ಕಥೆ-993
ಸಂತರವಾಣಿ ನಿಜವಾಗಿ ಅಮೂಲ್ಯ
ಓರ್ವ ಸಿರಿವಂತನು ಕಾಡು ದಾರಿ ಹಿಡಿದು ನಡೆದಿದ್ದ. ಆ ಕಾಡಿನ ಮತ್ತೊಂದು ದಡದಲ್ಲಿ ಈತನ ಊರು. ಇವನು ಈಚೆ ದಡದಲ್ಲಿ
ಕಾಲಿಡುವಾಗಲೆ ಸಂಜೆಯಾಗಿತ್ತು. ಸಮೀಪದಲ್ಲಿಯೇ ಒಂದು ಆಶ್ರಮ
ಕಂಡಿತು. ಗುರುಗಳ ದರ್ಶನ ಪಡೆದುಕೊಂಡು ಮುಂದೆ ಸಾಗುವುದೆಂದು ಆ ಸಿರಿವಂತನು ಗುರುಗಳ ಹತ್ತಿರ ಹೋಗಿ ನಮಸ್ಕರಿಸಿ “ನಾನು ಈ ಕಾಡಿನ ಆಚೆಯ ದಡದಲ್ಲಿರುವ ನನ್ನ ಊರಿಗೆ ಹೋಗಬೇಕು ಆಶೀರ್ವದಿಸಿರಿ” ಎಂದು ಹೇಳಿದ. ಗುರುಗಳು ಹೇಳಿದರು- “ಈ ಕಾಡಿನಲ್ಲಿ
ಕ್ರೂರ ಮೃಗಗಳು ಬಹಳ; ಕತ್ತಲೆಯಲ್ಲಿ ಪಯಣಿಸುವುದು ಅಷ್ಟೊಂದು ಸುರಕ್ಷಿತವಲ್ಲ. ಇಂದು ಇಲ್ಲಿಯೇ ಆಶ್ರಮದಲ್ಲಿ ಪ್ರಸಾದ ಮಾಡಿ ವಿಶ್ರಮಿಸಿ, ಬೆಳಿಗ್ಗೆ ಹೋಗಬಹುದಲ್ಲ !! ಸಿರಿವಂತ ಹೇಳಿದ- “ಹಾಗಾಗದು ಗುರುಗಳೇ ಇಂದು ನಾನು ನನ್ನ ಊರಿಗೆ ಹೋಗಲೇಬೇಕು” ಗುರುಗಳು ಹೇಳಿದರು-
'ಹಾಗಾದರೆ ಈ ದೀವಟಿಗೆ, ಎಣ್ಣೆಯ ಪಾತ್ರೆ ತೆಗೆದುಕೋ. ಇದರಲ್ಲಿ ನಿನ್ನ ಊರಿಗೆ ತಲುಪುವಷ್ಟೆ ಎಣ್ಣೆ ಬತ್ತಿ ಇದೆ. ದಾರಿಯ ನಡುವೆ ಎಲ್ಲಿಯೂ ನಿಲ್ಲಬೇಡ ನೆನಪಿರಲಿ !” ಸಿರಿವಂತ ಹೇಳಿದ- “ಆಗಲಿ ಗುರುಗಳೇ ತಾವು ಹೇಳಿದಂತೆಯೇ ಮಾಡುತ್ತೇನೆ” ಒಂದೆರಡು ಮೈಲು ನಡೆಯುವುದರಲ್ಲಿ
ದಾರಿಯ ಮಧ್ಯದಲ್ಲಿ ಒಂದು ಮರದಡಿ ಏನೋ ಮಿಂಚಿದಂತಾಯಿತು. ಸಿರಿವಂತ ಹೋಗಿ ನೋಡಿದ, ಅದೊಂದು ಬೆಳ್ಳಿಯ ಪಾತ್ರೆ. ಅದರಲ್ಲಿ ಸಾವಿರಾರು ಚಿನ್ನದ ನಾಣ್ಯ. ಆತನ ಸಂತಸಕ್ಕೆ ಸೀಮೆಯೇ ಉಳಿಯಲಿಲ್ಲ.
ಇದರಲ್ಲಿ ಚಿನ್ನದ ನಾಣ್ಯಗಳು ಎಷ್ಟಿರಬಹುದು ಎಂಬ ಕುತೂಹಲವಾಯಿತು. ಸಿರಿವಂತ ಎಣಿಸತೊಡಗಿದ ಸಾವಿರಕ್ಕೆ ಒಂದು ಕಡಿಮೆ ಆಯಿತು. ಮತ್ತೊಮ್ಮೆ ಎಣಿಸಿದ ಸಾವಿರಕ್ಕೆ ಒಂದು ಹೆಚ್ಚಾಯಿತು. ಸಾಧ್ಯವಿಲ್ಲ, ಇದು ಸರಿಯಾಗಿ ಸಾವಿರ ಇರಬೇಕೆಂದು ಅದೆಷ್ಟು ಹೊತ್ತು ಎಣಿಸಿದನೋ ಏನೋ? ಅಷ್ಟರಲ್ಲಿ
ಎಣ್ಣೆ ಬತ್ತಿ ತೀರಿತು ದೀವಟಿಗೆ ನಂದಿತು. ಇದನ್ನೇ ದಾರಿ ಕಾಯುತ್ತಿದ್ದ ಕ್ರೂರ ಮೃಗಗಳು ಬಂದು ಸಿರಿವಂತನನ್ನು ಕೊಂದು ತಿಂದು ತೇಗಿದವು. ಹೊನ್ನಿನ ಹಂಡೆ ನಕ್ಕು ಹೇಳಿತು- “ಇದು ಮೃಗಗಳೇ ಮಾಡಿದ ಮೋಸದಾಟ,
ನಿನ್ನಂತೆ ಇಲ್ಲಿ ಎಷ್ಟೋ ಜನರು ಬಂದು ಮೃಗಗಳಿಗೆ ಆಹಾರವಾಗಿದ್ದಾರೆ.” ಸಿರಿವಂತನು ಗುರುಗಳು ಹೇಳಿದ ಮಾತನ್ನು ಮರೆತು ಮರಣವನ್ನಪ್ಪಿದ.
ನಿಜವಾಗಿ ಸಂತರವಾಣಿ ಅಮೂಲ್ಯ !
ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ
No comments:
Post a Comment