ಕಥೆ-418
ಗಿಡ ನೆಡುವುದೇ ಜನನ, ಮರ ಕಡಿಯುವುದೇ ಮರಣ.
ಹೊಸ ಶೈಕ್ಷಣಿಕ ವರ್ಷದ ಹೊಸ್ತಿಲಲ್ಲಿ, ಹೊಸ ಹುರುಪಿನೊಂದಿಗೆ, ಹೊಸ ನಿರೀಕ್ಷೆಯೊಂದಿಗೆ, ಬಂದಿರುವ ಮಕ್ಕಳೇ, ತರಗತಿಯ ವಿನ್ಯಾಸದಲ್ಲಿ, ಶಾಲಾವರಣದಲ್ಲಿ, ಹೊಸದೇನು ಇಲ್ಲದಿದ್ದರೆ ನಾವೇಕೆ ಅದನ್ನು ಹೊಸ ಶೈಕ್ಷಣಿಕ ವರ್ಷ ಎನ್ನಬೇಕು?
ಬದಲಾವಣೆ ಜಗದ ನಿಯಮ
(Change is the law of nature)
ಹೊಸ ಶೈಕ್ಷಣಿಕ ವರ್ಷದ ಮೊದಲ ಕಾರ್ಯಕ್ರಮ ಅದೇ ವಿಶ್ವ ಪರಿಸರ ದಿನಾಚರಣೆ...
ಪ್ರತಿ ವರ್ಷ ಜೂನ್ 05ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದು ಕೇವಲ ಫೋಟೋ ತೆಗೆಯುವ ಕಾರ್ಯಕ್ರಮ ಆಗಬಾರದು. ಪರಿಸರ ಉಳಿಸಿಕೊಳ್ಳಲು ನಮಗೆ ಭೂಮಿ ಎಚ್ಚರಿಕೆ ಗಂಟೆಯನ್ನು ನೀಡಿದೆ. ಗಿಡ ಮರಗಳನ್ನು ಬೆಳೆಸುವ ಕೆಲಸ ಯುದ್ಧೋಪಾದಿಯಲ್ಲಿ ನಡೆಯಬೇಕಿದೆ. ಇಲ್ಲದಿದ್ದರೆ ಇದಕ್ಕೆ ಮುಂದೆ ದೊಡ್ಡ ಪಶ್ಚಾತಾಪ ಪಡಬೇಕಾಗುತ್ತದೆ.. ಪ್ರತಿಯೊಬ್ಬರ ಮನಸ್ಥಿತಿ ಬದಲಾಗದ ಹೊರತು, ಪ್ರಯತ್ನ ಮಾಡಲ್ಲ, ಪ್ರಯತ್ನ ಮಾಡದ ಹೊರತು, ಮರಗಳು ಬೆಳೆಯಲ್ಲ, ಮರಗಳು ಬೆಳೆಯದ ಹೊರತು ನಾವು ಉಳಿಯಲ್ಲ. ರೋಡಿಗೆ ಇಳಿಯುವ ವಾಹನಗಳನ್ನು ತಡೆಯುವ ಸಾಮರ್ಥ್ಯ ನಮ್ಮಲ್ಲಿಲ್ಲ, ಆದರೆ ಗಿಡ ಮರಗಳನ್ನು ಬೆಳೆಸುವ ಸಾಮರ್ಥ್ಯ ನಮಗಿದೆ. ಪ್ರಯತ್ನದಲ್ಲಿ ಫಲವಿದೆ..
ಈ ವರ್ಷ ವಿಶ್ವ ಪರಿಸರ ದಿನದ 2024ರ ಧೇಯ ವಾಕ್ಯವು "ಭೂಮಿ ಪುನಃಸ್ಥಾಪನೆ" ಭೂಮಿಯ ಉತ್ತಮ ಪರಿಸರವನ್ನು ಮರುಸ್ಥಾಪನೆ ಮಾಡುವುದಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯು ಕೈಗಾರಿಕೀಕರಣ ಮತ್ತು ನಗರೀಕರಣ ಉಂಟು ಮಾಡಿ, ಮರಗಳನ್ನು ಬಲಿ ಪಡೆಯುತ್ತಿದೆ ಮತ್ತು ಇದು ಪ್ರಪಂಚದಾದ್ಯಂತ ಗಂಭೀರ ಸಮಸ್ಯೆಯಾಗಿದೆ. ಇದರ ಪರಿಣಾಮವನ್ನು ನಾವೆಲ್ಲರೂ ಈಗ ಅನುಭವಿಸುತ್ತಿದ್ದೇವೆ.
ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ವಿಪರೀತ ವಾಹನಗಳು ಮಾಲಿನ್ಯದ ಪ್ರಮಾಣ ಹೆಚ್ಚಿಸುತ್ತಿವೆ.. ಅದೇ ರೀತಿ ಗಿಡಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಇದರ ಪರಿಣಾಮವೇ ಜಾಗತಿಕ ತಾಪಮಾನದ ಏರಿಕೆ, ಮೇ ತಿಂಗಳಲ್ಲಿ ನಾವು ಅನುಭವಿಸಿದ ಧಗ ಧಗ ಉರಿ ಶಾಖದ ಅಲೆಗಳು ಈಗಲೂ ಬಿಸಿ ನೆನಪಾಗಿದೆ. (heat waves). ಇನ್ನು ಮುಂದೆ ಏನೇನು ಕಾದಿದ್ದಾವೆ ಗೊತ್ತಿಲ್ಲ.. ಪ್ರತಿಯೊಬ್ಬರೂ ಪ್ರಮಾಣ ಮಾಡೋಣ. ಮಕ್ಕಳಿಗೂ ಸಹ ಪರಿಸರದೊಂದಿಗೆ ಶಿಕ್ಷಣ ಪಡೆಯುವ ಸಂಸ್ಕಾರ ಕೊಡಬೇಕಿದೆ. ಸಮಾಜ ನನಗೇನು ಕೊಟ್ಟಿದೆ ಎನ್ನುವುದರ ಬದಲು ಸಮಾಜಕ್ಕಾಗಿ ನಾನೇನೂ ನೀಡಿದೆ, ನಾನೇನು ನೀಡಬಲ್ಲೆ ಎನ್ನುವಂತ ಮನೋಭಾವ ಮಕ್ಕಳಲ್ಲಿ ಬೆಳೆಯಬೇಕಿದೆ.. ಕೇವಲ ಜ್ಞಾನ ಹೊಂದುವುದರಿಂದ ಲಾಭವಿಲ್ಲ, ಆ ಜ್ಞಾನ ಸಮಾಜಕ್ಕೆ ಉಪಯೋಗವಾಗಬೇಕು. ಆಗ ಆ ಜ್ಞಾನಕ್ಕೆ ಸಾರ್ಥಕತೆ ಬರುತ್ತದೆ.ಸಮಾಜದಿಂದ ಬೆಳೆದ ನಾವು ಸಮಾಜಕ್ಕೆ ಏನೂ ಕೊಡದಿದ್ದರೆ ಸಮಾಜದ್ರೋಹಿಗಳಾಗುತ್ತೇವೆ. ನಿಜ ಜೀವನದಲ್ಲಿ ಸುಖಿಗಳು ಪರಿಸರ ಪ್ರೇಮಿಗಳು...
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಮ್ಮ ಶಾಲೆಗೆ ಆಗಮಿಸಿ ಗಿಡಮರ ಬೆಳೆಸಲು ಸಹಕಾರ ನೀಡುವುದಾಗಿ ಘೋಷಿಸಿದ ಅನೇಕ ಮಹನೀಯರಿಗೆ ಧನ್ಯವಾದಗಳು.
ನಾಲ್ಕು ವರ್ಷದಿಂದ ಗಿಡ ಮರಗಳನ್ನು ಬೆಳೆಸುವ ಸತತ ಶ್ರದ್ಧಾಪೂರ್ವಕ ಪ್ರಯತ್ನ, ವಿದ್ಯಾರ್ಥಿಗಳ & ಸಿಬ್ಬಂದಿಯ ಸಹಕಾರದಿಂದ ನಡೆದಿದೆ, ಕೆಲವೊಮ್ಮೆ ರಜಾ ದಿನಗಳಲ್ಲೂ ಸಹ ಗಿಡ ಮರ ಬೆಳೆಸುವ ಪ್ರಯತ್ನ ನಡೆದಿದೆ.. ಆದರೆ ಪ್ರಯತ್ನಕ್ಕೆ ತಕ್ಕಂತೆ ಫಲ ಸಿಕ್ಕಿಲ್ಲ....
ಹಿರೇಮ್ಯಾಗೇರಿ ಪ್ರೌಢಶಾಲಾ ಆವರಣದಲ್ಲಿ ಗಿಡ ಮರ ಬೆಳೆಸುವುದು ಒಂದು ಸವಾಲಿನ ಕೆಲಸ. ಜನರ ಕಾಟ, ದನದ ಕಾಟ, ಮಂಗಗಳ ಕಾಟ ಇವೆಲ್ಲವುಗಳನ್ನು ಮೀರಿ ಇವತ್ತು ಸುಮಾರು ನೂರಕ್ಕೂ ಹೆಚ್ಚು ಮರಗಳು ಹುಲುಸಾಗಿ ಬೆಳೆಯುತ್ತಿರುವುದು ಒಂದು ಖುಷಿಯ ಸಂಗತಿ.. ಇದಕ್ಕೆ ಸಹಕಾರ ನೀಡಿದ ಮುಖ್ಯೋಪಾಧ್ಯಾಯರು, ನಮ್ಮ ಸಿಬ್ಬಂದಿ ವರ್ಗ, ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ಶಿಕ್ಷಣ ಪ್ರೇಮಿಗಳಿಗೆ ಹಸಿರುಪಡೆ ತಂಡದ ಪರವಾಗಿ ಧನ್ಯವಾದಗಳು..
Shankargouda Basapur
AM GHS Hiremyageri
No comments:
Post a Comment