ಕಥೆ-573
ನಾನು ಬಡವನಲ್ಲ
ಯುಕ್ಲಿಡ್ ಶ್ರೇಷ್ಠ ಖಗೋಲ ವಿಜ್ಞಾನಿ. ಆತ ತನ್ನ ಆಯುಷ್ಯವನ್ನೆಲ್ಲ ಆಕಾಶದ ನಿರೀಕ್ಷಣೆ, ಪರೀಕ್ಷಣೆಯಲ್ಲಿಯೇ ಕಳೆದ. ಮಧ್ಯರಾತ್ರಿ ಜಗವೆಲ್ಲ ಸುಖನಿದ್ರೆಯಲ್ಲಿದ್ದಾಗ ಯುಕ್ಲಿಡ್ ಅನಂತ ಆಕಾಶದಲ್ಲಿ ಗ್ರಹ-ತಾರೆಗಳನ್ನು ಎಣಿಸಿ ಗುಣಿಸಿ, ಕೂಡಿ-ಕಳೆದು ಸಂತಸಪಡುತ್ತಿದ್ದ. ಆತನ ತಲೆ ತುಂಬ ಆಕಾಶ, ಕಣ್ ತುಂಬ ನಕ್ಷತ್ರಗಳು. ಆತನ ಸೊಂಶೋಧನೆಗಳಿಂದ ಜಗತ್ತು ಖಗೋಲ ಶಾಸ್ತ್ರದಲ್ಲಿ ಸಿರಿವಂತವಾಗಿತ್ತು! ಅವನು ಮಾತ್ರ ಬಡವನಾಗಿಯೇ ಉಳಿದಿದ್ದ!.
ಒಂದು ದಿನ ಯುಕ್ಲಿಡ್ ನ ಗೆಳೆಯ ಕೇಳಿದ- “ನೀನು ಶ್ರೇಷ್ಠ ವಿಜ್ಞಾನಿ; ನಿನ್ನಿಂದ ದೇಶಕ್ಕೆ ಸಾಕಷ್ಟು ಉಪಕಾರವಾಗಿದೆ. ನೀನು ಒಪ್ಪಿಗೆಯಿತ್ತರೆ, ನಿನ್ನ ಬಡತನ ಕಳೆಯಲು ನಮ್ಮ ರಾಜನಿಗೆ ವಿನಂತಿಸುವೆ”
ಯುಕ್ಲಿಡ್ ಹೇಳಿದ- “ನನಗೆ ಬಾಹ್ಯ ಸಿರಿಯಲ್ಲಿ ಆಸಕ್ತಿ ಇಲ್ಲ. ಅಲ್ಲದೆ ನೀನು ತಿಳಿದಿರುವಂತೆ ನಾನೇನು ಬಡವನೂ ಅಲ್ಲ. ನನ್ನ ಕಣ್ಣುಗಳು ಅನಂತ ಆಕಾಶವನ್ನೇ ತುಂಬಿಕೊಂಡಿವೆ. ತಲೆಯು ವಿಶಾಲ ವಿಶ್ವವನ್ನೇ ಧರಿಸಿದೆ!” ಯುಕ್ಲಿಡ್ ನ ಹೃದಯ ಸಿರಿವಂತಿಕೆ ಕಂಡು ಗೆಳೆಯನಿಗೆ ಬಹಳ ಸಂತೋಷವಾಯಿತು.
ಶ್ರೀ ಸಿದ್ಧೇಶ್ವರ ಸ್ವಾಮೀಜಿ.
No comments:
Post a Comment