ಕಥೆ-380
ಆಂತರ್ಯದ ಮೌಲ್ಯವನ್ನು ಅರಿಯುವ ಒಳಗಣ್ಣು ತೆರೆದುಕೊಳ್ಳಲಿ.
ಪ್ರವಾಸಿಗನೊಬ್ಬ ಸಮುದ್ರ ತೀರದ ಮರಳಿನಲ್ಲಿ ಆಟವಾಡುತ್ತಿದ್ದ. ಮರಳಿನಲ್ಲಿ ಗುಹೆ ತೋಡುತ್ತಾ, ಸಂಜೆಯ ಬಿಸಿಲನ್ನು ಅನುಭವಿಸುತ್ತಿದ್ದ. ಹಾಗೆ ಮಾಡುತ್ತಿದ್ದಾಗ ಆತನಿಗೆ ಮರಳಿನಲ್ಲಿ ಒಂದು ಚೀಲ ಸಿಕ್ಕಿತು. ಅದರಲ್ಲಿ ಒಂದಷ್ಟು ಒಣಗಿದ ಮಣ್ಣಿನ ಗಟ್ಟಿ ಉಂಡೆಗಳಿದ್ದವು. ಅವುಗಳನ್ನು ಅದೇಕೆ ಚೀಲದಲ್ಲಿ ಸುತ್ತಿ ಮರಳಿನಲ್ಲಿ ಅಡಗಿಸಿದ್ದಾರೆಂದು ಪ್ರವಾಸಿಗನಿಗೆ ತಿಳಿಯಲಿಲ್ಲ. ಆದರೂ ಆತ ಆ ಮಣ್ಣಿನ ಉಂಡೆಗಳಿದ್ದ ಚೀಲವನ್ನು ಎತ್ತಿಕೊಂಡು ಹೊರಟ. ಸಮುದ್ರ ತೀರದುದ್ದಕ್ಕೂ ಒಂದೊಂದೇ ಉಂಡೆಗಳನ್ನು ನೀರಿಗೆಸೆಯುತ್ತಾ ನಡೆದು ಹೋಗುತ್ತಿದ್ದ. ಇದ್ದಕ್ಕಿದ್ದಂತೆ ಒಂದು ಉಂಡೆ ನೆಲಕ್ಕೆ ಬಿದ್ದು ಸ್ವಲ್ಪ ಒಡೆದು ಹೋಯಿತು. ಆಗ ಅದರೊಳಗಿದ್ದ ಬೆಲೆಬಾಳುವ ವಜ್ರದ ಹರಳು ಪ್ರವಾಸಿಗನ ಕಣ್ಣಿಗೆ ಬಿತ್ತು. ಅದನ್ನು ನೋಡಿ ಅಚ್ಚರಿಗೊಂಡ ಆತ ತನ್ನ ಬಳಿಯಿದ್ದ ಎಲ್ಲ ಮಣ್ಣಿನ ಉಂಡೆಗಳನ್ನೂ ಒಂದೊಂದಾಗಿ ಒಡೆದು ನೋಡಿದ. ಪ್ರತಿಯೊಂದರಲ್ಲೂ ಬೆಲೆಬಾಳುವ ಹರಳಿತ್ತು!
ಚೀಲದಲ್ಲಿ ಉಳಿದಿದ್ದ ಹತ್ತಿಪ್ಪತ್ತು ಮಣ್ಣಿನ ಉಂಡೆಗಳಲ್ಲಿ ಆತನಿಗೆ ಲಕ್ಷಾಂತರ ರುಪಾಯಿ ಬೆಲೆಬಾಳುವ ವಜ್ರದ ಹರಳುಗಳು ಸಿಕ್ಕಿದವು. ಅದನ್ನು ನೋಡಿ ಖುಷಿಯಾದ ಪ್ರವಾಸಿಗನಿಗೆ ಅಯ್ಯೋ ತಾನೆಂತ ತಪ್ಪು ಮಾಡಿದೆ ಎಂಬುದರ ಅರಿವಾಯಿತು. ಮಣ್ಣಿನ ಉಂಡೆಗಳೆಂದು ನಿಕೃಷ್ಟವಾಗಿ ತಿಳಿದು ಆತ ಈಗಾಗಲೇ ಐವತ್ತಕ್ಕೂ ಹೆಚ್ಚು ಉಂಡೆಗಳನ್ನು ಸಮುದ್ರಕ್ಕೆಸೆದು ಬಿಟ್ಟಿದ್ದ. ಅವೆಲ್ಲವುಗಳ ಒಳಗೆಯೂ ಹರಳಿದ್ದರೆ ಆತ ಕೋಟ್ಯಾಂತರ ರುಪಾಯಿ ಸಂಪಾದಿಸಬಹುದಿತ್ತು. ಯಾಕೆಂದರೆ ಅವುಗಳನ್ನು ಈಗಾಗಲೇ ಆತ ಎಸೆದಾಗಿತ್ತು.
ಇದು ನಮಗೂ, ನಿಮಗೂ ಅನ್ವಯವಾಗುತ್ತದೆ. ನಾವು ವ್ಯಕ್ತಿಯೊಬ್ಬನನ್ನು ಅಥವಾ ಕೆಲವೊಮ್ಮೆ ನಮ್ಮನ್ನು ನಾವೇ ನೋಡಿಕೊಂಡಾಗ ನಮ್ಮ ಮೌಲ್ಯವೇನೆಂದು ಅರಿವಾಗುವುದೇ ಇಲ್ಲ. ನಾವು ಹೊರಗಿನ ಮಣ್ಣನ್ನು ಕಾಣುತ್ತೇವೆಯೇ ಹೊರತು ಆಂತರ್ಯದಲ್ಲಿರುವ ಬೆಲೆ ಬಾಳುವ ವಜ್ರವನ್ನು ಹುಡುಕುವುದಿಲ್ಲ. ಯಾರೋ ಒಬ್ಬನ ಬಾಹ್ಯ ಸೌಂದರ್ಯವನ್ನು ನೋಡಿ ಈತ ಸುಂದರವಾಗಿಲ್ಲ, ಚೆನ್ನಾಗಿ ಮಾತನಾಡುವುದಿಲ್ಲ, ಶ್ರೀಮಂತನಲ್ಲ ಎಂಬ ಕಾರಣಕ್ಕೆ ಕೆಲಸಕ್ಕೆ ಬಾರದವನೆಂದು ಭಾವಿಸುತ್ತೇವೆ. ಆದರೆ ಆತನ ಆಂತರ್ಯದ ಮೌಲ್ಯವನ್ನು ಅರಿತುಕೊಳ್ಳುವಲ್ಲಿ ಸೋತು ಹೋಗುತ್ತೇವೆ.ನಮ್ಮ ನಿಮ್ಮೆಲ್ಲರ ಒಳಗೂ ಬೆಲೆಬಾಳುವ ಸಂಪತ್ತೊಂದಿದೆ, ನಮ್ಮದೇ ಆದ ವೈಶಿಷ್ಟ್ಯವಿದೆ. ಆದರೆ ತಾಳ್ಮೆಯಿಂದ ಗಮನಿಸದ ಹೊರತು ಅದು ನಮಗೆ ಕಾಣಿಸುವುದಿಲ್ಲ.
ಬದುಕಿನಲ್ಲಿ ನಾವು ಇಲ್ಲಿಯವರೆಗೆ ಅವೆಷ್ಟೋ ವಜ್ರಗಳನ್ನು ಮಣ್ಣಿನ ಉಂಡೆಯೆಂದು ಭಾವಿಸಿ ಸಮುದ್ರಕ್ಕೆ ಎಸೆದಿದ್ದೇವಲ್ಲವೇ? ಇನ್ನು ಮುಂದೆ ಹಾಗಾಗದಿರಲಿ. ಎಲ್ಲರ ಆಂತರ್ಯದ ಮೌಲ್ಯವನ್ನು ಅರಿಯುವ ಒಳಗಣ್ಣು ನಮ್ಮಲ್ಲಿ ತೆರೆದುಕೊಳ್ಳಲಿ. ಕೃಪೆ:ವಿಶ್ವ ವಾಣಿ.
No comments:
Post a Comment