ಕಥೆ-275
ಕಾಯಕ ಪ್ರತಿನಿಧಿ - ಶ್ರೀ ಶಿವಯೋಗಿ ಸಿದ್ದರಾಮೇಶ್ವರರು..
ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬರು ಶ್ರೀ ಶಿವಯೋಗಿ ಸಿದ್ದರಾಮೇಶ್ವರರು....
ಸೊನ್ನಲಿಗೆಯಲ್ಲಿದ್ದ ಪ್ರಸಿದ್ಧ ವಚನಕಾರ. 12ನೇ ಶತಮಾನದಲ್ಲಿ ಶಿವಶರಣರು ಶ್ರಮದಾನ, ಸ್ವಯಂಸೇವೆಯನ್ನು ಕಾರ್ಯರೂಪಕ್ಕೆ ತಂದಿದ್ದರು. ಆ ಕಾಲಘಟ್ಟದ 'ಕಾಯಕ ಪ್ರತಿನಿಧಿ'ಯಾಗಿ ಸಿದ್ಧರಾಮರು ನಿಲ್ಲತ್ತಾರೆ.
ಮುದ್ಧಗೌಡ ಮತ್ತು ಸುಗ್ಗವ್ವೆಗೆ ಸುಮಾರು ೫೦ವರ್ಷಗಳಾದ ಮೇಲೆ ತೇಜಸ್ವಿಯಾದ ಗಂಡು ಮಗುವೊಂದು ಜನಿಸುತ್ತದೆ. ಆ ಮಗುವೆ ಸಿದ್ಧರಾಮರು. ಇವರ ಕಾಲ ಕ್ರಿ.ಶ 1150(12ನೇ ಶತಮಾನ)
ಬಾಲ್ಯದಲ್ಲಿ ಮುಗ್ಧಭಕ್ತ. ದನಕಾಯುವ ಕಾಯಕ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದ. ಸೊನ್ನಲಿಗೆಗೆ ಬಂದು ದೇವಾಲಯ ಸ್ಥಾಪಿಸಿ, ಆ ಆವರಣಕ್ಕೆ ‘ಯೋಗ ರಮಣೀಯ ಕ್ಷೇತ್ರ’ವೆಂದು ಹೆಸರಿಸಿದ. ಲಿಂಗಸ್ಥಾಪನೆ, ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿ ಕರ್ಮಯೋಗಿ ಎನಿಸಿದ. ಪ್ರಭುದೇವ ಅವನನ್ನು ಕಲ್ಯಾಣಕ್ಕೆ ಕರೆದೋಯ್ದು ಚೆನ್ನಬಸವಣ್ಣನವರಿಂದ ಇಷ್ಟಲಿಂಗದೀಕ್ಷೆ ಕೊಡಿಸಿದ. ಅನುಭವ ಮಂಟಪದ ಗೋಷ್ಠಿಯಲ್ಲಿ ಪಾಲ್ಗೊಂಡು, ಮಹಾಶಿವಯೋಗಿಯಾದ.
ಇವರು ವೈವಿಧ್ಯಮಯ ಸಾಹಿತ್ಯ ಸೃಷ್ಟಿಮಾಡಿದ್ದಾರೆ. ವಚನ ಮತ್ತು ಸ್ವರವಚನಗಳಲ್ಲಿ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತವಿದ್ದರೆ, ತ್ರಿವಿಧಿಗಳಲ್ಲಿ ‘ಯೋಗಿನಾಥ’ ಅಂಕಿತವಿದೆ. ಸದ್ಯ ಈತನ 1162 ವಚನಗಳು ದೊರೆತಿದ್ದು ಅವುಗಳಲ್ಲಿ ವೈಯುಕ್ತಿಕ ಬದುಕಿನ ಸಂಗತಿಗಳು ಧರ್ಮತತ್ವ ಜಿಜ್ಞಾಸೆ, ಸಾಮಾಜಿಕ ಕಳಕಳಿ ಪ್ರಧಾನವೆನಿಸಿವೆ. ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು.
ಗುಡಿಯಲ್ಲಿ ದೇವರು ಕಾಣೋದಕ್ಕಿಂತ ಮನುಷ್ಯನಲ್ಲಿ ದೇವರು ಕಾಣಬೇಕಿದೆ. ಕಾಣಿಕೆ ಹಾಕುತ್ತೇವೆ, ಅನ್ನದಾನ ಮಾಡುತ್ತೇವೆ. ಎಲ್ಲದಕ್ಕಿಂತ ಮಿಗಿಲಾದ ದಾನ ಯಾವುದಾದರೂ ಇದ್ದರೇ ಅದು ಮತ್ತೊಬ್ಬರಿಗೆ ಸಹಾಯ ಮಾಡುತ್ತಾ ಹಿಂಸೆಯನ್ನು ಕೊಡದೇ ಜೀವನ ಸಾಗಿಸುವುದು.. ಸಮಾಜ ಸೇವೆ ಎನ್ನುವುದು ಶ್ರೇಷ್ಠ ಕಾಯಕ ಎಂಬಂತೆ ನಡೆದುಕೊಂಡವರು ಶ್ರೀ ಶಿವಯೋಗಿ ಸಿದ್ದರಾಮೇಶ್ವರರು...
ನುಡಿಯಬಹುದು ಅದ್ವೈತವನೊಂದು ಕೋಟಿ ವೇಳೆ
ಒಮ್ಮೆ ನಡೆಯಬಹುದೆ ನಿರ್ಧರವಾಗಿ ಸದ್ಭಕ್ತಿ ಸದಾಚಾರವ
ನುಡಿದಂತೆ ನಡೆವ ನಡೆದಂತೆ ನುಡಿವ
ಸದ್ಭಕ್ತಿ ಸದಾಚಾರಯುಕ್ತರ ಮಹಾತ್ಮರ
ಪಾದವ ಹಿಡಿದು ಬದುಕಿಸಯ್ಯಾ ಪ್ರಭುವೆ ಕಪಿಲಸಿದ್ಧ ಮಲ್ಲಿಕಾರ್ಜುನಾ.
💐💐💐💐💐💐

No comments:
Post a Comment