ಕಥೆ-621
ತಾಯಿ ಕಲಿಸಿದ ಪಾಠ
ವ್ಯವಹಾರಿಕ ಪ್ರೇಮದಲ್ಲಿ ಗಳಿಕೆಯ ಉದ್ದೇಶವಿದೆ. ವೈಷಯಿಕ ಪ್ರೇಮದಲ್ಲಿ ಮೋಹವಿದೆ, ಆಕರ್ಷಣೆಯಿದೆ. ಉದಾತ್ತ ಪ್ರೇಮದಲ್ಲಿ ಮೋಹವೂ ಇಲ್ಲ, ಲಾಭದ ದೃಷ್ಟಿಕೋನವೂ ಇಲ್ಲ. ನನಗೆ ಏನಾದರೂ ಆಗಲಿ; ಇನ್ನೊಬ್ಬರಿಗೆ ಒಳ್ಳೆಯದಾಗಲಿ, ಹಿತವಾಗಲಿ, ಲಾಭವಾಗಲಿ ಎಂಬ ಸದ್ಭಾವವಿದೆ. ಅವರನ್ನೇ ದೇಶಭಕ್ತರು, ಈಶಭಕ್ತರು ಎಂದು ಕರೆಯುತ್ತಾರೆ.
ಈಶ್ವರಚಂದ್ರ ವಿದ್ಯಾಸಾಗರರು ಚಿಕ್ಕ ಬಾಲಕರಾಗಿದ್ದಾಗ ನಡೆದ ಒಂದು ಘಟನೆ. ಅವರ ತಾಯಿ ತುಂಬಾ ಸುಸಂಸ್ಕೃತರು. ಮಗನಿಗೂ ಒಳ್ಳೆಯ ಸಂಸ್ಕಾರವನ್ನು ಕೊಟ್ಟು ಬೆಳೆಸುತ್ತಿದ್ದರು. ತಾಯಿ ದಿನಾಲು ನಸುಕಿನಲ್ಲಿ ಎದ್ದು ಅಂಗಳದ ಕಸ ಗುಡಿಸಿ ಸ್ವಚ್ಛಗೊಳಿಸುತ್ತಿದ್ದಳು. ಗುಡಿಸಿದ ಕಸ ಚೆಲ್ಲುವ ಮೊದಲೇ ನೆರೆ ಮನೆಯವರು ತಮ್ಮ ಕಸವನ್ನು ತಂದು ಇವರ ಮನೆಯ ಮುಂದೆ ಹಾಕುತ್ತಿದ್ದರು, ಆದರೆ ಈಶ್ವರಚಂದ್ರರ ತಾಯಿ ಒಂದಿಷ್ಟೂ ಬೇಸರಿಸದೆ ತಮ್ಮ ಮನೆಯ ಕಸದೊಂದಿಗೆ ಅದನ್ನೂ ಎತ್ತಿಕೊಂಡು ದೂರ ಚೆಲ್ಲಿ ಬರುತ್ತಿದ್ದರು. ಒಂದು ದಿನ ಬಾಲಕ ಈಶ್ವರಚಂದ್ರ ತಮ್ಮ ತಾಯಿಗೆ ಕೇಳಿದರು- ಒಂದು ವರ್ಷ ಮೇಲಾಯಿತು, ನೋಡುತ್ತಿದ್ದೇನೆ ನೆರೆಮನೆಯವರ ಕಸವನ್ನು ನೀನೇ ಚೆಲ್ಲಿ ಬರುತ್ತಿರುವಿ. ಇದು ಹೀಗೆ ಎಷ್ಟು ದಿವಸ ಮಾಡುವಿಯಮ್ಮ?' ತಾಯಿ ಹೇಳಿದರು- 'ಮಗು, ಇತರರಿಗೆ ಒಳ್ಳೆಯದನ್ನು ಮಾಡುವುದು ನನ್ನ ಹುಟ್ಟುಗುಣ. ಇತರರಿಗೆ ಒಳ್ಳೆಯದಲ್ಲದ್ದನ್ನು ಮಾಡುವುದು ಅವರ ಹುಟ್ಟುಗುಣ ಇರಬಹುದು. ಅವರು ತಮ್ಮ ಗುಣವನ್ನು ಎಷ್ಟು ನಿಷ್ಠೆಯಿಂದ ಉಳಿಸಿಕೊಂಡು ಬಂದಿದ್ದಾರೆ. ನಾನೇಕೆ ಇನ್ನೊಬ್ಬರಿಗೆ ಸಹಾಯ ಮಾಡುವ ನನ್ನ ಹುಟ್ಟುಗುಣ ಬಿಡಲಿ?' ತಾಯಿಯ ಈ ಸದ್ಗುಣದಿಂದ ಪ್ರೇರಣೆ ಪಡೆದ ಅದೇ ಬಾಲಕ ಈಶ್ವರಚಂದ್ರ ಮುಂದೆ ಮಹಾನ್ ಸಂತನಾಗಿದ್ದ! ಇದಲ್ಲವೇ ತಾಯಿ ನಮಗೆ ಕಲಿಸಬೇಕಾದ ಪಾಠ!
ಶ್ರೀ ಸಿದ್ದೇಶ್ವರ ಸ್ವಾಮಿಗಳು
No comments:
Post a Comment