ಕಥೆ-536
(ಅಪರಿಗ್ರಹ)
ವಿಶ್ವ ಅಹಿಂಸಾ ದಿನಾಚರಣೆ ಶುಭಾಶಯಗಳು..
ಮಹಾತ್ಮ ಗಾಂಧಿಯವರು ಅಹಿಂಸೆ ಮತ್ತು ಸತ್ಯ ಎಂಬ ಎರಡು ದಿವ್ಯ ಅಸ್ತ್ರಗಳ ಸ್ವಾತಂತ್ರ್ಯ ಕೊಡಿಸಿದುದು ಮಾತ್ರವಲ್ಲದೆ ತಮ್ಮ ಸಾಬರಮತಿ ಆಶ್ರಮದಲ್ಲಿ ಜೀವನದ ಉನ್ನತಾದರ್ಶಗಳ ಮೂಲಕ ಸಮಸ್ತ ಮಾನವ ಜನಾಂಗಕ್ಕೇ ಮಾರ್ಗದರ್ಶನ ನೀಡುತ್ತಿದ್ದರು. ಸರಳ ಜೀವನದ ಬಗ್ಗೆ 'ನುಡಿದಂತೆ ನಡೆವ' ಅವರ ಉನ್ನತಾದರ್ಶ ಒಂದು ನಿದರ್ಶನ ಇಲ್ಲಿದೆ.
ಸಾಬರಮತಿ ಆಶ್ರಮದಲ್ಲಿ ಗಾಂಧೀಜಿಯವರ ಪತ್ನಿ ಕಸ್ತೂರಬಾ ಗಾಂಧಿಯವರು ಸರಳ ಜೀವನಕ್ಕೆ ಮಾದರಿಯಾಗಿದ್ದರು. ಒಮ್ಮೆ ಆಶ್ರಮದಲ್ಲಿ ಕಸ್ತೂರಬಾ ಅವರ ಕೊಠಡಿಯಿಂದ ಎರಡು ಸೀರೆಗಳ ಪೆಟ್ಟಿಗೆಗಳು ಕಳವಾದವು. ಅದಕ್ಕೆ ಮಹಾತ್ಮ ಗಾಂಧಿಯವರ ತಕ್ಷಣದ ಪ್ರತಿಕ್ರಿಯೆ ಹೀಗಿತ್ತು ''ಈ ಎರಡು ಪೆಟ್ಟಿಗೆ ಸೀರೆಗಳು ಬಂದದ್ದಾದರೂ ಎಲ್ಲಿಂದ? ಈ ಕಸ್ತೂರಬಾ ಪ್ರತಿನಿತ್ಯ ಹೊಸ ಹೊಸ ಸೀರೆ-ಗಳನ್ನು ಉಡುತ್ತಿದ್ದರು. ಇಂಥ ವೈಭವಾಡಂಬರಗಳೇ ಕಳ್ಳರನ್ನು ಆಕರ್ಷಿಸುತ್ತವೆ. ಇವೆಲ್ಲಿಂದ ಬಂದವು?'' ಎಂದು ಪ್ರಶ್ನಿಸಿದಾಗ ಕಸ್ತೂರಬಾ ಉತ್ತರಿಸಿದರು ''ನಮ್ಮ ಆಶ್ರಮಕ್ಕೆ ಅತಿಥಿಗಳಾಗಿ ರಾಮಿ ಮತ್ತು ಮನು ತಮ್ಮ ತಾಯಿಯೊಂದಿಗೆ ಬಂದಾಗ ನನಗೆ ಅವರು ಎರಡು ಸೀರೆ ಉಡುಗೊರೆ ನೀಡಿದ್ದರು. ಈ ಸೀರೆಗಳೇ ಪೆಟ್ಟಿಗೆಯೊಳಗಿದ್ದು ಕಳವಾಗಿ ಬಿಟ್ಟಿವೆ.''
ಗಾಂಧೀಜಿ ತತ್ಕಾಲಕ್ಕೆ ಸುಮ್ಮನಾದರೂ, ಅಂದಿನ ಸಂಜೆಯ ಪ್ರಾರ್ಥನೆಯ ಸಭೆಯಲ್ಲಿ ಕಳ್ಳತನದ ಘಟನೆಯ ಬಗ್ಗೆ ಉಲ್ಲೇಖಿಸುತ್ತಾ ನುಡಿದರು- ''ಅಗತ್ಯಕ್ಕಿಂತ ಹೆಚ್ಚು ಸಾಮಗ್ರಿಗಳ ಸಂಗ್ರಹವು ಪರಿಗ್ರಹಗಳ ಪರಿಮಿತಿಯ ವ್ರತದ ಉಲ್ಲಂಘನೆಯಾಗುತ್ತದೆ. ಇನ್ನು ಮುಂದೆ ಹೀಗಾಗಬಾರದು. ಆಶ್ರಮಕ್ಕೆ ಬಂದ ಉಡುಗೊರೆಗಳು ಕಾರ್ಯಾಲಯದಲ್ಲಿ ಜಮೆಯಾಗಬೇಕು. ಅತಿಯಾದ ಪರಿಗ್ರಹಗಳ ಸಂಗ್ರಹವೇ ಕಳ್ಳತನಕ್ಕೆ ಕಾರಣವಾಗುತ್ತದೆ, ಎಂದಾಗ ಕಸ್ತೂರಬಾ ಅವರು ತಕ್ಷಣವೇ ಅಪರಿಗ್ರಹ ದೀಕ್ಷೆಯನ್ನು ಸ್ವೀಕಾರ ಮಾಡಿದರು. ಆಗ ಗಾಂಧೀಜಿಯವರೂ, ಇತರ ಆಶ್ರಮವಾಸಿಗಳೂ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಬಡವರೇ ಇರಲಿ, ಶ್ರೀಮಂತರೇ ಇರಲಿ, ನಮ್ಮಲ್ಲಿ ವಸ್ತುಗಳನ್ನು, ಧನ--ಕನಕಾದಿಗಳನ್ನು ಸಂಗ್ರಹಿಸುವ ಪ್ರವೃತ್ತಿ ಇರುತ್ತದೆ. ಕೆಲವೊಮ್ಮೆ ಅಗತ್ಯವಿರಲಿ, ಅನವಶ್ಯಕವೇ ಇರಲಿ, 'ನಾಳೆಗೆ ಬೇಕಾದೀತು' ಎಂಬ ದೂರದರ್ಶಿತ್ವದಿಂದ ಸಂಗ್ರಹಿಸುತ್ತೇವೆ. ಸಂಗ್ರಹಿಸಿದ ನಂತರ ಕಳ್ಳರ ಕಾಕರ ಭಯದಿಂದ ಸರಿಯಾಗಿ ನಿದ್ದೆ ಸಹ ಮಾಡಲಾಗುವುದಿಲ್ಲ.. ಇಂಥ ಅಪರಿಮಿತವಾದ ಸಂಗ್ರಹ ಬುದ್ಧಿಯೇ ದುರಾಸೆಗೂ ಕಾರಣವಾಗುವುದಿದೆ. ಲೋಭ-ದುರಾಸೆಗಳಿಂದ ರಹಿತವಾದ ಅಪರಿಗ್ರಹದ ವ್ರತ-ವನ್ನು ನಮ್ಮ ಪ್ರಾಚೀನ ಆಚಾರ್ಯರು ಬೋಧಿಸಿದ್ದರು. ಇಂಥ 'ಪರಿಗ್ರಹ ಪರಿಮಿತಿ' ಇಲ್ಲವೇ ಅಪರಿಗ್ರಹದ ಆಚರಣೆಯಿಂದ ನಮ್ಮಲ್ಲಿ ವ್ಯಕ್ತಿತ್ವ ಬೆಳಗುವುದರಲ್ಲಿ ಸಂದೇಹವಿಲ್ಲ..
ಗಾಂಧಿ ಜಯಂತಿ ಶುಭಾಶಯಗಳು
ಡಾ.ಡಿ.ವೀರೇಂದ್ರ ಹೆಗ್ಗಡೆ,
No comments:
Post a Comment