Wednesday, November 6, 2024

 ಕಥೆ-572

ಸ್ವಾವಲಂಬನೆಯ ಆದರ್ಶ

ಪ್ರಪಂಚದಲ್ಲಿ ನಾನಾ ಬಗೆಯ ಜನರ ಗುಂಪನ್ನು ಕಾಣುತ್ತೇವೆ. ಪರಸ್ಪರ ಸಹಕಾರ, ನೆರವು, ಅಗತ್ಯ ಬಿದ್ದಾಗ ಉಪಕಾರ ಮಾಡುವುದು, ಕಷ್ಟ- ಸುಖಗಳಲ್ಲಿ ಪರಸ್ಪರ ಸಹಾನುಭೂತಿ ಇತ್ಯಾದಿ ದೃಷ್ಟಿಯಿಂದ ಈ 'ಸಮಾಜ'ದ ಕಲ್ಪನೆಯು ಉಪಯುಕ್ತವಾಗಿದೆ. ಈ 'ಸಮಾಜ'ವನ್ನು ಮೂರು ವಿಭಾಗಗಳಾಗಿ ಆರ್ಥಿಕ ದೃಷ್ಟಿಯಿಂದ ವಿಂಗಡಿಸಲಾಗುತ್ತದೆ. ಆರ್ಥಿಕವಾಗಿ ಸಮೃದ್ಧಿ ಗಳಿಸಿದವರನ್ನು ಶ್ರೀಮಂತ ವರ್ಗದವರೆಂದು ಭಾವಿಸಿದರೆ, ಅತ್ಯಂತ ಕಡು ಬಡತನದಲ್ಲಿದ್ದು ಹೊಟ್ಟೆ ತುಂಬಿಸಲು ಒದ್ದಾಡುವವರನ್ನು ಬಡ ವರ್ಗದವರೆಂದು ತಿಳಿಯುತ್ತಾರೆ. ಈ ಎರಡು ವರ್ಗಗಳ ನಡುವೆ ಮೂರನೇ ವರ್ಗವಿದೆ. ಇವರಲ್ಲಿ ಭಾರಿ ಶ್ರೀಮಂತಿಕೆಯೂ ಇರುವುದಿಲ್ಲ ಹಾಗೂ ಭಾರಿ ಬಡತನವೂ ಇರುವುದಿಲ್ಲ. ಇದೇ ಮಧ್ಯಮ ವರ್ಗ. ಇಂತಹ ಮಧ್ಯಮ ವರ್ಗದವರು ಆರ್ಥಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿಯೂ ಪ್ರಪಂಚಕ್ಕೆ ಅಮೂಲ್ಯ ಕೊಡುಗೆ ನೀಡುತ್ತಾರೆ. ರೀತಿ- ನೀತಿ, ಪರಂಪರೆ- ಸಂಪ್ರದಾಯ ಕಾನೂನು- ಕಟ್ಟಳೆಗಳನ್ನು ಪಾಲಿಸುವುದರಲ್ಲಿ ಸದಾ ಮುಂದುವರಿದಿರುತ್ತಾರೆ. ಯಾವುದಾದರೂ ಒಂದು ವೃತ್ತಿಯನ್ನು ಅವಲಂಬಿಸಿ ಜೀವನ ನಿರ್ವಹಣೆಯ ದೃಷ್ಟಿಯಿಂದ ಸ್ವಾವಲಂಬಿಗಳಾಗಿರುತ್ತಾರೆ. ಆಧ್ಯಾತ್ಮಿಕ ಸಾಧನೆಯ ದೃಷ್ಟಿಯಿಂದ ಇವರು ಮುಂದುವರಿದಾಗ, ಇವರು ಯಾವುದೇ ಕಸುಬು ಮಾಡಬೇಕಾಗಿಲ್ಲ ಎಂಬ ತಪ್ಪು ಕಲ್ಪನೆ ಕೆಲವರಲ್ಲಿರುತ್ತದೆ. ಆದರೆ ಈ ನಿಟ್ಟಿನಲ್ಲಿ ಜನರಿಗೆ ಸೂಕ್ತ ಮಾರ್ಗದರ್ಶನ ನೀಡುವ ಒಂದು ಪ್ರಸಂಗ ಮಹಾತ್ಮ ಕಬೀರರ ಬದುಕಿನಲ್ಲಿ ದೊರೆಯುತ್ತದೆ. ಹಿಂದೂ- ಮುಸಲ್ಮಾನರ ನಡುವೆ ಏಕತೆಯನ್ನು ಸಾಧಿಸಿ, ಭಕ್ತಿ ಪಂಥವನ್ನು ಸ್ವಾಗತಿಸಿ, ಉತ್ತರ ಭಾರತದಾದ್ಯಂತ ಭಕ್ತಿ- ಆಂದೋಲನದ ಮೂಲಕ ಚಿರಸ್ಥಾಯಿಯಾದ ಪ್ರಭಾವವನ್ನು ಬೀರಿದವರು ಕಬೀರರು. ಹಿಂದೂ- ಮುಸಲ್ಮಾನರಿಬ್ಬರೂ ಅವರನ್ನು ಮಹಾಸಂತರೆಂದು ಗೌರವಿಸಿದರೂ, ಅವರು ದೈನಂದಿನ ಬದುಕಿಗೆ ನೇಕಾರ ವೃತ್ತಿಯನ್ನು ಅವಲಂಬಿಸಿದ್ದರು. ಪ್ರತಿನಿತ್ಯವೂ ಬಟ್ಟೆಯನ್ನು ನೇಯ್ದು, ಅದನ್ನು ಮಾರಿ ಬಂದ ಹಣದಿಂದಲೇ ಜೀವನ ನಿರ್ವಹಣೆ ನಡೆಸುತ್ತಿದ್ದರು. ಇದನ್ನು ಕಂಡ ಕಾಶಿಯ ಶ್ರೀಮಂತ ಸೇಠ್ ಒಬ್ಬನು ಅವರ ಬಳಿ ಬಂದು 'ಸಂತರೆ, ನೀವೀಗ ಮಹಾತ್ಮರಾದ ಸಂತರಾಗಿದ್ದೀರಿ. ಹೀಗಿರುವಾಗ ಬಟ್ಟೆ ನೇಯುವ ವೃತ್ತಿಯೇಕೆ ಮಾಡುತ್ತೀರಿ? ನಾನು ನಿಮಗೆ ಅಗತ್ಯವುಳ್ಳ ಹಣಕಾಸಿನ ವ್ಯವಸ್ಥೆ ಮಾಡುತ್ತೇನೆ' ಎಂದನು. ಆಗ ಕಬೀರರು ನುಡಿದರು- 'ಸೇಠ್‌ಜೀ, ನನಗೆ ಅದರ ಅಗತ್ಯವಿಲ್ಲ. ಅದಕ್ಕೆ ಧನ್ಯವಾದ. ನಿಮಗೆ ಉಪಕಾರ ಮಾಡಲೇಬೇಕೆಂದಿದ್ದರೆ, ನೀವೊಮ್ಮೆ ಗಂಗೆಯ ದಂಡೆಯ ಬಳಿ ಹೋಗಿ, ಎಷ್ಟೋ ಮಂದಿ ಹಸಿದ ಹೊಟ್ಟೆಯ ಬಡ ಜನರು ಅಲ್ಲಿ ಮಲಗಿರುತ್ತಾರೆ. ಅವರಿಗೆ ನೆರವಾಗಿ ' ಎಂದಾಗ, ಸೇಠ್‌ಜೀ ಆ ಬಡಜನರಿಗಾಗಿ ಅನ್ನದಾನದ ವ್ಯವಸ್ಥೆ ಮಾಡಿದರು. ಇಂದಿಗೂ ಅನ್ನದಾನದ ವ್ಯವಸ್ಥೆ ಅಲ್ಲಿ ಮುಂದುವರಿದಿದೆ ಎನ್ನಲಾಗಿದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಜೀವನ ನಿರ್ವಹಣೆಗಾಗಿ ಒಂದು ವೃತ್ತಿಯನ್ನು ಅವಲಂಬಿಸಿರಬೇಕು ಮತ್ತು ಸ್ವಾವಲಂಬಿಯಾಗಿರಬೇಕು ಎಂಬ ಆದರ್ಶವನ್ನು ನಿರೂಪಿಸಲಾಗಿದೆ. ಮಹಾತ್ಮಾ ಗಾಂಧೀಜಿ, ಆಚಾರ್ಯ ವಿನೋಬಾ ಭಾವೆ ಮೊದಲಾಗಿ ಆಧುನಿಕ ಯುಗದ ಅನೇಕ ಸಂತರು ಇಂತಹ ಸ್ವಾವಲಂಬನೆಯ ಆದರ್ಶಕ್ಕೆ ಮನ್ನಣೆ ನೀಡಿದ್ದಾರೆ. ಎಷ್ಟೇ ಶ್ರೇಷ್ಠ ಮಟ್ಟದ ಸಾಧಕನೇ ಆಗಿರಲಿ, ಆತನ ಬದುಕು ಇತರರಿಗೆ ಆದರ್ಶಪ್ರಾಯವಾಗಿರಬೇಕಾಗಿದ್ದರೆ, ಇಂತಹ ಸ್ವಾವಲಂಬನೆ ಅತಿ ಆವಶ್ಯಕವಾಗಿದೆ.

ಕೃಪೆ: ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು