ಕಥೆ-618
*ಸಾಧನೆಗೆ ಮುನ್ನುಡಿಯೇ ಪ್ರೇರಣೆ*
ಯುವಕನೊಬ್ಬ ಹೆಚ್ಚುವರಿ ಆಟಗಾರನಾಗಿ ಫುಟ್ಬಾಲ್ ತಂಡದಲ್ಲಿದ್ದ. ಆತ ಎಂದೂ ಹನ್ನೊಂದು ಮಂದಿ ತಂಡದೊಳಗೆ ಆಡಿದವನಲ್ಲ; ಆದರೆ ತಪ್ಪದೇ ಅಭ್ಯಾಸಕ್ಕೆ ಬರುತ್ತಿದ್ದ. ಆಟದ ಅಭ್ಯಾಸದ ವೇಳೆ ಆತನ ತಂದೆ ಮೈದಾನದ ಮೂಲೆಯಲ್ಲಿ ಕುಳಿತ್ತಿದ್ದರು. ಫುಟ್ಬಾಲ್ ಪಂದ್ಯಾವಳಿ ಪ್ರಾರಂಭವಾಗಿ ಸೆಮಿಫೈನಲ್ ಹಂತ ತಲುಪಿದರೂ ಪತ್ತೆಯೇ ಇಲ್ಲದ ಆಟಗಾರ, ಅಂತಿಮಪಂದ್ಯ ಇನ್ನೇನು ಶುರುವಾಗುತ್ತದೆ ಎನ್ನುವಾಗ ಏಕಾಏಕಿ ಕೋಚ್ ಬಳಿ ಧಾವಿಸಿ ‘ನೀವು ನನ್ನನ್ನು ಹೆಚ್ಚುವರಿ ಆಟಗಾರನನ್ನಾಗಿಯೇ ಬಳಸಿಕೊಂಡಿದ್ದೀರೇ ಹೊರತು ಯಾವ ಪಂದ್ಯದಲ್ಲೂ ಆಡಿಸಿಲ್ಲ. ದಯವಿಟ್ಟು ಇಂದು ಅವಕಾಶ ಕೊಡಿ’ ಎಂದು ಕೇಳಿಕೊಂಡ. ಅದಕ್ಕೆ ಕೋಚ್, ‘ನಿನಗಿಂತ ಚೆನ್ನಾಗಿ ಆಡುವವರು ತಂಡದಲ್ಲಿದ್ದಾರೆ. ಅಲ್ಲದೆ ಅಂತಿಮ ಪಂದ್ಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ನಾನು ತಯಾರಿಲ್ಲ’ ಎಂದರು. ‘ಹಾಗೆನ್ನಬೇಡಿ, ಅವಕಾಶ ಕೊಟ್ಟುನೋಡಿ; ನಿಮ್ಮ ನಿರೀಕ್ಷೆಗೂ ಮೀರಿ ಆಡುತ್ತೇನೆ’ ಎಂದು ಅಂಗಲಾಚಿದ ಯುವಕ. ‘ಸರಿ, ತಂಡದ ಪ್ರತಿಷ್ಠೆ ಪಣಕ್ಕಿಟ್ಟು ನಿನ್ನನ್ನು ತಂಡಕ್ಕೆ ತೆಗೆದುಕೊಳ್ಳುತ್ತಿದ್ದೇನೆ, ನಿರೀಕ್ಷೆ ಹುಸಿಗೊಳಿಸಬೇಡ’ ಎಂದರು ಕೋಚ್.
ಚೆಂಡು ತನ್ನೆಡೆಗೆ ಬಂದಾಗಲೆಲ್ಲ ಗೋಲ್ ಬಾರಿಸಿದ ಯುವಕನ ಚಲನೆಯಲ್ಲಿ ಮಿಂಚಿನ ಪ್ರಖರತೆ ಇತ್ತು. ಅಂದಿನ ಅಮೋಘ ಜಯಕ್ಕೆ ಆತನೇ ಕೇಂದ್ರಬಿಂದುವಾಗಿದ್ದ. ಅದನ್ನು ಕಂಡು ಕೋಚ್ ‘ನಿನ್ನ ಆಟ ಅದ್ಭುತವಾಗಿತ್ತು; ನಿನ್ನನ್ನು ತಂಡಕ್ಕೆ ಸೇರಿಸಿಕೊಳ್ಳದಿದ್ದಿದ್ದರೆ ನನ್ನಿಂದ ತಪ್ಪಾಗುತ್ತಿತ್ತೇನೋ? ಇಂಥ ಅಮೋಘ ಪ್ರದರ್ಶನ ಹೇಗೆ ಸಾಧ್ಯವಾಯಿತು?’ ಎಂದು ಪ್ರಶ್ನಿಸಿದರು. ಅದಕ್ಕೆ ಯುವಕ ‘ನಾನು ಆಡುವುದನ್ನು ನನ್ನ ತಂದೆ ವೀಕ್ಷಿಸುತ್ತಿದ್ದರು’ ಎಂದ. ಕೋಚ್ ಆತನ ತಂದೆ ಕುಳಿತುಕೊಳ್ಳುತ್ತಿದ್ದ ಸ್ಥಳದ ಕಡೆ ದಿಟ್ಟಿಸಿ, ‘ಅಲ್ಲಿ ನಿನ್ನ ತಂದೆ ಇಲ್ಲವಲ್ಲ?’ ಎಂದರು. ಒಂದು ಕ್ಷಣ ಮೌನ ಮುರಿದ ಯುವಕ ‘ಸರ್, ನಿಮಗೊಂದು ಸಂಗತಿ ಹೇಳುವುದಿದೆ. ನನ್ನ ತಂದೆ ಅಂಧರು; ನಾಲ್ಕು ದಿನಗಳ ಹಿಂದಷ್ಟೇ ತೀರಿಕೊಂಡರು. ನಾನು ಆಡುವುದನ್ನು ಅವರು ಮೊದಲ ಬಾರಿಗೆ ಮೇಲಿಂದ ವೀಕ್ಷಿಸಿದರು’ ಎನ್ನುತ್ತ ಕಣ್ಣೊರೆಸಿಕೊಂಡ… ಸಾಧನೆಗೆ ಮುನ್ನುಡಿಯೇ ಪ್ರೇರಣೆ, ಅದು ನಮ್ಮಲ್ಲೇ ಅಡಗಿದೆ. ಬೇಕಾದಾಗ ಅದನ್ನು ಹೆಕ್ಕಿತೆಗೆದು ಉಪಯೋಗಿಸುವುದೇ ಜಾಣತನ. ಕಷ್ಟಕರ ಸನ್ನಿವೇಶಗಳನ್ನು ಎದುರಿಸಲು ಪ್ರೇರಣೆ ನೆರವಾಗುತ್ತದೆ. ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ಕಾರ್ಯನಿರ್ವಹಿಸಿದರೆ ಅದು ಎಲ್ಲರ ಸಂತೋಷಕ್ಕೂ ಕಾರಣವಾಗುತ್ತದೆ. ಸ್ವಯಂಪ್ರೇರಿತ ವ್ಯಕ್ತಿ ಶ್ರುತಿಮಾಡಿಟ್ಟ ವೀಣೆಯಂತೆ- ಸುಮಧುರ ಸ್ವರ ಹೊರಡಿಸುತ್ತಲೇ ಇರುತ್ತಾನೆ. ಪ್ರೇರಣೆಯ ಬಲದಿಂದ ಜೀವನದಾಚೆಗೂ ಮೆರೆದ ಮಹನೀಯರು ಅನೇಕರು. ಶ್ರೇಷ್ಠರಲ್ಲಿಯೇ ಶ್ರೇಷ್ಠರಾಗಲು ಬದುಕಿಗೆ ಬೆಳಕಾಗುವ ಪ್ರೇರಣೆಯೆಡೆಗೆ ಹೆಜ್ಜೆಹಾಕೋಣ.
ಕೃಪೆ: ಜಯಶ್ರೀ ಅಬ್ಬಿಗೇರಿ.
No comments:
Post a Comment