ಕಥೆ-735
ಮೊದಲು ಮನವ ಗೆಲ್ಲೋಣ
ಅನೇಕ ಬಾರಿ ನಾವು ಹೇಳುವುದಿದೆ. 'ನೋಡಿದ ಹಾಗೆ ಆತ ಇಲ್ಲ. ರೂಪಕ್ಕೂ ಆತನ ಮನಸ್ಸಿಗೂ ಸಂಬಂಧವೇ ಇಲ್ಲ. ನೋಡಲು ಮುಗ್ಧನಂತೆ ಕಂಡರೂ ವರ್ತನೆ ವ್ಯಾಘ್ರನಂತೆ' ಎನ್ನುವುದಿದೆ. ಹೌದಲ್ಲವೇ, ಕೆಲವೊಮ್ಮೆ ನಾವೂ ಸಹ ಇತರರಿಗೆ ಆ ರೀತಿ ಗೋಚರಿಸುತ್ತೇವೆ. ಎಷ್ಟೋ ಬಾರಿ ಇಂತಹ ಅನುಭವಗಳನ್ನು ಪಡೆದಿರುತ್ತೇವೆ. ಅಂಗುಲಿಮಾಲನ ಕಥೆ ನೆನಪು ಮಾಡಿಕೊಳ್ಳೋಣ. ಕೊಲೆಗಾರನಾಗಿದ್ದ ಅಂಗುಲಿಮಾಲನನ್ನು ಗೌತಮ ಬುದ್ಧ ಪರಿವರ್ತಿಸುತ್ತಾನೆ. ಬಳಿಕ ಅಂಗುಲಿಮಾಲ ಬುದ್ಧನ ಶಿಷ್ಯನಾಗಿ ಆತನ ತತ್ವಾದರ್ಶಗಳನ್ನು ಜನರಿಗೆ ತಿಳಿಸಲು ಶ್ರಮಿಸುತ್ತಾನೆ. ಪರಿವರ್ತನೆ ನಂತರ ನೋಡಲು ಕ್ರೂರಿಯಂತೆ ಕಂಡರೂ ಕೃತಿಯಲ್ಲಿ ಭಿನ್ನನಾಗಿರುತ್ತಾನೆ.. ಕೊಳಕು ಮನಸ್ಸನ್ನು ಶುಭ್ರ ಮಾಡಿಕೊಳ್ಳಬಹುದು ಎನ್ನುವುದು ಇದರ ಸಂದೇಶ. ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಅಶಾಂತಿಗೆ ವಿಚಲಿತ ಮನಸ್ಸು, ಮನಸ್ಥಿತಿಗಳೇ ಕಾರಣ. ಮನಸ್ಸು ಮಂದಿರವಾಗಬೇಕು. ನಾವು ಹೇಗೆ ನಮ್ಮ ದೇವಾಲಯವನ್ನು, ಮನೆಯಲ್ಲಿನ ದೇವರಿಡುವ ಜಾಗವನ್ನು ಶುಚಿಯಾಗಿ ಇಡುತ್ತೇವೆ, ಹಾಗೆಯೇ 'ಮನಸ್ಸಿನ ನಿಯಂತ್ರಣ' ಹೊರಗಿನವರಿಂದ, ಔಷಧ ಅಥವಾ ಚಿಕಿತ್ಸೆಯಿಂದ ಸಾಧ್ಯವಿಲ್ಲ, ಅದನ್ನು ಸ್ವತಃ ಅಭ್ಯಾಸ ಮಾಡಬೇಕು.. ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ, ಯೋಗ, ಧ್ಯಾನಗಳ ಮೂಲಕ ಮನಸ್ಸನ್ನು ಶುದ್ಧ, ನಿರ್ಮಲವಾಗಿ ಇರಿಸಿಕೊಳ್ಳಬಹುದು. ಅವಶ್ಯ ಇರುವವರಿಗೆ ಸಹಾಯ ಮಾಡುವುದರ ಮೂಲಕ ಆವೇಗ, ದುಗುಡ, ಆತಂಕ, ಅನಿಶ್ಚಿತತೆಯ ಈ ಸಾಮಾಜಿಕ ವಾತಾವರಣವನ್ನು ಹೋಗಲಾಡಿಸಿ ಶಾಂತಿ, ಸೌಹಾರ್ದತೆಯ ಬದುಕು ರೂಪಿಸಿಕೊಳ್ಳಬಹುದು. ಅದಕ್ಕೂ ಮೊದಲು ಚಂಚಲ ಮನವನ್ನು ನಿಗ್ರಹಿಸಬೇಕು. ಭಗವಾನ್ ಮಹಾವೀರರು 'ಮನಸ್ಸನ್ನು ಗೆದ್ದವನು ಜಗತ್ತನ್ನು ಗೆಲ್ಲುತ್ತಾನೆ' ಎಂದಿದ್ದಾರೆ. ಹೀಗಾಗಿ ಮನಸ್ಸನ್ನು, ಅಂತಃಸಾಕ್ಷಿಯನ್ನು ಗೆಲ್ಲುವ ಕಡೆ ಚಿತ್ತ ಹರಿಸೋಣ. ಒಳ್ಳೇ ವಿಚಾರ ಸನ್ಮಾರ್ಗದಲ್ಲಿ ಮುನ್ನಡೆಯೋಣ.
ಸಮಾಜವನ್ನು ಕಟ್ಟಲು ಮನಸ್ಸು ಬೇಕು, ಅಂತೆಯೇ ಕೆಡವಲು ಕೂಡ ಹತಾಶೆಯ ಮನೋಭಾವ ಇದ್ದರೆ ಸಾಕು. ಅಂತೆಯೇ ಮನೋ ಮಂದಿರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು...
- ಕೃಪೆ ನೆಟ್
No comments:
Post a Comment