ಕಥೆ-223 ಸ್ತುತಿ ನಿಂದನೆಗಳ ಈ ಗಂಟನ್ನು ಕೆಳಗಿಳಿಸಿ
ಕಾಶ್ಮೀರ ದೇಶದಲ್ಲಿ ಲಲ್ಲೇಶ್ವರಿ ಎಂಬ ಹೆಸರಿನ ಸಂತಳಿದ್ದಳು. ಅವಳು ಯಾವಾಗಲೂ ಮೈಮೇಲೆ ಒಂದು ಶುಭ್ರವಾದ, ತೆಳುವಾದ ಹೊದಿಕೆ ಹೊತ್ತುಕೊಂಡಿರುತ್ತಿದ್ದಳು. ಸದಾವಕಾಲ ದೇವರ ನಾಮಸ್ಮರಣೆ ಮಾಡುತ್ತ ಅವಳು ಊರಿನಲ್ಲಿ ಸುತ್ತಾಡುತ್ತಾ ಸುಜ್ಞಾನ, ಸದ್ಭಕ್ತಿಯ ಸುಗಂಧ ಪಸರಿಸುತ್ತಿದ್ದಳು. ಕೆಲವರು ಅವಳ ಪರಿಶುದ್ಧ, ಪವಿತ್ರ ಜೀವನವನ್ನು ಕೊಂಡಾಡಿದರೆ, ಮತ್ತೆ ಕೆಲವರು ಇವಳಿಗೆ ಮಾಡುವ ಕೆಲಸವಿಲ್ಲವೆಂದು ನಿಂದಿಸುತ್ತಿದ್ದರು. ದ್ವಂದ್ವಮಯವಾದ ಈ ಪ್ರಪಂಚದಲ್ಲಿ ಟೀಕೆ-ಟಿಪ್ಪಣಿ ಎಲ್ಲಾ ಇದ್ದದ್ದೇ. ಶ್ರೇಷ್ಠ ದೈವಭಕ್ತಳಾಗಿದ್ದ ಲಲ್ಲೇಶ್ವರಿಯು ಸ್ತುತಿ-ನಿಂದನೆಗಳನ್ನು ಸಮನಾಗಿ ಸ್ವೀಕರಿಸುತ್ತಿದ್ದಳು. ಯಾರಾದರೂ ಸ್ತುತಿಸಿದರೆ ತಾನು ಹೊತ್ತಿದ್ದ ಹೊದಿಕೆಯ ಎಡಗಡೆ ಒಂದು ಗಂಟು ಹಾಕುತ್ತಿದ್ದಳು; ತೆಗಳಿದರೆ ಬಲಗಡೆ ಒಂದು ಗಂಟು ಹಾಕುತ್ತಿದ್ದಳು. ಒಂದು ದಿನ ಗುರುಗಳು 'ಇದೇನಮ್ಮ?' ಎಂದು ಕೇಳಿದರು. ಲಲ್ಲೇಶ್ವರಿ ಕೊಟ್ಟ ಉತ್ತರ ಎಷ್ಟು ಸುಂದರವಾಗಿದೆ ನೋಡಿ 'ಪೂಜ್ಯರೇ, ಊರೊಳಗಿಂದ ನಾನು ತಿರುಗಿ ನನ್ನ ಸ್ಥಳಕ್ಕೆ ಬರುತ್ತಲೇ ಜನರ ಸ್ತುತಿ-ನಿಂದನೆಗಳ ಈ ಗಂಟನ್ನು ಕೆಳಗಿಳಿಸಿ ಕಣ್ತುಂಬ ನಿದ್ರೆ ಮಾಡುತ್ತೇನೆ!' ಎಂಥ ಸುಂದರವಾದ ಉಪಾಯವಲ್ಲವೆ? ನಾವು ಕೂಡಾ ಜನರ ಸ್ತುತಿ-ನಿಂದನೆಗಳನ್ನು ಬೆಳಗಿನಿಂದ ಸಂಜೆಯವರೆಗೆ ಒಂದು ಹಾಳಿಯಲ್ಲಿ ಕೆಂಪು-ನೀಲಿ ಬಣ್ಣದಿಂದ ಗುರುತಿಸಿ ಮರೆತು ಮಲಗಿದರೆ ಅದೆಷ್ಟು ಸುಂದರವಾಗಿರುತ್ತದೆ ಅಲ್ಲವೇ?
ಕೆಲವರು ನಿಂದಿಸಿದರು, ಕೆಲವರು ಸ್ತುತಿಸಿದರು ಎಂದು ಇದರ ಚಿಂತೆಯಲ್ಲಿ ಕಾಲ ಕಳೆಯುವುದಕ್ಕಿಂತ ನಮ್ಮ ಕಾರ್ಯಗಳಲ್ಲಿ ಮಗ್ನರಾಗುವುದು ಲೇಸು..
ದೀಪವು ಹೊರಗಿನ ಕತ್ತಲೆ ಕಳೆದರೆ, ಜ್ಞಾನದೀಪವು ನಮ್ಮೊಳಗಿನ ಕತ್ತಲೆ ಕಳೆಯುವುದು. ನಮ್ಮ ಮನದಲ್ಲಿ ಬೆಳಕು, ಮಾತಿನಲ್ಲಿ ಸೌರಭ, ಕಾರ್ಯಗಳಲ್ಲಿ ಸೌಂದರ್ಯ ಸದಾ ತುಂಬಿರಲಿ. ನಾವು ಯಾವಾಗಲೂ ಮನೆ, ಮಠದ ಇನ್ನೊಬ್ಬರ ನಿಂದನೆ ಹೊಗಳಿಕೆ ಚಿಂತನೆ ಮಾಡದೆ, ಆಗೀಗ ರವಿ,ತಾರೆ, ಶಶಿಗಳಿಂದಾದ ಈ ವಿಶಾಲ ವಿಶ್ವದ ಆನಂದ ಸವಿಯಬೇಕು. ಜೀವನವೆಂದರೆ ಕೇವಲ ವಿಚಾರ ಮಾಡುವುದಲ್ಲ, ಬರೀ ಕನಸುಗಳನ್ನು ಕಾಣುವುದಲ್ಲ, ಒಂದಿಷ್ಟು ಸತ್ಕಾರ್ಯಗಳನ್ನೂ ನಾವು ಮಾಡಬೇಕು. ನಮ್ಮಿಂದ ಪ್ರತಿದಿನ ಒಂದಾದರೂ ಹೂವು ಅರಳಬೇಕು, ದೀಪ ಬೆಳಗಬೇಕು. ಅದು ನಮಗೂ, ಇತರರಿಗೂ ಶಾಂತಿ-ಸಮಾಧಾನ ನೀಡುತ್ತದೆ.
ಯಾರನ್ನು ವೇಸ್ಟ್ ಪೇಪರ್ ಎಂಬಂತೆ ನೋಡಬೇಡಿ ಇವತ್ತಿನ ವೇಸ್ಟ್ ಪೇಪರ್ ನಾಳೆ ಗಾಳಿಪಟವಾಗಿ ಮೇಲೆ ಹಾರಬಹುದು ಆಗ ನಾವು ತಲೆ ಎತ್ತಿ ನೋಡಬೇಕಾಗುತ್ತದೆ..
👍💐💐💐💐👍

No comments:
Post a Comment