ಕಥೆ-525
ನಂಬಿಕೆಗೆ ದ್ರೋಹ
ರಾಬರ್ಟ್ ಡಿ ವೆನ್ಸೆಂಜೋ ಎಂಬ ಗಾಲ್ಫ್ ಆಟಗಾರನ ಬಗ್ಗೆ ಕೇಳಿರ ಬಹುದು. ಆತ ಮೂಲತಃ ಅರ್ಜೆಂಟೀನಾದವ. ಒಮ್ಮೆ ಟೂರ್ನಮೆಂಟ್ನಲ್ಲಿ ಗೆದ್ದ. ವೆನ್ಸೆಂಜೋಗೆ ದೊಡ್ಡ ಮೊತ್ತದ ಚೆಕ್ ಸಿಕ್ಕಿತು. ಕ್ಯಾಮೆರಾಕ್ಕೆ ಪೋಸು ನೀಡಿ, ಅಭಿಮಾನಿಗಳಿಗೆಲ್ಲ ಹಸ್ತಾಕ್ಷರ ನೀಡಿ, ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ಹೆಂಗಸೊಬ್ಬಳು ಅವನ ಸನಿಹ ಬಂದು ಅವನ ಗೆಲುವಿಗೆ ಅಭಿನಂದಿಸಿದಳು. ಆನಂತರ ವೆನ್ಸೆಂಜೋನ ಕೈ ಹಿಡಿದುಕೊಂಡು, ‘ನನ್ನ ಮಗನ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿದ್ದಾನೆ. ಹಣ ಕೊಡದಿದ್ದರೆ ಅವನಿಗೆ ಚಿಕಿತ್ಸೆ ಕೊಡುವುದಿಲ್ಲ. ದಯವಿಟ್ಟು ಸಹಾಯ ಮಾಡಿ’ ಎಂದಳು.
ಅವಳ ಸ್ಥಿತಿ ಕಂಡು ವೆನ್ಸೆಂಜೋನ ಮನಕಲಕಿತು.
ತಕ್ಷಣ ಚೆಕ್ ಬುಕ್ ಹಾಗೂ ಪೆನ್ ಹೊರತೆಗೆದ ಆತ ಟೂರ್ನ ಮೆಂಟ್ನಲ್ಲಿ ಗೆದ್ದ ಹಣವನ್ನೆಲ್ಲ ಆಕೆಗೆ ಬರೆದುಬಿಟ್ಟ. ‘ನಿನ್ನ ಮಗನಿಗೆ ಒಳ್ಳೆಯ ಚಿಕಿತ್ಸೆ ಕೊಡಿಸು. ಆತ ಬೇಗನೆ ಗುಣಮುಖನಾಗಲಿ’ ಎಂದು ಹೇಳಿ ಹೊರಟ.
ನಾಲ್ಕೈದು ತಿಂಗಳುಗಳ ಬಳಿಕ ವೆನ್ಸೆಂಜೋ ಗಾಲ್ಫ್ ಕ್ಲಬ್ಗೆ ಹೋದ. ಅಲ್ಲಿ ಅವನಿಗೆ ಹತ್ತಾರು ಮಂದಿ ಸ್ನೇಹಿತರು ಸಿಕ್ಕರು. ಆ ಪೈಕಿ ಒಬ್ಬಾತ, ‘ವೆನ್ಸೆಂಜೋ, ನಾಲ್ಕೈದು ತಿಂಗಳುಗಳ ಹಿಂದೆ, ನೀನು ಟೂರ್ನಮೆಂಟ್ ಗೆದ್ದ ದಿನ ಹೆಂಗಸೊಬ್ಬಳು, ನಿನ್ನನ್ನು ಭೇಟಿ ಮಾಡಿದ್ದಳಂತೆ. ಆಸ್ಪತ್ರೆಯಲ್ಲಿರುವ ತನ್ನ ಮಗನಿಗೆ ಚಿಕಿತ್ಸೆಗೆ ಹಣ ಬೇಕೆಂದು ಕಣ್ಣೀರಿಟ್ಟಾಗ ನೀನು ಆಕೆಗೆ ಟೂರ್ನಿಯಲ್ಲಿ ಗೆದ್ದ ಹಣವನ್ನೆಲ್ಲ ನೀಡಿದೆಯಂತೆ ನಿಜಾನಾ?’ ಎಂದು ಕೇಳಿದ. ಅದಕ್ಕೆ ವೆನ್ಸೆಂಜೋ ಹೌದೆಂಬಂತೆ ತಲೆ ಅಲ್ಲಾಡಿಸಿದ.
‘ನಿಜ ಸಂಗತಿಯೇನೆಂದರೆ, ಆ ಹೆಂಗಸಿಗೆ ಮದುವೆಯೇ ಆಗಿಲ್ಲ ವಂತೆ. ಆಕೆಗೆ ಮಗನೂ ಇಲ್ವಂತೆ. ಆತನ ಸ್ಥಿತಿ ಗಂಭೀರವೂ ಆಗಿರಲಿಲ್ಲವಂತೆ’ ಎಂದು ಸ್ನೇಹಿತ ಜೋರಾಗಿ ನಕ್ಕ.
ಇದೇ ಅಲ್ವೆ ನಂಬಿಕೆಗೆ ದ್ರೋಹ... ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಅನ್ನೋದಕ್ಕೆ ಸಾಕ್ಷಿ...
ಇದಕ್ಕೆ ಪ್ರತಿಯಾಗಿ ಉತ್ತರ ಅಚ್ಚರಿ ಉಂಟುಮಾಡುತ್ತದೆ, ಅವರ ಬಗ್ಗೆ ಇನ್ನಷ್ಟು ಹೆಮ್ಮೆ ಪಡುವಂತೆ ಮಾಡುತ್ತದೆ... ವೆನ್ಸೆಂಜೋ ಹೇಳಿದ್ದೇನು ಗೊತ್ತಾ?
‘ಹಾಗಂದ್ರೆ ಮಗು ಸಾಯುತ್ತಿಲ್ಲ ಎಂದಂತಾಯಿತು. ಅದಕ್ಕಿಂತ ಸಂತಸದ ಸಂಗತಿ ಇನ್ನೇನಿದೆ? ಹಣ ಬರುತ್ತದೆ, ಹೋಗುತ್ತದೆ. ಆದರೆ ಮಗುವಿನ ಪ್ರಾಣ ಹೋದರೆ ಬರೊಲ್ಲ. ಪರವಾಗಿಲ್ಲ. ನನಗೆ ಸಮಾಧಾನ ಸಿಕ್ತು.. ಕೃಪೆ :ಬಸವರಾಜ್ ದಾವಣಗೆರೆ.
No comments:
Post a Comment