ಕಥೆ-430
ಕೂರ್ಮನ (ಆಮೆ) ಕಥೆ...
ಒಂದು ಕೂರ್ಮ ಪರಿವಾರವು ತಮ್ಮ ಎಲ್ಲಾ ಜನರೊಡಗೂಡಿ ಸಂಚಾರಕ್ಕೆ ಹೊರಟವು. ಬಹಳ ಮಂದ ಸಂಚಾರಿಗಳಾದ ಕೂರ್ಮಗಳು ಹೊರಡುವ ಸಿದ್ದತೆ ಮಾಡಿಕೊಳ್ಳೂವುದಕ್ಕೇ 2 ವಾರ ತೆಗೆದುಕೊಂಡವು! ಎಲ್ಲಾ ಸಿದ್ಧತೆಯಾದ ಮೇಲೆ ಕೂರ್ಮ ಪರಿವಾರವು ಸಂಚಾರಕ್ಕೆ ಹೊರಟಿತು. ಅಂತೂ ತಮ್ಮ ಸಂಚಾರದ 3ನೇ ವಾರಕ್ಕೆ ಕೊನೆಗೂ ಒಂದು ಸೂಕ್ತ ಸ್ಥಳವನ್ನು ಹುಡುಕಿಕೊಂಡವು!!!
ಸುಮಾರು 1 ವಾರ ಸ್ಥಳವನ್ನ ಸ್ವಚ್ಛಗೊಳಿಸಲು, ತಾವು ತಂದಿದ್ದ ಎಲ್ಲಾ ಸಾಮಾನು ಪೆಟ್ಟಿಗೆಯನ್ನು ತೆರೆದಿಡಲು ತಗೆದುಕೊಂಡವು. ಎಲ್ಲ ಜೋಡಿಸಿಡುತ್ತಿದ್ದ ವೇಳೆಯಲ್ಲಿ ತಾವು ಉಪ್ಪಿನ ಪೊಟ್ಟಣವ ತರುವುದನ್ನ ಮರೆತಿದ್ದನ್ನು ಆ ಕೂರ್ಮ ಗುಂಪಿನಲ್ಲಿದ್ದ ಹಿರಿಯ ಕೂರ್ಮನಿಗೆ ಹೊಳೆಯಿತು. ಮತ್ತೇನು..., ತಮ್ಮ ಸಂಚಾರವು ಆ ಉಪ್ಪಿನ ಪೊಟ್ಟಣವಿಲ್ಲದೆ ಏನು ಉಪಯೋಗವಿಲ್ಲ ಎಂದು ಅರಿತ ಆ ಪರಿವಾರವು ಬಹು ದೀರ್ಘ ಸಮಾಲೋಚನೆ ನೆಡೆಸಿ ತಮ್ಮ ಕುಟುಂಬದಲ್ಲಿದ್ದ ಸಣ್ಣ ಕೂರ್ಮ ಸದಸ್ಯನಿಗೆ ಉಪ್ಪಿನ ಪೊಟ್ಟಣವನ್ನು ತರುವ ಜವಬ್ದಾರಿಯನ್ನು ಕೊಡಲಾಯಿತು. ಆ ಸಣ್ಣ ಕೂರ್ಮನು ಆ ಪರಿವಾರದಲ್ಲೇ ಬಹುಬೇಗ ನಡೆಯಬಲ್ಲವನಾಗಿದ್ದರೂ ಹ್ಯಾಪು ಮೋರೆ ಹಾಕಿಕೊಂಡು, ಕಣ್ಣು ತುಂಬ ನೀರು ತುಂಬಿಸಿಕೊಂಡು, ತನ್ನ ಚಿಪ್ಪಿನೊಳಗೆ ಮುದುರಿಕೊಂಡನು. ನಂತರ ಎಲ್ಲರು ಪುಸುಲಾಯಿಸಿದ ಮೇಲೆ ಒಂದು ಷರತ್ತಿನ ಮೇಲೆ ಹೋಗಿ ಬರಲು ಆ ಸಣ್ಣ ಕೂರ್ಮನು ಒಪ್ಪಿಕೊಂಡನು. ಅದೇನೆಂದರೆ: ಅವನು ಹಿಂದಿರುಗಿ ಬರುವವರೆಗೂ ಯಾರು ಏನನ್ನು ತಿನ್ನಬಾರದು...! ಕೊನೆಗೂ ಎಲ್ಲರು ಈ ಷರತ್ತಿಗೆ ಒಪ್ಪಿದ ಮೇಲೆ ಆ ಸಣ್ಣ ಕೂರ್ಮನು ಅಲ್ಲಿಂದ ಉಪ್ಪು ತರಲು ಹೊರಟನು.1 ವಾರ, 2,..3, ಆ ಸಣ್ಣ ಕೂರ್ಮನ ಸುಳಿವೇ ಇಲ್ಲ!!! 4ನೇ ವಾರ ಅಗುತ್ತಿದ್ದಂತೆ ಕೂರ್ಮ ಪರಿವಾರದ ಹಿರಿಯ ಸದಸ್ಯನು ಹಸಿವು ತಾಳಲಾರದೇ, ಅಲ್ಲಿದ್ದ ಉಳಿದ ಸದಸ್ಯರಿಗೆ ತಾನು ಈಗ ಅಹಾರವನ್ನು ತಿನ್ನುವುದಾಗಿ ಹೇಳಿ, ಅಲ್ಲಿದ್ದ ಆಹಾರದ ಪೊಟ್ಟಣವನ್ನು ತೆರೆಯಲು, ಥಟ್ಟನೆ ಒಂದು ಮರದ ಹಿಂಬದಿಯಲ್ಲಿದ್ದ ಆ ಸಣ್ಣ ಕೂರ್ಮನು ಕಿರುಚುತ್ತ ಹೊರಬಂದು: "ನೋಡಿ, ನಾ ಹೇಳ್ಲಿಲ್ವೇನು! ನೀವ್ಯಾರೂ ನನಗೆ ಕಾಯೋದಿಲ್ಲಾ ಅಂತಾ...!. ಹೋಗಿ ನಾನು ಉಪ್ಪು ತರಲು ಹೋಗುವುದಿಲ್ಲ..." ಅಂತ ಹೇಳಿತು. ಆಗ ತಲೆ ತಿರುಗಿ ಬೀಳಬೇಕಾದ ಸ್ಥಿತಿ ಉಳಿದ ಕೂರ್ಮಗಳದಾಗಿತ್ತು!!
ನೀತಿ:
ಇತರರು ಸಹ ನಮ್ಮಂತೆ ಇರಬೇಕು...ನಾವು ಬಯಸಿದಂತೆ ಇರಬೇಕು/ಕೇಳಬೇಕು ಎನ್ನುವ ಭಾರದಲ್ಲಿ ನಮ್ಮ ಸಮಯ/ಸಹನೆಯನ್ನು ವಿನ: ಕಾರಣ ವ್ಯರ್ಥ ಮಾಡಿಕೊಳ್ಳುತ್ತಿರುತ್ತೇವೆ. ಉಪಯೋಗವಿಲ್ಲದ ಕಾರ್ಯವಾದ ಈ ಬೇರೆಯವರ ಬಗೆಗಿನ ಆಲೋಚನೆ ನಮ್ಮ ಬಗ್ಗೆ ಸ್ವತ: ನಾವೇ ಮಾಡಿಕೊಂಡರೆ ಸ್ವಯಂ-ಉದ್ಧಾರವಾದರೂ ಆಗಬಹುದಲ್ಲವೇ?
ಆಧಾರ : ಅಂತರ್ಜಾಲ
No comments:
Post a Comment