ಕಥೆ-370
ಅಂದು ಮಬ್ಬಾಗಿದ್ದ ಸೂರ್ಯ ಇಂದು ಪ್ರಜ್ವಲಿಸುತ್ತಿದ್ದ
(ಕಾಲಚಕ್ರ ಎಲ್ಲರಿಗೂ ಒಂದೇ)
ಆಕೆಗೆ ಈಗಷ್ಟೇ ಜ್ಞಾನ ಬಂದಿತ್ತು. 40ರ ವಯಸ್ಸಿನಲ್ಲೇ ಗರ್ಭಕೋಶದ ಗಡ್ಡೆಯ ಮೇಜರ್ ಆಪರೇಷನ್ ಮುಗಿದಾಗ ಎಲ್ಲರೂ ಕಂಗಾಲಾಗಿದ್ದರು, ಆಕೆಗೆ O -ve ರಕ್ತ ಸಿಗದಾಗ.. ಎಲ್ಲರೂ ಆಕೆಯ ಪ್ರಾಣದ ಅಸೆ ಬಿಟ್ಟಿದ್ದರು
ಅಷ್ಟರಲ್ಲಿ .. ಕಾರಿನಲ್ಲಿ ಬಂದ ಗುಂಗುರು ಕೂದಲ ಯುವಕ ರಕ್ತ ಕೊಟ್ಟು ಜೀವ ಉಳಿಸಿ ಹೋಗಿದ್ದ.. ಆಕೆಗೂ ಕುತೂಹಲ ಯಾರಿರಬಹುದು ನನ್ನ ಜೀವ ಉಳಿಸಿದ ಭಗವಂತ ಎಂದು.
ಅವರಿವರ ಬಳಿ ಕೇಳಿದರೂ ಅದು ವ್ಯರ್ತವಾಗಿತ್ತು. ಬೇಸರವಿತ್ತು ಆಕೆಯ ಮುಖದಲ್ಲಿ. ಅಷ್ಟರಲ್ಲಿ ನರ್ಸ್ ಒಬ್ಬಳು ಬಂದು, ನಿಮಗೆ ರಕ್ತಕೊಟ್ಟ ವ್ಯಕ್ತಿ ನಿಮಗೆ ಈ ಕಾಗದವೊಂದನ್ನು ಕೊಟ್ಟಿದ್ದಾನೆ.. ಎಂದಾಗ ತಲೆ ಎತ್ತಿ ನೋಡಿದಳು.
ಪತ್ರ ಒಡೆದು ನೋಡಿದರೆ ಅಲ್ಲಿ ಓರೇ ಕೋರೆ ಅಕ್ಷರಗಳಿದ್ದವು.
ಕಣ್ಣು ಬಿಟ್ಟು ಓದಿದಳು.. ಹಾಯ್ ನಾನು ಸೂರ್ಯ, ನೆನಪಿದೆಯಾ ಸರಿಯಾಗಿ 20 ವರ್ಷದ ಹಿಂದೆ ನೀನಾಗ ಕಾಲೇಜು ಹುಡುಗಿ...
ಆಕೆ ಬೆವರುತಿದ್ದಳು...ಪತ್ರ ಮುಂದುವಸರಿಸಿದಳು.. ನಾನು ಬಡವನಾಗಿದ್ದೆ. ಶಾಲೆಗೆ ಹೋಗಲು ಆಗದೆ, ಹಣಕ್ಕಾಗಿ ಯಾರದೋ ಮನೆಯಲ್ಲಿ ಕುರಿ ಕಾಯುತಿದ್ದೆ..ಆದರೇನು ನೀ ಕಾಲೇಜಿಗೆ ಹೋಗುವಾಗ ಬರುವಾಗ ನಿನ್ನನ್ನೇ ನೋಡುತಿದ್ದೆ.. ಅದು ಸರಿಯೋ ತಪ್ಪು ಗೊತ್ತಿಲ್ಲ, ಆ ವಯಸ್ಸು ಹಾಗೇನೋ?
ನೆನಪಿದೆಯಾ ಪ್ರೀತಿಯಿಂದ ನನಗೆ ಗೊತ್ತಿದ್ದ ಅರೆಬರೆ ಕನ್ನಡದಿಂದ, ನನ್ನ ರಕ್ತದಿಂದ ನಿನಗೊಂದು ಪತ್ರ ಬರೆದಿದ್ದೆ. ನೀನು ನಿನ್ನ ಗೆಳತಿಯರೊಂದಿಗೆ ಬಂದಾಗ ಓಡೋಡಿ ಬಂದು ನನ್ನ ಪ್ರೀತಿಯಿಂದ ಬರೆದ ಪತ್ರ ಕೊಟ್ಟು, ನನ್ನನ್ನು ಮದುವೆಯಾಗ್ತಿಯಾ ಎಂದು ಕೇಳಿದ್ದೆ.. ಸಿಟ್ಟಲ್ಲಿ ನಿನ್ನ ಮುಖ ಕೆಂಪೇರಿತ್ತು..ನನಗೆ ಇಷ್ಟ ಇಲ್ಲ ಎಂದಷ್ಟೇ ಹೇಳಬಹುದಿತ್ತು.. ಅಥವಾ ಇದು ತಪ್ಪು ಎಂದು ತಿಳಿಸಿ ಹೇಳಬಹುದಿತ್ತು, ಆದರೆ ನೀನು ರಕ್ತದಲ್ಲಿ ಬರೆದ ಆ ಪತ್ರವನ್ನು ನಿನ್ನ ಎಡ ಕಾಲಲ್ಲಿ ಒದ್ದು ಹೇಳಿದ್ದೆ ಮುಟ್ಟಾಳ .. ನಾನು ಆಕಾಶ ನೀನು ಭೂಮಿ ...ನನಗೆ ಅಮೇರಿಕಾದ ಹುಡುಗನೊಂದಿಗೆ ಮದುವೆ ಆಗುತ್ತದೆ,ಅಲ್ಲಿ ಸುಖದ ಸುಪ್ಪತ್ತಿಕೆಯಲ್ಲಿ ಜೀವಿಸುವವಳು ನಾನು. ನಿನ್ನಂತಹ ಕುರಿ ಕಾಯುವವನೊಂದಿಗೆ ಮದುವೆ ಆಗಿ ಕುರಿ ಕಾಯುವ ಅವಶ್ಯಕತೆ ನನಗಿಲ್ಲ, ಇನ್ನೊಮ್ಮೆ ಪ್ರೀತಿ ಗೀತಿ ಅಂಥ ಮುಖ ತೋರಿಸಿದರೆ ನಾನಲ್ಲ ನನ್ನ ಚಪ್ಪಲಿ ಮಾತಾಡುತ್ತದೆ ಎಂದಿದ್ದೆ. ನನ್ನ ರಕ್ತದ ಪತ್ರ ನಿನ್ನ ಚಪ್ಪಲಿನ ಕೆಳಗೆ ಬಿದ್ದು ಹರಿದಿತ್ತು, ನನ್ನ ಮನಸ್ಸು ಕೂಡ...
ಇಂದು 20 ವರ್ಷದ ನಂತರ ಅದೇ ಕುರಿ ಕಾಯುತಿದ್ದ ಸೂರ್ಯ ಜೀವನದಲ್ಲಿ ವ್ಯಾಪಾರದಲ್ಲಿ ದೊಡ್ಡ ಯಶಸ್ಸು ಪಡೆದಿದ್ದಾನೆ. ನನಗೆ ಯಾರೋ ಕರೆ ಮಾಡಿ O -ve ತುರ್ತಾಗಿ ರಕ್ತ ಬೇಕು ಎಂದರು, ರಕ್ತ ಕೊಟ್ಟೆ, ಆಮೇಲೆ ಗೊತ್ತಾಯ್ತು ಅದು ನೀವೇ ಎಂದು ಒಂದಾನೊಂದು ಕಾಲದಲ್ಲಿ.. ನೀವು ಕಾಲಲ್ಲಿ ತುಳಿದ ಅದೇ ರಕ್ತ ಇಂದು ನಿಮ್ಮ ದೇಹದಲ್ಲಿ ಹರಿಯುತ್ತಿದೆ, ನಿಮ್ಮಪ್ರಾಣ ಉಳಿಸಿದೆ.
ಜೀವನದಲ್ಲಿ ಇನ್ನೊಬ್ಬರನ್ನು ಅವಮಾನಿಸುವ ಮೊದಲು ಯೋಚಿಸಿ ಯಾಕೆಂದರೆ ಕಾಲ ಒಂದೇ ರೀತಿ ಇರುವುದಿಲ್ಲ...
ಇಂತಿ ಸೂರ್ಯ..
ಪತ್ರ ಓದುವುದು ಮುಗಿದಾಗ ಕಣ್ಣೀರ ಹನಿಗಳು ಆಕೆಯ ಕಣ್ಣಲ್ಲಿದ್ದವು. ಆತ ಅಂದು ನಾ ಹೇಳಿದ್ದಂತೆ ನನಗೆ ಮುಖ ತೋರಿಸದೆ ನನಗೆ ಪ್ರಾಣಭಿಕ್ಷೆ ನೀಡಿ ಅಲ್ಲಿಂದ ಹೋಗಿದ್ದ.
*ಕೆ ಆಸ್ಪತ್ರೆಯ 4ನೆಯ ಫ್ಲೋರ್ ಇಂದ ಕೆಳಗೆ ನೋಡಿದರೆ ಆಕೆಯ ಗಂಡ ಸ್ಕೂಟರ್ ಅಲ್ಲಿ ಬಂದಿದ್ದ.. ಸೂರ್ಯನ ಕಾರು ಹೊರಹೋಗಿತ್ತು.
ಅಂದು ಮಬ್ಬಾಗಿದ್ದ ಸೂರ್ಯ ಇಂದು ಪ್ರಜ್ವಲಿಸುತಿದ್ದ
ಓದುವ ವಯಸ್ಸಿನಲ್ಲಿ, ಹದಿಹರೆಯ ವಯಸ್ಸಿನ ಮಕ್ಕಳು ಪ್ರೀತಿ ಅಂತ ಹೇಳಿ ಜೀವನ ಮಾಡಿಕೊಳ್ಳುವುದೇ ಜಾಸ್ತಿ.. ಪಾಲಕರಾದವರು ಸಹ ಮಕ್ಕಳಿಗೆ ಓದಲು ಬೆನ್ನೆಲುಬಾಗಬೇಕು, ಅದಲ್ಲದೆ ಸರಿ, ತಪ್ಪುಗಳ ತಿಳಿ ಹೇಳಬೇಕು
ಪ್ರಪಂಚ ಬಹಳ ಚಿಕ್ಕದು ಅನ್ನಿಸುತ್ತದೆ, ಅವಮಾನಕ್ಕೊಳಗಾದವರು ನಮಗೆ ಸಹಾಯ ಮಾಡುವ ಪರಿಸ್ಥಿತಿ ಬರಬಹುದು. ಗೊತ್ತಿಲ್ಲದೇ ಮಾಡಿದ ತಪ್ಪುಗಳನ್ನು ತಿಳಿದವರು ತಿದ್ದಿ ಹೇಳುವ ಕೆಲಸ ಮಾಡಬೇಕು. ಅವಮಾನ ಮಾಡಬಾರದು, ಕಾಲಚಕ್ರದಲ್ಲಿ ಎಲ್ಲರೂ ಒಂದೇ, ಕೆಲವೊಮ್ಮೆ ಉಪ್ಪರಿಗೆ ತಿಪ್ಪೆಯಾಗಬಹುದು, ತಿಪ್ಪೆ ಉಪ್ಪರಿಗೆಯಾಗಬಹುದು.
ನಾವು ಹಣ,ವಿದ್ಯೆ ಹಾಗು ಅಧಿಕಾರದ ಮದ ತಲೆಗೇರದಂತೆ ನೋಡಬೇಕಾದ್ದು ಅತೀ ಅವಶ್ಯಕ.. ಆ ಮದದೊಂದಿಗೆ ಬರುವ ಅಹಂಕಾರ ನಮ್ಮನ್ನೇ ನಾಶಗೊಳಿಸುತ್ತದೆ.. ನಿರ್ಲಕ್ಷಿಸುವ, ಚುಚ್ಚಿ ಮಾತನಾಡುವ ಸ್ವಭಾವ ವನ್ನು ಬದಲಾಯಿಸಿಕೊಳ್ಳದಿದ್ದರೆ ಕಾಲವೇ ನಮಗೆ ಉತ್ತರಿಸುತ್ತದೆ,.. ಹಾಗಾಗಿ ಇನ್ನೊಬ್ಬರನ್ನು ಅವಮಾನಿಸುವ ಮೊದಲು ಹತ್ತು ಬಾರಿ ಯೋಚಿಸಿ ...🙏🙏🙏🙏
No comments:
Post a Comment