ಕಥೆ-365
ಗೆಲುವಿನ ಮೂಲ
"ದಿನ ಕತೆ" ಶೀರ್ಷಿಕೆ ಅಡಿಯಲ್ಲಿನ ಕಥೆಗಳು, ಒಂದೂ ದಿನ ತಪ್ಪದೇ, ಇವತ್ತು 365 ದಿನಗಳನ್ನು ಪೂರೈಸಿದೆ, ಇದಕ್ಕೆ ಸಹಕಾರ ನೀಡಿದ ನನ್ನ ಶಿಷ್ಯ ಬಳಗ, ವೃತ್ತಿಬಾಂಧವರ ಜೊತೆಗೆ ಓದುಗರೆಲ್ಲರಿಗೂ ಕಥೆಗಳ ಮೂಲ ಲೇಖಕರಿಗೂ ಅಂತರ್ಜಾಲಕ್ಕೂ ತುಂಬು ಹೃದಯದ ಧನ್ಯವಾದಗಳು..
🙏🙏🙏🙏💐💐💐💐💐
Reading is like breathing in, and writing is like breathing out
ಓದುವುದು ಉಸಿರನ್ನು ಒಳ ತೆಗೆದುಕೊಂಡಂತೆ, ಬರೆಯೋದು ಉಸಿರನ್ನು ಹೊರ ಬಿಟ್ಟಂತೆ.
“Today a reader, tomorrow a leader.”
ಮಾರ್ಗರೇಟ್ ಫುಲ್ಲರ್ ಹೇಳುವಂತೆ ಇವತ್ತಿನ ಓದುಗ ನಾಳೆಯ ನಾಯಕ..
ಇವತ್ತಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಓದುವ ಹವ್ಯಾಸವನ್ನು ಮರೆತುಬಿಟ್ಟಂತಿದೆ...
ದಿನ ಕಥೆ ಕಳಿಸುವ ಉದ್ದೇಶವೇ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದಾಗಿದೆ..
ಅಷ್ಟೇ ಅಲ್ಲದೆ ಇವತ್ತಿನ ದಿನಮಾನಗಳಲ್ಲಿ ಪಠ್ಯಪುಸ್ತಕದ ಒತ್ತಡದ ಕಾರಣ ಮಾನವೀಯ ಮೌಲ್ಯಗಳನ್ನು ನೈತಿಕ ಕಥೆಗಳನ್ನು ಕೇಳುವುದಾಗಲಿ ಓದುವುದಾಗಲಿ ಮಕ್ಕಳಿಂದ ಸಾಧ್ಯವಾಗುತ್ತಿಲ್ಲ..
ಓದುವುದು ಮುಖ್ಯವಲ್ಲ, ಓದಿನಿಂದ ನಾನು ಎಷ್ಟು ಸಂಸ್ಕಾರ ಕಲಿತೆ, ಅದರಿಂದ ಸಮಾಜಕ್ಕೆ ನಾನೇನು ಕೊಟ್ಟೆ ಅನ್ನೋದು ಮುಖ್ಯವಾಗುತ್ತದೆ..
ಹೀಗಾಗಿ ಮಕ್ಕಳಲ್ಲಿ ಓದುವ ಹವ್ಯಾಸದ ಜೊತೆಗೆ ಮಾನವೀಯ ಮೌಲ್ಯಗಳನ್ನು ತುಂಬುವ ಪ್ರಯತ್ನವೇ "ದಿನ ಕಥೆ" ಶೀರ್ಷಿಕೆಯ ಉದ್ದೇಶ..
ಓದೋಣ ಮಕ್ಕಳನ್ನು ಓದಿಸೋಣ..💐💐💐💐💐💐💐
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿ ಭೋಂಸ್ಲೆ (ಫೆಬ್ರುವರಿ ೧೯, ೧೬೩೦ - ಏಪ್ರಿಲ್ ೩, ೧೬೮೦) ಮರಾಠಾ ರಾಜ್ಯದ ಸ್ಥಾಪಕರು. ಇವರು ೧೬೩೦ರಲ್ಲಿ ಪುಣೆಯ ಹತ್ತಿರವಿರುವ ಶಿವನೇರಿ ಎಂಬಲ್ಲಿ ಜನಿಸಿದರು. ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು.
ಗೆಲುವಿನ ಮೂಲ:
ಒಂದು ಸಲ ಶಿವಾಜಿ ಮಹಾರಾಜರು ಒಂದು ಕೋಟೆಯಿಂದ ಮತ್ತೊಂದು ಕೋಟೆಗೆ ಹೊಗುವಾಗ ದಾರಿ ತಪ್ಪಿದರು. ಆಗ ಅವರು ಒಂದು ಬೆಟ್ಟ ಏರಿ ಯಾವುದಾದರು ಹಳ್ಳಿ ಇದೆಯಾ ಎಂದು ನೋಡಿದರು, ಆದರೆ ಯಾವ ಹಳ್ಳಿಯೂ ಕಾಣಿಸಲಿಲ್ಲ. ರಾತ್ರಿಯಾಗುತ್ತಿತ್ತು. ಅವರು ಬೆಟ್ಟ ಇಳಿದು ಬರುವಾಗ ದೂರದಲ್ಲಿ ದೀಪವೊಂದು ಮಿಣುಕುವುದು ಕಾಣಿಸುತ್ತಿತ್ತು. ಅದೇ ದಾರಿಯಲ್ಲಿ ಹೋದಾಗ ಅವರು ಒಂದು ಗುಡಿಸಲಿನ ಬಳಿ ಬಂದರು.
ಗುಡಿಸಲಿನಲ್ಲಿ ಒಬ್ಬ ವೃದ್ಧ ಮಹಿಳೆ ಇದ್ದಳು. ಅವಳು ಮಹಾರಾಜರನ್ನು ಒಬ್ಬ ಸೈನಿಕನಿರಬೇಕೆಂದು ತಿಳಿದು ಸ್ವಾಗತಿಸಿದಳು. ಅವನು ಹಸಿದಿರುವನೆಂದು ಅರಿತ ಮಹಿಳೆಯು ಕೈ ಕಾಲು ಮುಖ ತೊಳೆಯಲು ನೀರು ನೀಡಿದಳು ಮತ್ತು ವಿಶ್ರಮಿಸಲು ಚಾಪೆಯನ್ನು ಹಾಸಿದಳು. ಅವನು ವಿಶ್ರಮಿಸಿದ ನಂತರ ಮಹಿಳೆಯು ಬಸಿ ಬಿಸಿ ಅನ್ನ ಮತ್ತು ಸಾಂಬಾರನ್ನು ತಿನ್ನಲು ನೀಡಿದಳು.
ತುಂಬಾ ಹೊಟ್ಟೆ ಹಸಿದಿದ್ದ ಶಿವಾಜಿಯು ತಕ್ಷಣ ತಿನ್ನಲು ಬಿಸಿ ಅನ್ನಕ್ಕೆ ಕೈ ಹಾಕಿದನು. ಬಿಸಿ ತಡೆಯಲಾರದೆ ಚೀರಿದನು ಮತ್ತು ಸ್ವಲ್ಪ ಅನ್ನವನ್ನು ಚಲ್ಲಿದನು. ಇದನ್ನು ನೋಡಿದ ಮಹಿಳೆಯು ಹೇಳಿದಳು, "ಅರೇ ನೀನು ಸಹ ನಿನ್ನ ಸ್ವಾಮಿ ಶಿವಾಜಿಯಂತೆ ಗಡಿಬಿಡಿ ಮಾಡುತ್ತೀಯ. ಅದಕ್ಕೆ ಕೈ ಸುಟ್ಟುಕೊಂಡೆ ಮತ್ತು ಸ್ವಲ್ಪ ಅನ್ನವನ್ನು ಬೀಳಿಸಿದೆ".
ಶಿವಾಜಿಯು ಆಶ್ಚರ್ಯದಿಂದ, "ನನ್ನ ಸ್ವಾಮಿ ಶಿವಾಜಿಯಲ್ಲಿ ತಾಳ್ಮೆ ಇಲ್ಲ ಎಂದು ನೀನು ಯಾಕೆ ಹೇಳುತ್ತೀಯ?" ಎಂದು ಕೇಳಿದನು.
ಆಗ ಮಹಿಳೆಯು ಹೇಳಿದಳು, "ನೋಡು ಮಗನೆ, ಶಿವಾಜಿಯು ತನ್ನ ಗಡಿಬಿಡಿ ಇಂದಾಗಿ ಶತ್ರುಗಳ ಸಣ್ಣ ಕೋಟೆಯನ್ನು ಗೆಲ್ಲುವ ಬದಲಾಗಿ ದೊಡ್ಡ ದೊಡ್ಡ ಕೋಟೆಗಳನ್ನು ಗೆಲ್ಲಲು ಹೊಗುತ್ತಿದ್ದಾನೆ ಮತ್ತು ಇದರಿಂದಾಗಿ ಅವನು ತನ್ನ ವೀರ ಸೈನಿಕರನ್ನು ಕಳೆದುಕೊಳ್ಳುತ್ತಿದ್ದಾನೆ. ಅದರ ಬದಲಿಗೆ ತಾಳ್ಮೆಯಿಂದ ಮೊದಲು ಸಣ್ಣ ಸಣ್ಣ ಕೋಟೆಗಳನ್ನು ಗೆದ್ದರೆ ಅವನ ಬಲವೂ ಹೆಚ್ಚುತ್ತದೆ ಮತ್ತು ಸೈನಿಕರೂ ಉಳಿಯುತ್ತಾರೆ. ಅದೇ ರೀತಿ ನೀನು ಮೊದಲು ಬದಿಯಲ್ಲಿರುವ ತಣ್ಣಗಿರುವ ಅನ್ನವನ್ನು ಮೊದಲು ತಿನ್ನು"
ಶಿವಾಜಿಯು ಕೂಡಲೇ ವೃದ್ಧ ಮಹಿಳೆಯ ಮಾತಿನ ಹಿಂದಿರುವ ಅರ್ಥವನ್ನು ಅರಿತನು ಮತ್ತು ಯಾವುದೇ ತೀರ್ಮಾನವನ್ನು ಗಡಿಬಿಡಿಯಲ್ಲಿ ಮಾಡಬಾರದೆಂದು ಅರಿತನು. ಮುಂದೆ ಚಿಕ್ಕ ಚಿಕ್ಕ ಕೋಟೆಗಳನ್ನು ಗೆಲ್ಲುತ್ತಾ ದೊಡ್ಡಕೋಟೆ ಕಟ್ಟಿ, ಮಹಾರಾಜನಾಗಿ ಮೆರೆದನು..
ಇದು ನಮ್ಮ ಜೀವನಕ್ಕೂ ಅನ್ವಯವಾಗುತ್ತೆ ನಾವು ಒಮ್ಮೆಲೇ ಶ್ರೀಮಂತರಾಗಬೇಕು ಬೆಳಗಾಗುವುದರೊಳಗೆ ಸಾಧಕರಾಗಬೇಕು, ಒಮ್ಮೆಲೆ ಕೆಲಸ ಮುಗಿಸಿ ಬಿಡಬೇಕೆಂದು ಪ್ರಯತ್ನ ಮಾಡಿ ಅನೇಕ ಬಾರಿ ಸೋಲುತ್ತೇವೆ, ಸುಡುವ ಅನ್ನವನ್ನು ಕೈ ಸುಡದ ಹಾಗೆ ಹೇಗೆ ಉಣ್ಣುತೆವೆಯೋ, ಹಾಗೆಯೆ ನಮ್ಮ ಪ್ರಯತ್ನ ನಮ್ಮ ಗುರಿಯ ಕಡೆಗೆ ಸಾಗಿದಾಗ ನಾವು ಅಂದುಕೊಂಡಿದ್ದನ್ನು ಸಾಧಿಸುತ್ತೇವೆ..
💐💐💐💐
No comments:
Post a Comment