ನಂಬಿಕೆಯನ್ನು ಉಳಿಸಿಕೊಳ್ಳೋಣ..
ಈಗ ಯಾರನ್ನೂ ನಂಬದ ಸ್ಥಿತಿ ಇದೆ. ತಪ್ಪು ಮಾಡಿದ್ದು ಒಬ್ಬನೇ. ಆದರೆ, ಎಲ್ಲರನ್ನೂ ಅನುಮಾನಿಸಬೇಕಾದ ಸ್ಥಿತಿ.
ಈ ನಿದರ್ಶನ ಒಂದಿಷ್ಟು ಸ್ವಾರಸ್ಯಕರವಾಗಿದೆ.
ಬಾಲ್ಯ ಕಾಲದ ಗೆಳೆಯನೊಬ್ಬ ಸುಮಾರು ಹದಿನೆಂಟು ವರ್ಷಗಳ ನಂತರ ಅದೇಗೋ ವಿಳಾಸ ಪತ್ತೆ ಮಾಡಿ ಗೆಳೆಯನನ್ನು ಭೇಟಿಯಾಗಿದ್ದ. ಸ್ನೇಹಿತನಿಗೋ ಇನ್ನಿಲ್ಲದ ಖುಷಿ. ಮಧ್ಯಾಹ್ನದ ಸಮಯ. ಗೆಳೆಯ ಹೊರಗಡೆ ಊಟ ಮಾಡೋಣ ಅಂದ. ನಾನು ಮನೆಗೆ ಊಟಕ್ಕೆ ಹೋಗುತ್ತೇನೆ. ನೀನು ಮನೆಗೆ ಬಾ ಎಂದು ಆಹ್ವಾನಿಸಿದ. ಬೇಡ, ಬೇಡ ನಿಮ್ಮ ಮನೆಯಲ್ಲಿ ಮತ್ತೊಮ್ಮೆ ಊಟ ಮಾಡೋಣ ಸದ್ಯಕ್ಕೀಗ ಹೊರಗಡೆ ಹೋಗೋಣ ಎಂದು ಹೋಟೆಲ್ ಒಂದಕ್ಕೆ ಹೋದರು. ಇಬ್ಬರೂ ಸ್ನೇಹಿತರು ಪರಸ್ಪರ ಉಭಯ ಕುಶಲೋಪರಿ ಮಾತನಾಡುತ್ತ ಊಟ ಮಾಡುತ್ತಿದ್ದರು. ಅಪರೂಪಕ್ಕೆ ಸಿಕ್ಕಿದ್ದ ಗೆಳೆಯ ನನ್ನ ಫೋನ್ನಲ್ಲಿ ಚಾರ್ಜ್ ಕಡಿಮೆಯಾಗಿದೆ. ನಿನ್ನ ಮೊಬೈಲ್ ಕೊಡು ಎಂದು ಕೇಳಿ ಪಡೆದ. ಆತನ ಎದುರಿನಲ್ಲೇ ಸಿಮ್ ಚೇಂಜ್ ಮಾಡಿದ. ಗೆಳೆಯ ಹಾಗೇಕೆ ಮಾಡುತ್ತೀಯ ಕರೆನ್ಸಿ ಇದೆ ಮಾತನಾಡು ಎಂದು ಹೇಳಿದ. ಇಲ್ಲ, ಮನೆಯವರಿಗೆ ಫೋನ್ ಮಾಡಬೇಕು. ಬೇರೆ ಫೋನ್ನಿಂದ ಮಾಡಿದರೆ, ಅನುಮಾನ ಬರುತ್ತದೆ ಅಂದ. ಇದ್ದರೂ ಇರಬಹುದು ಎಂದು ಗೆಳೆಯ ಊಟ ಮುಂದುವರಿಸಿದ. ಮನೆಯವರೊಂದಿಗೆ ಮಾತನಾಡಲು ಹೊರಕ್ಕೆ ಹೋದ ಗೆಳೆಯ ಎಷ್ಟು ಹೊತ್ತಾದರೂ ಬರಲಿಲ್ಲ. ಹೋಟಲ್ ಸರ್ವರ್ ಬಂದು ಸರ್ ಬಿಲ್ ಎಂದು ಮುಂದಿಟ್ಟ. ಗೆಳೆಯ ಬರ್ತಾನೆ ಅಂದುಕೊಂಡು ಕಾಯ್ತಾ ಸುಮ್ಮನಿದ್ದ. ಊಹ್ಞೂಂ, ಎಷ್ಟು ಹೊತ್ತಾದರೂ ಗೆಳೆಯ ಬರಲೇ ಇಲ್ಲ. ಗೆಳೆಯ ಎಷ್ಟು ಹೊತ್ತು ಮಾತನಾಡುತ್ತಾನೆ ಎಂದು ಹೊರಬಂದು ನೋಡಿದರೆ ಗೆಳೆಯನೇ ಇಲ್ಲ.
ಅಲ್ಲಿಯೇ ನಿಂತಿದ್ದ ಸರ್ವರ್ಗೆ ಈತ ಕೇಳಿದ. ''ನನ್ನ ಗೆಳೆಯ ಇಲ್ಲೇ ಮಾತನಾಡುತ್ತಾ ಹೊರಬಂದ. ಎಲ್ಲಿ ಹೋದ?,'' ಇದನ್ನು ಗಮನಿಸಿದ್ದ ಸರ್ವರ್ ''ಸರ್,ಅವರು ಆಗಲೇ ಆಟೋ ಏರಿ ಹೊರಟರು. ಬಿಲ್ ನೀವೇ ಪೇ ಮಾಡ್ತಾರೆ ಅಂತ ಹೇಳಿದರು,'' ಅಂದ. ಈ ಗೆಳೆಯನಿಗೋ ಒಮ್ಮೆಲೆ ಕುಸಿದ ಹೋದಂಥ ಅನುಭವ. ಅಂದರೆ, ಅವನು ಮೊಬೈಲ್ ಕದಿಯಲಿಕ್ಕಾಗಿಯೇ ಬಂದಿದ್ದನಾ? ಕೇವಲ ಒಂದು ಮೊಬೈಲ್ ಕದಿಯಲಿಕ್ಕಾಗಿ ಹದಿನೆಂಟು ವರ್ಷಗಳ ಸ್ನೇಹವನ್ನು ದುರ್ಬಳಕೆ ಮಾಡಿಕೊಂಡನಾ... ಓಹ್... ದೇವರೇ ಜಗತ್ತಿನಲ್ಲಿ ಇಂತವರೂ ಇದ್ದಾರಾ..,? ಛೇ.., ಮನುಷ್ಯ ಸ್ವಭಾವವೇ? ಎಂದು ತುಂಬ ನೊಂದುಕೊಂಡ. ಈ ಪ್ರಕರಣ ನಂಬಿಕೆಗೆ ದ್ರೋಹ ಮತ್ತು ಮನಸ್ಸನ್ನು ಘಾಸಿಗೊಳಿಸುತ್ತದೆ ಎಂಬುದಕ್ಕೆ ನಿದರ್ಶನ ಮಾತ್ರ. ನಂಬಿಕೆ ಸೌಧ ಕಟ್ಟಿಕೊಳ್ಳುವುದು ಎಂದರೆ ಅದು ಬಹುಮಹಡಿ ಸೌಧ ನಿರ್ಮಿಸುವುದಕ್ಕಿಂತಲೂ ಸವಾಲಿನ ಕೆಲಸ. ಇದರ ಬೆಲೆ ಗೊತ್ತಿಲ್ಲದವರು ಮಾಡುವ ಹಾನಿ ಅವರಿಗೆ ಮಾತ್ರ ಹಾನಿ ಮಾಡುವುದಿಲ್ಲ. ಅದು ಇಡೀ ಸಾಮಾಜಿಕ ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತದೆ.
ದೇಹದ ಮೇಲೆ ಬೀಳುವ ಪೆಟ್ಟಿಗಿಂತ ನಂಬಿಕೆ ಮೇಲೆ ಬೀಳುವ ಪೆಟ್ಟು ಹೆಚ್ಚು ನೋವು ಕೊಡುತ್ತೆ ನಂಬಿಕೆಯನ್ನು ಯಾವತ್ತೂ ಮೋಸ ಮಾಡಲು ಬಳಸಬಾರದು ಏಕೆಂದರೆ ಬೇರೆಯವರ ಜೀವನ ಆಟಿಕೆಯ ವಸ್ತುವಲ್ಲ ಪ್ರಪಂಚದಲ್ಲಿ ನಂಬಿಕೆಯೇ ದೊಡ್ಡದು ನಂಬಿಕೆಗೆ ದ್ರೋಹ ಮಾಡಿದವರನ್ನು ಯಾರು ಕ್ಷಮಿಸಲಾರರು ಅದಕ್ಕೆ ಕ್ಷಮೆ ಇಲ್ಲ. ಅದರಲ್ಲೂ ಈ ಗೆಳೆತನ ರೂಪದಲ್ಲಿ ಮೋಸ ಮಾಡುವುದು ಘೋರ ಅಪರಾಧ...
ನಾವೂ, ನಮ್ಮನ್ನು ನಂಬಿದವರ ನಂಬಿಕೆಯನ್ನು ಉಳಿಸಿಕೊಳ್ಳೋಣ..
💐💐💐💐💐💐💐👍
ಶ್ರೀ ಬಸವಮೂರ್ತಿ

No comments:
Post a Comment