ಕಥೆ-1050
ಆತ್ಮವಿಶ್ವಾಸದಿಂದ ಬದುಕು ಸುಂದರ
ಒಬ್ಬರು ಆಂಗ್ಲ ವಿಜ್ಞಾನಿ ಹೀಗೆ ಹೇಳುತ್ತಾರೆ- ''ಯಾರು ದೇವರಲ್ಲಿ ನಂಬಿಕೆಯನ್ನು ಇಡುವುದಿಲ್ಲವೋ ಅವರು ನಾಸ್ತಿಕರು,'' ಎಂದು ಹೇಳುವುದು ಹಳೆಯ ಧರ್ಮ. "ಯಾರು ತಮ್ಮನ್ನು ತಾವು ನಂಬುವುದಿಲ್ಲವೋ ಅವರು ನಾಸ್ತಿಕರು,'' ಎಂದು ಹೇಳುವುದು ಹೊಸಧರ್ಮ! ತನ್ನ ತನಗೆ ವಿಶ್ವಾಸವಿಲ್ಲದವನು ಪರಮಾತ್ಮನಲ್ಲಿ ಏನು ವಿಶ್ವಾಸ ಇಡುವನು? ಆತ್ಮವಿಶ್ವಾಸದಿಂದ ನಮ್ಮ ಬದುಕು ಸುಂದರ- ಸುಮಧುರವಾಗುತ್ತದೆ!
ಒಂದು ಪುಟ್ಟ ಪಕ್ಷಿ ಅದು ದೇಶದಿಂದ ದೇಶಕ್ಕೆ ಹಾರುವ ವಲಸೆ ಪಕ್ಷಿ. ಸಾಗರ ಸಾಗರಗಳನ್ನೇ ದಾಟುವ ಸಾಮರ್ಥ್ಯ ಅದಕ್ಕಿದೆ! ಒಂದು ದಿನ ಅದು ಸಾವಿರ ಸಾವಿರ ಮೈಲುಗಳಾಚೆಯ ದೇಶಕ್ಕೆ ಪ್ರವಾಸ ಹೊರಟಿತು. ನೂರಾರು ಮೈಲು ಹಾರಿದ ನಂತರ ಒಂದೆಡೆ ಮರದ ಮೇಲೆ ವಿಶ್ರಾಂತಿಗೆ ಇಳಿಯಿತು.
ಅಲ್ಲಿ ಒಬ್ಬ ಸಂತ ಪಕ್ಷಿಗೆ ಕೇಳಿದ, ''ನೀನು ಎಲ್ಲಿಗೆ ಹೊರಟಿರುವಿ?''. ಪಕ್ಷಿ ಹೇಳಿತು, 'ಸಾವಿರಾರು ಮೈಲುಗಳಾಚೆಯ ದೇಶಕ್ಕೆ!". "ಆ ದೇಶವೆಲ್ಲಿದೆ,'' ಸಂತ ಕೇಳಿದ. ಪಕ್ಷಿ 'ಗೊತ್ತಿಲ್ಲ'', ಎಂದಿತು. ಆಗ ಸಂತ "ಆ ದೇಶವೆಲ್ಲಿದೆ ಎಂಬುದೇ ನಿನಗೆ ಗೊತ್ತಿಲ್ಲ. ದೇಶದ ನಕಾಶೆಯೂ ಇಲ್ಲ. ದಿಕ್ಕೂಚಿಯೂ ಇಲ್ಲ, ಅಲ್ಲಿ ನೀನು ಹೋಗಿ ತಲುಪುವುದು ಹೇಗೆ!?,'' ಎಂದು ಕೇಳಿದ. "ಸಂತನೇ, ಅದಾವೂದೂ ನನಗೆ ಗೊತ್ತಿಲ್ಲ. ಆದರೆ, ಹೃದಯ ಹೇಳುತ್ತದೆ, ನನಗೆ ಆತ್ಮವಿಶ್ವಾಸವಿದೆ ನಾನು ಖಂಡಿತವಾಗಿಯೂ ಆ ದೇಶವನ್ನು ತಲುಪುತ್ತೇನೆ,'' ಎಂದಿದ್ದೇ ಪಕ್ಷಿ ಗಗನದೆತ್ತರಕ್ಕೆ ಹಾರಿತು. ಇದುವೇ ಆಸ್ತಿಕ ಬುದ್ದಿ!
-ಶ್ರೀ ಸಿದ್ದೇಶ್ವರ ಸ್ವಾಮೀಜಿ
No comments:
Post a Comment