Saturday, October 12, 2024

 ಕಥೆ-546

ವಿಜಯದಶಮಿ ಶುಭಾಶಯಗಳು

ವಿಜಯದಶಮಿ ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ, ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತ. ಬನ್ನಿ ಒಂದು ಪವಿತ್ರ ಎಂಬ ನಂಬಿಕೆ, ಸಾಂಕೇತಿಕವಾಗಿ ಬನ್ನಿಕೊಟ್ಟು,ತೆಗೆದುಕೊಳ್ಳುವದು ಸಹ ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.

ದಸರಾದ ವೈಭವ ಮೈಸೂರಲಿ,

ಸ್ವಚ್ಛ ಊರು, ಹೂವಿನಿಂದ, ವಿದ್ಯುತ್ ಬಲ್ಬಗಳಿಂದ ಅಲಂಕೃತಗೊಂಡ ಬೀದಿಗಳು, ತುಂಬಿ ತುಳುಕುವ ರಸ್ತೆಗಳು, ವಸ್ತು ಪ್ರದರ್ಶನ, ಯುವ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ಕ್ರೀಡೆಗಳು, ಕುಸ್ತಿ ಪಂದ್ಯಾವಳಿಗಳು, ಯೋಗ ಕಾರ್ಯಕ್ರಮಗಳು, ಲಲಿತಕಲೆ, ಕರಕುಶಲ ಕಲಾ, ಪುಸ್ತಕ ಮೇಳ, ಕವಿಗೋಷ್ಟಿಯಂತಹ ಸಾಹಿತ್ಯಿಕ ಕಾರ್ಯಕ್ರಮಗಳು, ಬೃಹತ್‌ ಮೆರವಣಿಗೆ, ಅಂತ್ಯದಲ್ಲಿ ಪಂಜಿನ ಕವಾಯತು! ಮಧುವಣಗಿತ್ತಿಯಂತೆ ಕಾಣುವ ಮೈಸೂರು, ವೈಭವದಿಂದ ಜರಗುವ ದಸರಾ ಜಂಬೂಸವಾರಿ ಇವೆಲ್ಲವನ್ನು ಕಂಡು ಕಣ್ಮನ ತುಂಬಿಸಿಕೊಳ್ಳಬೇಕಿದ್ದರೆ, ನೀವು ಒಮ್ಮೆಯಾದರೂ ಮೈಸೂರಿನಲ್ಲಿ ನಡೆವ ದಸರೆಯನ್ನು ನೋಡಲೇಬೇಕು. 

ಒಂಭತ್ತು ದಿನಗಳ ವೃತಾಚರಣೆಯ ನಂತರ ಹತ್ತನೇ ದಿವಸದ ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ ನಯನ ಮನೋಹರ. 


ಕ್ರಿ.ಶ.1610 ಮೈಸೂರಿನ ಯದುವಂಶದ 9ನೇ ಒಡೆಯರಾದ ರಾಜಾ ಒಡೆಯರ್‌ ಮೊದಲ ಬಾರಿಗೆ ಆರಂಭಿಸಿದರು. ಚಾಮುಂಡಿ ಮೈಸೂರು ಮಹಾರಾಜರ ಕುಲದೈವ, ವಿಜಯದಶಮಿ ದಿನದಂದು ಆನೆಯ ಮೇಲೆ 750 ಕೆಜಿ ತೂಕದ ಸ್ವರ್ಣಖಚಿತ ಅಂಬಾರಿ, ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ..


 ಕರ್ನಾಟಕದ ಇತಿಹಾಸದಲ್ಲೇ ಸುವರ್ಣಯುಗವನ್ನು ಸೃಷ್ಟಿಸಿ, ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದ ವಿಜಯನಗರ ಸಾಮ್ರಾಜ್ಯದ ಅರಸರು ಆರಂಭಿಸಿದ್ದ ನವರಾತ್ರಿ ಹಬ್ಬ ಹಾಗೂ ವಿಜದಶಮಿ ಆಚರಣೆಗೆ ವರ್ಣಮಯ ಕಳೆ ಬಂದದ್ದು ಪ್ರಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ. ಈ ಮಹೋತ್ಸವದ ಕೇಂದ್ರಗಳಾಗಿ ನಿರ್ಮಾಣವಾದದ್ದೇ ಮಹಾನವಮಿ ದಿಬ್ಬ. ತಮ್ಮ ಶೌರ್ಯ-ಪರಾಕ್ರಮಗಳನ್ನು, ವೀರತ್ವ, ಧೀರತ್ವವನ್ನು, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಂಸ್ಕೃತಿ. ಹೀಗೆ ಸರ್ವ ವಿಧಗಳಲ್ಲೂ ತಾವು ಶಕ್ತರು, ಪ್ರತಿಭಾವಂತರೆಂದು ತಮ್ಮ ಹಿರಿಮೆಯನ್ನು ತೋರ್ಪಡಿಸಿಕೊಳ್ಳಲು ಈ ಮಹಾನವಮಿ ದಿಬ್ಬದಲ್ಲಿ ಸತತ ಹತ್ತೂ ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು.


ವಿಜಯನಗರದ ಅರಸರ ಸಾಂಪ್ರದಾಯಿಕ ಆಚರಣೆಗಳನ್ನೇ ಮೊದಲಿಗೆ ಯಥಾವತ್ತಾಗಿ ಆಚರಿಸಿಕೊಂಡು ಬಂದ ಮೈಸೂರ ಒಡೆಯರು ಕಾಲಾಂತರದಲ್ಲಿ ಪರಿಸ್ಥಿತಿಗೆ ತಕ್ಕನಾಗಿ ಕೆಲವು ಮಾರ್ಪಾಡುಗಳನ್ನೂ ಮಾಡಿಕೊಂಡಿದ್ದಾರೆ.


 ನಂತರದ ದಿನಗಳಲ್ಲಿ ಪ್ರತಿ ವರ್ಷವೂ ಅರಸರಿಂದಲೇ ನಡೆದು ಬಂದ ದಸರೆಯು ರಾಜಾಶ್ರಯದಲ್ಲಿ ಮೈಸೂರು ಸಂಸ್ಥಾನದ ಕೊನೆಯ ರಾಜರಾದ ಜಯಚಾಮರಾಜ ಒಡೆಯರ್(1941-47) ಕ್ಕೆ ಕೊನೆಗೊಂಡಿತು. ಭಾರತ ದೇಶ ಸ್ವಾತಂತ್ರ್ಯಗೊಂಡು, ಭಾಷಾವಾರು ಪ್ರಾಂತ ವಿಂಗಡಣೆಯಾಗಿ, ಮೈಸೂರು ರಾಜ್ಯ ನಿರ್ಮಾಣವಾಗಿ ರಾಜ್ಯದ ಆಡಳಿತವನ್ನು ಸರಕಾರದ ಮುಖ್ಯಮಂತ್ರಿಗಳಾದ ಕೆ.ಸಿ.ರೆಡ್ಡಿಯವರಿಗೆ ಒಡೆಯರ್‌ ಅಧಿಕಾರವನ್ನು ಹಸ್ತಾಂತರಿಸಿ ತಾವು ಭಾರತ ಸರಕಾರದ ಪ್ರತಿನಿಧಿಯಾಗಿ ರಾಜ್ಯಪಾಲರಾಗಿ, ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದು ಇತಿಹಾಸ. ಅಂದಿನಿಂದ ಶುರುವಾದ ಖಾಸಗಿ ದರ್ಬಾರ್‌ ಇಂದಿನವರೆಗೂ ನಡೆದುಕೊಂಡು ಬಂದಿದೆ.


 ಈ ಅಂಬಾರಿಯ ಮೂಲ ಮಹಾರಾಷ್ಟ್ರದ ದೇವಗಿರಿ ಎನ್ನಲಾಗುತ್ತದೆ. ಶತ್ರುಗಳ ದಾಳಿಗೆ ನಲುಗಿ ದೇವಗಿರಿ ಸಂಸ್ಥಾನ ನಾಶವಾಗುತ್ತದೆ. ಆಗ ಮುಮ್ಮಡಿ ಸಿಂಗನಾಯಕನೆಂಬ ದೊರೆ ಅದನ್ನು ಹೊತ್ತೊಯ್ದು ಬಳ್ಳಾರಿಯ ರಾಮದುರ್ಗ ಕೋಟೆಯಲ್ಲಿ ಅಡಗಿಸಿಡುತ್ತಾನೆ. ಬಳಿಕ ಈತನ ಮಗನಾದ ಕಂಪಿಲರಾಯನು ಒಂದು ಶಕ್ತಿಯುತ ಸಾಮ್ರಾಜ್ಯವನ್ನು ನಿರ್ಮಿಸಿದ ನಂತರ ಅಂಬಾರಿಯನ್ನು ಹೊರ ತಂದು ಅದರಲ್ಲಿ ದುರ್ಗಾದೇವಿಯ ಮೂರ್ತಿಯನ್ನಿಟ್ಟು ಪೂಜಿಸಲು ಆರಂಭಿಸಿದ. ಕಂಪಿಲರಾಯನ ಮಗನಾದ ಗಂಡುಗಲಿ ಕುಮಾರರಾಮನ ಕಾಲದಲ್ಲಿ ತನ್ನ ರಾಜ್ಯ ಕಂಪ್ಲಿಯನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿದ್ದ. ಸುಮಾರು 1327ರ ಹೊತ್ತಿಗೆ ದೆಹಲಿ ಸುಲ್ತಾನರ ದಾಳಿಯಿಂದಾಗಿ ಮರಣಹೊಂದಿದ ಕುಮಾರರಾಮನು ಕಂಪ್ಲಿ ರಾಜ್ಯದ ಕೊನೆಯ ರಾಜನಾಗಿದ್ದಾನೆ. ನಂತರ ಹಕ್ಕ-ಬುಕ್ಕರು ಈ ಅಂಬಾರಿಯನ್ನು ಸಂರಕ್ಷಿಸಿ, ಹಂಪಿಗೆ ಅಂಬಾರಿಯನ್ನು ತಂದು ಮಹಾನವಮಿಯಂದು ಮೆರವಣಿಗೆ ಆರಂಭಿಸಿದರು.

 ಶ್ರೀಕೃಷ್ಣದೇವರಾಯನ ಕಾಲದಲ್ಲಿ ದಸರಾ ಮತ್ತು ಜಂಬೂಸವಾರಿ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು... ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಅಂಬಾರಿಯನ್ನು ಕಾಪಾಡುವ ಹೊಣೆ ಮೈಸೂರು ಒಡೆಯರ ಹೆಗಲಿಗೆ ಬಂದಿತು. ಸುಮಾರು 800 ವರ್ಷಗಳ ಇತಿಹಾಸವುಳ್ಳ ಅಂಬಾರಿಯು ಕಳೆದ 409 ವರ್ಷಗಳಿಂದ ಮೈಸೂರು ಅರಸರ ಸುಪರ್ದಿಯಲ್ಲಿದ್ದು, ಈಗ ಕರ್ನಾಟಕ ಸರಕಾರದ ರಕ್ಷಣೆಯಲ್ಲಿದ್ದು ನಾಡ ಹಬ್ಬ ದಸರೆಯ ದಿವಸ ರಾಜಬೀದಿಯಲ್ಲಿ ಠೀವಿಯಿಂದ ಮೆರವಣಿಗೆಯಲ್ಲಿ ಸಾಗುತ್ತ ಭಕ್ತಾದಿಗಳ ಮನಸೂರೆಗೊಳಿಸುತ್ತ, ಭಕ್ತಿಭಾವ ತುಂಬಿಕೊಂಡಿದೆ.

ವಿಜಯದಶಮಿಯಂದು ಹೊರಡುವ ಜಂಬೂ ಸವಾರಿಯು ಅರಮನೆಯಲ್ಲಿ ಸಾಂಪ್ರದಾಯಿಕ ವಿಧಿವಿದಾನಗಳನ್ನು ಪೂರ್ಣಗೊಳಿಸಿ ಅರಮನೆಯ ಆವರಣದಲ್ಲಿ ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಸಾಗುವ ಅಂಬಾರಿಯ ಮೆರವಣಿಗೆ ಬನ್ನಿ ಮಂಟಪವನ್ನು ತಲುಪುವವರೆಗೂ ನೋಡುಗರನ್ನು ರೋಮಾಂಚನಗೊಳಿಸುತ್ತದೆ..

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು