ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ.
ನಿಮಗೆಲ್ಲ ಗೊತ್ತಿರಬಹುದು, ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಖರಗ್ಪುರ ರೇಲ್ವೇ ನಿಲ್ದಾಣದಲ್ಲಿ ಟಿಸಿ ಆಗಿ 2001ರಿಂದ 2003ರವರೆಗೆ ಕಾರ್ಯ ನಿರ್ವಹಿಸುತ್ತಿದ್ದರು. 2003ರಲ್ಲಿ ಬಿಸಿಸಿಐ ಪ್ರತಿಭೆಗಳನ್ನು ಹುಡುಕುವ ಸಲುವಾಗಿ ಜೆಮ್ಶೆಡ್ಪುರದಲ್ಲಿ ಪಂದ್ಯಾವಳಿಯನ್ನು ಏರ್ಪಡಿಸಿತ್ತು. ಅದರಲ್ಲಿ ಉತ್ತಮ ಪ್ರದರ್ಶನ ತೋರಿದ ಧೋನಿಯ ಭವಿಷ್ಯವೇ ಬದಲಾಯಿತು, ಅದಕ್ಕೂ ಮುನ್ನ ಫುಟ್ ಬಾಲ್ ಮತ್ತು ಬ್ಯಾಡ್ಮಿಂಟನ್ನಲ್ಲೂ ಧೋನಿ ತನ್ನ ಅದೃಷ್ಟ ಪರೀಕ್ಷಿಸಿಕೊಂಡಿದ್ದರು.
ಕೆಲವರು ಯಾವಾಗಲೂ ತಮ್ಮ ಯೋಗ್ಯತೆಗೆ ತಕ್ಕ ಕೆಲಸ ತಮಗೆ ಸಿಗಲಿಲ್ಲವೆಂದು ಬೇಸರಿಸುತ್ತಿರುತ್ತಾರೆ. ತಮ್ಮ ಕೆಲಸಕ್ಕೆ ತಾವೇ ಅತಿಥಿಗಳ ಹಾಗೆ ವರ್ತಿಸುತ್ತ ಅತ್ಯಮೂಲ್ಯವಾದ ಅನುಭವವನ್ನು ಕಳೆದುಕೊಳ್ಳುತ್ತಾರೆ. ಒಂದು ಕೆಲಸದಲ್ಲಿರುವಾಗ ಮತ್ತೊಂದು ಕೆಲಸಕ್ಕೆ ಪ್ರಯತ್ನ ಪಡುವುದು ಒಳ್ಳೆಯ ಕೆಲಸ, ಸಿಕ್ಕಿದ ಕೆಲಸ ಮಾಡುತ್ತ ನಮಗಿಷ್ಟವಾದ ಕೆಲಸ ಸಿಗುವವರೆಗೆ ಪ್ರಯತ್ನ ಪಡಬೇಕು. ಹಾಗಂತ ಮಾಡುತ್ತಿರುವ ಕೆಲಸದಲ್ಲಿ ನಿರಾಸಕ್ತಿ ತೋರುವುದು ಸಲ್ಲದು. ಅಷ್ಟೇ ಅಲ್ಲ ಮತ್ತೆ ಕೆಲವರು ದೊಡ್ಡ ಕೆಲಸದ ನಿರೀಕ್ಷೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುವುದೇ ಇಲ್ಲ ಹಂತಹಂತವಾಗಿ ಬದುಕಿನಲ್ಲಿ ಪ್ರಗತಿಯತ್ತ ಮುನ್ನಡೆಯಬೇಕು. ಕೈಲಿ ಹಣವೇ ಇಲ್ಲದ ಪರಿಸ್ಥಿತಿಗಿಂತ ಒಂದಿಷ್ಟದರೂ ಇದೆಯಲ್ಲ ಎಂದು ಸಮಾಧಾನ ಪಟ್ಟುಕೊಂಡು ಮುಂದುವರೆಯಬೇಕು.
ಎಲ್ಲರಿಗೂ ದೊಡ್ಡ ದೊಡ್ಡ ಕೆಲಸ ಮಾಡಲಾಗದಿರಬಹುದು ಆದರೆ ಮಾಡುವ ಸಣ್ಣ ಕೆಲಸವನ್ನೇ ಅತ್ಯುತ್ತಮವಾಗಿ ಮಾಡಲು ಸಾಧ್ಯ. ಅದರಲ್ಲೇ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಅದಕ್ಕೆ, ಪ್ರಯತ್ನ ನಿರಂತರವಾಗಿದ್ದಾಗ ಸಾಧ್ಯ..
ದೀಪಾಹಿರೇಗುತ್ತಿ
No comments:
Post a Comment