Sunday, May 12, 2024

 ಕಥೆ-394

ನಿನ್ನ ಬೆಲೆ ಎಷ್ಟು ?

ಒಬ್ಬ ವ್ಯಕ್ತಿ ಗುರು ಸಂತರನ್ನು ಪ್ರಶ್ನಿಸಿದ " ನನ್ನ ಜೀವನದ ಬೆಲೆ ಏನು? " ಎಂದು. ಆಗ ಸಂತರು ಅವನಿಗೆ ಒಂದು ಕಲ್ಲನ್ನು ಕೊಟ್ಟು "ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ. ಆದರೆ ಅದನ್ನು ನೀನು ಮಾರಬಾರದು" ಎಂದು ಹೇಳಿದರಂತೆ.

ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ' ಈ ಕಲ್ಲಿನ ಬೆಲೆ ಎಷ್ಟಿರಬಹುದು? ' ಎಂದು ಕೇಳಿದನಂತೆ. ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ. ಮಾರುತ್ತೀಯಾ?" ಎಂದು ಕೇಳಿದನಂತೆ. ಆದರೆ ಸಂತರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾರಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.  

ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?" ಎಂದು ಕೇಳಿದನಂತೆ. ಇಲ್ಲಾ ಎಂದು ಹೇಳಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ. 

ಇದಾದಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ " ಒಂದು ೫೦ ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?" ಎಂದನಂತೆ. ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ "ಹೋಗಲಿ ೪ ಕೋಟಿ ರೂಗಳನ್ನು ಕೊಡುತ್ತೇನೆ" ಎಂದನಂತೆ ಆ ಚಿನ್ನದ ವ್ಯಾಪಾರಿ. ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು. ಆದರೆ ಆ ಕಲ್ಲನ್ನು ಮಾರಬಾರದೆಂದು ಸಂತರು ಹೇಳಿದ್ದರಲ್ಲ, ಹಾಗಾಗಿ ಆ ವ್ಯಕ್ತಿಯು, ' ಇದನ್ನು ಮಾರುವುದಿಲ್ಲ ' ಎಂದು ಹೇಳಿ ಮುಂದಕ್ಕೆ ಹೊರಟನಂತೆ.

ಕಡೆಗೆ ನಮ್ಮ ವ್ಯಕ್ತಿ ಒಬ್ಬ 'ವಜ್ರ' ಗಳ ವ್ಯಾಪಾರಿಯಲ್ಲಿಗೆ ಹೋಗಿ " '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ " ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? " ಎಂದು ಕೇಳಿದನಂತೆ. ನಾನು ನನ್ನ ಆಸ್ತಿಯನ್ನೆಲ್ಲಾ. ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. ......... ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ " ಎಂದನಂತೆ

ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.

ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ಸಂತರ ಬಳಿ ಬಂದನಂತೆ. ಆಗ ಸಂತರು " ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆಕಟ್ಟಲಾಗಲಿಲ್ಲ, ಅಲ್ಲವೇ?

ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ' ಅಮೂಲ್ಯ ' ಎಂದರೆ ಬೆಲೆಕಟ್ಟಲಾಗದ್ದು. ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ. ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ. ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ. ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ತೋರುವುದಾಗಿದೆ. ಸಾಮಾನ್ಯ ಕಲ್ಲಿಗೆ ತೋರುವ ಬೆಲೆ ಮತ್ತು ಅದೇ ಕಲ್ಲಿನಿಂದ ಮಾಡಿದ ಮೂರ್ತಿಗೆ ತೋರುವ ಬೆಲೆ ಬಹಳಷ್ಟು ವ್ಯತ್ಯಾಸವಿರುತ್ತದೆ. ಅದೇ ರೀತಿ ಸಾಮಾನ್ಯ ಜನರಿಗೆ ತೋರುವ ಬೆಲೆ ಒಂದಾದರೆ ಅದೇ ರೀತಿ ಸಾಮಾನ್ಯ ವ್ಯಕ್ತಿ ಸಾಧಕರಾದಾಗ ತೋರುವ ಬೆಲೆ ಮತ್ತೊಂದಾಗಿರುತ್ತದೆ. ಇದರಲ್ಲಿ ನೀನು ಯಾವುದಾಗುತ್ತಿ ನಿನಗೆ ಬಿಟ್ಟದ್ದು..

ಆದರೆ, ನೀನೇ ಏನೆಂದು, ನಿನ್ನ ಸಾಮರ್ಥ್ಯವೇನೆಂದು ನಿನಗೆ ಗೊತ್ತು ನಿನ್ನ ಬೆಲೆ ಮತ್ತು ಮೌಲ್ಯ ನಿನಗೊಬ್ಬನಿಗೇ ಗೊತ್ತು. ನೀನು ನಿನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನಿನ್ನಿಂದಾಗುವುದಿಲ್ಲ ಮತ್ತು ನನ್ನಿಂದಲೂ ಆಗುವುದಿಲ್ಲ " ಎಂದರಂತೆ ಆ ಸಂತರೂ ಸಹ.

ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು " ಮಾನವ ಜನ್ಮ ಬಹು ಶ್ರೇಷ್ಠವಾದದ್ದು " ಎಂದು. ಹಾಗಾಗಿ ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು. ಅಲ್ಲವೇ?

ಕೃಪೆ : ವಾಟ್ಸ್ ಆಪ್ ಗ್ರೂಪ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು