ಕಥೆ-514
ಜೀವನ, ಒಂದು ಚಕ್ರದ ಹಾಗೆ
ಒಂದು ಊರಲ್ಲಿ ಒಬ್ಬ ಕುಂಬಾರ ಅವನ ತಾಯಿ,ಹೆಂಡತಿ ಮತ್ತು ಮಗನ ಜೊತೆ ಜೀವನ ನಡೆಸುತ್ತ ಬಂದನು. ಕುಂಬಾರನ ಹೆಂಡತಿಗೆ ಕುಂಬಾರನ ತಾಯಿಯನ್ನ ಕಂಡರೆ ಆಗುತ್ತಿರಲಿಲ್ಲ ಅತ್ತೆಯನ್ನ ಮನೆಯಿಂದ ಹೊರಗಡೆ ಮನೆಮಾಡಿ ಇಡಿ ಎಂದು ತನ್ನ ಗಂಡನನ್ನ ಹಿಂಸಿಸುತಿದ್ದಳು, ಆದರೆ ಆ ಕುಂಬಾರ ತುಂಬ ದಿನಗಳು ಹೆಂಡತಿಯ ಮಾತುಗಳನ್ನ ಕಿವಿಯಲ್ಲಿ ಹಾಕಿಕೊಳ್ಳುತಿರಲಿಲ್ಲ. ಬೇರೆ ಮನೆ ಮಾಡಿ ಅಕ್ಕಿ ಬೇಳೆಗೆ ತೊಂದರೆ ಆಗದೆ ನೋಡಿಕೊಳ್ಳೋಣ ಎಂದು ಬಿಡದೆ ಹೆಂಡತಿ ಹಿಂಸಿಸಿದಳು.
ಹೆಂಡತಿ ಹಿಂಸೆಯನ್ನ ತಡೆಯಲು ಆಗದೆ ಒಂದು ದಿನ ಆ ಕುಂಬಾರ ಇಪ್ಪತ್ತು ಅಡಿ ದೂರ ಇರುವ ಒಂದು ಬಾಡಿಗೆ ಮನೆಯನ್ನ ನೋಡಿ ಅವನ ತಾಯಿಯನ್ನ ಇರಿಸುತ್ತಾನೆ. ಕುಂಬಾರನ ಹೆಂಡತಿ ಕುಂಬಾರ ಮಾಡಿದ ತಟ್ಟೆ ಒಂದನ್ನ ಕೊಟ್ಟು ದಿನವು ಈ ತಟ್ಟೆ ತಂದರೆ, ಇದರ ತುಂಬ ಊಟ ಇಟ್ಟು ಕೊಡುತ್ತೇನೆ. ನಂತರ ನೀವು ಆ ಮನೆಗೆ ಹೋಗಿ ಸಂತೋಷವಾಗಿ ಊಟ ಮಾಡಬಹುದು ಎಂದು ಹೇಳಿದಳು..
ಅವಮಾನ ಎನಿಸಿದರು ತನ್ನ ಮಗನಿಗೋಸ್ಕರ ಸೊಸೆ ಮಾತಿನಂತೆ ಬದುಕುತಿದ್ದಳು ಕುಂಬಾರನ ತಾಯಿ. ಅಜ್ಜಿ ಮನೆ ಬಿಟ್ಟು ಹೋಗಿದ್ದು ಮೊಮ್ಮಗನಿಗೂ ಇಷ್ಟ ಇರಲಿಲ್ಲ ಸಮಯ ಸಿಕ್ಕಾಗಲೆಲ್ಲ ಅಮ್ಮನಿಗೆ ತಿಳಿಯದ ಹಾಗೆ ಅಜ್ಜಿ ಮನೆಗೆ ಹೋಗಿ ಆಟವಾಡಿ ಬರುತಿದ್ದ.
ಕುಂಬಾರನ ಮಗ ಬೆಳಿತ, ಅಪ್ಪ ಮಾಡುವ ಕೆಲಸವನ್ನ ಸೂಕ್ಷ್ಮವಾಗಿ ಗಮನಿಸುತ್ತ ಬಂದನು. ಅಪ್ಪ ಹೊರಗೆ ಹೋದಾಗ ಆ ಯಂತ್ರವನ್ನ ಚಲಾಯಿಸಿ ಮಡಿಕೆ ಮಾಡಲು ಪ್ರಯತ್ನಿಸುತಿದ್ದ, ಹೀಗೆ ಕೆಲವು ದಿನಗಳ ನಂತರ ಅವನು ಅಪ್ಪನ ಹಾಗೆಯೇ ಮಡಿಕೆ ಮಾಡಲು ಕಲಿತನು.
ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನ ಹಾಗೆ ಮಡಿಕೆ ಮಾಡಲು ಕಲಿತು ಬಿಟ್ಟ. ಮೊದಲು ಅವನು ಒಂದು ತಟ್ಟೆಯನ್ನ ತಯಾರಿಸಿ ಅವನ ತಾಯಿಯ ಕೈಯಲ್ಲಿ ಕೊಟ್ಟನು ಆ ತಟ್ಟೆಯನ್ನ ನೋಡಿ ತಾಯಿಗೆ ಹೆಮ್ಮೆ ಎನಿಸಿತು. ಮೊದ ಮೊದಲು ತನ್ನ ಮಗ ಒಂದು ವಸ್ತುವನ್ನ ಕೈಯಲ್ಲಿ ಕೊಟ್ಟಿರುವುದನ್ನು ಕಂಡು ಎಲ್ಲಿಲ್ಲದ ಸಂತೋಷ. ಅದೇ ಸಂತೋಷದಲ್ಲಿ ಕೇಳಿದಳು ಎಷ್ಟೋ ಚಂದದ ಮಡಿಕೆಗಳಿರುವಾಗ ಏಕೆ ಈ ಒಂದು ತಟ್ಟೆಯನ್ನ ಮಾತ್ರ ಏಕೆ ಕೊಟ್ಟೆ ಎಂದಳು
ಅದಕ್ಕೆ ಮಗ ಹೇಳಿದ
ಅಮ್ಮ ನಾಳೆ ನನಗೆ ಮದುವೆ ಆದರೆ ನನ್ನ ಹೆಂಡತಿ ಈ ಮನೆಯಲ್ಲಿ ಇರುತ್ತಾಳೆ ನೀವು ಈಗ ಅಜ್ಜಿ ಇರುವ ಮನೆಯಲ್ಲಿ ಇರುತ್ತೀರ, ನಾಳೆ ನನ್ನ ಹೆಂಡತಿ ಊಟ ಕೊಡುವಾಗ ಒಂದು ತಟ್ಟೆ ಬೇಕಲ್ಲ ಅದಕ್ಕೆ.....
ಇದೇ ಜೀವನ ಚಕ್ರ, ನೆನಪಿರಲಿ ಮಕ್ಕಳು ನಾವು ಹೇಳಿದ್ದನ್ನು ಮಾಡುವುದಿಲ್ಲ, ಬದಲಾಗಿ ನಾವು ಮಾಡುವುದನ್ನು ಮಾಡುತ್ತವೆ. ಇಂದು ನಾವು ಮಾಡುವ ಉಪಕಾರವಾಗಲಿ ಅಪಕಾರವಾಗಲಿ, ನಾಳೆ ನಮಗೂ ನಡೆಯುತ್ತದೆ ಎಂಬುದನ್ನ ನೆನಪಿಟ್ಟುಕೊಳ್ಳ ಬೇಕು.......👍
No comments:
Post a Comment