತಿ ತುಪ್ಪವನ್ನು ಒಂದು ಪ್ಲಾಸ್ಟಿಕ್ ನಲ್ಲಿ ಹಾಕಿ ಒಂದು ಕೆಜಿ ಬ್ಯಾಗುಗಳಾಗಿ ಮಾಡಿಕೊಡುತ್ತಿದ್ದಳು. ಒಂದು ದಿನ ಮಾರ್ಕೆಟ್ ಗೆ ಹೋಗಿ ದಿನನಿತ್ಯ ಮಾರುವ ಅಂಗಡಿಯವನಿಗೆ ಕೊಟ್ಟು ತನಗೆ ಬೇಕಾದ ಉಪ್ಪು, ಸಕ್ಕರೆ, ಅಕ್ಕಿ ಇತ್ಯಾದಿ ..... ಸಾಮಾಗ್ರಿಯನ್ನು ಕೊಂಡು ಮನೆಗೆ ಹೊರಟ. ಆಗ ಅಂಗಡಿ ಮಾಲಿಕನು ತುಪ್ಪವನ್ನು ಎತ್ತಿಡುವಾಗ ಹೀಗೆ ಒಂದು ಬ್ಯಾಗ್ ಅನ್ನು ತೂಕ ಮಾಡಿ ನೋಡುವ ಅಂದುಕೊಂಡು ತೂಕ ಮಾಡಿದಾಗ ಅವನಿಗೆ ಅಶ್ವರ್ಯವಾಯಿತು ಅದು ಒಂದು ಕೆಜಿ ಅಲ್ಲ ಕೇವಲ 900 ಗ್ರಾಂ ಇತ್ತು. ಮಾಲಿಕನು ಎಲ್ಲಾ ತೂಕ ಮಾಡಿದಾಗ ಅವನಿಗೆ ಎಲ್ಲಾ ಬ್ಯಾಗುಗಳು 900 ಗ್ರಾಂ ಸಿಕ್ಕಿತು. ಮಾಲೀಕನ ಮನಸ್ಸಿಗೆ ತುಂಬಾ ನೋವಾಯಿತು. ಇವನ ಮೇಲೆ ಇಟ್ಟ ನಂಬಿಕೆಗೆ, ಇವನು ನನಗೆ ಮೋಸ ಮಾಡುತ್ತಾನೆ ಎಂದು ಸಿಟ್ಟುಗೊಳ್ಳುತ್ತಾನೆ.
ಮತ್ತೆ ಒಂದು ವಾರ ಕಳೆದ ನಂತರ ಆ ಹಾಲು ಮಾರುವವನು ತುಪ್ಪವನ್ನು ಮಾರಲು ಬರುತ್ತಾನೆ. ಆಗ ಮಾಲೀಕ ಹೇಳಿದ ನನ್ನ ಅಂಗಡಿಗೆ ಇನ್ನೂ ಮುಂದೆ ನೀನು ಕಾಲಿಡಬೇಡ. ನೀನೊಬ್ಬ ಮೋಸಗಾರ, ನಂಬಿಕೆ ದ್ರೋಹಿ. ತುಪ್ಪ ಒಂದು ಕೆಜಿ ಇದೆ ಎಂದು 900 ಗ್ರಾಂ ಕೊಡುತ್ತೀಯಾ. ಪುನಃ ನಿನ್ನ ಜೊತೆ ನಾನು ವ್ಯವಹಾರ ಮಾಡಿದರೆ ನನಗೆ ಮೂರ್ಖ ಎನ್ನುವರು ಎಂದು ತುಂಬಾ ಗಲಾಟೆ ಮಾಡುತ್ತಾನೆ.
ಆಗ ಆ ಮುದುಕ ವಿನಮ್ರತೆಯಿಂದ ಹೇಳಿದ, "ಮಾಲೀಕರೇ ನಾನು ಬಡವ ಹೌದು, ಆದರೆ ಮೋಸಗಾರನಲ್ಲ, ನನ್ನ ಹತ್ತಿರ ತಕ್ಕಡಿ ಕೊಳ್ಳುವಷ್ಟು ಹಣವು ಇಲ್ಲ, ನಿಮ್ಮಿಂದ ಕೊಂಡ ಒಂದು ಕೆಜಿ ಸಕ್ಕರೆಯನ್ನು ಆಧಾರಿತವಾಗಿ ಮನೆಯಲ್ಲಿ ತಕ್ಕಡಿ ರೀತಿಯಲ್ಲಿ ಮಾಡಿ ಅದರಿಂದ ನಾನು ತೂಕವನ್ನು ಅಳೆಯುತ್ತೇನೆ ಎಂದ.
ಮಾಲೀಕ ತಲೆ ತಗ್ಗಿಸಿದ ತನ್ನ ತಪ್ಪಿನ ಅರಿವಾಗಿ ಮೌನಿಯಾದ.
*ನೀತಿ :*
*ನಾವು ಬೇರೆಯವರಿಗೆ ಏನು ಕೊಡುತ್ತೇವೆಯೋ ಅದೇ ಮರಳಿ ನಮಗೆ ಬರುತ್ತದೆ. ಅದು ಗೌರವ ಇರಲಿ, ದುಃಖ ಇರಲಿ ಅಥವಾ ಮೋಸವೇ ಆಗಿರಲಿ.*
ಆಧಾರ : ಭೋದಿ ವೃಕ್ಷ
No comments:
Post a Comment