ಕಥೆ-759
ಬಲ ಪ್ರಯೋಗವಷ್ಟೇ ಅಲ್ಲ
ಅದನ್ನೇ ನಾಯಕತ್ವ ಎನ್ನುವುದು ನಿಮ್ಮನ್ನು ಎಲ್ಲರೂ ಒಮ್ಮೆಲೇ ಒಪ್ಪಿಕೊಂಡು ಬಿಡುತ್ತಾರೆನ್ನಲಾಗದು. ಏಕೆಂದರೆ ಅಲ್ಲಿ ನಿಮಗಿಂತ ಹಿರಿಯರಿರಬಹುದು, ಅನುಭವಿಗಳಿರಬಹುದು, ಕೆಲವೊಮ್ಮೆ ಸಮರ್ಥರೂ ಇರಬಹುದು. ನಿಮ್ಮ ನಾಯಕತ್ವದಡಿಯಲ್ಲಿ ಕೆಲಸ ಮಾಡುವ ಮಂದಿ ಎಲ್ಲ ಸಂದರ್ಭದಲ್ಲೂ ನಿಮಗಿಂತ ಚಿಕ್ಕವರೇ ಆಗಿರಬೇಕೆಂದೇನೂ ಇಲ್ಲ. ಇದಕ್ಕಿಂತ ಹೆಚ್ಚಿನದಾಗಿ ಒಬ್ಬೊಬ್ಬರ ಕಾರ್ಯ ವೈಖರಿ ಒಂದೊಂದು ತೆರನಾಗಿರುತ್ತದೆ. ಕೆಲವರು ನೀವು ಹೇಳಿದ್ದಕ್ಕೆಲ್ಲ ತಲೆಯಾಡಿಸಿ, ಒಪ್ಪಿಕೊಂಡು ಸುಮ್ಮನೆ ಹೇಳಿದಷ್ಟನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಇನ್ನು ಕೆಲವರು ಪ್ರತಿಯೊಂದನ್ನೂ ಪ್ರಶ್ನಿಸುವ ಮನೋಭಾವವನ್ನು ಹೊಂದಿರುತ್ತಾರೆ. ಅನಗತ್ಯ ತರಲೆ ಎತ್ತುವವರಿಗೇನೂ ಕಡಿಮೆ ಇರುವುದಿಲ್ಲ. ಒಂದಷ್ಟು ಮಂದಿ ಚುರುಕಾಗಿರುತ್ತಾರೆ, ಇನ್ನಷ್ಟು ಜನ ದಪ್ಪ ಚರ್ಮದ, ಏನೂ ಮಾಡಿದರೂ ಅಲ್ಲಾಡದ ಪರಮ ಜೋಭದ್ರರಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಸ್ಥಾನಕ್ಕೇ ಪೈಪೋಟಿ ನಡೆಸುತ್ತಿದ್ದವರಿಗೇನೂ ಕಡಿಮೆ ಇರುವುದಿಲ್ಲ. ನೀವು ನಾಯಕತ್ವ ವಸಿಕೊಳ್ಳುವುದು ಎಲ್ಲರಿಗೂ ಸಹ್ಯವಾಗಿರಬೇಕೆಂದೇನೂ ಇಲ್ಲ. ಅಥವಾ ಅದರಿಂದ ಒಂದಷ್ಟು ಜನರ ವೈಯಕ್ತಿಕ ಹಿತಕ್ಕೆ ಧಕ್ಕೆ ಬರುವ ಸಂಭವವೂ ಇರಬಹುದು. ಲಾಭ ಕೈ ತಪ್ಪಿ ಹೋಗುವ ಭಯವೂ ಇರುತ್ತದೆ. ನಿಮ್ಮ ಬಗೆಗೆ ತಪ್ಪು ತಿಳಿವಳಿಕೆ ಮನೆ ಮಾಡಿರಬಹುದು. ಹೀಗೆ ಏನೇನೋ ಕಾರಣಗಳಿಗೆ ನಿಮ್ಮ ನಾಯಕತ್ವವನ್ನು ವಿರೋಧಿಸುವವರು ಇರುತ್ತಾರೆ. ಇನ್ನೂ ಯಾವ್ಯಾವುದೋ ಕಾರಣಗಳಿಗಾಗಿ ಎಲ್ಲ ಸ್ತರದ, ಎಲ್ಲ ವರ್ಗದ, ಎಲ್ಲ ಮನೋಭಾವದ ವ್ಯಕ್ತಿಗಳನ್ನು ಒಂದೇ ನೇರಕ್ಕೆ ಕರೆದುಕೊಂಡು ಹೋಗಬೇಕಿರುವುದು ಸುಲಭದ ಮಾತೇನಲ್ಲ. ಹಾಗೆಂದು ಯಾವಾಗಲೂ ಅವಿರೋಧವಾಗಿಯೇ ನೀವು ಬದುಕಿಬಿಡುತ್ತೀರಿ ಎನ್ನುವುದು ಭ್ರಮೆ. ಸಾಮೂಹಿಕವಾಗಿ ನೋಡಿದಾಗ ಬಹುಮತದಲ್ಲಿ ನೀವು ನಾಯಕತ್ವಕ್ಕೆ ಆಯ್ಕೆ ಆಗಿರಬಹುದು. ಅಥವಾ ಇನ್ನಾವುದೋ ಸನ್ನಿವೇಶದಲ್ಲಿ ನಿಮಗೆ ಅಂಥ ಅವಕಾಶ ಒದಗಿ ಬಂದುಬಿಟ್ಟಿರಬಹುದು. ಅಂಥ ಸಂದರ್ಭದಲ್ಲಿ ಆಯಾ ವ್ಯಕ್ತಿಗಳಿಗೆ ಹೊಂದಾಣಿಕೆಯಾಗುವ ರೀತಿಯಲ್ಲೇ ವ್ಯವಹರಿಸಬೇಕಾಗುತ್ತದೆ. ಅವರು ಬೇಡ, ಇವರು ಇಲ್ಲದಿದ್ದರೇನಂತೆ...ಇಂಥವರು ಹೋದರೆ ಹೋಗಲಿ... ಅವನಿಂದೇನಾಗಬೇಕಿದೆ... ಇಂಥ ಧೋರಣೆಗಳು ನಾಯಕನಿಗೆ ಸಲ್ಲ, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಮರ್ಥರೇ ಇರುತ್ತಾರೆ. ಅವರವರ ಸಾಮರ್ಥ್ಯ ಗುರುತಿಸಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಜತೆಯಲ್ಲಿ ಕರೆದುಕೊಂಡು ಹೋಗುವುದೇ ಜಾಣ್ಮೆ. ಕೆಲವೊಮ್ಮೆ ಏನೂ ಮಾಡಿದರೂ ಬಗ್ಗದವರಿರುತ್ತಾರೆ. ಅಂಥವರಿಗೇ ಅವಕಾಶಗಳನ್ನು ಕೊಟ್ಟು ಸಕಾರಾತ್ಮಕವಾಗಿ ಅವರನ್ನು ಮಣಿಸಿಕೊಳ್ಳಬೇಕು. ಗುಬ್ಬಿಗೆ ಪ್ರಯೋಗಿಸಿದ ಹುಲ್ಲುಕಡ್ಡಿಯಿಂದಲೇ ಆನೆಯನ್ನೂ ಪಳಗಿಸಲಾಗುವುದಿಲ್ಲ. ಅದಕ್ಕೆ ಅಂಕುಶವೇ ಬೇಕಾಗುತ್ತದೆ. ಹಾಗೆಂದು ಎಲ್ಲ ಸಂದರ್ಭದಲ್ಲೂ ಬಲಪ್ರಯೋಗವೇ ಪರಿಹಾರವಲ್ಲ. ಒಟ್ಟಾರೆ ಅವರಾಗಿಯೇ ತನ್ನನ್ನು ಒಪ್ಪಿಕೊಳ್ಳುವಂತೆ ಮಾಡುವವನು ಅತ್ಯಂತ ಸಮರ್ಥ ನಾಯಕನಾಗಿರುತ್ತಾನೆ.
No comments:
Post a Comment